DKD:ಅಪ್ಪು ಟ್ರೋಫಿ ನೋಡಿ ನೋಡಿದ ಕೂಡಲೇ ಗಳ ಗಳನೇ ಅತ್ತ ಶಿವಣ್ಣ
ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸಿಂಗ್ ಸ್ಟಾರ್ ಅಂದರೆ ಅದು ಅಪ್ಪು ಮಾತ್ರ. ಡ್ಯಾನ್ಸಿಂಗ್ ವಿಚಾರದಲ್ಲಿ ಅವರನ್ನು ಮೀರಿಸಿದವರು ಯಾರು ಇಲ್ಲ. ಹಾಗೇ ಅವರ ಡ್ಯಾನ್ಸ್ ಅನ್ನು ಎಲ್ಲರೂ ಆರಾಧಿಸುತ್ತಿದ್ದರು. ನಟನೆ, ಫೈಟ್, ಹಾಡು ಅವರಿಂದ ಸ್ಪೂರ್ತಿ ಪಡೆದಿದ್ದು ಒಂದೆರಡಲ್ಲ. ಆದರೆ ವಿಧಿ ಅವಸರ ಮಾಡಿಬಿಡ್ತು. ಅವರ ನೆನಪನ್ನು ಅಚ್ಚ ಹಸಿರಾಗಿಸಲು ಅಭಿಮಾನಿಗಳು ನಾನಾ ಪ್ರಯತ್ನ ಮಾಡುತ್ತಿರುತ್ತಾರೆ. ಇತ್ತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಜೀ ಕನ್ನಡ ಗೌರವ ಸಲ್ಲಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಹಾಡಿನ ಮೂಲಕ, ಅವಾರ್ಡ್ ಮೂಲಕ, ಡ್ಯಾನ್ಸ್ ಮೂಲಕ. ಇದೀಗ ಅಪ್ಪು ಹೆಸರಲ್ಲಿ ಟ್ರೋಫಿ ನೀಡಲು ಸಿದ್ಧವಾಗಿದೆ.
ಜೀ ಕನ್ನಡದಲ್ಲಿ ಡಿಕೆಡಿ ಶೋ ಹಲವು ದಿನಗಳಿಂದ ನಡೆಯುತ್ತಿದೆ. ಇದರಲ್ಲಿ ಹಲವಾರು ಸ್ಪರ್ಧಿಗಳಿದ್ದಾರೆ. ಆ ಸ್ಪರ್ಧಿಗಳಿಗೆ ಗೆಲುವಾದ ಮೇಲೆ ಹಣದ ಜೊತೆಗೆ ಒಂದಷ್ಟು ಬೇರೆ ಬೇರೆ ಉಡುಗೊರೆಗಳು ಸಹ ಸಿಗುತ್ತವೆ. ಆದರೆ ಈ ಬಾರಿ ಬೇರೆಯದ್ದೇ ವಿಶೇಷವಿದೆ. ಹಣಕ್ಕಿಂತ ದುಬಾರಿಯಾದ ಉಡುಗೊರೆ ಸಿಗಲಿದೆ. ಅದು ಅಪ್ಪು ಟ್ರೋಫಿ. ಈ ಬಾರಿಯ ಡಿಕೆಡಿಯಲ್ಲಿ ಗೆದ್ದವರಿಗೆ ನಗದು ಬಹುಮಾನದ ಜೊತೆಗೆ ಬೆಲೆಯನ್ನೇ ಕಟ್ಟಲಾಗದ ಟ್ರೋಫಿ ಸಿಗಲಿದೆ.

