ಅಂಬೇಡ್ಕರ್ ನಂತರ ಸುಭಾಷ್ ಚಂದ್ರ ಬೋಸ್ ಕುರಿತು ಧಾರಾವಾಹಿ ಪ್ರಾರಂಭ
ಕನ್ನಡದ ಖ್ಯಾತ ಮನರಂಜನೆ ವಾಹಿನಿ ಜೀ ಕನ್ನಡ ಹೊಸ ಧಾರಾವಾಹಿ ಪ್ರಾರಂಭಿಸುತ್ತಿದೆ. ಸಂವಿದಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಜೀವನ ಆಧರಿತ 'ಮಹಾನಾಯಕ' ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಕುರಿತು ಧಾರಾವಾಹಿಗೆ ಚಾಲನೆ ನೀಡುತ್ತಿದೆ.
ಜೂನ್ 7ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 5ರಿಂದ 6 ಗಂಟೆಗೆ 'ನೇತಾಜಿ ಸುಭಾಷ್ ಚಂದ್ರ ಬೋಸ್' ಹೆಸರಿನ ಧಾರಾವಾಹಿ ಪ್ರಸಾರವಾಗಲಿದೆ.
ಪ್ರತಿ ದಿನ ಒಂದು ಗಂಟೆ ಕಾಲ ಪ್ರಸಾರವಾಗಲಿರುವ ಈ ಧಾರಾವಾಹಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸ್ವತಃ ಸೈನ್ಯ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಧೀರ ನಾಯಕನ ಐತಿಹಾಸಿಕ ಕಥೆಯನ್ನು ಬಿಂಬಿಸುತ್ತದೆ.

ಅಂಬೇಡ್ಕರ್ ಧಾರಾವಾಹಿ ಪ್ರಸಾರದಿಂದ ಕರ್ನಾಟಕದ ಮೂಲೆ ಮೂಲೆಯಲ್ಲೂ ಅಬಾಲವೃದ್ಧರಾದಿ ಶ್ಲಾಘನೆ ಪಡೆದಿರುವ ಜೀ ಕನ್ನಡ ಇದೀಗ ಸುಭಾಷ್ ಚಂದ್ರ ಬೋಸ್ ಅವರ ಜೀವನಗಾಥೆಯನ್ನು ಮನರಂಜಿಸುವ ರೀತಿಯಲ್ಲಿ ಇತಿಹಾಸವನ್ನು ಮರು ಕಟ್ಟಿಕೊಡಲಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಹಾದಿ ತುಳಿದ ಅವರು ಜರ್ಮನಿಯ ನೆರವಿನೊಂದಿಗೆ "ಇಂಡಿಯನ್ ನ್ಯಾಷನಲ್ ಆರ್ಮಿ" ಕಟ್ಟಿದರು. ಒರಿಸ್ಸಾದ ಕಟಕ್ನಲ್ಲಿ ಜನಿಸಿದ ಅವರು ತನ್ನ ತಂದೆಯ ಆಸೆಯಂತೆ ಇಂಡಿಯನ್ ಸಿವಿಲ್ ಸರ್ವೀಸ್ ಸೇರಲು ಬ್ರಿಟನ್ನಿಗೆ ಹೋದರೂ ನಂತರ ಭಾರತಕ್ಕೆ ಹಿಂದಿರುಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಗಾಂಧಿಯವರ ಅಹಿಂಸಾ ಹೋರಾಟ ವಿರೋಧಿಸಿ ಸ್ವಂತ ಸೇನೆ ಕಟ್ಟಿದರು. ಅವರ ವಿಮಾನ ಅಪಘಾತದಲ್ಲಿ ಮೃತರಾದರು ಎಂದು ನಂಬಲಾಗಿದೆ. ಆದರೆ ಅದನ್ನು ಒಪ್ಪದೇ ಇರುವವರೂ ಬಹಳ ಮಂದಿ ಇದ್ದಾರೆ.
ಒಟ್ಟಿನಲ್ಲಿ ಕನ್ನಡದ ಮುಂಚೂಣಿಯ ಕಿರುತೆರೆ ವಾಹಿನಿ ಜೀ ಕನ್ನಡದಿಂದ ಹೊಚ್ಚಹೊಸ, ವಿನೂತನ ಕಾರ್ಯಕ್ರಮಗಳನ್ನು ನಿರೀಕ್ಷಿಸುವ ವೀಕ್ಷಕರಿಗೆ ಭರಪೂರ ರಂಜನೆ, ಮತ್ತೆ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯ ಕಿಚ್ಚು ತುಂಬುವ ಈ ಧಾರಾವಾಹಿಗೆ ವೀಕ್ಷಕರಿಂದ ಉತ್ತಮ ಆರಂಭ ಸಿಗಲಿದೆ ಎಂಬ ನಿರೀಕ್ಷೆ ಇದೆ.


Click it and Unblock the Notifications











