ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾಗಳ ದೊಡ್ಡ ಪಟ್ಟಿಯಲ್ಲಿ 'ಹುಚ್ಚ' ಇದೆ. ಈ ಸಿನಿಮಾ ಕೇವಲ ಬಾಕ್ಸಾಫೀಸ್‌ನಲ್ಲಷ್ಟೇ ಚಮತ್ಕಾರ ಮಾಡಿಲ್ಲ. ಬದಲಾಗಿ ಸ್ಯಾಂಡಲ್‌ವುಡ್‌ಗೆ ಒಂದು ಸೂಪರ್‌ಸ್ಟಾರ್‌ ಅನ್ನೂ ಕೊಟ್ಟ ಸಿನಿಮಾ. ಕಿಚ್ಚ ಸುದೀಪ್ ವೃತ್ತಿ ಬದುಕಿಗೆ ಸಂಜೀವಿನಿಯಾಗಿ ಬಂದ 'ಹುಚ್ಚ' ಇಂದಿಗೂ ಸಿನಿಮಾ ಪ್ರಿಯರ ಫೇವರಿಟ್ ಸಿನಿಮಾ.

Advertisement

ಕಿಚ್ಚ ಸುದೀಪ್ ಅವರ ವೃತ್ತಿಜೀವನಕ್ಕೆ ಬಿಗ್ ಬ್ರೇಕ್ ನೀಡಿದಷ್ಟೇ ಅಲ್ಲ. ಸುದೀಪ್-ಓಂ ಪ್ರಕಾಶ್ ರಾವ್ ಅಂತಹ ಒಂದೊಳ್ಳೆ ಕಾಂಬಿನೇಷನ್ ಅನ್ನು ಕೊಟ್ಟಂತಹ ಸಿನಿಮಾ. 2001ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಕನ್ನಡ ಸಿನಿಮಾ ಇತಿಹಾಸದಲ್ಲಿ ಇದೊಂದು ಸಾರ್ವಕಾಲಿಕ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿದೆ.

Advertisement

ಅಷ್ಟಕ್ಕೂ ಇದು ವಿಕ್ರಮ್ ನಟನೆಯ ತಮಿಳಿನ 'ಸೇತು' ಸಿನಿಮಾದ ರಿಮೇಕ್. ಹೀಗಿದ್ದರೂ, ಓಂ ಪ್ರಕಾಶ್ ರಾವ್ ಈ ಸಿನಿಮಾಗೆ ಹೊಸ ಆಯಾಮ ಕೊಟ್ಟು ಹಿಟ್ ಲಿಸ್ಟ್ ಸೇರಿದ್ದರು. ಸಿನಿಮಾ ರಿಲೀಸ್ ಆಗಿ 25 ವರ್ಷಗಳಾಗಿದ್ದು, ಇಂದಿನ ದೃಷ್ಟಿಕೋನದಿಂದ ಈ ಸಿನಿಮಾವನ್ನು ಮರು-ವಿಮರ್ಶೆ ಹೀಗಿದೆ.

'ಹುಚ್ಚ' ಸಿನಿಮಾದ ಹೈಲೈಟ್ಸ್

ಕಣ್ಣಲ್ಲೇ ಕೊಲ್ಲುವ ಕಿಚ್ಚ: ಕಿಚ್ಚ ಸುದೀಪ್ ಹಾಗೂ ಓಂ ಪ್ರಕಾಶ್ ರಾವ್ ಕಾಂಬಿನೇಷನ್‌ ಸಿನಿಮಾ ಎರಡು ಭಾಗಗಳಲ್ಲಿ ವಿಂಗಡಿಸಬಹುದು. ಮೊದಲಾರ್ಧದಲ್ಲಿ ರಗಡ್ ಕಾಲೇಜು ರೌಡಿ ಲುಕ್‌ನಲ್ಲಿ ಕಿಕ್ ಕೊಡುತ್ತಾರೆ. ಕಿಚ್ಚನಾಗಿ ಮಾಸ್ ಲುಕ್‌ನಲ್ಲಿ ಪ್ರೇಕ್ಷಕರ ಮನಗೆದ್ದಿದ್ದರು. ಇನ್ನು ದ್ವಿತೀಯಾರ್ಧದಲ್ಲಿ ಭಗ್ನ ಪ್ರೇಮಿ, ಮಾನಸಿಕ ಅಸ್ವಸ್ಥನಾಗಿ ಪಾತ್ರದೊಳಗೆ ಜೀವಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾದ ಬಹುತೇಕ ದೃಶ್ಯಗಳಲ್ಲಿ ಕಣ್ಣುಗಳಲ್ಲೇ ನಟಿಸಿರೋ ವಿಶೇಷ.

