ಜೀ ಕನ್ನಡದ ಹೊಸ ಧಾರಾವಾಹಿ 'ಮೇಘ-ಮಯೂರಿ'
ರಿಯಾಲಿಟಿ ಶೋಗಳಿಂದ ವಿಭಿನ್ನ ರೀತಿಯ ರಂಜನೆ ನೀಡುತ್ತಿರುವ ಜೀ ಕನ್ನಡ ವಾಹಿನಿ ದೈನಿಕ ಧಾರಾವಾಹಿಗಳನ್ನು ಕೂಡ ಹೊಸ ಶೈಲಿಯಲ್ಲಿ ನೀಡುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದೆ. ಆ ನಿಟ್ಟಿನಲ್ಲಿ ಜೀ ವಾಹಿನಿಯ ಮತ್ತೊಂದು ವಿನೂತನ ಕೊಡುಗೆಯೇ 'ಮೇಘ-ಮಯೂರಿ'. ಇದೇ ಜನವರಿ 13 ರಿಂದ ಸೋಮವಾರದಿಂದ ಶನಿವಾರ ಪ್ರತಿ ರಾತ್ರಿ 7-30 ಗಂಟೆಗೆ ವಾರದಲ್ಲಿ 6 ದಿನ 'ಮೇಘ-ಮಯೂರಿ' ಜೀ ವೀಕ್ಷಕರನ್ನು ರಂಜಿಸಲಿದ್ದಾರೆ.
ರಾಧಾಕಲ್ಯಾಣ, ಬಾ ನನ್ನ ಸಂಗೀತ ಧಾರವಾಹಿಗಳಲ್ಲಿ ಕೆಲಸ ಮಾಡಿರುವ ತ್ರಿಶೂಲ್ ನಿರ್ದೇಶನದಲ್ಲಿ ಈ ಧಾರಾವಾಹಿ ಮೂಡಿಬರಲಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಳ್ಳಿಗಾಡಿನಿಂದ ಬೆಳೆದು ಬಂದ ಹಾಗೂ ಬೆಂಗಳೂರಿನಂಥ ಮೆಟ್ರೋಪಾಲಿಟನ್ ಸಿಟಿಯಲ್ಲಿ ಬೆಳೆದ ಇಬ್ಬರು ಹುಡುಗಿಯರ ಕಥೆಯನ್ನು ಇಲ್ಲಿ ತೆಗೆದುಕೊಳ್ಳಲಾಗಿದೆ. ಜೀ ನೆಟ್ ವರ್ಕ್ ನಲ್ಲಿ ಪ್ರಸಾರವಾದ ಜನಪ್ರಿಯ 'ಸಪ್ನೆ ಸುಹಾನೆ ಲಡ್ಕೆ' ಧಾರವಾಹಿಯ ಕಥೆಯನ್ನಿಟ್ಟುಕೊಂಡು ಈ ಧಾರವಾಹಿಯನ್ನು ಮಾಡಿದ್ದೇವೆ. ['ಜೀ ಕುಟುಂಬ ಅವಾರ್ಡ್ಸ್ 2013'ಗಾಗಿ ತೀವ್ರ ಸ್ಪರ್ಧೆ]

ಹಿಂದಿನ ಜನರೇಶನ್ ಹಾಗೂ ಈಗಿನ ಜನರೇಶನ್ ನಡುವಿನ ಅಂತರವನ್ನು ಹೇಳುವ ಪ್ರಯತ್ನ ಮಾಡಿದ್ದೇವೆ ಎಂದು ನಿರ್ದೇಶಕ ತ್ರಿಶೂಲ್ ಕಥೆಯ ಸಂಪೂರ್ಣ ವಿವರ ನೀಡಿದರು. ಕೂರ್ಗ್ ಕ್ರಿಯೇಷನ್ಸ್ ನ ಗಣೇಶ್ ಈ ಧಾರಾವಾಹಿಯ ನಿರ್ಮಾಪಕರು. ಗೆಳೆಯ ಕಾರ್ತೀಕ್ ಮೂಲಕ ಕಿರುತೆರೆಯ ನಿರ್ಮಾಪಕರಾಗಿ ಹೊಸಹೆಜ್ಜೆ ಇಡುತ್ತಿರುವುದಾಗಿ ಹೇಳಿಕೊಂಡರು. ನಾಗೇಶ್ ಯಾದವ್ ಮಯೂರಿಯ ತಂದೆಯಾಗಿ, ರಾಧಾರಾಮಚಂದ್ರ ಅಜ್ಜಿಯಾಗಿ ಹಾಗೂ ಬೃಂದಾ ಮೇಘಾಳ ಸ್ನೇಹಿತೆಯಾಗಿ ನಟಿಸಿದ್ದಾರೆ. ಗೋಕರ್ಣ ಸುತ್ತಮುತ್ತ ಈಗಾಗಲೇ 20 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಮೇಘ ಪಾತ್ರಧಾರಿ ಹರ್ಷಿತಾ ಮಾತನಾಡಿ ಹಳ್ಳಿ ಹುಡುಗಿ ಪಾತ್ರ ನನ್ನದು. ಸಾಫ್ಟ್, ಇನ್ನೋಸೆಂಟ್ ಹಾಗೂ ನಾಚಿಕೆ ಸ್ವಭಾವದ ಹುಡುಗಿಯಾಗಿ ನಾನು ಅಭಿನಯಿಸಿದ್ದೇನೆ. ಜೀನಲ್ಲಿ ಇದು ನನ್ನ 2ನೇ ಪ್ರಾಜೆಕ್ಟ್ ಎಂದರು. ಮಯೂರಿ ಪಾತ್ರ ಮಾಡಿರುವ ಅಮೃತಾ ಮಾತನಾಡುತ್ತ ಯಾವುದನ್ನು ಜತನದಲ್ಲಿಟ್ಟುಕೊಳ್ಳದ, ಯಾವುದಕ್ಕೂ ಹಿಂಜರಿಯದ, ನೇರ ಮಾತಿನ ಹುಡುಗಿ. ನನ್ನ ಮೂಲಸ್ವಭಾವಕ್ಕೆ ತುಂಬಾ ಹತ್ತಿರವಾದ ಪಾತ್ರವನ್ನು ಮಾಡಿದ್ದೇನೆ. ಜೀ ಕನ್ನಡದಲ್ಲಿ ಮೊದಲ ಪ್ರಾಜೆಕ್ಟ್ ಎಂದು ಹೇಳಿದರು. (ಒನ್ ಇಂಡಿಯಾ ಕನ್ನಡ)


Click it and Unblock the Notifications











