ಹಿಟ್ಲರ್ ಕಲ್ಯಾಣ: ಅಪ್ಪು ಗುಣಗಾನ ಮಾಡಿದ ಲೀಲಾ.. 'ಹಿಟ್ಲರ್ ಕಲ್ಯಾಣ'ದಲ್ಲಿ ಕೆಜಿಎಫ್2 ಹವಾ..!
'ಹಿಟ್ಲರ್ ಕಲ್ಯಾಣ' ಧಾರಾವಾಹಿ ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆಯುತ್ತಿದೆ. ಅತ್ತೆ ಸೊಸೆಯಂದಿರ ನಡುವಿನ ಒಳ ಯುದ್ಧ ಮುಗಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಅಧಿಕಾರದ ದಾಹ, ಇಷ್ಟವಿಲ್ಲದ ವ್ಯಕ್ತಿ ಎಂಬ ಕಾರಣಕ್ಕೆ ಅತ್ತೆಯಾದವರಿಗೆ ಸೊಸೆಯಂದಿರು ಕಾಟ ಕೊಡುತ್ತಲೆ ಇದ್ದಾರೆ. ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಆದರೆ ಮುಗ್ಧತೆ, ಒಳ್ಳೆತನವೇ ಯಾವಾಗಲೂ ಗೆಲ್ಲುವುದು ಎಂಬುದು ಎಡವಟ್ಟು ಲೀಲಾಯಿಂದಾಗಿ ಪ್ರೂವ್ ಆಗ್ತಾನೆ ಇದೆ.
ಅಧಿಕಾರದ ದಾಹ ದೊಡ್ಡ ಸೊಸೆ ದುರ್ಗಾಳನ್ನು ಯಾವ ಹಂತಕ್ಕಾದರೂ ತೆಗೆದುಕೊಂಡು ಹೋಗುತ್ತೆ ಎಂದು ಗೊತ್ತಾದ ಬಳಿಕ, ಲೀಲಾಳೆ ಅಧಿಕಾರವನ್ನು ವಾಪಾಸ್ ಕೊಡುವುದಕ್ಕೂ ಟ್ರೈ ಮಾಡಿದ್ದಾಳೆ. ಆದರೆ ದುರ್ಗಾ ಆ ಸಮಯದಲ್ಲೂ ಯುದ್ಧವನ್ನೇ ಬಯಸಿದ್ದಾಳೆ. ಹಾಗೋ ಹೀಗೋ ಕಿತಾಪತಿ ಮಾಡಿ, ಕೆಟ್ಟದ್ದನ್ನೇ ಮಾಡಿ ಅಧಿಕಾರವನ್ನು ಹಿಡಿದುಕೊಂಡಳು.
ಅಪ್ಪು ಗುಣಗಾನ ಮಾಡಿದ ಎಡವಟ್ಟು ಲೀಲಾ
ಏಜೆ ಹೆಂಡತಿಯೆಂದರೆ ಏನೆಲ್ಲಾ ಗತ್ತು, ಗಾಂಭೀರ್ಯತೆ ಇರಬೇಕಾಗುತ್ತದೆ. ಎಲ್ಲಾ ಅಧಿಕಾರವನ್ನೂ ತೆಗೆದುಕೊಂಡು, ಸೊಸೆಯಂದಿರನ್ನು ತನ್ನ ಬೆರಳ ತುದಿಯಲ್ಲಿ ಆಡಿಸುವ ಅತ್ತೆಯಂತಿರಬೇಕು ಲೀಲಾ ಎಂಬುದನ್ನು ಅಮ್ಮ ಬಯಸುತ್ತಾಳೆ. ಅದನ್ನೇ ನಿರೀಕ್ಷೆ ಕೂಡ ಮಾಡಿದ್ದಳು. ಆದರೆ ಮನೆಗೆ ಬಂದಾಗ ಲೀಲಾ ಆ ರೀತಿ ಇರಲಿಲ್ಲ. ಮಾಮೂಲಿನಂತೆ ಇದ್ದಿದ್ದನ್ನು ಕಂಡು ಕೆಂಡಾಮಂಡಲಳಾದ ಲೀಲಾ ಅಮ್ಮ, ಆಚೆ ಕರೆದುಕೊಂಡು ಹೋಗಿ ಬುದ್ಧಿ ಹೇಳಿದಳು. ಆದರೆ ಲೀಲಾ ಆಗ ಕೊಟ್ಟ ಉದಾಹರಣೆಯೆ ಡಾ.ಪುನೀತ್ ರಾಜ್ಕುಮಾರ್ ಅವರ ಬಗ್ಗೆ.
