ಜೀ ಕನ್ನಡದಲ್ಲಿ 'ಬಂಗಾರದ ಮನುಷ್ಯ' ಅಣ್ಣಾವ್ರ ನೋಡಿ

ಬಂಗಾರದ ಮನುಷ್ಯ ಮೇರುನಟನ ಮಹೋನ್ನತ ಚಿತ್ರ ರತ್ನಗಳಲ್ಲಿ ಒಂದು. 1972ರಲ್ಲಿ ತೆರೆಕಂಡ ಬಂಗಾರದ ಮನುಷ್ಯ ಕನ್ನಡ ಚಲನಚಿತ್ರ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿತು. ಮೆಜೆಸ್ಟಿಕ್ ನ ಸ್ಟೇಟ್ಸ್ (ಈಗಿನ ಭೂಮಿಕಾ) ಚಿತ್ರಮಂದಿರದಲ್ಲಿ ಈ ಸಿನಿಮಾ ಎರಡು ವರ್ಷಗಳ ಯಶಸ್ವಿ ಪ್ರದರ್ಶನ ಕಂಡು ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿತ್ತು.
ಕನ್ನಡ ಸಿನಿಮಾ ರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಚಿತ್ರವಿದು. ಖ್ಯಾತ ಕಾದಂಬರಿಕಾರ ಟಿ.ಕೆ. ರಾಮರಾವ್ ಅವರ ಕಾದಂಬರಿ ಆಧಾರಿತ ಈ ಚಿತ್ರದ ನಿರ್ದೇಶಕರು ಸಿದ್ದಲಿಂಗಯ್ಯ. ಈ ಚಿತ್ರಕ್ಕೆ ಜಿ.ಕೆ. ವೆಂಕಟೇಶ್ ಸಂಗೀತ ಸಂಯೋಜಿಸಿದ್ದು, ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್ ಸಾಹಿತ್ಯವಿದೆ.
ಹಾಡುಗಳೆಲ್ಲವೂ ಈಗಲೂ ಅಪಾರ ಜನಪ್ರಿಯತೆ ಪಡೆದಿವೆ. ಭಾರತಿ, ಬಾಲಕೃಷ್ಣ, ದ್ವಾರಕೀಶ್, ವಜ್ರಮುನಿ, ಎಂ.ಪಿ.ಶಂಕರ್, ಶ್ರೀನಾಥ್,ಆರತಿ,ಲೋಕನಾಥ್, ಅದ್ವಾನಿ ಲಕ್ಷ್ಮಿದೇವಿ.ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ.
ಬಂಗಾರದ ಮನುಷ್ಯ ತ್ಯಾಗ ಮತ್ತು ನಿಸ್ವಾರ್ಥ ಸಂದೇಶಗಳಿಂದ ಸಾಮಾಜಿಕ ಪರಿಣಾಮ ಬೀರಿದ ಸಿನಿಮಾ. ಈ ಚಿತ್ರದಿಂದ ಪ್ರಭಾವಿತರಾದ ಗ್ರಾಮ ಹಿನ್ನೆಲೆಯ ಕೆಲವು ಯುವಕರು ನಗರದಲ್ಲಿನ ಉದ್ಯೋಗ ತೊರೆದು ಹಳ್ಳಿಗೆ ಹಿಂದಿರುಗಿ ವ್ಯವಸಾಯದಲ್ಲಿ ತೊಡಗಿಕೊಂಡರು. ಅಷ್ಟರಮಟ್ಟಿಗೆ ಈ ಸಿನಿಮಾ ವಿಶೇಷವಾಗಿ ಯುವಜನಾಂಗದ ಮೇಲೆ ಗಾಢ ಪರಿಣಾಮ ಬೀರಿತು.
ವರನಟ ಡಾ.ರಾಜ್ಕುಮಾರ್ ಅವರ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ ನಿಲ್ಲುವ ಬಂಗಾರದ ಮನುಷ್ಯ ಚಿತ್ರವನ್ನು ಜೀ ಕನ್ನಡ ವಾಹಿನಿಯಲ್ಲಿ ಇದೇ ಮೊದಲ ಬಾರಿಗೆ ಪ್ರಸಾರ ಮಾಡಲು ಹೆಮ್ಮೆ ಎನಿಸುತ್ತದೆ ಎಂದು ಜೀ ವಾಹಿನಿಯ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಡಾ.ಗೌತಮ್ ಮಾಚಯ್ಯ ತಿಳಿಸಿದ್ದಾರೆ.
ಕೋಟಿ ಕೋಟಿ ಜನರು ವೀಕ್ಷಿಸಲು ಇಷ್ಟಪಡುವ, ಬಂಗಾರಕ್ಕೂ ಮಿಗಿಲಾದ, ಮೇರು ನಟನ ಬಹುಜನಪ್ರಿಯ ಚಿತ್ರವಾದ ಬಂಗಾರದ ಮನುಷ್ಯ, ನಾಳೆ, ಅಂದರೆ ಜೂನ್ 10ರಂದು ಭಾನುವಾರ ಸಂಜೆ 5 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ, ತಪ್ಪದೇ ನೋಡುವ ಭಾಗ್ಯ ನಿಮ್ಮದಾಗಲಿ...(ಒನ್ ಇಂಡಿಯಾ ಕನ್ನಡ)


Click it and Unblock the Notifications











