Karna Serial: ಆಸ್ಪತ್ರೆ ಸೀಜ್, ನಾಯಕ ಅರೆಸ್ಟ್; ಕರ್ಣನ ರಕ್ಷಣೆಗೆ ಒಂದಾದ ಸ್ರ್ತೀ ಶಕ್ತಿ!
ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಕರ್ಣ' ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ನಾಯಕ ಕರ್ಣ ಅನಿರೀಕ್ಷಿತವಾಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಜನರ ಜೀವದ ಜೊತೆ ಆಟವಾಡುತ್ತಿದ್ದಾರೆ ಎಂಬ ಸುಳ್ಳು ಆರೋಪದ ಮೇಲೆ ಪೊಲೀಸರು ಕರ್ಣನನ್ನ ಬಂಧಿಸಿದ್ದಾರೆ.
ಈ ಬೆಳವಣಿಗೆಯಿಂದ ಅಭಿಮಾನಿಗಳಿಗೆ ಭಾರೀ ಶಾಕ್ ಎದುರಾಗಿದೆ. ಒಬ್ಬ ಪ್ರಾಮಾಣಿಕ ಡಾಕ್ಟರ್ಗೆ ಇಂತಹ ಪರಿಸ್ಥಿತಿ ಬರಬಾರದಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಆದರೆ ಕರ್ಣನ ಬೆನ್ನಿಗೆ ಈಗ ದೊಡ್ಡ ಪಡೆಯೇ ಬಂದು ನಿಂತಿದೆ.

ಪ್ರೋಮೋದಲ್ಲಿ ಕಂಡುಬಂದಂತೆ, ಕರ್ಣನನ್ನ ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ಇತ್ತ ಕರ್ಣನ ಆಸ್ಪತ್ರೆಯ ಲೈಸೆನ್ಸ್ ಕೂಡ ರದ್ದಾಗಿದೆ. ಆಸ್ಪತ್ರೆಗೆ ಸೀಲ್ ಹಾಕಲಾಗಿದ್ದು, ಕರ್ಣನ ವೃತ್ತಿಜೀವನಕ್ಕೆ ದೊಡ್ಡ ಕುತ್ತು ಬಂದಿದೆ.
ರಮೇಶ್ ಅಟ್ಟಹಾಸ
ಧಾರಾವಾಹಿಯ ವಿಲನ್ ರಮೇಶ್ ಈ ಎಲ್ಲಾ ಸಂಚಿನ ಹಿಂದೆ ಇರುವಂತೆ ಕಾಣುತ್ತಿದೆ. ಕರ್ಣನ ಏಳಿಗೆಯನ್ನು ಸಹಿಸದ ವಿರೋಧಿಗಳು ಆತನ ಮೇಲೆ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದಾರೆ. ಆಸ್ಪತ್ರೆಯ ಎದುರು ದೊಡ್ಡ ಮಟ್ಟದ ಪ್ರತಿಭಟನೆ ಕೂಡ ನಡೆದಿದೆ. ಜನಸಾಮಾನ್ಯರ ಮುಂದೆ ಕರ್ಣನ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ದೀಪಾ, ಮಲ್ಲಿ ಮತ್ತು ಶ್ರಾವಣಿ ಹೋರಾಟ
ಕರ್ಣನನ್ನ ಜೈಲಿನಿಂದ ಬಿಡಿಸಲು ಈಗ ಹೆಣ್ಣುಮಕ್ಕಳು ಒಂದಾಗಿದ್ದಾರೆ. ದೀಪಾ, ಮಲ್ಲಿ ಮತ್ತು ಶ್ರಾವಣಿ ನೇತೃತ್ವದಲ್ಲಿ 'ಸ್ತ್ರೀ ಶಕ್ತಿ' ಜಾಗೃತವಾಗಿದೆ. "ಲಾಠಿ ಇರೋದು ಕ್ರಿಮಿನಲ್ಗಳಿಗೆ ಹೊಡೆಯೋಕೆ, ಅಮಾಯಕರಿಗಲ್ಲ" ಎಂದು ದೀಪಾ ಪೊಲೀಸರ ವಿರುದ್ಧವೇ ಗುಡುಗಿದ್ದಾಳೆ. ಕರ್ಣನ ಮುಗ್ಧತೆಯನ್ನು ಸಾಬೀತುಪಡಿಸಲು ಈ ಮಹಿಳಾ ಮಣಿಗಳು ಪಣ ತೊಟ್ಟಿದ್ದಾರೆ. ಮಲ್ಲಿ ಮತ್ತು ಶ್ರಾವಣಿ ಕೂಡ ಕರ್ಣನಿಗೆ ನ್ಯಾಯ ಸಿಗಬೇಕು ಎಂದು ಬೀದಿಗೆ ಇಳಿದಿದ್ದಾರೆ.