ʻಇವತ್ತು ನಮ್ಮ ದೇಶದಲ್ಲಿ ಎಷ್ಟೋ ಒಳ್ಳೆ ನಟರಿದ್ದಾರೆ. ಆದರೆ ಡಾ.ಪುನೀತ್ ರಾಜ್ಕುಮಾರ್ ಅವರ ಹೆಸರು ಮಾತ್ರ ಚರಿತ್ರೆಯಲ್ಲಿರುವುದಕ್ಕೆ ಕಾರಣ ಏನು ಹೇಳು..? ಅವರ ಒಳ್ಳೆತನ, ಅವರ ಮಾನವೀಯತೆ, ಅವರ ದಾನ, ಅವರ ಧರ್ಮ. ಅವರು ಹುಟ್ಟುತ್ತಲೇ ಚಿನ್ನದ ಸ್ಪೂನ್ ಹಿಡಿದುಕೊಂಡು ಹುಟ್ಟಿರುವವರು. ಆದರೆ ಅವರು ಯಾವತ್ತು ಚಿನ್ನದ ಕಿರೀಟ ಹಾಕೊಂಡು ಮೆರೆಲಿಲ್ಲ. ಅವರೇ ಸ್ವತಃ ಚಿನ್ನ ಆದ್ರೂ ಅಂತ ಲೀಲಾ ತನ್ನ ಗಂಡನ ವಿಚಾರ ಹೇಳುವಾಗ ಹೇಳಿದ್ದಾರೆʼ ಅಪ್ಪು ಗುಣಗಾನ ಮಾಡಿದ್ದಾರೆ.
ರಾಕಿ ಭಾಯ್ನಂತೆ ಕಳ್ಳನ ಹಿಡಿಯಲು ಹೊರಟ ಲೀಲಾ
ಲೀಲಾಳನ್ನು ಹೇಗಾದರೂ ಮಾಡಿ ಮನೆ ಬಿಟ್ಟು ಓಡಿಸಬೇಕು ಎಂಬ ಆಲೋಚನೆ ಮೂವರು ಸೊಸೆಯಂದಿರಿಗೆ ಇದ್ದೆ ಇದೆ. ಅದಕ್ಕಾಗಿಯೇ ಲೀಲಾ ಮೇಲೆ ಏನಾದರೊಂದು ಆಪಾದನೆ ಬರುವಂತೆ ಮಾಡುತ್ತಲೆ ಇರುತ್ತಾರೆ. ಇದೀಗ ಮನೆಯಲ್ಲಿ ಚಿನ್ನದ ಒಡವೆಗಳನ್ನೇ ಕಳ್ಳತನ ಮಾಡಿಸಿದ್ದಾರೆ. ಈ ಒಡವೆಗಳನ್ನು ಲೀಲಾನೇ ಯಾರಿಗೋ ಕೊಟ್ಟಿದ್ದಾಳೆ ಎಂಬ ಆಪಾದನೆ ಬರುವಂತೆ ಮಾಡಿದ್ದಾರೆ. ಆದರೆ ತಪ್ಪೇ ಮಾಡದ ಲೀಲಾ ತಪ್ಪನ್ನು ಒಪ್ಪಿಕೊಳ್ಳುವ ಸ್ವಭಾವದವಳಲ್ಲ. ಇದಕ್ಕಾಗಿಯೇ ಸತ್ಯವನ್ನು ಹೊರಗೆ ತರಿಸುವ ಚಾಲೆಂಜ್ ಹಾಕಿದ್ದಾಳೆ. ಇದಕ್ಕೆ ವಿಶ್ವರೂಪನ ಸಹಾಯ ಪಡೆದಿದ್ದಾಳೆ. ಈ ನಡುವೆ ವಿಶ್ವರೂಪ ಹಾಗೂ ಲೀಲಾ ಕಳ್ಳನನ್ನು ಹಿಡಿಯುವುದಕ್ಕೆ ಫ್ಲ್ಯಾನ್ ಹಾಕುತ್ತಿರುತ್ತಾರೆ. ಆಗಲೇ 'ಕೆಜಿಎಫ್2' ಸಿನಿಮಾ ನೆನಪಾಗುವುದು. ಸಿನಿಮಾದ ಕಡೆಯಲ್ಲಿ ರಾಕಿ ಭಾಯ್ ಹೋಗುತ್ತಾರಲ್ಲ ಆ ರೀತಿ ಹೋಗಿ ಕಳ್ಳನನ್ನು ಹಿಡಿಯಲು ಸ್ಕೆಚ್ ಹಾಕಿದ್ದಾರೆ. ಆದರೆ ಅದು ಸಾಧ್ಯವಾಗದೆ ಇದ್ದಾಗ ರಾಕಿ ಭಾಯ್ ರೀತಿ ಒಬ್ಬಂಟಿಯಾಗಿ ಹೋಗಿ ಹೋರಾಡು ಅಂತ, ಫುಲ್ 'ಕೆಜಿಎಫ್' ಸಿನಿಮಾ ರೇಂಜಿಗೆ ಬಿಲ್ಡ್ ಅಪ್ ಕೊಟ್ಟಿದ್ದಾರೆ.

