Lakshminivasa: ಭಾವನಾಗೆ ಸಮಾಧಾನ ಮಾಡಿದ ಫ್ಯಾನ್ಸ್, ಗುರುಗಳಿಗೆ ಧೈರ್ಯ ಹೇಳಿದ್ದೇಕೆ..?
ಸಿದ್ದೇಗೌಡ್ರಿಗೆ ಭಾವನಾಳನ್ನು ಕಳೆದುಕೊಳ್ಳುವುದು ಇಷ್ಟವಿರಲಿಲ್ಲ. ಹಾಗೇ ಪ್ರೀತಿ ಹೇಳಿಕೊಳ್ಳುವ ಧೈರ್ಯವೂ ಇರಲಿಲ್ಲ. ಎಂಗೇಜ್ಮೆಂಟ್ ಬೇರೆ ಆಗಿ ಹೋಗಿದೆ. ಹೀಗೆ ಇದ್ದರೆ ಪೂರ್ವಿ ಜೊತೆಗೇನೆ ಮದುವೆ ನಡೆದು ಹೋಗುತ್ತೆ ಅಂತ ಹೆದರಿದ ಗೌಡ್ರು, ದೇವರ ಮೇಲಿದ್ದ ತಾಳಿ ತೆಗೆದು ಕಟ್ಟಿಯೇ ಬಿಟ್ಟರು. ಬೆಳಗ್ಗೆದ್ದು ಕುತ್ತಿಗೆ ನೋಡಿಕೊಂಡಾಗಲೇ ತಿಳಿದಿದ್ದು ತನಗೆ ಮದುವೆಯಾಗಿರುವುದು.
ಭಾವನಾ ತುಂಬಾ ಮುಗ್ಧ ಹುಡುಗಿ. ಸರಳ ಸ್ವಭಾವದ ಹುಡುಗಿ. ಹೆಚ್ಚು ಮಾತನಾಡುವುದಿಲ್ಲ. ಇತ್ತಿಚೆಗೆ ಖುಷಿ ಬಂದ ಮೇಲೆ ಕೊಂಚ ಖುಷಿಯಾಗಿದ್ದಳು. ಮದುವೆಯೂ ಬೇಡ, ಸಂಸಾರವೂ ಬೇಡ. ಖುಷಿ ಒಬ್ಬಳು ಸಾಕು ನನ್ನ ಲೈಫಿಗೆ ಅಂತ ಇರುವವಳು. ಆದರೆ ಗೌಡ್ರು ಗೊತ್ತಿಲ್ಲದೆ ತಾಳಿ ಕಟ್ಟಿದ ಮೇಲೆ ಮುಖದಲ್ಲಿ ನಗು ಇಲ್ಲ, ಮನಸ್ಸಲ್ಲಿ ಸಂತಸವಿಲ್ಲ, ಸದಾ ಯೋಚನೆಯಲ್ಲಿಯೇ ಮುಳುಗಿ ಹೋಗಿದ್ದಾಳೆ. ಈಗ ಗುರುಗಳಿಂದ ಮನೆಯವರಿಗೆ ಸತ್ಯ ತಿಳಿಯುವಂತಾಗಿದೆ.

ಮದುವೆಯಾಗಿದೆ ಎಂದ ಗುರುಗಳು
ಲಕ್ಷ್ಮೀ- ಶ್ರೀನಿವಾಸನ ಮನೆಗೆ ಗುರುಗಳು ಬಂದಿದ್ದಾರೆ. ಕಾಲಜ್ಞಾನಿಯಾಗಿರುವ ಗುರುಗಳು ಅವರ ಮುಖ ನೋಡಿದರೆ ಸಾಕು ಇದ್ದಿದ್ದು ಇದ್ದ ಹಾಗೇ ಹೇಳುತ್ತಾರೆ. ಲಕ್ಷ್ಮೀ ಹಾಗೂ ಶ್ರೀನಿವಾಸ ಗುರುಗಳ ಮುಂದೆ ಕೂತಿದ್ದರು. ಅವರಿಗೆ ಉಳಿದಿರುವುದು ಭಾವನಾ ಮದುವೆಯಾಗಿಬಿಟ್ಟರೆ ಸಾಕು ಎಂಬ ಆತಂಕ. ಗುರುಗಳು ಆ ಆತಂಕವನ್ನು ದೂರ ಮಾಡಿದರು. ಈಗಾಗಲೇ ಭಾವನಾಗೂ ಮದುವೆಯಾಗಿದೆ ಎಂದೇ ಹೇಳಿದರು. ಆದರೆ ಇದು ದಂಪತಿಗೆ ಅರ್ಥವಾಗಿಲ್ಲ.
ತಾಳಿ ಕಳ್ಳತನದ ವಿಚಾರ ಬಹಿರಂಗ
ಅತ್ತ ಜಾತ್ರೆ ಮುಗಿದ ಮೇಲೆ ಊರಿನ ಮುಖಂಡರೆಲ್ಲಾ ಜವರೇಗೌಡನ ಮನೆಗೆ ಬಂದಿದ್ದಾರೆ. ಇದನ್ನು ಕಂಡು ಜವರೇಗೌಡರಿಗೂ ಆಶ್ಚರ್ಯವಾಗಿದೆ. ಬಳಿಕ ತಾಯಿ ಮೇಲಿನ ತಾಳಿ ಕಾಣೆಯಾಗಿದೆ ಎಂಬ ಸತ್ಯವನ್ನು ಹೇಳಿದ್ದಾರೆ. ಕದ್ದಿದ್ದ ಸಿದ್ದೇಗೌಡರ ಮುಂದೆಯೇ ಈ ವಿಚಾರ ತಿಳಿಸಿದ್ದಾರೆ. ಸಿಸಿಟಿವಿ ಫುಟೇಜ್ ಎಲ್ಲವನ್ನು ತರಿಸಿಯೂ ನೋಡಿದ್ದಾರೆ. ಆದರೆ ದೇವರ ಆಶೀರ್ವಾದವೆಂಬಂತೆ ಸಿದ್ದೇಗೌಡ್ರು ಬಚಾವ್ ಆಗಿದ್ದಾರೆ.

