ಶಾರ್ವರಿ ಪಾಪದ ಕೊಡ ತುಂಬಿದ್ಯಾ? 'ಶ್ರೀರಸ್ತು ಶುಭಮಸ್ತು' ಕಥೆ ಮುಗೀತಾ?
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಶ್ರೀರಸ್ತು ಶುಭಮಸ್ತು'. ಕನ್ನಡ ಚಿತ್ರನಟಿ ಸುಧಾರಾಣಿ ಕಥೆಯ ಮುಖ್ಯ ಪಾತ್ರದಲ್ಲಿ ನಟಿಸಿದ್ದರಿಂದ ಸಹಜವಾಗಿಯೇ ಕುತೂಹಲ ಮೂಡಿಸಿತ್ತು. ಕೆಲ ವಾರಗಳ ಕಾಲ ಒಳ್ಳೆ ಟಿಆರ್ಪಿ ಕೂಡ ಗಳಿಸಿತ್ತು. ಇದೀಗ ಕಥೆ ಮುಕ್ತಾಯದ ಹಂತ ತಲುಪಿದಂತೆ ಕಾಣುತ್ತಿದೆ.
ಕಿರುತೆರೆಯಲ್ಲಿ ಹೊಸ ಹೊಸ ಕಥೆಗಳನ್ನು ಧಾರಾವಾಹಿ ರೂಪದಲ್ಲಿ ಹೇಳುವುದು. ಒಂದಷ್ಟು ವಾರಗಳ ಕಾಲ ಕುತೂಹಲಭರಿತವಾಗಿ ಕತೆ ಸಾಗುವುದು, ಬಳಿಕ ವೀಕ್ಷಕರಿಗೂ ಬೇಸರ ಉಂಟಾಗಿ ಅತ್ತ ಕಥೆ ಎಳೆಯಲು ಸಾಧ್ಯವಾಗದೇ ಕೊನೆಗೆ ಧಾರಾವಾಹಿ ಮುಗಿಸುವುದು, ಅದೇ ಸ್ಲಾಟ್ನಲ್ಲಿ ಹೊಸ ಧಾರಾವಾಹಿ ಪ್ರಸಾರ ಮಾಡುವುದು ಹೊಸದೇನು ಅಲ್ಲ.

ಇತ್ತೀಚೆಗೆ ಕೇರಳದ ವಯನಾಡಿಗೆ ಧಾರಾವಾಹಿ ತಂಡ ಪ್ರವಾಸ ಕೈಗೊಂಡು ಎಂಜಾಯ್ ಮಾಡಿತ್ತು. ಮತ್ತೊಂದು ಕಥೆ 'ಶ್ರೀರಸ್ತು ಶುಭಮಸ್ತು' ಕುತೂಹಲ ಕಳೆದುಕೊಳ್ಳುತ್ತಾ ಸಾಗಿದೆ. ಶಾರ್ವರಿಯ ಬಣ್ಣ ಬಯಲು ಮಾಡಲು ಸಾಕಷ್ಟು ಅವಕಾಶಗಳು ಸಿಕ್ಕರೂ ಬೇಕಂತಲೇ ಕಥೆ ಎಳೆಯುತ್ತಿರುವಂತೆ ಕಾಣುತ್ತಿದೆ. ಇದೆಲ್ಲದರ ನಡುವೆ ಧಾರಾವಾಹಿ ಶೀಘ್ರದಲ್ಲೇ ಮುಗಿಯುವ ಸುಳಿವು ಸಿಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ.
ಜೀ ಮರಾಠಿ ವಾಹಿನಿಯಲ್ಲಿ ಬಂದಿದ್ದ 'ಅಗ್ಗಾಬಾಯಿ ಸಸುಬಾಯಿ' ಧಾರಾವಾಹಿಯ ರೀಮೆಕ್ 'ಶ್ರೀರಸ್ತು ಶುಭಮಸ್ತು'. ಆದರೆ ಕಥೆಯನ್ನು ಕನ್ನಡಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಬರಲಾಗಿತ್ತು. ತಮಿಳು, ತೆಲುಗು, ಪಂಜಾಬಿ ಭಾಷೆಗಳಿಗೂ ಈ ಕಥೆ ರೀಮೆಕ್ ಆಗಿತ್ತು. ತುಳಸಿ, ಮಾಧವ್, ಸಿರಿ, ದತ್ತ ತಾತ, ಅವಿನಾಶ್, ಪೂರ್ಣಿ, ಸಮರ್ಥ್, ಶಾರ್ವರಿ ಹೀಗೆ ಎಲ್ಲಾ ಪಾತ್ರಗಳು ವೀಕ್ಷಕರ ಮನಗೆದ್ದಿದೆ. ಶಾರ್ವರಿ ಪಾತ್ರವನ್ನು ಮೊದಲಿಗೆ ನೇತ್ರಾ ಜಾಧವ್ ಮಾಡುತ್ತಿದ್ದರು. ಬಳಿಕ ಆ ಪಾತ್ರ ಸಪ್ನಾ ದೀಕ್ಷಿತ್ ಪಾಲಾಗಿತ್ತು. 2022ರ ಅಕ್ಟೋಬರ್ 31ರಂದು 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಪ್ರಸಾರ ಆರಂಭವಾಗಿತ್ತು.
