Mahanati: ವೇದಿಕೆಯಲ್ಲಿ ಲೀಲಾವತಿ ನೆನಪು: ತಾಯಿಯನ್ನು ನೆನೆದು ವಿನೋದ್ ರಾಜ್ ಭಾವುಕ
ಜೀ ಕನ್ನಡದಲ್ಲಿ ಮಹಾನಟಿ ಶೋ ಕಳೆದ ಎರಡು ವಾರದಿಂದ ಶುರುವಾಗಿದೆ. ಈ ಶೋನಲ್ಲಿ ಒಳ್ಳೆಯ ಪ್ರತಿಭಾವಂತರನ್ನು ಕರೆತರಲಾಗಿದೆ. ಸಿನಿಮಾ ಇಂಡಸ್ಟ್ರಿಗೆ ಮುಂದಿನ ದಿನಗಳಲ್ಲಿ ಒಂದಷ್ಟು ಪ್ರತಿಭಾವಂತ ಕಲಾವಿದರನ್ನು ನೀಡುವ ಕೆಲಸವಾಗುತ್ತಿದೆ. ರಮೇಶ್ ಅರವಿಂದ್ ಪ್ರತಿಯೊಬ್ಬರಿಗೂ ಕಲೆಯ ಬಗ್ಗೆ ತಿಳಿಸಿ ಹೇಳುತ್ತಿದ್ದಾರೆ. ಇನ್ನು ತರುಣ್ ಸುಧೀರ್, ಪ್ರೇಮಾ, ನಿಶ್ವಿಕಾ ನಾಯ್ಡು ತೀರ್ಪುಗಾರರ ಸ್ಥಾನದಲ್ಲಿ ಕೂತಿದ್ದಾರೆ.
ಈ ವೀಕೆಂಡ್ ಮಹಾನಟಿ ವೇದಿಕೆಗೆ ವಿಶೇಷ ಅತಿಥಿಯನ್ನು ಕರೆತರಲಾಗಿದೆ. ಡ್ಯಾನ್ಸ್ನಲ್ಲಿ ಕಿಂಗ್ ಎನಿಸಿಕೊಂಡ ವಿನೋದ್ ರಾಜ್ ಅವರನ್ನು ಮಹಾನಟಿ ವೇದಿಕೆಗೆ ಕರೆಸಿದ್ದಾರೆ. ಲೀಲಾವತಿ ಅವರು ಹಲವು ದಶಕಗಳ ಕಾಲ ಕನ್ನಡ ಇಂಡಸ್ಟ್ರಿಯಲ್ಲಿ ಆಳ್ವಿಕೆ ನಡೆಸಿದವರು. ಮಹಾನಟಿಯಲ್ಲಿ ಮೊದಲ ಸಾಲಿನಲ್ಲಿಯೇ ನಿಲ್ಲುತ್ತಾರೆ. ಅವರೇ ಯುವ ನಟಿಯರಿಗೆ ಸ್ಪೂರ್ತಿ. ಇದೀಗ ಲೀಲಾವತಿ ಅವರ ಮಗನನ್ನು ಈ ವೇದಿಕೆಗೆ ಕರೆಸಲಾಗಿದೆ.

ಲೀಲಾವತಿ ಅವರಿಗೆ ನಮನ
ಮಹಾನಟಿ ವೇದಿಕೆಯಲ್ಲಿ ಸ್ಪರ್ಧಿಗಳಿಗೆ ಹೊಸ ಸವಾಲೊಂದನ್ನು ನೀಡಲಾಗಿದೆ. ಒಬ್ಬೊಬ್ಬರು ಹಿರಿಯ ಮಹಾನಟಿಯರನ್ನು ಸ್ಪೂರ್ತಿಯಾಗಿಟ್ಟುಕೊಂಡು ನಟಿಸಬೇಕು. ಈಗಿನ ದೃಶ್ಯಗಳಲ್ಲ. ಹಿಂದೆ ನಟನೆಯಿಂದಾನೇ ಎಲ್ಲರ ಮನಗೆದ್ದಂತ ಹಿರಿಯ ಕಲಾವಿದರ ಸಿನಿಮಾಗಳ ಮೂಲಕ ತಮ್ಮ ನಟನೆಯನ್ನು ತೋರಿಸಬೇಕಿದೆ. ಲೀಲಾವತಿ ಅವರು ನಿಧನರಾಗಿ ಕೆಲ ತಿಂಗಳುಗಳೇ ಆಗಿದೆ. ಜೀ ಕನ್ನಡ ಇದೀಗ ಮಹಾನಟಿ ವೇದಿಕೆಯಲ್ಲಿ ಅವರಿಗೆ ನಮನ ಸಲ್ಲಿಸಿದೆ.