ಜಾಹ್ನವಿ ಬಂಧಿಸಿರುವ ಬಗ್ಗೆ ಭವಿಷ್ಯ
ಲಕ್ಷ್ಮೀ-ಶ್ರೀನಿವಾಸ್ ಆದ ಮೇಲೆ ಜಯಂತ್-ಜಾಹ್ನವಿಯನ್ನು ಗುರುಗಳ ಮುಂದೆ ಕೂರಿಸಿದರು. ಜಯಂತ್ ಮುಖ ನೋಡಿದ ಕೂಡಲೇ ಗುರುಗಳು ಭವಿಷ್ಯ ಹೇಳಲು ಶುರು ಮಾಡಿದರು. ಭವಿಷ್ಯ ಎನ್ನುವುದಕ್ಕಿಂತ ಜಯಂತ್ ನಡವಳಿಕೆಯ ಬಗ್ಗೆ ಹೇಳಿದರು. ಪ್ರೀತಿ ಪ್ರೀತಿ ಪ್ರೀತಿ ಹೆಚ್ಚಾದರೆ ಒಂದಲ್ಲ ಒಂದು ಸಲ ವಿಷವಾಗುತ್ತದೆ. ಹಾರಾಡುವ ಹಕ್ಕಿಯನ್ನು ಪಂಜರದಲ್ಲಿ ಕೂಡಿ ಹಾಕಿದರೆ ಮುಂದೆ ಕಷ್ಟ ಅನುಭವಿಸಬೇಕಾಗುತ್ತದೆ ಎಂದಿದ್ದಾರೆ. ಇದು ಅಜ್ಜಿಗೆ ಬೇಗ ಅರ್ಥವಾಗಿದೆ. ಯಾಕಂದ್ರೆ ಅದಾಗಲೇ ಜಯಂತ್ ನಾಟಕವನ್ನು ಅಜ್ಜಿ ನೋಡಿದ್ದಾರೆ.
ಭಾವನಾಗೆ ಧೈರ್ಯ ತುಂಬಿದ ಫ್ಯಾನ್ಸ್
ಸಿದ್ದೇಗೌಡ್ರು ಹಾಗೂ ಭಾವನಾ ಜೋಡಿ ಸಾಕಷ್ಟು ಜನರಿಗೆ ಇಷ್ಟ. ಅವರಿಬ್ಬರು ಮದುವೆಯಾಗಲಿ ಎಂದೇ ಬಯಸುತ್ತಿದ್ದರು. ದೇವರ ಜಾತ್ರೆಯಲ್ಲಿ ಅದು ನೆರವೇರಿದೆ. ಆದರೆ ತಾಳಿ ಕುತ್ತಿಗೆಗೆ ಬಿದ್ದ ಮೇಲೆ ಭಾವನಾ ಕಣ್ಣೀರನ್ನು ನೋಡುವುದಕ್ಕೆ ಆಗುತ್ತಿಲ್ಲ. ಭಾವನಾ ಹಾಗೂ ಸಿದ್ದೇಗೌಡರ ಅಭಿಮಾನಿಗಳಿಗೂ ಇದು ನೋವು ತರಿಸುತ್ತಿದೆ. ಹೀಗಾಗಿ ಕಮೆಂಟ್ಸ್ ಮೂಲಕ ಭಾವನಾಗೆ ಸಮಾಧಾನ ಮಾಡುತ್ತಿದ್ದಾರೆ. ಜೊತೆಗೆ ಜಯಂತ್ನ ಭವಿಷ್ಯ, ನಡವಳಿಕೆಯನ್ನು ಇದ್ದ ಹಾಗೇ ಹೇಳಿದ ಗುರುಗಳ ವಿಚಾರಕ್ಕೆ ಆತಂಕಗೊಂಡಿದ್ದಾರೆ. ಗುರುಗಳೇ ನೀವಿನ್ನೂ ಹುಷಾರಾಗಿರಿ. ಜಯಂತ್ ಒಬ್ಬ ಸೈಕೋ ಎಂದೇ ಎಚ್ಚರಿಕೆಯ ಮಾತನ್ನು ಹೇಳುತ್ತಿದ್ದಾರೆ.


Click it and Unblock the Notifications











