ಡಿಸೆಂಬರ್ 3 ರಿಂದ ಶ್ರೀಮಂತ ಮನೆಗೆ ಬರ್ತಿದ್ದಾಳೆ 'ಪಾರು'
ಸದಾ ನವನವೀನ ಕಾರ್ಯಕ್ರಮಗಳನ್ನು ರೂಪಿಸುತ್ತಾ ಕನ್ನಡಿಗರ ಮನೆ ಮಾತಾಗಿರುವ ಜೀ ಕನ್ನಡ ವಾಹಿನಿ ಈಗ ಮತ್ತೊಂದು ಹೊಸ ಧಾರಾವಾಹಿಯನ್ನ ಹೊತ್ತು ತರುತ್ತಿದೆ. ಕಿರುತೆರೆಯ ಸಾಂಪ್ರದಾಯಿಕ ಚೌಕಟ್ಟನ್ನೂ ಮೀರಿ, ಸತತವಾಗಿ ವೀಕ್ಷಕರ ಮುಂದೆ ಹೊಸ ಅಲೆಯ ಕಥೆಗಳನ್ನು ಕಟ್ಟಿಕೊಟ್ಟು ಮನರಂಜಿಸಿ ಯಶಸ್ವಿಯಾಗಿದೆ.
ಜೋಡಿಹಕ್ಕಿ, ಸುಬ್ಬಲಕ್ಷ್ಮಿ ಸಂಸಾರ, ಕಮಲಿ, ಯಾರೆ ನೀ ಮೋಹಿನಿ, ಶ್ರೀವಿಷ್ಣು ದಶಾವತಾರ, ಮಹಾದೇವಿ, ನಾಗಿಣಿ, ಬ್ರಹ್ಮಗಂಟುವಿನಂಥ ವಿಭಿನ್ನ ಧಾರಾವಾಹಿಗಳನ್ನು ವೀಕ್ಷಕರ ಮುಂದಿಟ್ಟು ಮನರಂಜಿಸಿದೆ. ಡ್ರಾಮಾ ಜ್ಯೂನಿಯರ್ಸ್.. ಸರಿಗಮಪ.. ಕಾಮಿಡಿ ಕಿಲಾಡಿಗಳಂಥ ರಿಯಾಲಿಟಿ ಶೋಗಳನ್ನು ನಿರ್ಮಿಸಿ ಕನ್ನಡಿಗರ ಮನಗೆದ್ದಿದೆ.
ಪುಟ್ಟ ಹೆಜ್ಜೆಯನ್ನಿಡುತ್ತಲೇ, ಶ್ರಮಕ್ಕೆ ಫಲವಾಗಿ ತನ್ನ ವೀಕ್ಷಕರ ಸಂಖ್ಯೆಯನ್ನು ದ್ವಿಗುಣಗೊಳಿಸಿಕೊಂಡಿರುವ ಜೀ ಕನ್ನಡ ವಾಹಿನಿಗೆ ಮತ್ತೊಂದು ಕಳಶವಿಟ್ಟಂತೆ ಈಗ 'ಪಾರು' ಧಾರಾವಾಹಿ ವೀಕ್ಷಕರನ್ನು ಮನರಂಜಿಸಲು ಸಜ್ಜಾಗಿ ಬರುತ್ತಿದೆ.

ಪಾರು ಕಥೆ ಏನು.?
ಶಿಸ್ತಿನ ಸಿಂಹಿಣಿ ಅರಸನಕೋಟೆ ಅಖಿಲಾಂಡೇಶ್ವರಿ ತನ್ನ ಸಿರಿತನದ ಅರಮನೆಯಲ್ಲಿ ಬದುಕಿ ಬಾಳುತ್ತಿರುವಾಕೆ. ಇಲ್ಲಿ ಅಖಿಲಾಂಡೇಶ್ವರಿಯ ಮಾತೇ ಶಾಸನ. ತಾತ ಮುತ್ತಾತನ ಕಾಲದಿಂದಲೂ ಶ್ರೀಮಂತಿಕೆ ಅವಳ ಉಸಿರು. ಅಖಿಲಾಂಡೇಶ್ವರಿಯ ಹಿರಿಮಗ ಬ್ಯುಸಿನೆಸ್ ಐಕಾನ್. ಅಖಿಲಾಂಡೇಶ್ವರಿಯ ಆಸ್ತಿಯನ್ನ ವಿಸ್ತರಿಸಿ ಆದಿತ್ಯ ಗ್ರೂಪ್ ಆಪ್ ಕಂಪೆನಿಯ ಒಡೆಯನಾದಂಥವನು.
ಕಥಾನಾಯಕಿ ಪಾರು ಹಳ್ಳಿಯಲ್ಲೇ ಹುಟ್ಟಿ ಯಾವುದೇ ಕಟ್ಟಪ್ಪಣೆಗಳಿಲ್ಲದೇ ಬೆಳೆದಾಕೆ. ಈಗ ಶಿಸ್ತಿಗೆ, ಸಿರಿತನಕ್ಕೆ ಹೆಸರಾದ ಅಖಿಲಾಂಡೇಶ್ವರಿ ಕೋಟೆಯೊಳಗೆ ವಾಸಿಸೋಕೆ ಬರುತ್ತಿದ್ದಾಳೆ. ಬಡತನವೋ, ಸಿರಿತನವೋ, ಇರುವುದರಲ್ಲೇ ಬದುಕನ್ನ ಪ್ರೀತಿಸಬೇಕು ಎನ್ನುವವಳು ಪಾರು. ತನ್ನದೇ ಆದ ಕಟ್ಟಪ್ಪಣೆಯೊಳಗೆ ಬದುಕನ್ನ ಹೀಗೇ ಬದುಕಬೇಕು ಎನ್ನುವ ಅರಮನೆಯ ರಾಣಿ ಅಖಿಲಾಂಡೇಶ್ವರಿ. ಈ ಇಬ್ಬರ ನಡುವೆ ನಡೆವ ಕಥೆಯೇ ಪಾರು ಧಾರಾವಾಹಿಯ ಜೀವಾಳ.