ತಾಯಿಯನ್ನು ನೆನೆದು ಕಣ್ಣೀರು
ಸ್ಪರ್ಧಿಗಳಿಂದ ಲೀಲಾವತಿ ಹಾಗೂ ರಾಜ್ಕುಮಾರ್ ಅವರ ಸಿನಿಮಾದ 'ಬಿಂಕದ ಸಿಂಗಾರಿ' ಹಾಡಿಗೆ ನಟನೆ ಮಾಡಿ ತೋರಿಸಿದ್ದಾರೆ. ಇದನ್ನು ಕಂಡು ವಿನೋದ್ ರಾಜ್ ಭಾವುಕರಾಗಿದ್ದಾರೆ. ಅಮ್ಮ ಮಗ ಎಷ್ಟು ಅನ್ಯೋನ್ಯವಾಗಿದ್ದರು ಎಂಬುದು ಎಲ್ಲರು ನೋಡಿರುವ ವಿಚಾರವೇ. ಲೀಲಾವತಿ ಅವರು ಹೋದ ಮೇಲೆ ವಿನೋದ್ ರಾಜ್ ಕುಸಿದು ಬಿಟ್ಟಿದ್ದಾರೆ. ಇದೀಗ ಅಮ್ಮನ ಸಿನಿಮಾ ಹಾಡು ನೋಡಿ ಭಾವುಕರಾಗಿದ್ದಾರೆ. ಅಮ್ಮನಿಲ್ಲದ ನಾಲ್ಕು ತಿಂಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ವೇದಿಕೆ ಮೇಲಿದ್ದವರಿಗೂ ಕಣ್ಣೀರು
'ಬಿಂಕದ ಸಿಂಗಾರಿ' ಪರ್ಫಾಮೆನ್ಸ್ ಮುಗಿದ ಬಳಿಕ ಇಡೀ ವೇದಿಕೆಯ ಮಂದಿ ಎದ್ದು ನಿಂತು ಲೀಲಾವತಿ ಅವರಿಗೆ ಗೌರವ ಸಲ್ಲಿಸಿದರು. ಈ ವೇಳೆ 'ಎಷ್ಟೇ ಮರೆತು ಜೀವನ ಮಾಡಬೇಕು ಎಂದುಕೊಂಡರು ಅದು ಕಷ್ಟವಾಗುತ್ತದೆ. ನೋಡುತ್ತಾ ನೋಡುತ್ತಾ ಕೊನೆ ಫೋಟೋ ನೋಡಿ ನೋವು ತಡೆದುಕೊಳ್ಳುವುದಕ್ಕೆ ಆಗಲಿಲ್ಲ. ಅಮ್ಮ ಬಿಟ್ಟು ಹೋಗಿದ್ದಾರೆ. ನಾನು ಕೂಡ ಹೇಗೆ ನಾಲ್ಕು ತಿಂಗಳು ಕಳೆದುಬಿಟ್ಟೆ ಅನ್ನಿಸುತ್ತಾ ಇದೆ. ಮತ್ತೆ ಅದನ್ನ ನೋಡಿದಾಗ ಆ ನೋವು ಮರುಕಳಿಸುತ್ತೆ, ಎದೆ ಹಿಂಡಿದಂತೆ ಆಗಿ ಬಿಡುತ್ತದೆ' ಎಂದು ವಿನೋದ್ ರಾಜ್ ಭಾವುಕರಾಗಿದ್ದಾರೆ. ಇದನ್ನು ಕಂಡ ಇಡೀ ವೇದಿಕೆ ಕಣ್ಣೀರಾಗಿದೆ.
ಕಣ್ಣೀರು ಹಾಕಿದ್ದಕ್ಕೆ ಕ್ಷಮೆ
'ದೇವರು ಯಾಕೆ ಇಷ್ಟು ಬೇಗ ಇಬ್ಬರಲ್ಲಿ ಒಬ್ಬರನ್ನ ಹೀಗೆ ಬೇಗ ಕರೆದುಕೊಂಡು ಬಿಟ್ಟ. ಯಾವಾಗಲೂ ಕೇಳುತ್ತಿದ್ದರು ಮಗ ಬಂದನಾ, ಎಲ್ಲಿ ಹೋಗಿದ್ದಾನೆ ಕೇಳಿ ಎನ್ನುತ್ತಿದ್ದರು. ಈಗ ಕೇಳೋದಕ್ಕೆ ಯಾರೂ ಇಲ್ಲ. ಎರಡು ನಾಯಿ ಮಾತ್ರ ಇದೆ. ಇಷ್ಟು ಪ್ರೀತಿ ಮಾಡಬಾರದು ತಾಯಿ ಮಕ್ಳಳನ್ನ. ಕ್ಷಮಿಸಿ ಜಡ್ಜಸ್. 56 ವರ್ಷ ವಯಸ್ಸಾದರೂ ಅರಿವಿಲ್ಲದೆ ಅಳುತ್ತಾ ಇದ್ದೀನಿ. ಬೇಜಾರು ಮಾಡಿಕೊಳ್ಳಬೇಡಿ' ಎಂದಿದ್ದಾರೆ. ಇದಕ್ಕೆ ಅನುಶ್ರೀ ಕೂಡ ಸಮಾಧಾನ ಮಾಡಿದ್ದು, ನಿಮ್ಮ ನೋವು ಅರ್ಥವಾಗುತ್ತದೆ. ಕ್ಷಮೆ ಕೇಳಬೇಡಿ ಎಂದಿದ್ದಾರೆ.


Click it and Unblock the Notifications











