ಸ್ನೇಹಾ ಊಟಕ್ಕೆ ಬಾರದೆ ಇದ್ದರೂ ಕಂಠಿಗೆ ತಪ್ಪಿಲ್ಲ ಕಂಟಕ..!
ಬಂಗಾರಮ್ಮ ಎಷ್ಟು ಸ್ಟ್ರಿಕ್ಟ್ ಆಗಿ ಇರುತ್ತಾರೋ ಅಷ್ಟೇ ಸಾಫ್ಟ್ ಕ್ಯಾರೆಕ್ಟರ್ ಇರುವ ವ್ಯಕ್ತಿತ್ವವನ್ನು ಹೊಂದಿರುವವರು. ಒಳ್ಳೆಯತನಕ್ಕೆ ಯಾವಾಗಲೂ ಸೈ ಎನ್ನುತ್ತಾರೆ. ಒಳ್ಳೆಯವರಿಗೆ ಯಾವಾಗಲೂ ಬೆಂಬಲವಾಗಿ ನಿಲ್ಲುತ್ತಾರೆ. ಪುಟ್ಟಕ್ಕನನ್ನು ಬಂಗಾರಮ್ಮ ಇಷ್ಟಪಡುವುದು ಇದೇ ಕಾರಣಕ್ಕೆ. ಪುಟ್ಟಕ್ಕನನ್ನು ಮನೆಗೆ ಕರೆಸಿರುವುದು ಆಕೆಗಿರುವ ಮಾನವೀಯತೆಯ ಗುಣದಿಂದ, ಅವರಿಗಿರುವ ಒಳ್ಳೆಯತನದಿಂದ. ಆದರೆ ಅದನ್ನು ಉಪಯೋಗಿಸಿಕೊಂಡು ಕೆಡುಕು ಮಾಡಲೆಂದೇ ಹಲವರು ಕಾಯುತ್ತಿದ್ದಾರೆ.
ಪುಟ್ಟಕ್ಕನ ಮಗಳು ಸ್ನೇಹಾ, ಓದುವುದರಲ್ಲಿ ಸಾಧನೆ ಮಾಡಿದ್ದಾಳೆ ಎಂಬುದು ತಿಳಿಯುತ್ತಿದ್ದಂತೆ, ಆಕೆಯನ್ನು ಕರೆದು ಒಂದು ಗೌರವ ಸಲ್ಲಿಸಬೇಕೆಂದು ಬಂಗಾರಮ್ಮ ನಿರ್ಧರಿಸಿ, ಮನೆಗೆ ಕರೆದಿದ್ದಾರೆ. ಆದರೆ ಸ್ನೇಹಾ ಇಲ್ಲಿಗೆ ಬಂದಿಲ್ಲ, ಬಂಗಾರಮ್ಮ ಮತ್ತು ಆ ಇಬ್ಬರು ಮಕ್ಕಳು ಮಾತ್ರ ಬಂದಿದ್ದಾರೆ.