ಕರ್ಣನ ಬಿಡುಗಡೆ ಸವಾಲು
ಕರ್ಣನನ್ನು ಜೈಲಿನಿಂದ ಹೊರತರುವುದು ಈಗ ದೀಪಾ ಮತ್ತು ತಂಡಕ್ಕೆ ಅಷ್ಟು ಸುಲಭದ ಮಾತಲ್ಲ. ಏಕೆಂದರೆ ರಮೇಶ್ ಹೆಣೆದಿರುವ ಜಾಲ ಬಹಳ ಭದ್ರವಾಗಿದೆ. ಕಾನೂನಿನ ಹೋರಾಟ ಒಂದು ಕಡೆಯಾದರೆ, ಸಮಾಜದಲ್ಲಿ ಕರ್ಣನ ಮೇಲಿರುವ ಕಳಂಕವನ್ನು ತೊಡೆದುಹಾಕುವುದು ಮತ್ತೊಂದು ದೊಡ್ಡ ಸವಾಲಾಗಿದೆ. ಶ್ರಾವಣಿ ಮತ್ತು ಮಲ್ಲಿ ಈಗಾಗಲೇ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇತ್ತ ರಾಣಿ ಕರ್ಣನಿಗೆ ಮಾನಸಿಕ ಧೈರ್ಯ ತುಂಬುತ್ತಿದ್ದು, ಈ ಸ್ತ್ರೀ ಶಕ್ತಿಯ ಸಂಘಟಿತ ಹೋರಾಟವು ವಿಲನ್ಗಳ ನಿದ್ದೆಗೆಡಿಸಿರುವುದಂತೂ ಸುಳ್ಳಲ್ಲ. ಕರ್ಣನ ಈ ಅಗ್ನಿಪರೀಕ್ಷೆಯಲ್ಲಿ ಅಂತಿಮವಾಗಿ ನ್ಯಾಯಕ್ಕೆ ಜಯ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ರಾಣಿ ನೀಡಿದ ಭರವಸೆ ಏನು?
ಜೈಲಿನಲ್ಲಿರುವ ಕರ್ಣನನ್ನು ಭೇಟಿಯಾದ ರಾಣಿ, ಅವನಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾಳೆ. "ನಮಗೆ ಕಷ್ಟ ಬಂದಾಗ ಶಕ್ತಿ ನೀಡಿದವರು ನೀವು, ಈಗ ನಿಮ್ಮ ಪರವಾಗಿ ನಾವು ನಿಲ್ಲುತ್ತೇವೆ" ಎಂದು ಭಾವುಕವಾಗಿ ನುಡಿದಿದ್ದಾಳೆ. ಕರ್ಣನ ಮುಖದಲ್ಲಿ ಅಸಹಾಯಕತೆ ಇದ್ದರೂ, ತನ್ನವರ ಬೆಂಬಲ ನೋಡಿ ಸ್ವಲ್ಪ ಸಮಾಧಾನಗೊಂಡಂತೆ ಕಾಣುತ್ತಿದ್ದಾನೆ.
ಮುಂದೆ ಏನಾಗಬಹುದು?
ಕರ್ಣನ ಮೇಲಿರುವ ಆರೋಪಗಳು ಸಾಬೀತಾಗುತ್ತವೆಯೇ? ದೀಪಾ ಮತ್ತು ಮಲ್ಲಿ ಅವರ ಹೋರಾಟಕ್ಕೆ ಜಯ ಸಿಗುತ್ತಾ? ರಾಣಿ ಮತ್ತು ಶ್ರಾವಣಿ ಸಂಚನ್ನು ಬಯಲು ಮಾಡುತ್ತಾರಾ? ಈ ಎಲ್ಲಾ ಕುತೂಹಲಗಳಿಗೆ ಮುಂಬರುವ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ. ಸದ್ಯಕ್ಕೆ ಕರ್ಣನ ಅಭಿಮಾನಿಗಳು ಆತ ಬೇಗ ಜೈಲಿನಿಂದ ಹೊರಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಈ ಧಾರಾವಾಹಿಯ ಪ್ರತಿ ತಿರುವು ಈಗ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ.


Click it and Unblock the Notifications











