ಅಪ್ಪಟ ಗ್ರಾಮೀಣ ಪ್ರತಿಭೆ ಪ್ರಗತಿ ಬಡಿಗೇರ್: ಸಂಗೀತವೇ ಇವಳ ಉಸಿರು
ಪ್ರಗತಿ ಬಡಿಗೇರ್ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ. ತನ್ನ ಮುಗ್ಧತೆಯಿಂದಲೇ ಕರ್ನಾಟಕದ ಜನರ ಮನಸ್ಸನ್ನ ಗೆದ್ದಿದ್ದವರು. ಈಗ ಸರಿಗಮಪದ ವಿನ್ನರ್ ಆಗಿ ಎಲ್ಲರ ಸಂಭ್ರಮಕ್ಕೆ ಕಾರಣರಾಗಿದ್ದಾರೆ. ಪ್ರಗತಿ ನಡೆದು ಬಂದ ಹಾದಿಯೇ ಒಂದು ಚಂದದ ಯಶೋಗಾಥೆ. ತಂದೆಯೇ ಇವರಿಗೆ ಗುರು ತಂದೆಯಿಂದಲೇ ಸಂಗೀತ ಪಾಠವನ್ನು ಅಲ್ಪಸ್ವಲ್ಪ ತಿಳಿದುಕೊಂಡಿದ್ದರು.
ಮಕ್ಕಳ ಮೇಲೆ ಪ್ರಗತಿಯವರ ತಂದೆಗೆ ಎಲ್ಲಿಲ್ಲದ ಮಮಕಾರ. ನನ್ನ ಮಕ್ಕಳು ಏನಾದರೂ ಸಾಧನೆ ಮಾಡಬೇಕು ಎಂದು ಪಣ ತೊಟ್ಟು ನಿಂತಿದ್ದಾರೆ. ಮೂವರು ಹೆಣ್ಣು ಮಕ್ಕಳಿಗೂ ಸಹ ಸಂಗೀತವನ್ನೇ ಧಾರೆ ಎರೆಯುತ್ತಿದ್ದಾರೆ. ಹಾಡು ಕುಟುಂಬದ ಪ್ರತಿಭೆ ಪ್ರಗತಿಗೆ ವಿಜಯ ಮಾಲೆ ಬಿದ್ದಿದ್ದು ಎಲ್ಲರಿಗೂ ಸಹ ಖುಷಿ ತಂದಿದೆ.

ಇಂದು ನಾಗರಾಜ್ರವರ ಮಾರ್ಗದರ್ಶನದಲ್ಲಿ ಹಲವರು ಹಾಡುಗಳನ್ನ ಪ್ರಗತಿಯವರು ಹಾಡಿದ್ದರು. ಪ್ರಗತಿ ಅವನು ಆಡಿದ ಎಲ್ಲಾ ಹಾಡುಗಳು ಸಹ ಮೆಚ್ಚುಗೆ ಸಿಕ್ಕಿದೆ. ನೈಜ ಕಂಠದಲ್ಲಿ ನಗುವಿನ ಜೊತೆ ಜೊತೆಗೆ ಸಂಗೀತವನ್ನು ಉಣಪಡಿಸಿದ ದೇಸಿ ಪ್ರತಿಭೆಗೆ ಜನರು ಸಹ ತಮ್ಮ ಮೆಚ್ಚುಗೆಯನ್ನ ಸೂಚಿಸಿದ್ದಾರೆ.
ತಂದೆಯೇ ಮೊದಲ ಗುರು
ಪ್ರಗತಿ ಬಡಿಗೇರ್ ಅವರದ್ದು ಹಾಡುಗಾರರ ಕುಟುಂಬ. ಅವರ ತಂದೆ ಬಸವರಾಜ ಬಡಿಗೇರ್ ಸಹ ಹಾಡುಗಳನ್ನು ಹಾಡುತ್ತಾರೆ. ಅವರ ಮೂವರು ಹೆಣ್ಣು ಮಕ್ಕಳಿಗೂ ಸಹ ಸಂಗೀತವನ್ನೇ ಕಲಿಸುತ್ತಿದ್ದಾರೆ. ಈ ಮೂವರು ಹೆಣ್ಣು ಮಕ್ಕಳು ಜೀ ಕನ್ನಡ ನಡೆಸಿದ ಸರಿಗಮಪ ಕಾರ್ಯಕ್ರಮದ ಉದ್ದಕ್ಕೂ ಆಕರ್ಷಣೆಯ ಕೇಂದ್ರಬಿಂದು ಆಗಿದ್ದರು.