ಅಪ್ಪು ಟ್ರೋಫಿಗೆ ನೃತ್ಯದ ಗೌರವ
ಡ್ಯಾನ್ಸ್ ವಿತ್ ಅಪ್ಪು ಹಾಡು ಸದಾ ಕಾಲಕ್ಕೂ ಜೀವಂತ. ಡ್ಯಾನ್ಸ್ ಎಂದರೆ ಅತಿಯಾಗಿ ಆಸೆಪಡುವವರೆಲ್ಲಾ ಬಯಸುತ್ತಿದ್ದದ್ದು ಒಮ್ಮೆಯಾದರೂ ಡ್ಯಾನ್ಸ್ ವಿತ್ ಅಪ್ಪು ಅಂತ. ಆ ಕನಸು ಹಲವರಿಗೆ ಈಡೇರಿದರೆ ಇನ್ನು ಕೆಲವರಿಗೆ ಈಡೇರದೆ ಹಾಗೆಯೇ ಉಳಿದು ಬಿಟ್ಟಿತು. ಆದರೆ ಅಪ್ಪು ಅವರ ಹಾಡುಗಳಿಗೆ ಕುಣಿಯುವುದು ಸಹ ಒಂದು ಅದೃಷ್ಟದಂತೆ. ಹೀಗಾಗಿ ಅವಕಾಶ ಸಿಕ್ಕಾಗ ಡ್ಯಾನ್ಸ್ ಪ್ರೇಮಿಗಳು ಅಪ್ಪು ಹಾಡಿಗೆ ನೃತ್ಯ ಮಾಡುತ್ತಾರೆ. ಈ ಬಾರಿಯ ಜೀ ಕನ್ನಡದ ಡಿಕೆಡಿ ಕಾರ್ಯಕ್ರಮದಲ್ಲೂ ಅಪ್ಪು ಹಾಡುಗಳೇ ಹೆಚ್ಚು ಮೇಳೈಸಿದೆ. ವೇದಿಕೆ ಮೇಲೆ ಅಪ್ಪು ಬರಮಾಡಿಕೊಳ್ಳುವ ಕ್ಷಣ. ಅವರಿಗೆ ನೃತ್ಯದ ಮೂಲಕವೇ ಗೌರವ ನೀಡಿ, ಡ್ಯಾನ್ಸ್ ವಿತ್ ಅಪ್ಪು ಹಾಡಿಗೆ ಇಡೀ ಡಿಕೆಡಿ ಟೀಂ ಕುಣಿದು, ಅಪ್ಪುವಿನ ಟ್ರೋಫಿಯನ್ನು ಬಹಳ ಗೌರವದಿಂದ ವೇದಿಕೆಗೆ ಇಳಿಸಿದರು.

ಅಪ್ಪು ಟ್ರೋಫಿ ಹೇಗಿದೆ ಗೊತ್ತಾ..?
ಡಿಕೆಡಿ ಟೀಂ ಜೊತೆಗೆ ಅನುಶ್ರೀ ಕೂಡ ಡ್ಯಾನ್ಸ್ ವಿತ್ ಅಪ್ಪು ಹಾಡಿಗೆ ಕುಣಿದರು. ಯಾಕಂದರೆ ಎಲ್ಲರಿಗೂ ಗೊತ್ತಿರುವಂತೆ ಅನುಶ್ರೀ ಅಪ್ಪು ಅವರ ಬಿಗ್ ಫ್ಯಾನ್. ಅನುಶ್ರೀಗೂ ಮನಸ್ಸಲ್ಲಿ ಹೇಳಲಾರದ ನೋವಿದ್ದರೂ, ಅಪ್ಪುವಿಗಾಗಿ ನೃತ್ಯ ಮಾಡಿದರು. ನೃತ್ಯದ ನಡುವಲ್ಲಿ ಮೇಲೆ ಅಪ್ಪು ಟ್ರೋಫಿ ಇತ್ತು. ಶಿವಣ್ಣ ಅದರ ಬಟ್ಟೆ ಸರಿಸಿ, ಅಪ್ಪು ಟ್ರೋಫಿಯನ್ನು ವೇದಿಕೆ ಮೇಲೆ ತಂದರು. ನಕ್ಷತ್ರಗಳ ನಡುವೆ ಅಪ್ಪು ಕಂಚಿನ ಪ್ರತಿಮೆ ಮಿನುಗುತ್ತಿದೆ. ಒಂದು ಕ್ಷಣ ಆ ಪ್ರತಿಮೆ ನೋಡಿದರೆ ಎಂಥವರಿಗೂ ಕರುಳು ಕಿತ್ತು ಬರುತ್ತೆ. ಅಪ್ಪು ನಿಜವಾಗಲೂ ನಮ್ಮನ್ನು ಅಗಲಿದರಾ ಎಂಬ ನೋವು ಮತ್ತೆ ಕಾಡುತ್ತೆ. ದುಃಖ ಉಮ್ಮಳಿಸಿ ಬರುತ್ತದೆ. ಡ್ಯಾನ್ಸ್ ಮಾಡುವ ರೀತಿಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆ ಇದೆ. ಪ್ರತಿಮೆ ಬಳಿ ಪವರ್ ಎಂದು ಬರೆಯಲಾಗಿದೆ. ನಿಜಕ್ಕೂ ಆ ಪ್ರತಿಮೆ ವೇದಿಕೆ ಮೇಲೆ ಇಳಿಸುವಾಗ ಅಕ್ಷರಶಃ ಅಪ್ಪು ಕೆಳಗಿಳಿದು ಬರುತ್ತಿದ್ದಾರೆಂಬಂತೆ ಭಾಸವಾಗುತ್ತದೆ. ಅಷ್ಟು ಸೊಗಸಾಗಿದೆ ಟ್ರೋಫಿ.