ಹಿಡಿದ ಕೆಲಸ ಮಾಡದೆ ಬಿಡಲಿಲ್ಲ ಲೀಲಾ
ಲೀಲಾ ಬಡತನದಿಂದಲೇ ಬಂದರು, ಶ್ರೀಮಂತಿಕೆಯನ್ನು ನೋಡದೆ ಇದ್ದರೂ ಅದಕ್ಕೆ ಆಸೆ ಪಟ್ಟವಳಲ್ಲ. ಎಜೆ ಹೆಂಡತಿಯಾದರೂ ಕೂಡ ಅಲ್ಲಿಂದ ಹಣ ತೆಗೆದುಕೊಳ್ಳುವುದಾಗಲಿ, ಹಣ ದುರುಪಯೋಗ ಪಡಿಸಿಕೊಳ್ಳುವುದಾಗಲಿ ಮಾಡಲಿಲ್ಲ. ಅದಕ್ಕೆ ಉದಾಹರಣೆಯೆಂದರೆ ಅಂತರಾಳ ಫೋಟೊ ತೆಗೆದುಕೊಂಡು ಬರುವಾಗಲೂ ಅವಳ ಬಳಿ ಹಣವಿರಲಿಲ್ಲ. ಅದಕ್ಕೆ ಅಂತ ತನ್ನ ತಾಳಿಯನ್ನೇ ಅಡವಿಟ್ಟು ಬಂದವಳು. ಆದರೆ ಲೀಲಾ ಮೇಲೆ ಕಳ್ಳತನದ ಆರೋಪ ಬಂದರೆ ಸುಮ್ಮನೆ ಬಿಡುತ್ತಾಳಾ? ಅದಕ್ಕೆ ಸಾಕ್ಷಿ ಹುಡುಕಿಯೇ ಹುಡುಕುತ್ತೀನಿ ಎಂದು ಹೊರಟವಳು, ಕಡೆಗೂ ಕಳ್ಳನನ್ನು ಹಿಡಿದು ತಂದಿದ್ದಾಳೆ.

ಎಜೆ ಮುಂದೆ ಸಿಕ್ಕಿಬಿದ್ದ ದುರ್ಗಾ.. ಮುಂದೇನು?
ಲೀಲಾಳನ್ನು ಸಿಕ್ಕಿ ಹಾಕಿಸಬೇಕು, ಎಜೆ ಆಕೆಯನ್ನು ಯಾವಾಗಲೂ ದಂಡಿಸುತ್ತಿರಬೇಕು ಎಂಬುದೇ ಸೊಸೆಯಂದಿರ ಆಸೆ. ಅದಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ. ಈಗ ಆಗಿರುವುದು ಅದೇ. ಮನೆಯ ಒಡವೆಯನ್ನು ಫ್ಲ್ಯಾನ್ ಮಾಡಿ ಕಳ್ಳ ದೋಚಿಕೊಂಡು ಹೋಗುವಂತೆ ಮಾಡಿದ್ದಾರೆ. ಆದರೆ ಲೀಲಾ ಎಲ್ಲವನ್ನೂ ನೋಡಿ, ಕಳ್ಳನಿಗೆ ಹೆದರಿಸಿ, ಬೆದರಿಸಿ ಮನೆಗೆ ಕರೆತಂದಿದ್ದಾಳೆ. ಕಳ್ಳ ಕೂಡ ಎಲ್ಲವನ್ನೂ ದುರ್ಗಾ ಮೇಲೆಯೇ ಹಾಕಿದ್ದಾನೆ. ಈಗ ಎಜೆ ಮುಂದೆ ತಲೆ ಎತ್ತಲಾಗದೆ ದುರ್ಗಾ ಕ್ಷಮಿಸಿ ಎಂದು ನಿಂತಿದ್ದಾಳೆ. ತುಂಬಾ ನಂಬಿದ್ದ ಸೊಸೆ ಈ ರೀತಿ ಕೆಲಸ ಮಾಡಿರುವುದನ್ನು ಏಜೆ ಹೇಗೆ ಸ್ವೀಕರಿಸುತ್ತಾನೆ ಎಂಬುದೇ ಪ್ರೇಕ್ಷಕರ ಪ್ರಶ್ನೆಯಾಗಿದೆ.


Click it and Unblock the Notifications