ತುಳಸಿ ಗಂಡನನ್ನು ಕಳೆದುಕೊಂಡು ಮಗ ಹಾಗೂ ಮಗಳನ್ನು ಸಾಕಿ ಸಲಹುತ್ತಿದ್ದಳು. ಮಾವ ದತ್ತಾತ್ರೇಯ ಮನೆಯ ಹಿರಿಯನಾಗಿ ಮಾರ್ಗದರ್ಶಿಯಾಗಿದ್ದನು. ಇತ್ತ ಮಾಧವ್ ಬಹಳ ಶ್ರೀಮಂತ. ಆದರೆ ಆತನಿಗೆ ಮಡದಿ ಇಲ್ಲ. ಗಂಡು ಮಕ್ಕಳಿಬ್ಬರೂ ಅಪ್ಪನನ್ನು ದ್ವೇಷಿಸುತ್ತಿದ್ದರು. ಮಾಧವ್ ಹಾಗೂ ತುಳಸಿ ಸ್ನೇಹಕ್ಕೆ ಕೊನೆಗೆ ಮದುವೆಯ ಮುದ್ರೆ ಬಿದ್ದಿತ್ತು. ಈ ಮದುವೆ ದತ್ತ ತಾತನಿಗೆ ಬಿಟ್ಟರೆ ಎರಡೂ ಮನೆಗಳಲ್ಲಿ ಯಾರಿಗೂ ಇಷ್ಟವಿರಲಿಲ್ಲ. ಗಂಡನ ಮನೆಗೆ ಬಂದ ತುಳಸಿಯನ್ನು ಕಂಡರೆ ಎಲ್ಲರೂ ಉರಿದು ಬೀಳುತ್ತಿದ್ದರು.
ತುಳಸಿ ತನ್ನ ಒಳ್ಳೆ ಗುಣದಿಂದ ಎಲ್ಲರ ವಿಶ್ವಾಸ ಗಳಿಸಿದ್ದಳು. ಆದರೆ ಮಾಧವ್ ಸಹೋದರನ ಪತ್ನಿ ಶಾರ್ವರಿಗೆ ಮಾತ್ರ ತುಳಸಿಯನ್ನು ಕಂಡರೆ ಆಗುವುದಿಲ್ಲ. ಗಂಡನನ್ನು ಮೂಲೆ ಗುಂಪು ಮಾಡಿ ಮಾಧವನ ಮಕ್ಕಳ ಮೇಲೂ ಹಿಡಿತ ಸಾಧಿಸಿ ಮನೆಯಲ್ಲಿ ರಾಣಿಯಂತೆ ಮೆರೆಯುತ್ತಿದ್ದಳು. ಅಡ್ಡ ಬಂದವರನ್ನು ದೂರು ಮಾಡುತ್ತಿದ್ದಳು. ತುಳಸಿಯಿಂದ ನನಗೆ ಉಳಿಗಾಲ ಇಲ್ಲ ಎಂದು ಭಾವಿಸಿದ್ದಳು. ಆದರೆ ತುಳಸಿ, ಶಾರ್ವರಿಗೆ ಎದುರಾಗಿ ನಿಂತಳು. ಇದೀಗ ತುಳಸಿ ಮಗ ಸಮರ್ಥ್ ಕೂಡ ಅಮ್ಮನನ್ನು ಅಮ್ಮನ ಮನೆಯವರನ್ನು ಒಪ್ಪಿಕೊಂಡಿದ್ದಾರೆ. ಮಾಧವ್ ಮಕ್ಕಳು, ಸೊಸೆಯಂದಿರು ಕೂಡ ತುಳಸಿಯನ್ನು ಮನೆಯ ಸದಸ್ಯೆ ಎಂದು ಭಾವಿಸಿದ್ದಾರೆ.
ಶಾರ್ವರಿ ಕುತಂತ್ರಗಳಿಗೆಲ್ಲಾ ಬ್ರೇಕ್ ಬೀಳುವ ಸಮಯ ಹತ್ತಿರವಾಗುತ್ತಿದೆ. ಅಂದರೆ ಆದಷ್ಟು ಬೇಗ ಕಥೆ ಮುಗಿದು ಬಿಡುತ್ತದಾ? ಎನ್ನುವ ಅನುಮಾನ ವೀಕ್ಷಕರನ್ನು ಕಾಡುತ್ತಿದೆ. ಇತ್ತೀಚೆಗೆ ತಂಡ ಪ್ರವಾಸ ಕೈಗೊಂಡಿದ್ದನ್ನು ನೋಡಿ ಇದು ಕೂಡ ಧಾರಾವಾಹಿ ಮುಗಿಯುವ ಸೂಚನೆ ಎಂದು ಕೆಲವರು ಭಾವಿಸುತ್ತಿದ್ದಾರೆ. ಆದರೆ 'ಶ್ರೀರಸ್ತು ಶುಭಮಸ್ತು' ಧಾರವಾಹಿ ಕನ್ನಡ ವೀಕ್ಷಕರ ಮನಗೆದ್ದಿತ್ತು. ಈ ಧಾರಾವಾಹಿ ಮುಗಿದರೆ ಅಭಿಮಾನಿಗಳು ಬಹಳ ಮಿಸ್ ಮಾಡಿಕೊಳ್ಳುತ್ತಾರೆ.


Click it and Unblock the Notifications