Advertisement

ಬ್ರಾಹ್ಮಣ ಹುಡುಗಿ-ಒರಟು ಹುಡುಗನ ಕಥೆ: ಪ್ರೀತಿಯ ಬಲೆಗೂ ಮುನ್ನ ಕಿಚ್ಚ ಒರಟು ಹುಡುಗನಾಗಿ ಕಾಣಿಸಿಕೊಳ್ಳುತ್ತಾರೆ. ಅದೇ ಮುಗ್ಧ ಬ್ರಾಹ್ಮಣ ಹುಡುಗಿಯಾಗಿ ರೇಖಾ ವೇದವ್ಯಾಸ್ ನಟಿಸಿದ್ದಾರೆ. ಪ್ರೇಮಿಯಾಗಿ, ಭಗ್ನ ಪ್ರೇಮಿಯಾಗಿ, ಇವರಿಬ್ಬರ ಅಭಿನಯ ಪ್ರೇಕ್ಷಕರ ಹೃದಯಲ್ಲಿ ಅಚ್ಚಳಿಯದೆ ಉಳಿದಿದೆ. ಪ್ರೀತಿಯ ತೀವ್ರತೆ ಜೊತೆಗೆ ದುರಂತ ಅಂತ್ಯ ಪ್ರೇಕ್ಷಕರ ಕಣ್ಣುಗಳನ್ನು ಒದ್ದೆಯಾಗಿಸುತ್ತವೆ.

ರಾಜೇಶ್ ರಾಮನಾಥ್ ಸಾಂಗ್ಸ್: 'ಹುಚ್ಚ' ಸಿನಿಮಾದ ಜೀವಾಳವೇ ಹಾಡುಗಳು. ಅದರಲ್ಲೂ "ಉಸಿರೇ ಉಸಿರೇ..." ಗೀತೆ ಇಂದಿಗೂ ಪ್ರೇಮಿಗಳ ಫೇವರಿಟ್. ಕೆ. ಕಲ್ಯಾಣ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಇನ್ನು ಹಿನ್ನೆಲೆ ಸಂಗೀತ ಕೂಡ ದೃಶ್ಯಗಳಿಗೆ ತಕ್ಕಂತೆ ಪ್ರೇಕ್ಷಕರನ್ನು ಭಾವುಕರನ್ನಾಗಿಸುತ್ತೆ.

Advertisement

ಇಂದಿನ ದೃಷ್ಟಿಕೋನ ಏನು? ಸಿನಿಮಾ ಬಿಡುಗಡೆಯಾಗಿ 25 ವರ್ಷಗಳಾದರೂ ಇದೊಂದು ಪ್ರಬುದ್ಧ ಸಿನಿಮಾಗಳ ಪಟ್ಟಿ ಸೇರಿಕೊಂಡಿದೆ. ಫಸ್ಟ್ ಹಾಫ್‌ನಲ್ಲಿ ನಾಯಕಿಯನ್ನು ಚೇಡಿಸುವ ದೃಶ್ಯಗಳು ಈಗ ಔಟ್‌ ಡೇಟೆಡ್ ಎನಿಸಬಹುದು. ಕ್ಲೈಮ್ಯಾಕ್ಸ್ ಸೀನ್‌ಗಳು ಕೂಡ ಇದೇ ರೀತಿ ಭಾಸವಾಗಬಹುದು. ಆದರೆ, ಆ ಕಾಲಘಟ್ಟಕ್ಕೆ ಹೋಲಿಸಿದರೆ ಈ ದೃಶ್ಯಗಳು ಪೂರಕ ಎನಿಸುತ್ತವೆ.

ಕೊನೆಯಲ್ಲಿ

'ಹುಚ್ಚ' ಕೇವಲ ಒಂದು ಸಿನಿಮಾ ಅಷ್ಟೇ ಅಲ್ಲ. ಸುದೀಪ್ ನಟನೆಯನ್ನು ಪ್ರಪಂಚಕ್ಕೆ ಪರಿಚಯಿಸಿದ ಸಿನಿಮಾ. ಇಲ್ಲಿಂದ ಕನ್ನಡ ಚಿತ್ರರಂಗ ಸುದೀಪ್ ಒಬ್ಬ ಸೂಪರ್‌ಸ್ಟಾರ್ ಆಗಿ ಮೆರೆಯುವುದಕ್ಕೆ ಸಾಕ್ಷಿ ಆಯ್ತು. ಈ ಸಿನಿಮಾದಲ್ಲಿ ಕಿಚ್ಚ ಹೊರ ಹಾಕಿದ ಭಾವನೆಗಳು, ಕಿಚಾಯಿಸೋ ನಟನೆ, ಕರುಳು ಹಿಂಡುವ ಕ್ಲೈಮ್ಯಾಕ್ ಈ ಸಿನಿಮಾವನ್ನು ಒಂದು ದುರಂತ ಕಾವ್ಯವನ್ನಾಗಿ ಮಾಡಿದೆ.