ಪುರುಷರಿಗಾಗಿ "ಪುರುಷೋತ್ತಮ" ಧಾರಾವಾಹಿ
ಇತ್ತೀಚಿನ ದಿನಗಳಲ್ಲಿ ಕಿರುತೆರೆ ಧಾರಾವಾಹಿಗಳೆಂದರೆ ಹೆಣ್ಣಿನ ಕಣ್ಣೀರು, ತ್ರಿಕೋನ ಪ್ರೇಮ, ಹೆಣ್ಣಿನ ಸೇಡು, ಈ ತರಹದ ಸ್ತ್ರೀ ಪ್ರಧಾನ ಕಥೆಗಳನ್ನೇ ಹೊಂದಿರುತ್ತವೆ ಎನ್ನುವುದು ಎಲ್ಲ ವೀಕ್ಷಕರ ಅಭಿಪ್ರಾಯವಾಗಿತ್ತು. ಈ ಅಪವಾದವನ್ನು ಹೋಗಲಾಡಿಸಲೆಂದೇ ಜೀ ಕನ್ನಡ ವಾಹಿನಿ ಇದೀಗ ಪುರುಷ ಪ್ರಧಾನ ಧಾರಾವಾಹಿಗಳನ್ನು ನಿರ್ಮಿಸುವತ್ತ ಹೆಜ್ಜೆ ಇಟ್ಟಿದೆ. ಈ ಪ್ರಯತ್ನದ ಮೊದಲ ಕಾಣಿಕೆಯಾಗಿ ಬರುತ್ತಿರುವ ಧಾರಾವಾಹಿ "ಪುರುಷೋತ್ತಮ".
ಆದರ್ಶ ಹೆಗಡೆ ನಿರ್ದೇಶಿಸುತ್ತಿರುವ ಈ ಧಾರಾವಾಹಿಯು ಸೆಪ್ಟೆಂಬರ್ 2 ರಿಂದ ರಾತ್ರಿ 8.30ಕ್ಕೆ ಪ್ರಸಾರ ಆರಂಭವಾಗಿದೆ. ಒಬ್ಬ ಅಕ್ಕ, ಇಬ್ಬರು ತಂಗಿಯರನ್ನು ಒಂದು ದಡ ಸೇರಿಸಲು ನಾಯಕ ಪುರುಷೋತ್ತಮ ಪಡುವ ನೂರಾರು ತೊಂದರೆಗಳು ಅಲ್ಲದೆ ಆತನಿಗೆ ಎದುರಾಗುವ ಸಮಸ್ಯೆಗಳ ಸುತ್ತ ಈ ಕಥೆ ಸಾಗಲಿದೆ.
ಈ ಧಾರಾವಾಹಿಯ ಬಗ್ಗೆ ಕೆಲ ಮಾಹಿತಿಗಳನ್ನು ಹಂಚಿಕೊಂಡಿದೆ ಧಾರಾವಾಹಿ ತಂಡ. ನಾಯಕ ದಿಲೀಪ್ ರಾಜ್, ನಾಯಕಿ ಮೇಘನಾ, ನಿರ್ದೇಶಕ ಆದರ್ಶ ಹೆಗಡೆ, ನಿರ್ಮಾಪಕರಾದ ಹರೀಶ್ ಕೊಡ್ಪಾಡಿ ಸೇರಿದಂತೆ ಎಲ್ಲರೂ ತಮ್ಮ ತಮ್ಮ ಅನಿಸಿಕೆಗಳನ್ನು ಈ ಧಾರಾವಾಹಿ ಬಗ್ಗೆ ಹೇಳಿದ್ದಾರೆ.

ಹೊಸ ತರಹದ ಸೀರಿಯಲ್ ಪುರುಷೋತ್ತಮ
ನಾಯಕ ಪುರುಷೋತ್ತಮ ಕಥೆಯ ಕೇಂದ್ರಬಿಂದು. ಆತನ ಸುತ್ತ ನಡೆಯುವ ಕಥೆಯಲ್ಲಿ ಹಲವಾರು ಸ್ತ್ರೀ ಪಾತ್ರಗಳು ಬಂದು ಹೋಗುತ್ತವೆ. ನಾಯಕ ಈಗಿನ ಹುಡುಗರಿಗೆ ಮಾದರಿಯಾಗಿ ನಿಲ್ಲುತ್ತಾನೆ. ಹೊಸದಾಗಿ ಈ ತರಹದ ಸೀರಿಯಲ್ ಪ್ರಾರಂಭಿಸುತ್ತಿದ್ದೇವೆ. ಅದಕ್ಕೆ ಪ್ರತಿಕ್ರಿಯೆ ಯಾವ ರೀತಿ ಇರುತ್ತದೆ ಎಂದು ಕಾದು ನೋಡಬೇಕಿದೆ ಎನ್ನುತ್ತಾರೆ ನಿರ್ದೇಶಕ ಆದರ್ಶ ಹೆಗಡೆ.

