ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್: 'ರಣರಂಗ'ದಲ್ಲಿ ಅಪ್ಪಾಜಿಗಾಗಿ ಹಾಡಿದ ಶಿವಣ್ಣ!
ಶನಿವಾರ-ಭಾನುವಾರ ಬಂತೆಂದರೆ ಖುಷಿಯೋ ಖುಷಿ. ಈ ವಾರ ಯಾವ ಹಾಡಿಗೆ ಹೆಜ್ಜೆ ಹಾಕುತ್ತಾರೆ ಎಂಬೆಲ್ಲಾ ಕುತೂಹಲಗಳು ಗರಿಗೆದರಿ ನಿಲ್ಲುತ್ತವೆ. ಅದರಲ್ಲೂ ಡಿಕೆಡಿ ನಲ್ಲು ಸೆಂಟರ್ ಆಫ್ ಅಟ್ರಾಕ್ಷನ್ ಎಂದರೆ ಅದು ಶಿವಣ್ಣ. ಶಿವಣ್ಣನಿಗಾಗಿಯೇ, ಶಿವಣ್ಣನ ನಗುವಿಗಾಗಿಯೇ ಮಾಡಿದ ಡ್ಯಾನ್ಸ್ ಗಳು ಸಾಕಷ್ಟು.
ಹೀಗಾಗಿ ಶಿವಣ್ಣ ಈ ವೀಕೆಂಡ್ ಶೋನಲ್ಲಿ ಸಾಕಷ್ಟು ಎಂಜಾಯ್ ಮಾಡಿದ್ದಾರೆ, ಭಾವನೆಗೆ ಒಳಗಾಗಿದ್ದಾರೆ, ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಇದೀಗ ಈ ವಾರವೂ ಅಂಥದ್ದೇ ಪರ್ಫಾಮೆನ್ಸ್ ಇದೆ. ಅಣ್ಣಾವ್ರ ಕುಟುಂಬದಲ್ಲಿ ಎಲ್ಲವೂ, ಎಲ್ಲರೂ ಅಜರಾಮರವಾಗಿಯೇ ಉಳಿಯುತ್ತಾರೆ. ಆ ರೀತಿಯಾದ ಬ್ರಾಂಡ್, ಎಫರ್ಟ್ ಅಣ್ಣಾವ್ರ ಕುಟುಂಬದ್ದು. ಡಾ. ರಾಜ್ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಬಹಳ ವರ್ಷಗಳಾಗುತ್ತಿವೆ.
ಆದರೆ ಅವರ ಸಿನಿಮಾ, ಅವರ ನಟನೆ, ಅವರ ಧ್ವನಿಯಲ್ಲಿ ಕೇಳುವ ಹಾಡುಗಳೆಲ್ಲಾ ಯಾವತ್ತು ಅವರು ಇಲ್ಲವೇನೋ ಎಂದು ಭಾವಿಸುವುದಕ್ಕೆ ಸಾಧ್ಯವಿಲ್ಲ. ಅವರ ಕಲೆಯಲ್ಲಿಯೆರ ಅವರನ್ನು ಜೀವಂತವಾಗಿ ನೋಡುತ್ತಿದ್ದೇವೆ. ಇನ್ನು ಅಪ್ಪು ಬಗ್ಗೆ ಹೇಳುವುದೇ ಬೇಡ. ಅವರಿಲ್ಲ ಎಂಬ ನೋವನ್ನ ಸಹಿಸಿಕೊಳ್ಳುವುದಕ್ಕೆ ಅಸಾಧ್ಯದ ಮಾತೇ. ಅವರ ಸಿನಿಮಾಗಳನ್ನ ನೋಡುವಾಗೆಲ್ಲಾ ವಿಧಿಗೆ ಶಾಪ ಹಾಕಲೇಬೇಕೆನ್ನಿಸುತ್ತದೆ.

