ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದ್ದ ಝೈದ್ ಖಾನ್ ನಟನೆಯ 'ಬನಾರಸ್' ಕಿರುತೆರೆಗೆ ಲಗ್ಗೆ: ಎಲ್ಲಿ, ಯಾವಾಗ?
ಜಯತೀರ್ಥ ನಿರ್ದೇಶನದ ಬನಾರಸ್ ಸಿನಿಮಾ ಕಳೆದ ವರ್ಷ ತೆರೆಕಂಡಿತ್ತು. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಹಳ ದೊಡ್ಡದಾಗಿ ಚಿತ್ರವನ್ನು ಕಟ್ಟಿಕೊಡಲಾಗಿತ್ತು. ಮಾಜಿ ಸಚಿವ ಜಮೀರ್ ಅಹ್ಮದ್ ಪುತ್ರನ ಚೊಚ್ಚಲ ಸಿನಿಮಾ ಎನ್ನುವ ಕಾರಣಕ್ಕೆ ರೊಮ್ಯಾಂಟಿಕ್ ಸಿನಿಮಾ ಕುತೂಹಲ ಕೆರಳಿಸಿತ್ತು. ನಟ ದರ್ಶನ್ ಕೂಡ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದರು. ಇದೀಗ ಸಿನಿಮಾ ಕಿರುತೆರೆಗೆ ಬರ್ತಿದೆ.
'ಬನಾರಸ್' ಚಿತ್ರದಲ್ಲಿ ಝೈದ್ ಖಾನ್ ಜೋಡಿಯಾಗಿ ಸೋನಲ್ ಮಂಥೆರೋ ನಟಿಸಿದ್ದರು. ಟೈಮ್ ಟ್ರಾವೆಲಿಂಗ್ ಕತೆ ಆಧರಿಸಿ ಈ ಸಿನಿಮಾ ಮೂಡಿ ಬಂದಿತ್ತು. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗಿತ್ತು. ರಾಜ್ಯೋತ್ಸವ ಸಂಭ್ರಮದಲ್ಲಿ ಬಂದಿದ್ದ ಚಿತ್ರಕ್ಕೆ ಪ್ರೇಕ್ಷಕರಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ಬಾಕ್ಸಾಫೀಸ್ನಲ್ಲೂ ಸದ್ದು ಮಾಡಲಿಲ್ಲ. ಪರಿಣಾಮ ಸಿನಿಮಾ ಫ್ಲಾಪ್ ಲಿಸ್ಟ್ ಸೇರಿದ್ದು ಸುಳ್ಳಲ್ಲ.

ಇದೇ ಭಾನುವಾರ ಜೀ ಕನ್ನಡ ವಾಹಿಯಲ್ಲಿ 'ಬನಾರಸ್' ಪ್ರೀಮಿಯರ್ ಆಗ್ತಿದೆ. ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ. ಮಧ್ಯಾಹ್ನ 3 ಗಂಟೆಗೆ ವೀಕ್ಷಕರು ಸಿನಿಮಾ ನೋಡಬಹುದು. ಚಿತ್ರದಲ್ಲಿ ಲವರ್ ಬಾಯ್ ಆಗಿ ಝೈದ್ ಖಾನ್ ಗಮನ ಸೆಳೆದಿದ್ದರು. ಸಿನಿಮಾ ಸಕ್ಸಸ್ ಆಗದೇ ಇದ್ದರೂ ಮೊದಲ ಪ್ರಯತ್ನದಲ್ಲೇ ಝೈದ್ ಭರವಸೆ ಮೂಡಿಸಿದ್ದರು.ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು.
ಎನ್ಕೆ ಪ್ರೊಡಕ್ಷನ್ಸ್ ಹೌಸ್ ಬ್ಯಾನರ್ನಲ್ಲಿ ತಿಲಕ್ರಾಜ್ ಬಲ್ಲಾಳ್ ಈ ಚಿತ್ರವನ್ನು ನಿರ್ಮಿಸಿದ್ದರು. ಮುಝಮ್ಮಿಲ್ ಅಹ್ಮದ್ ಖಾನ್ ಸಹ ನಿರ್ಮಾಪಕರಾಗಿದ್ದರು. ಕಥೆ, ಚಿತ್ರಕಥೆ ಜವಾಬ್ದಾರಿ ಜಯತೀರ್ಥ ಅವರದ್ದಾಗಿತ್ತು. ಅಜನೀಶ್ ಲೋಕನಾಥ್ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮತ್ತು ಎ. ಹರ್ಷ ನೃತ್ಯ ಕೊರಿಯೋಗ್ರಫಿ ಚಿತ್ರಕ್ಕಿತ್ತು. ವಾರಣಾಸಿ, ಬೆಂಗಳೂರು, ಮೈಸೂರು ಮತ್ತು ಗೋವಾದಲ್ಲಿ ಸಿನಿಮಾ ಚಿತ್ರೀಕರಣ ನಡೆದಿತ್ತು.