ಅಖಿಲಾಂಡೇಶ್ವರಿ ಪಾತ್ರ ಧಾರಾವಾಹಿಯ ಕೇಂದ್ರಬಿಂದು. ಆ ವಿಭಿನ್ನ ಪಾತ್ರವನ್ನು ಬಹು ಭಾಷಾತಾರೆ ವಿನಯಾ ಪ್ರಸಾದ್ ನಿರ್ವಹಿಸುತ್ತಿದ್ದು, ಅವರನ್ನು ಹೊಸ ಪಾತ್ರದಲ್ಲಿ ವೀಕ್ಷಿಸಲು ಕನ್ನಡಿಗರು ಕಾದು ಕುಳಿತಿದ್ದಾರೆ. ವಿನಯಾ ಪ್ರಸಾದ್ ರೊಟ್ಟಿಗೆ ದೊಡ್ಡ ತಾರಾಗಣವೇ ಪಾರು ಧಾರಾವಾಹಿಯಲ್ಲಿದೆ. ಅಖಿಲಾಂಡೇಶ್ವರಿಯ ಸಿರಿತನದ ಅರಮನೆಯನ್ನ ವೀಕ್ಷಕರಿಗೆ ಕಟ್ಟಿಕೊಡುವುದು ಅಷ್ಟು ಸುಲಭವಲ್ಲ. ಆದರೆ ಪ್ರತಿಯೊಂದು ಫ್ರೇಮನ್ನು ವಿಜೃಂಬಣೆಯಿಂದ ಕಟ್ಟಿಕೊಟ್ಟು ವೀಕ್ಷಕರ ಧಾರಾವಾಹಿಯ ವೀಕ್ಷಣೆಗೆ ಹೊಸ ಲೇಪನವನ್ನು ಒದಗಿಸುತ್ತಿದೆ ಜೀ ಕನ್ನಡ ವಾಹಿನಿ.
ಈಗಾಗಲೇ ಕಿರುತೆರೆಯಲ್ಲಿ ಪಾರು ಧಾರಾವಾಹಿಯ ಶೀರ್ಷಿಕೆ ಗೀತೆ, ಪ್ರೋಮೋಗಳು.. ಸಂಚಲನ ಮೂಡಿಸಿದ್ದು, ವೀಕ್ಷಕರು ಪಾರು ಧಾರಾವಾಹಿಗಾಗಿ ಕಾತುರದಿಂದ ಕಾಯುವಂತೆ ಮಾಡಿವೆ. ಪಾರು ಧಾರಾವಾಹಿ ತಂಡ ಪ್ರೋಮೋಗಳನ್ನು, ವಿಶಿಷ್ಟ ದೃಶ್ಯಾವಳಿಗಳನ್ನು ಮೈಸೂರಿನ ಲಲಿತ್ ಮಹಲ್ನಲ್ಲಿ ಅದ್ಧೂರಿಯಾಗಿ ಚಿತ್ರೀಕರಿಸಿದೆ. ಬೃಹತ್ ಮನೆಗಳಲ್ಲಿ ಪ್ರತಿಯೊಂದು ದೃಶ್ಯಗಳನ್ನು ಚಿತ್ರಿಕರಿಸುತ್ತಿದೆ.
ಗುರುಪ್ರಸಾದ್ ಮುಡೇನಹಳ್ಳಿ ಪಾರು ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಧೃತಿ ಕ್ರಿಯೇಶನ್ಸ್ ನಿರ್ಮಾಣದಲ್ಲಿ ಪಾರು ಧಾರಾವಾಹಿ ಮೂಡಿಬರುತ್ತಿದ್ದು, ಕಥೆಗೆ ತಕ್ಕಂತೆ ಆ ಅದ್ಧೂರಿತನವನ್ನು ಕಟ್ಟಿಕೊಡಲಾಗುತ್ತಿದೆ, ಅದು ವೀಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ ಎನ್ನುತ್ತಾರೆ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿರುವ ನಟ ನಿರ್ದೇಶಕ ದಿಲೀಪ್ರಾಜ್ ಮತ್ತು ಶ್ರೀವಿದ್ಯಾರಾಜ್.
ಕನ್ನಡಿಗರು ಜೀ ಕನ್ನಡವನ್ನು ತಮ್ಮ ಹೆಮ್ಮೆ ಎನ್ನುವಂತೆ ಪ್ರೀತಿಸುತ್ತಾರೆ. ನಾವು ಕೊಡುವ ಮನರಂಜನೆಯ ಕಾರ್ಯಕ್ರಮಗಳನ್ನು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಅವರಿಗೆ ಪಾರು ಧಾರಾವಾಹಿ ಮತ್ತೊಂದು ಹಂತದ ಮನರಂಜನೆಯನ್ನು ನೀಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಜೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್. ಪಾರು ಧಾರಾವಾಹಿ ಜೀ ಕನ್ನಡದಲ್ಲಿ ಇದೇ ಡಿಸೆಂಬರ್ 3ರರಿಂದ ರಾತ್ರಿ 9:30 ಕ್ಕೆ ಪ್ರಸಾರವಾಗಲಿದೆ.


Click it and Unblock the Notifications