ಶಿವಣ್ಣನ ಜಗವೇ ಒಂದು ರಣರಂಗ ಎಂದ ಮಕ್ಕಳು
ಎವರ್ ಗ್ರೀನ್ ಸಿನಿಮಾ ಎಂಬುದು ಅಣ್ಣಾವ್ರ ಕುಡಿಗಳ ಲೀಸ್ಟ್ ನಲ್ಲಿ ಸಿಕ್ಕಾಪಟ್ಟೆ ಇದ್ದಾವೆ. ಅದರಲ್ಲಿ ರಣರಂಗ ಕೂಡ ಒಂದು. ಅದರಲ್ಲಿ ಜಗವೇ ಒಂದು ರಣರಂಗ ಎಂಬ ಅರ್ಥಗರ್ಭಿತ, ಆಕ್ರೋಶದ ಹಾಡೊಂದಿದೆ. ಆ ಹಾಡಿನಲ್ಲಿ ಶಿವಣ್ಣ ಕೋಪದಲ್ಲಿಯೇ, ಅನ್ಯಾಯದ ವಿರುದ್ಧ ತನ್ನ ಭಾವವನ್ನು ವ್ಯಕ್ತಪಡಿಸುತ್ತಾರೆ. ಈ ಹಾಡು ಯಾವಾಗ ಕೇಳಿದರು ಮನಸ್ಸಿಗೊಂದು ಎಕ್ಸ್ಟ್ರಾ ಎನರ್ಜಿ ಬೂಸ್ಟರ್ ಎಂದೇ ಹೇಳಬಹುದು. ಇದೇ ಹಾಡಿಗೆ ಇದೀಗ ಡಿಕೆಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಗಗನ್ ಅಂಡ್ ದಿಶಾ ಜಗವೇ ಒಂದು ರಣರಂಗ ಸಿನಿಮಾದಲ್ಲಿ ಶಿವಣ್ಣ ಇದ್ದ ರೀತಿಯಲ್ಲಿಯೇ ಮಾಸ್ ಲುಕ್ ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ವೇದಿಕೆ ಮೇಲೆ ಅದ್ಭುತ ಪರ್ಫಾಮೆನ್ಸ್ ತೋರಿಸಿದ್ದಾರೆ.
ಅಪ್ಪಾಜಿ ಧ್ವನಿಗೆ ಶಿವಣ್ಣ ಕಣ್ಣೀರು
ರಣರಂಗ ಸಿನಿಮಾದ ಈ ಹಾಡು ಅಂದು ಹಂಸಲೇಖಾ ಅವರ ಸಂಗೀತ ನಿರ್ದೇಶನದಲ್ಲಿ, ಡಾ. ರಾಜ್ಕುಮಾರ್ ಅವರು ಧ್ವನಿಯಾಗಿದ್ದರು. ಆ ಹಾಡಿನ ಗತ್ತಿಗೆ ಮತ್ತಷ್ಟು ತಾಕತ್ತು ಬಂದಿದ್ದೆ ಅಣ್ಣಾವ್ರ ಆ ಧ್ವನಿಯಿಂದ. ಆ ಹಾಡಿಗೆ ಪರ್ಫಾಮೆನ್ಸ್ ಕಂಡು ಶಿವಣ್ಣ ಅಣ್ಣಾವ್ರನ್ನ ನೆನೆದಿದ್ದಾರೆ. ಇವತ್ತು ಅಪ್ಪಾಜಿಯನ್ನು ತುಂಬಾ ಮಿಸ್ ಮಾಡಿಕೊಳ್ತೇನೆ. ಅವರ ವಾಯ್ಸ್ ನ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ. ಈ ಹಾಡನ್ನು ಅವರಿಗಾಗಿಯೇ ಬರೆದಂತಿದೆ ಎಂದರು.

