Gandhada Gudi: ಜೀ ಕನ್ನಡದಲ್ಲಿ ಅಪ್ಪು ನೆನಪಲ್ಲಿ ಗಾನ ನಮನ, ಗಂಧದ ಗುಡಿ ಸಿನಿಮಾ ಪ್ರದರ್ಶನ
ದೊಡ್ಮನೆಯ ಕುಡಿ, ಅಭಿಮಾನಿಗಳ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಅಕ್ಟೋಬರ್ 29ಕ್ಕೆ ಎರಡು ವರ್ಷಗಳೇ ಕಳೆಯುತ್ತವೆ. ಯಾರು ಪುನೀತ್ ರಾಜಕುಮಾರ್ ಅವರನ್ನು ಮರೆತಿಲ್ಲ ದಿನಕ್ಕೊಂದು ಹೊಸ ಕಾರ್ಯಕ್ರಮ ಮಾಡುವ ಮೂಲಕ ಪುನೀತ್ ರಾಜಕುಮಾರ್ ಹೆಸರಲ್ಲಿ ಹಲವಾರು ರೀತಿಯ ಸಹಾಯಗಳನ್ನು ಮಾಡುತ್ತಾ ಬಂದಿದ್ದಾರೆ. ಅವರ ಅಭಿಮಾನಿಗಳು ಪುನೀತ್ ರಾಜಕುಮಾರ್ ಹೆಸರಿನಲ್ಲಿ ಅದೆಷ್ಟೋ ಅನಾಥಾಶ್ರಮಳಿಗಳಿಗೆ ಇಂದಿಗೂ ಸಹ ಹಣ ಹಾಗೂ ದಿನಸಿ ಸಂದಾಯ ಮಾಡುತ್ತಿದ್ದಾರೆ. ಯಾಕೆಂದರೆ ಪುನೀತ್ ರಾಜಕುಮಾರ್ ಇದ್ದಾಗಲೂ ಹಾಗೆ ಬದುಕಿದವರು ಹೋದಾಗಲೂ ಸಹ ಅಭಿಮಾನಿಗಳ ಪ್ರೀತಿಯನ್ನು ಪಡೆದವರು.
ಪುನೀತ್ ರಾಜಕುಮಾರ್ ಅವರು ಮೈಸೂರಿನಲ್ಲಿ ಹೆಣ್ಣು ಮಕ್ಕಳಿಗಾಗಿ ಒಂದು ಸಂಸ್ಥೆಯನ್ನೇ ಕಟ್ಟಿದವರು ಆದರೆ ಆ ವಿಷಯವನ್ನ ಯಾರ ಬಳಿಯೂ ಹೇಳಿರಲಿಲ್ಲ. ಅವರು ಮಡಿದ ಬಳಿಕವಷ್ಟೇ ಅವರು ಮಾಡಿರುವ ಅದೆಷ್ಟೋ ಕೆಲಸಗಳು ಹೊರಗೆ ಬಂದವು. ಆಗ ಅಭಿಮಾನಿಗಳು ಅವರನ್ನು ದೇವರಂತೆ ಮಾಡಿಬಿಟ್ಟರು. ಯಾವುದೇ ಜಾತ್ರೆ ಶುಭ ಸಮಾರಂಭಗಳಲ್ಲಿ ಪುನೀತ್ ರಾಜಕುಮಾರ್ ಅವರಿಗೆ ವಿಶಿಷ್ಟ ಸ್ಥಾನಮಾನ ದೊರೆಯಿತು. ಅದೇ ರೀತಿ ಎರಡು ವರ್ಷ ಕಳೆದರೂ ಸಹ ಅಭಿಮಾನಿಗಳು ಅಲ್ಲಲ್ಲಿ ಪುನೀತ್ ರವರ ಪ್ರತಿಮೆಗಳನ್ನು ಸ್ಥಾಪಿಸಿ ಪುನೀತ್ ರವರ ಹೆಸರು ಅಜರಾಮರರಾಗುವಂತೆ ಮಾಡುತ್ತಾ ಬಂದಿದ್ದಾರೆ.