ಕಂಠಿಯನ್ನು ಪುಟ್ಟಕ್ಕ ನೋಡಿದರೆ ಏನು ಕಥೆ?
ಕಂಠಿ ಬರೀ ಸ್ನೇಹಾಳಿಗೆ ಮಾತ್ರ ಸುಳ್ಳು ಹೇಳಿಕೊಂಡು ಓಡಾಡುತ್ತಿಲ್ಲ. ಇಡೀ ಕುಟುಂಬಕ್ಕೆ ಸುಳ್ಳು ಹೇಳಿದ್ದಾನೆ. ಕಂಠಿ ಬಡವ, ಯಾರು ಇಲ್ಲ ಅಂತ ಸ್ನೇಹಾ ಹಾಗೂ ಸುಮಾಳ ಬಳಿ ಹೇಳಿದ್ದಾನೆ. ನಮ್ಮ ಮೆಸ್ಸಿಗೆ ಊಟಕ್ಕೆ ಬರುವ ಕಂಠಿ, ಬಂಗಾರಮ್ಮನ ಮಗ ಎಂದು ಗೊತ್ತಾದರೆ ಸುಮಾ ತನ್ನ ಅಕ್ಕನಿಗೆ ಹೇಳದೆ ಇರುತ್ತಾಳೆಯೇ. ಮನೆಯ ತುಂಬೆಲ್ಲಾ ಅವ್ವ ಮಗನ ಫೋಟೊ ರಾರಾಜಿಸುತ್ತಿದೆ. ಒಂದು ವೇಳೆ ಪುಟ್ಟಕ್ಕನ ಮಗಳು ಮತ್ತು ಪುಟ್ಟಕ್ಕ ಕಂಠಿ ಫೋಟೊ ನೋಡಿದರೆ ಅಲ್ಲಿಗೆ ಕಂಠಿ ಕಥೆ ಮುಗಿಯಿತು ಎಂದೇ ಅರ್ಥ. ಸ್ನೇಹಾ ಮನೆಗೆ ಹೋಗುತ್ತಿಲ್ಲ ಅಂತ ಖುಷಿ ಪಡುವ ಕಂಠಿಗೆ ಸುಮಾ, ಪುಟ್ಟಕ್ಕ ಕೂಡ ನೋಡಿದರೆ ಅಪಾಯ ತಪ್ಪಿದ್ದಲ್ಲ ಎಂಬುದನ್ನೇ ಮರೆತು ಹೋಗಿದ್ದಾನೆ.

ಸ್ನೇಹಾಳ ಗತ್ತಿಗೆ ಬಂಗಾರಮ್ಮ ಅಸ್ತು
ಸ್ನೇಹಾ ಬಂಗಾರಮ್ಮನ ಮನೆಗೆ ಬರುವುದಕ್ಕೆ ಬಿಲ್ ಕುಲ್ ಒಪ್ಪಿಲ್ಲ. ಹಾಗಂತ ಮಗಳು ಬಾರದೆ ಪುಟ್ಟಕ್ಕ, ಬಂಗಾರಮ್ಮನ ಆತಿಥ್ಯಕ್ಕೆ ಚಕ್ಕರ್ ಹಾಕುವಂತೆಯೂ ಇಲ್ಲ. ಹೀಗಾಗಿ ಪುಟ್ಟಕ್ಕ ಒಬ್ಬಳೇ ಹೋಗಿ ಬರುವ ಫ್ಲ್ಯಾನ್ ಮಾಡಿದ್ದರು. ಆದರೆ ಇದರ ನಡುವೆ ಸುಮಾ ಮತ್ತು ಸಹನಾ ಸಿಕ್ಕಿ ಬಿದ್ದರು. ಹಾಗೆ ಮೂವರು ಹೋಗಿ ಬಂದರೆ ಬಂಗಾರಮ್ಮನಿಗೂ ಖುಷಿಯಾಗುತ್ತೆ ಎಂದು ಭಾವಿಸಿದ ಪುಟ್ಟಕ್ಕ ತನ್ನ ಇನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಹೊರಟಳು. ಈ ವೇಳೆ ಸ್ನೇಹಾ ಬಾರದೆ ಇದ್ದಿದ್ದನ್ನು ಬಂಗಾರಮ್ಮನ ಬಳಿ ಹೇಳಿದಾಗ, ಅವಳಿಗೆ ಇನ್ನು ನನ್ನ ಮೇಲೆ ಕೋಪ ಹೋಗಿಲ್ಲ ಅನ್ನಿಸುತ್ತೆ. ಅಷ್ಟೆಲ್ಲಾ ಕಷ್ಟ ಪಟ್ಟು ಓದಿದ ಹುಡುಗಿಗೆ ಇಷ್ಟಾದರೂ ಇರಬೇಕು ಅಲ್ಲವೇ ಎಂದು ಬಂಗಾರಮ್ಮ ಸ್ನೇಹಾಳ ಗುಣವನ್ನು ಹಾಡಿ ಹೊಗಳಿದ್ದಾರೆ.