ಅಪ್ಪು ಹೋದ ಮೇಲೆ ಶಿವಣ್ಣನ ಮನಸ್ಸು ಭಾರವಾಗಿದೆಯಾ
ಶಿವಣ್ಣನ ಎಲ್ಲಾ ಸಿನಿಮಾ ಸಕ್ಸಸ್ ಹಿಂದೆ ಅಮ್ಮ-ಅಪ್ಪಾಜಿ ಇದ್ರು. ಅಮ್ಮನ (ಪಾರ್ವತಮ್ಮ) ಪಾತ್ರ ಜಾಸ್ತಿಯೇ ಇತ್ತು. ಹೀಗಿರುವಾಗ ಅಪ್ಪಾಜಿ ಅಮ್ಮನ ನೆನಪು ಶಿವಣ್ಣನನ್ನು ಕಾಡದೆ ಇರುತ್ತದೆಯೇ. ಎಷ್ಟೇ ನೋವಿದ್ದರು, ಅಭಿಮಾನಿಗಳ ಮುಂದೆ ಅದನ್ನು ತೋರಿಸಿಕೊಳ್ಳಲು ಹೋಗಲ್ಲ. ಇದು ದೊಡ್ಮನೆಯ ದೊಡ್ಡತನ. ಅದಕ್ಕೆ ಅಭಿಮಾನಿಗಳು ಸಿಕ್ಕಾಗೆಲ್ಲಾ ಅವರ ಮುಖದ ಮೇಲೆ ನಗುವೊಂದು ಇರುತ್ತದೆ. ಮನಸ್ಸಿಗೆ ನೋವಾದರೂ, ದೇಹಕ್ಕೆ ಆಯಾಸವಾದರೂ ಯಾವುದು ಕಾಣುವುದಿಲ್ಲ. ಸಿನಿಮಾ, ಕುಟುಂಬ ಎಲ್ಲವನ್ನು ನೆನೆದಾಗ ಅಪ್ಪಾಜಿಯ ಆ ದಿನಗಳು, ಆ ಖುಷಿ ಎಲ್ಲವೂ ಕಣ್ಣ ಮುಂದೆ ಬಂದಿರಬೇಕು. ಹೀಗಾಗಿಯೇ ತಡೆಯಲಾಗದೆ ಅಳು ಬಂದಿದೆ. ಈ ಕ್ಷಣ ಎಲ್ಲರನ್ನು ಕಣ್ಣೀರಾಗಿಸಿದೆ.

ನಿನ್ನಂತ ಅಪ್ಪ ಇಲ್ಲ ಎಂದ ಶಿವಣ್ಣ
ಮೊದಲೇ ಹೇಳಿದ ಹಾಗೇ ಶಿವಣ್ಣನ ಸಿನಿ ಕೆರಿಯರ್ ವಿಚಾರದಲ್ಲಿ ಅಪ್ಪಾಜಿ ಅಮ್ಮನ ಕೊಡುಗೆ ಜಾಸ್ತಿ ಇದೆ. ಪಾರ್ವತಮ್ಮ ಅವರಿದ್ದಾಗ ಸಂಪೂರ್ಣವಾಗಿ ಅವರೇ ನೋಡಿಕೊಳ್ಳುತ್ತಿದ್ದರು. ಇನ್ನು ಅಪ್ಪಾಜಿ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸಿದ್ದಾರೆ. ಇಂದು ದೊಡ್ಮನೆ ಮಕ್ಕಳು ದೊಡ್ಮನೆಯವರಂತೆಯೇ ವಿನಯ, ವಿಧೇಯತೆಯಿಂದ ನಡೆದುಕೊಳ್ಳುತ್ತಾರೆ ಎಂದರೆ ಅದಕ್ಕೆ ಅಪ್ಪಾಜಿ ಹಾಕಿಕೊಟ್ಟ ದಾರಿಯೂ ಸಾಕ್ಷಿ. ವೇದಿಕೆ ಮೇಲೆ ಅಪ್ಪಾಜಿಯನ್ನು ನೆನೆದ ಶಿವಣ್ಣ ಅಪ್ಪಾಜಿಗಾಗಿ ನಿನ್ನಂತ ಅಪ್ಪ ಇಲ್ಲ ಎಂಬ ಹಾಡಿನ ಮೂಲಕ ಗೌರವ ಸಲ್ಲಿಸಿದ್ದಾರೆ.


Click it and Unblock the Notifications