ಈಗ ಜೀ ಕನ್ನಡ ಸರಿಗಮಪ ವೇದಿಕೆಯ ಮೇಲೆ ಪುನೀತ್ ರಾಜ್ಕುಮಾರ್ ರವರ ಸವಿ ನೆನಪಿಗಾಗಿ ಗಾನ ನಮನ ಕಾರ್ಯಕ್ರಮವನ್ನ ಏರ್ಪಡಿಸಿದೆ. ಶನಿವಾರ ಸಂಜೆ 7.30 ರಿಂದ ಈ ಗಾನ ನಮನ ಕಾರ್ಯಕ್ರಮ ಶುರುವಾಗಲಿದ್ದು ಇದಕ್ಕಾಗಿ ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳಲಾಗಿದೆ. ವಿಶೇಷವಾಗಿ ಅತಿಥಿಗಳನ್ನು ಕರೆಸಲಾಗಿದೆ. ಪುನೀತ್ ರಾಜ್ ಕುಮಾರ್ ಅಭಿನಯಿಸಿರುವ ಚಿತ್ರಗಳ ಹಾಡುಗಳನ್ನು ಹಾಡುವ ಮೂಲಕ ಅಪ್ಪು ಅಜರಾಮರ ಕಾರ್ಯಕ್ರಮ ನಡೆಸಲಾಗುತ್ತಿದೆ.
ಸರಿಗಮಪ ವೇದಿಕೆ ಮೇಲೆ ಗಾನ ನಮನ, ಅಪ್ಪು ನೆನೆದು ಭಾವುಕರಾದ ದೊಡ್ಮನೆ ಕುಟುಂಬ
ಜೀ ಕನ್ನಡ ಸರಿಗಮಪ ಸೀಸನ್-20ರಲ್ಲಿ ಅಭಿಮಾನಿಗಳ ಆರಾಧ್ಯದೈವ ಪುನೀತ್ ರಾಜ್ ಕುಮಾರ್ ಅವರ ಸ್ಮರಣೋತ್ಸವಕ್ಕೆ ಗಾನ ನಮನವನ್ನು ಸಲ್ಲಿಸಲಾಗಿದೆ. ಅಪ್ಪು ಅಭಿನಯ ಮಾಡಿರುವ ಚಿತ್ರಗಳ ಹಾಡುಗಳನ್ನು ಸರಿಗಮಪ ಸ್ಪರ್ಧಿಗಳು ಹಾಡುವ ಮೂಲಕ ಅಪ್ಪುಗೆ ಗಾನ ನಮನ ಸಲ್ಲಿಸಿದ್ದಾರೆ. ಸರಿಗಮಪ ವೇದಿಕೆಗೆ ಯೋಗರಾಜ್ ಭಟ್, ಮಹೇಶ್ ಬಾಬು, ಕೆ.ಕಲ್ಯಾಣ್,ಡಾ.ವಿ.ನಾಗೇಂದ್ರ ಪ್ರಸಾದ್ ಬಂದಿದ್ದು ಅಪ್ಪು ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು.
ಅಪ್ಪುವನ್ನು ನೆನೆದು ದೊಡ್ಮನೆಯ ಕುಟುಂಬದವರು ಭಾವುಕರಾಗಿದ್ದಾರೆ. ನಮ್ಮ ಕಣ್ಮುಂದೆ ಸಣ್ಣ ವಯಸ್ಸಿಗೆ ಅಪ್ಪು ನಮ್ಮನ್ನು ಬಿಟ್ಟು ಹೋಗಿದ್ದು ನೋವು ಕೊಟ್ಟಿದೆ ಎಂದು ಕಣ್ಣೀರು ಹಾಕುವ ಮೂಲಕ ಅಭಿಮಾನಿಗಳ ಕಣ್ಣಲ್ಲೂ ಸಹ ನೀರು ತರಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಒಂದಲ್ಲ ಒಂದು ಒಳ್ಳೆಯ ಕೆಲಸವನ್ನು ಮಾಡಿ ಅಪ್ಪು ಅವರನ್ನು ಅಜರಾಮರವನ್ನಾಗಿ ಮಾಡಿದ್ದಾರೆ. ಯಾವುದೇ ಹೋಟೆಲ್, ಸಣ್ಣ ಟೀ ಅಂಗಡಿಯಲ್ಲೂ ಸಹ ಅಪ್ಪು ಜೀವಂತವಾಗಿ ಇದ್ದಾರೆ.

ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂವಿ, ಭಾನುವಾರ ಗಂಧದ ಗುಡಿ ಸಿನಿಮಾ
ಜೀ ಕನ್ನಡ ವಾಹಿನಿಯಲ್ಲಿ ಭಾನುವಾರ ಸಂಜೆ 5 ಗಂಟೆಗೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂವಿ ಗಂಧದ ಗುಡಿ ಪ್ರಸಾರವನ್ನು ಕಾಣಲಿದೆ. ಪುನೀತ್ ರಾಜ್ಕುಮಾರ್ ಅವರ ಸವಿ ನೆನಪಿಗಾಗಿ ಅವರ ಕೊನೆಯ ಚಿತ್ರವನ್ನು ಪ್ರಸಾರ ಮಾಡಲಾಗುತ್ತಿದೆ. ಅಭಿಮಾನಿಗಳಿಗೆ ಜೀ ಕನ್ನಡ ಈ ಮೂವಿಯನ್ನು ಪ್ರಸಾರ ಮಾಡುವ ಮೂಲಕ ಅಪ್ಪು ಅಜರಾಮರ ಎಂದು ಸಾರಿ ಹೇಳುವ ಕೆಲಸ ಮಾಡುತ್ತಿದೆ.
ಅಚ್ಚರಿ, ನಿಗೂಢಗಳನ್ನು ಹೊಂದಿರುವ ಅರಣ್ಯದ ಮಡಿಲಲ್ಲಿ ಪುನೀತ್ ರಾಜ್ ಕುಮಾರ್ ಅವರ ಜರ್ನಿಯನ್ನು ಅಭಿಮಾನಿಗಳು ಗಂಧದ ಗುಡಿ ಸಿನಿಮಾ ಮೂಲಕ ಕಣ್ತುಂಬಿಕೊಳ್ಳಬಹುದು. ಈ ಚಿತ್ರದಲ್ಲಿ ಪ್ರಾಣಿಗಳ ಚಲನವಲನ, ಪ್ರಕೃತಿಯ ಸೊಬಗು ಎಲ್ಲವನ್ನೂ ಸಹ ಬಹಳ ಸೊಗಸಾಗಿ ತೋರಿಸಲಾಗಿದೆ. ಈ ಮೂಲಕ ಜೀ ಕನ್ನಡದಲ್ಲಿ ಅಪ್ಪುವಿಗೆ ಗೀತ ನಮನ ಹಾಗೂ ಗಂಧದ ಗುಡಿ ಚಿತ್ರ ಪ್ರದರ್ಶನ ಮಾಡಿ ಅಪ್ಪು ಅಜರಾಮರ ಎಂದು ಸಾರಿ ಸಾರಿ ಹೇಳುತ್ತಿದೆ.


Click it and Unblock the Notifications