ಸರಳ, ಪೂರ್ವಿ ಫ್ಲ್ಯಾನ್ ಠುಸ್ ಆಯ್ತು
'ಪುಟ್ಟಕ್ಕನ ಮಕ್ಕಳು' ಮನೆಗೆ ಬರುತ್ತಾರೆ ಎಂದು ತಿಳಿದಾಗ, ಸರಳ ಮತ್ತು ಪೂರ್ವಿಗೆ ಇನ್ನಿಲ್ಲದ ಕೋಪ ಬಂದಿತ್ತು. ಅವರವರ ಸ್ಥಾನವನ್ನು ಅವರವರಿಗೆ ತೋರಿಸಲೇಬೇಕೆಂದು ಬಂದ ಸರಳ ಮತ್ತು ಪೂರ್ವಿ ಕೊಂಕು ಮಾತನಾಡಿ, ಅವಮಾನ ಮಾಡಲು ಯತ್ನಿಸುತ್ತಾಳೆ. ಆದರೆ ಬಂಗಾರಮ್ಮ ಯಾವತ್ತಿಗೂ ನ್ಯಾಯದ ಪರವೇ ಇರುವ ಕಾರಣ, ಪುಟ್ಟಕ್ಕನ ಬೆಂಬಲಕ್ಕೆ ನಿಂತು ಸರಳ ಮಾತಿಗೆ ಬೀಗ ಹಾಕುತ್ತಾರೆ. ಇದು ಪುಟ್ಟಕ್ಕನಲ್ಲಿ ಮತ್ತಷ್ಟು ಗೌರವ ಹೆಚ್ಚಿಸಿದೆ.

ಮಗಳು ಬಾರದೆ ಇದ್ದರು ಪುಟ್ಟಕ್ಕನಿಗೆ ಆತಿಥ್ಯ
ಪುಟ್ಟಕ್ಕ ಊಟಕ್ಕೆ ಬಂದಿದ್ದಲ್ಲ, ಬದಲಿಗೆ ಸ್ನೇಹಾ ಬರಲಿಲ್ಲ, ಕ್ಷಮೆ ಇರಲಿ ಎಂಬುದನ್ನು ಹೇಳಿ ಹೋಗಲು ಬಂದಿದ್ರು. ಇದನ್ನು ಸರಳ ಹಾಸ್ಯಸ್ಪದ ಮಾಡಿದಳು. ಆದರೆ ಬಂಗಾರಮ್ಮ ಸರಿಯಾಗಿ ಅರ್ಥೈಸಿಕೊಂಡಿದ್ದಾರೆ. ನಾನು ಮನೆಯ ತನಕ ಹೋಗಿ ಕರೆದಿದ್ದಕ್ಕೆ, ಪುಟ್ಟಕ್ಕ ಮನೆಯ ತನಕ ಬಂದು ವಿಚಾರ ಮುಟ್ಟಿಸಿದ್ದಾರೆ. ಇದು ಅವರ ಸಂಸ್ಕಾರ ತೋರಿಸುತ್ತದೆ. ಫೋನಿನಲ್ಲಿಯೇ ಹೇಳಿ ಮುಗಿಸಿಬಿಡಬಹುದಿತ್ತು. ಆದರೆ ಪುಟ್ಟಕ್ಕ ಆ ರೀತಿ ಮಾಡಲಿಲ್ಲ ಎಂದು ಬಂಗಾರಮ್ಮ ಹೊಗಳಿದ್ದಾರೆ. ಆದರೆ ಊಟ ಬೇಡ ಎಂದು ಹೊರಟ ಪುಟ್ಟಕ್ಕನನ್ನು ತಡೆದು, ಊಟ ಮಾಡಿಯೇ ಹೋಗಬೇಕೆಂದು ಬಲವಂತ ಮಾಡುತ್ತಿದ್ದಾರೆ ಬಂಗಾರಮ್ಮ. ಒಂದು ವೇಳೆ ಊಟ ಮಾಡುವಾಗ, ಮನೆ ಚೆನ್ನಾಗಿದೆ ಎಂದು ನೋಡಲು ಏನಾದರೂ ಫ್ಲ್ಯಾನ್ ಹಾಕಿಕೊಂಡರೆ ಅಲ್ಲಿಗೆ ಕಂಠಿ ಕಥೆ ಮುಗಿಯಿತು.


Click it and Unblock the Notifications











