ಕ್ರೈಂ ಫೈಲ್ 2 - ನಾವ್ ಕಥೆ ಹೇಳ್ತೀವಿ, ನೀವ್ ಎಚ್ಚರವಾಗಿರಿ
"ಕ್ರಿಮಿನಲ್ ಅಂಥ ಯಾರ್ ಹಣೆ ಮೇಲೂ ಬರೆದಿರೋದಿಲ್ಲ. ಪ್ರತಿಯೊಂದು ಕ್ರೈಂ ಹಿಂದೆನೂ ಅನಾಮಿಕರ ಕೈವಾಡ ಇರೋದಿಲ್ಲ. ಕ್ರೈಂ ಹೆಚ್ಚಾಗಿ ನಡೆಯೋದು ಆಪ್ತರಿಂದಲೇ.. ನಾವ್ ಸ್ವಲ್ಪ ಅಲರ್ಟ್ ಆಗಿದ್ರೆ ಅದೆಷ್ಟೋ ಅನಾಹುತಗಳನ್ನ ತಪ್ಪಿಸಬಹುದು. ನಾವ್ ಕಥೆ ಹೇಳ್ತೀವಿ, ನೀವ್ ಎಚ್ಚರವಾಗಿರಿ".
ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲೊಂದಾದ 'ಕ್ರೈಂ ಫೈಲ್' ಮತ್ತೆ ಬರುತ್ತಿದೆ. ಕ್ರೈಂ ಫೈಲ್ - ಸೀಸನ್ 2 ಇದೇ ಏಪ್ರಿಲ್ 19 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 10 ಗಂಟೆಗೆ ಆರಂಭವಾಗಲಿದೆ. [ಜೀ ಕನ್ನಡದಲ್ಲಿ ಕ್ಲಾಸಿಕ್ ಧಾರಾವಾಹಿ 'ಮಾಯಾಮೃಗ']

ರಾಜ್ಯದಲ್ಲಿ ಪ್ರತಿ ನಿತ್ಯ ನೂರಾರು ಅಪರಾಧ ಪ್ರಕರಣಗಳು ನಡೆಯತ್ತವೆ. ಅವುಗಳಲ್ಲಿ ಕೆಲವು ಪ್ರಕರಣಗಳನ್ನು ಆಯ್ದುಕೊಂಡು ವಿಸ್ತೃತ ಸಂಶೋಧನೆ ನಡೆಸಿ, ಘಟನೆಯ ಎಲ್ಲ ಮಗ್ಗಲುಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ ಇದಾಗಿದೆ ಎನ್ನುತ್ತಾರೆ ಜೀ ಕನ್ನಡ ವಾಹಿನಿಯ ನಾನ್ ಫಿಕ್ಷನ್ ಹೆಡ್ ಬಾಲರಾಜ್ ನಾಯ್ಡು.
ಸತ್ಯ ಘಟನೆಗಳ ಆಧಾರಿತ ಕಾರ್ಯಕ್ರಮ ಇದಾಗಿದ್ದು, ಎಲ್ಲಾ ಪಾತ್ರಗಳನ್ನು ಮರುಸೃಷ್ಟಿಸಲಾಗುತ್ತದೆ. ಯಾವುದೇ ವೈಭವೀಕರಣ ಇಲ್ಲದೇ ಅತ್ತಂತ ನೈಜವಾಗಿ ಈ ಕಾರ್ಯಕ್ರಮ ಮೂಡಿಬರಲಿದ್ದು, ಪ್ರತಿಯೊಂದು ಸಂಚಿಕೆಯಲ್ಲಿ ಒಂದೊಂದು ವಿಭಿನ್ನ ಕಥೆಗಳು ಪ್ರಸಾರವಾಗಲಿವೆ ಎನ್ನುತ್ತಾರೆ ಕಾರ್ಯಕ್ರಮ ನಿರ್ಮಾಪಕ ಜೀ ಕನ್ನಡ ವಾಹಿನಿಯ ಸಿದ್ದು ಕಾಳೋಜಿ.
ಕಳೆದ ಸೀಸನ್ ನಲ್ಲಿ ಕಾರ್ಯಕ್ರಮ ನಿರೂಪಕರಾಗಿ ಜನಮನಗೆದ್ದ ಕಿರುತೆರೆ ಖ್ಯಾತ ನಟ ರವಿ ಪ್ರಸಾದ ಮಂಡ್ಯ ಈ ಬಾರಿಯೂ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ಅಪರಾಧ ನಡೆದ ರೀತಿ, ಪೊಲೀಸ್ ತನಿಖೆ, ಕ್ರೈಂ ಹಿಂದಿನ ಉದ್ದೇಶ ಮತ್ತು ಸತ್ಯ ಘಟನೆಗಳನ್ನು ರವಿ ಪ್ರಸಾದ ಮಂಡ್ಯ, ವೀಕ್ಷಕರ ಮುಂದೆ ಬಿಚ್ಚಿಡಲಿದ್ದಾರೆ.
"ಧಾರಾವಾಹಿಗಳಲ್ಲಿ ಕಾಲ್ಪನಿಕ ಪಾತ್ರಗಳಲ್ಲಿ ಅಭಿನಯಿಸುವದಕ್ಕಿಂತ ನೈಜ ಘಟನೆಗಳ ನಿರೂಪಣೆ ಹೆಚ್ಚು ಖುಷಿ ಕೊಡುತ್ತದೆ ಎನ್ನುತ್ತಾರೆ" ರವಿಪ್ರಸಾದ ಮಂಡ್ಯ. ಕ್ರೈಂ ಫೈಲ್ ಸೀಸನ್ - 2 ಕಾರ್ಯಕ್ರಮ ದಿಗ್ದರ್ಶನ ಹೊಣೆಯನ್ನು ರವಿ ಕಿಶೋರ್ ಹೊತ್ತುಕೊಂಡಿದ್ದಾರೆ.
ಜಗದೀಶ್ ಭಾವೆ ಕಥಾ ಸಂಶೋಧಕರಾಗಿದ್ದು, ಸತ್ಯ ಉಡುಪಿ ಚಿತ್ರಕಥೆ ಹಾಗು ಸಂಭಾಷಣೆ ಬರೆಯುತಿದ್ದಾರೆ. ದಾವೂದ ಷರೀಫ್ ಛಾಯಾಗ್ರಹಣ ಮಾಡುತ್ತಿದ್ದಾರೆ. 'ಸಿಐಡಿ ಕರ್ನಾಟಕ' ಖ್ಯಾತಿಯ ಮಲ್ಟಿ ಮೀಡಿಯಾ ಪ್ರೊಡಕ್ಶನ್ಸ್ ಈ ಕಾರ್ಯಕ್ರಮವನ್ನು ನಿರ್ಮಾಣ ಮಾಡುತ್ತಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