ಕನ್ನಡಿಗರ ಹೃದಯ ಗೆದ್ದ ಕುಟುಂಬ
ಪ್ರಗತಿ ಬಡಿಗೇರ್ ಕುಟುಂಬ ಎಂದರೆ ಎಲ್ಲರಿಗೂ ಸಹ ಎಲ್ಲಿಲ್ಲದ ಪ್ರೀತಿ. ಅವರ ಸರಳತೆ, ಸಹಜವಾದ ಮಾತು , ನಿಷ್ಕಲ್ಮಶ ಮನಸ್ಸು ಕರ್ನಾಟಕದ ಜನರ ಹೃದಯವನ್ನೇ ಗೆದ್ದಿದೆ. ಕೊಪ್ಪಳದಲ್ಲಿ ನಡೆದ ಫಿನಾಲೆಯಲ್ಲಿ ಪ್ರಗತಿ ಗೆಲುವು ಸಾಧಿಸಿದಾಗ ಇಡೀ ಕರ್ನಾಟಕ ಸಂಭ್ರಮವನ್ನು ಪಟ್ಟಿತ್ತು. ಯಾರಿಗೂ ಮೋಸವಾಗಲಿಲ್ಲ ಎಂದು ಹೆಮ್ಮೆಯನ್ನು ಜನರು ಸಂತಸಪಟ್ಟರು.
ಇಂದು ನಾಗರಾಜ್ ಮಾರ್ಗದರ್ಶನ
ಗಾಯಕಿ ಇಂದು ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಪ್ರಗತಿ ಬಡಿಗೇರ್ ತಮ್ಮ ಶ್ರಮ ಹಾಗೂ ಶ್ರದ್ಧೆಯನ್ನು ಹಾಕಿ ಗೆಲುವನ್ನ ಸಾಧಿಸಿದ್ದಾರೆ. ಪ್ರಾಮಾಣಿಕವಾಗಿ ಇಂದು ನಾಗರಾಜ್ ಅವರು ಹೇಳಿಕೊಟ್ಟ ಸಂಗೀತವನ್ನು ವೇದಿಕೆಯ ಮೇಲೆ ಎಲ್ಲರ ಮುಂದೆ ಉಣಪಡಿಸಿ ಮೆಚ್ಚುಗೆಯನ್ನ ಗಳಿಸಿದ್ದಾರೆ. ಪ್ರಗತಿಯ ಗೆಲುವು ಇಂದು ನಾಗರಾಜ್ ಅವರಿಗೆ ತುಂಬಾ ಖುಷಿಯನ್ನ ಕೊಟ್ಟಿದೆ.

ಕರುನಾಡಿಗೆ ಋಣಿ ಎಂದ ಬಸವರಾಜ್
ಪ್ರಗತಿಯ ತಂದೆ ತಮ್ಮ ಮಗಳು ಗೆಲುವನ್ನ ಸಾಧಿಸುವಾಗ ಕಣ್ಣಂಚಲ್ಲಿ ನೀರನ್ನು ತುಂಬಿಕೊಂಡು ಕರ್ನಾಟಕದ ಜನತೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ವೋಟ್ ಮಾಡುವ ಮೂಲಕ ನನ್ನ ಮಗಳನ್ನು ಬೆಂಬಲಿಸಿದ ಕರ್ನಾಟಕದ ಜನತೆಗೆ ನಾನು ಋಣಿಯಾಗಿ ಇರುತ್ತೇನೆ ಎಂಬ ಮಾತನ್ನು ಸಹ ಬಸವರಾಜ್ ಬಡಿಗೇರ್ ಆಡಿದ್ದಾರೆ.
ಪ್ರಗತಿ ಗೆದ್ದಿದ್ದಷ್ಟು ಗೊತ್ತಾ..!
ಪ್ರಗತಿ ಬಡಿಗೇರ್ ಸೀಸನ್-19ನ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಪ್ರಗತಿ ಅವರಿಗೆ 21 ಲಕ್ಷ ರೂಪಾಯಿ ಬೆಲೆ ಬಾಳುವ ಸೈಟ್ ಹಾಗೂ 4,00,000 ಹಣ ನೀಡಲಾಗಿದೆ. ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ರವರು ಗಾನಕೋಗಿಲೆ ಚಿತ್ರಾ ಅವರ ಕೈ ಜೊತೆಗೆ ಮೈಕ್ ಇರುವ ನೆನಪಿನ ಕಾಣಿಕೆಯನ್ನು ಪ್ರಗತಿ ಅವರಿಗೆ ನೀಡಿದ್ದಾರೆ.
ಎಲ್ಲರಿಗೂ ಧನ್ಯವಾದ ತಿಳಿಸಿದ ಪ್ರಗತಿ
ತನ್ನ ಗೆಲುವಿಗೆ ಕಾರಣರಾದ ಕರ್ನಾಟಕದ ಜನತೆಗೆ ಪ್ರಗತಿ ಧನ್ಯವಾದಗಳನ್ನು ಅರ್ಪಿಸಿದ್ದಾಳೆ. ನಾನು ಗೆಲುವು ಸಾಧಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲದಿಂದ ನಾನು ಈ ಸೀಸನ್ನಲ್ಲಿ ಗೆಲುವು ಸಾಧಿಸಿದ್ದೇನೆ ನನಗೆ ವೋಟ್ ಹಾಕಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾಳೆ. ಪ್ರಗತಿಗೆ ಮತ್ತಷ್ಟು ಅವಕಾಶಗಳು ಬರಲಿ ಎಂಬುದೇ ನಮ್ಮ ಹಾರೈಕೆ.


Click it and Unblock the Notifications