ಪುರುಷೋತ್ತಮನಾಗಿ ದಿಲೀಪ್ ರಾಜ್
ನಾಯಕ ಪಾತ್ರಧಾರಿ ದಿಲೀಪ್ ರಾಜ್ ಹೇಳುವುದೇನೆಂದರೆ... ಬಹಳ ದಿನಗಳ ನಂತರ ಲೀಡ್ ರೋಲ್ ಮಾಡುತ್ತಿದ್ದೇನೆ. ಅಲ್ಲದೆ ಹುಡುಗನ ಹೆಸರನ್ನಿಟ್ಟುಕೊಂಡು ಮಾಡುತ್ತಿರುವ ಫಸ್ಟ್ ಸೀರಿಯಲ್ ನಲ್ಲಿ ನಾಯಕನಾಗಿ ಅಭಿನಯಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ತುಂಬಾ ಜನ ಹೊಸ ಕಲಾವಿದರ ಜೊತೆ ಅಭಿನಯಿಸಿರುವುದು ಹೊಸ ಅನುಭವ.

ಕೇವಲ ಟಿ.ಆರ್.ಪಿಗಾಗಿ ಈ ಧಾರಾವಾಹಿ ಅಲ್ಲ
ಕೇವಲ ಟಿ.ಆರ್.ಪಿಗಾಗಿ ಮಾಡದೆ ವೀಕ್ಷಕರಿಗೆ ಹೊಸದನ್ನು ಕೊಡುವ ಉದ್ದೇಶದಿಂದ ಜೀ ಕನ್ನಡ ಈ ಸೀರಿಯಲ್ ನಿರ್ಮಿಸಿದೆ. ಒಬ್ಬ ಹುಡುಗ ಸಾಂಸಾರಿಕ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳುತ್ತಾನೆ ಅನ್ನುವುದನ್ನು ತುಂಬಾ ಚೆನ್ನಾಗಿ ನಿರ್ದೇಶಕರು ನಿರೂಪಿಸಿದ್ದಾರೆ ಎನ್ನುತ್ತಾರೆ ದಿಲೀಪ್ ರಾಜ್. ಈ ಹಿಂದೆ 'ದೇವಿ' ಧಾರಾವಾಹಿಯಲ್ಲಿ ನಟಿಸಿದ್ದ ಮೇಘನಾ ನಾಯಕಿ ಪಾತ್ರ ನಿರ್ವಹಿಸಿದ್ದಾರೆ.

ಹರೀಶ್ ನಿರ್ಮಾಣದ ಚೊಚ್ಚಲ ಧಾರಾವಾಹಿ
ಒಂದು ಒಳ್ಳೆ ಧಾರಾವಾಹಿ ಮಾಡುವ ಉದ್ದೇಶದಿಂದ ಈ ಪ್ರಯತ್ನ ಮಾಡಿದ್ದೇವೆ ಎಂದರು. ಮೂಲತಃ ಸಂಕಲನಕಾರರಾದ ಹರೀಶ್ ಹಲವಾರು ಚಲನಚಿತ್ರ ಹಾಗೂ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಇದು ಅವರ ನಿರ್ಮಾಣದ ಮೊದಲ ಪ್ರಯತ್ನ.

ಇದು ಮಹಿಳಾ ವಿರೋಧಿ ಕಥೆಯಲ್ಲ
ಇದು ಮಹಿಳಾ ವಿರೋಧಿ ಕಥೆ ಅಲ್ಲ. ನಾಯಕ ಹೆಣ್ಣಿನ ದೃಷ್ಠಿಯಲ್ಲಿ ಅಣ್ಣನಾಗಿ, ತಮ್ಮನಾಗಿ ಹಾಗೂ ತಂದೆಯಾಗಿಯೂ ಕಾಣುತ್ತಾನೆ ಎಂಬುದನ್ನು ನಿರ್ದೇಶಕ ಆದರ್ಶ ಹೆಗಡೆ ಸ್ಪಷ್ಟಪಡಿಸಿದ್ದಾರೆ.

ಧಾರಾವಾಹಿಯ ತಾರಾಬಳಗ ಈ ರೀತಿ ಇದೆ
ಈ ಧಾರಾವಾಹಿಯ ಉಳಿದ ತಾರಾಗಣದಲ್ಲಿ ರಾಕೇಶ್, ಪ್ರೇಮರಾಜ್, ಸ್ವಪ್ನಾ ರಾಜ್, ಲಕ್ಷ್ಮೀಗೌಡ, ದೀಪ್ತಿ, ಐಶ್ವರ್ಯಾ, ಎಚ್ಎಂಟಿ ವಿಜಿ, ಸುನಂದಾ ಹೊಸಪೇಟೆ, ಗಗನ್, ತನುಜಾ ತಾರಾಗಣದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