ಶಿವಣ್ಣನಿಗೆ ಕಾಡಿದ ಅಪ್ಪು ನೆನಪುಗಳು
ಆ ಟ್ರೋಫಿ ಕೆಳಗಿಳಿಯುತ್ತಿದ್ದಂತೆ ನೋಡುಗರ ಮನಸ್ಸು ತೀರಾ ಚಡಪಡಿಸುತ್ತದೆ. ಅಪ್ಪು ನಮ್ಮ ಜೊತೆ ಇಲ್ವಾ ಎಂದು ಕಣ್ಣೀರು ತರಿಸುತ್ತೆ. ಅಂಥದ್ರಲ್ಲಿ ಮುದ್ದಿನ ತಮ್ಮ ಬಹಳ ಬೇಗ ದೂರಾದ ನೋವು ಶಿವಣ್ಣನನ್ನು ಬಾಧಿಸುವುದಿಲ್ಲವಾ? ಶಿವಣ್ಣ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಅಪ್ಪು ಇಲ್ಲ ಎಂಬುದನ್ನು ನೆನೆಯುವುದಕ್ಕಿಂತ ಆತನನ್ನು ಜೀವಂತವಾಗಿಡುವ ಕೆಲಸವಾಗಬೇಕೆಂದು ಯತ್ನಿಸುತ್ತಿದ್ದಾರೆ. ಆದರೆ ಆ ಟ್ರೋಫಿ ಇಳಿದು ಬಂದ ರೀತಿ ಇದೆಯಲ್ಲ ಅಕ್ಷರಶಃ ಅಪ್ಪು ನೆನೆಪು ಎದೆಯೊಳಗೆ ಧಸಕ್ಕೆಂದು ಬೀಳುತ್ತದೆ. ಇದು ಶಿವಣ್ಣನ ಭಾವನೆಗಳನ್ನೇ ಬ್ರೇಕ್ ಮಾಡಿತು. ನಿಂತು ಸೆಲೆಬ್ರೇಷನ್ ಮಾಡುತ್ತಿದ್ದವರು ಮಂಕಾಗಿ ಕುಳಿತುಬಿಟ್ಟರು. ಕಣ್ಣಲ್ಲಿ ನೀರು ಕಂಟ್ರೋಲ್ ಮಾಡಿದರು ಬಿಡದೆ ಕೆಳಗೆ ಬಿದ್ದೇ ಬಿಟ್ಟಿತು. ರಕ್ಷಿತಾ ಬಂದು ಸಮಾಧಾನ ಮಾಡಿದರು. ಚಿನ್ನಿ ಮಾಸ್ಟರ್ ಧೈರ್ಯ ತುಂಬಿದರು. ವೇದಿಕೆ ಮೇಲಿದ್ದವರು ಮಂಕಾಗಿ ನಿಂತರು. ಶಿವಣ್ಣ ನಿಧಾನವಾಗಿ ಮತ್ತೆ ಸಹಜ ಸ್ಥಿತಿಗೆ ಬಂದರು.
ಶಿವಣ್ಣನಿಂದ ತಮ್ಮನಿಗೆ ಮುತ್ತಿನ ಅಪ್ಪುಗೆ
ಶಿವಣ್ಣನ ದುಃಖ ಇಡೀ ಡಿಕೆಡಿ ಬಳಗದ ದುಃಖವಾಗಿತ್ತು. ಅಷ್ಟೇ ಯಾಕೆ ಇಡೀ ಕರುನಾಡು ಆ ಕ್ಷಣ ಕಣ್ಣಲ್ಲಿ ನೀರು ಹಾಕಿದ್ದಾರೆ. ಶಿವಣ್ಣ ಈ ಮೊದಲೇ ಹೇಳಿದಂತೆ ಅಪ್ಪುವನ್ನು ಈ ಸೀಸನ್ನಲ್ಲಿ ಸೆಲೆಬ್ರೆಷನ್ ಮಾಡೋಣಾ ಎಂದಿದ್ದರು. ಹೀಗಾಗಿ ಡಿಕೆಡಿಯಲ್ಲಿ ಪುನೀತ್ ರಾಜ್ ಕುಮಾರ್ ಪದಕ ಹಾಗೂ ಪವರ್ ಸ್ಟಾರ್ ಹ್ಯಾಟ್ ನೀಡಲಾಗಿದೆ. ಈಗ ಗೆದ್ದವರಿಗೆ ಟ್ರೋಫಿ ನೀಡಲಾಗುತ್ತಿದೆ. ವೇದಿಕೆ ಮೇಲೆ ಇದ್ದ ಕಂಚಿನ ಪ್ರತಿಮೆಗೆ ಶಿವಣ್ಣ ಮುತ್ತು ಕೊಡುವಾಗ ನೋಡುವಾಗ ಅಪ್ಪು ಕೆನ್ನೆಗೆ ಮುತ್ತಿಟ್ಟಂತೆ ಆಯಿತು. ಆ ಕ್ಷಣ ಅದೆಷ್ಟು ಹೃದಯಗಳು ದೇವರನ್ನು ಶಪಿಸಿದವೋ ಲೆಕ್ಕಕ್ಕಿಲ್ಲ.


Click it and Unblock the Notifications