'ಬನಾರಸ್' ಸಿನಿಮಾ ಕಥೆ ಏನು ಅಂತ ನೋಡುವುದಾದರೆ ನಾಯಕ ಸಿದ್ಧಾರ್ಥ್ ಸಿಂಹ, ಶ್ರೀಮಂತ ಮಗ, ತಾಯಿಯಿಲ್ಲದ ಈತನಿಗೆ ತಂದೆಯೇ ಸರ್ವಸ್ವ. ನಾಯಕಿ ದನಿ. ಗಾಯಕಿಯಾಗಬೇಕು ಎನ್ನುವುದು ಆಕೆಯ ಗುರಿ. ಇಬ್ಬರ ನಡುವೆ ಚಿತ್ರದಲ್ಲಿ ಲವ್ ಅಟ್ ಫಸ್ಟ್ ಸೈಟ್ ಆಗಲ್ಲ. ಬದಲಾಗಿ ತಾನೊಬ್ಬ ಟೈಮ್ ಟ್ರಾವೆಲರ್ ನಾವಿಬ್ಬರೂ ಮುಂದೆ ಗಂಡ ಹೆಂಡತಿ ಆಗುವವರು ಎಂದು ನಾಯಕ, ನಾಯಕಿಯನ್ನು ನಂಬಿಸಿಬಿಡ್ತಾನೆ. ಬಳಿಕ ಇಬ್ಬರ ಸೆಲ್ಫಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ದೊಡ್ಡ ರಾದ್ದಾಂತ ಆಗುತ್ತೆ. ಮುಂದೇನು ಅನ್ನೋದು ಸಿನಿಮಾ ಕಥೆ.
ಝೈದ್ ಖಾನ್ಗೆ ಇದು ಚೊಚ್ಚಲ ಸಿನಿಮಾ ಆದರೂ ಅಭಿನಯ ನೋಡಿದರೆ ಹಾಗೆ ಅನ್ನಿಸುವುದಿಲ್ಲ. ಇನ್ನು ನಾಯಕನಿಗೆ ಹೆಚ್ಚು ಬಿಲ್ಡಪ್ ಕೊಡದೇ ಬಹಳ ಸಿಂಪಲ್ ಆಗಿ ಜಯತೀರ್ಥ ಸಿನಿಮಾ ತೆರೆಗೆ ತಂದಿದ್ದರು. ಕಥೆಗೆ ತಕ್ಕಂತೆ ಪಾತ್ರಗಳನ್ನು ತೆಗೆದುಕೊಂಡು ಹೋಗಿದ್ದರು. ಕನ್ನಡದಲ್ಲಿ ಟೈಮ್ ಟ್ರಾವೆಲಿಂಗ್, ಟೈಮ್ ಲೂಪ್ ಕತೆಯ ಸಿನಿಮಾಗಳು ಬಂದಿರೋದು ಕಮ್ಮಿ. ಹಾಗಾಗಿ ಆ ವಿಚಾರದಲ್ಲಿ 'ಬನಾರಸ್' ಒಳ್ಳೆ ಪ್ರಯತ್ನ ಎನಿಸಿಕೊಂಡಿತ್ತು.

'ಬನಾರಸ್' ನಂತರ ಝೈದ್ ಖಾನ್ ಮತ್ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಒಂದು ಬಾಲಿವುಡ್ ಸಿನಿಮಾ ಅವಕಾಶ ಸಿಕ್ಕರೂ ಒಲ್ಲೆ ಎಂದಿದ್ದಾಗಿ ಹೇಳಿಕೊಂಡಿದ್ದರು. ಹಿಂದಿ ನಿರ್ಮಾಪಕರೊಬ್ಬರು ಕಥೆ ಹೇಳಿ ಸಿನಿಮಾ ಮಾಡಲು ಮುಂದೆ ಬಂದಿದ್ದಂತೆ. ಆದರೆ ಹಿಂದಿಯಲ್ಲಿ ಮಾತ್ರ ಸಿನಿಮಾ ಮಾಡ್ತೀನಿ ಎಂದಿದ್ದಕೆ ಝೈದ್ ನಿರಾಕರಿಸಿದರಂತೆ. 'ಬನಾರಸ್' ಚಿತ್ರ ಕನ್ನಡದಲ್ಲಿ ನಿರ್ಮಾಣ ಆಗಿದ್ದು ಕನ್ನಡ ಪ್ರೇಕ್ಷಕರು ಮೆಚ್ಚಿದ್ದು, ಕನ್ನಡ ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿ ಸಿನಿಮಾ ಮಾಡಿದರೆ ಮಾತ್ರ ನಟಿಸ್ತೀನಿ ಎಂದು ಹೇಳಿದ್ದಾಗಿ ವಿವರಿಸಿದ್ದರು.


Click it and Unblock the Notifications











