Dharmendra: ಪಂಜಾಬ್ನ ಸಣ್ಣ ಹಳ್ಳಿಯ ಯುವಕ ಬಾಲಿವುಡ್ ಆಳಿದ; ಧರ್ಮೇಂದ್ರ ಬಳಿರುವ ಒಟ್ಟು ಆಸ್ತಿ ಮೌಲ್ಯವೆಷ್ಟು ಗೊತ್ತೇ?
ಬಾಲಿವುಡ್ ಅದೆಷ್ಟೋ ಮಂದಿಯ ಕನಸನ್ನು ನನಸು ಮಾಡಿದೆ. ಹೀರೋ ಆಗಬೇಕು, ಬೆಳ್ಳಿ ಪರೆದೆಯಲ್ಲಿ ಮಿಂಚಬೇಕು ಅಂತ ಮನೆ ಬಿಟ್ಟು ಮುಂಬೈಗೆ ಓಡಿ ಬರುವ ಅಷ್ಟೇ ಮಂದಿ ಯುವಕರಲ್ಲಿ ಬಾಲಿವುಡ್ನ ಹಿ-ಮ್ಯಾನ್ ಧರ್ಮೇಂದ್ರ ಕೂಡ ಒಬ್ಬರು. ಪಂಜಾಬ್ನ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಧರ್ಮೇಂದ್ರ ಅಲಿಯಾಸ್ ಧರ್ಮೇಂದ್ರ ಸಿಂಗ್ ಡಿಯೋಲ್ಗೆ ಚಿಕ್ಕಂದಿನಿಂದಲೇ ನಟನಾಗಬೇಕು ಅನ್ನೋ ಹಂಬಲ. ಪ್ರತಿ ಕ್ಷಣವೂ ಸಿನಿಮಾ ಬಗ್ಗೆನೇ ಆಲೋಚನೆ ಮಾಡುತ್ತಿದ್ದರು.
ಪಂಜಾಬ್ನಲ್ಲಿಯೇ ಇದ್ದಿದ್ದರೆ, ಧರ್ಮೇಂದ್ರ ಆರಾಮಾಗಿಯೇ ಇರಬಹುದಿತ್ತು. ಅವರ ಕುಟುಂಬ ಕೂಡ ತಕ್ಕ ಮಟ್ಟಿಗೆ ಇತ್ತು. ಇನ್ನು ಧರ್ಮೇಂದ್ರ ಕೂಡ ಚಿಕ್ಕ ವಯಸ್ಸಿನಲ್ಲಿಯೇ ಪ್ರಕಾಶ್ ಕೌರ್ ಅವರೊಂದಿಗೆ ವಿವಾಹವಾಗಿದ್ದರು. ಇಷ್ಟೆಲ್ಲ ಇದ್ದರೂ, ಅವರಿಗೆ ನಟನಾಗಬೇಕು ಎನ್ನುವ ಕನಸು ಹಾಗೇ ಉಳಿದುಕೊಂಡಿತ್ತು. ಒಂದು ಜಾಹೀರಾತು ಅವರ ಬದುಕನ್ನೇ ಬದಲಿಸಿತು.

ಒಂದು ದಿನ ಧರ್ಮೇಂದ್ರ ಫಿಲ್ಮ್ಫೇರ್ ಮ್ಯಾಗಜೀನ್ನಲ್ಲಿ ಬಂದಿದ್ದ ಒಂದು ಜಾಹೀರಾತು ನೋಡಿದ್ದರು. ಹೊಸ ಪ್ರತಿಭೆಗಳಿಗೆ ಆಡಿಷನ್ ಕೊಡುವುದಕ್ಕೆ ಕರೆ ಕೊಡಲಾಗಿತ್ತು. ಇದೇ ಅವರ ಬದುಕಿಗೆ ಹೊಸ ತಿರುವು ನೀಡಿತ್ತು. ಕೊನೆಗೂ ತಮ್ಮ ಕುಟುಂಬದ ಮನವೊಲಿಸಿ ಆಡಿಷನ್ ಕೊಡುವುದಕ್ಕೆ ಮುಂಬೈ ಕಡೆಗೆ ಪಯಣ ಬೆಳೆಸಿಯೇ ಬಿಟ್ಟರು. ಅಲ್ಲಿಂದ ಇವರ ಅದೃಷ್ಟವೇ ಬದಲಾಗಿ ಹೋಯ್ತು. ಪಂಜಾಬ್ನ ಹಳ್ಳಿಯೊಂದರ ಹೆಡ್ ಮಾಸ್ಟರ್ ಮಗ ಬಾಲಿವುಡ್ನಲ್ಲಿ ತನ್ನದೇ ಒಂದು ಸಾಮ್ರಾಜ್ಯ ಕಟ್ಟಿಬಿಟ್ಟ. ನೂರಾರು ಕೋಟಿ ಒಡೆಯನಾದ.
ಮುಂಬೈನಲ್ಲಿ ಪರದಾಟ
ಎಲ್ಲರಂತೆ ಕುಟುಂಬದ ಮನವೊಲಿಸಿದ, ತಮ್ಮ ಹಳ್ಳಿಯನ್ನು ಬಿಟ್ಟು, ಸಿನಿಮಾ ಕನಸನ್ನು ಹೊತ್ತು ಕನಸಿನ ನಗರಿ ಮುಂಬೈ ಕಡೆಗೆ ಪಯಣ ಬೆಳೆಸಿದರು. ಆಡಿಷನ್ ಕೇವಲ ಒಂದು ನೆಪವಾಗಿತ್ತು. ಸಿನಿಮಾ ಹಿನ್ನೆಲೆ ಇಲ್ಲದವರು ಮುಂಬೈಗೆ ಬಂದು ಪರದಾಡುವಂತೆ ಧರ್ಮೇಂದ್ರ ಪರಿಸ್ಥಿತಿ ಕೂಡ ಅದೇ ಇತ್ತು. ಅವರಿಗೆ ಮುಂಬೈ ಅಷ್ಟಾಗಿ ಗೊತ್ತಿರಲಿಲ್ಲ. ಉಳಿದುಕೊಳ್ಳುವುದಕ್ಕೆ ಸ್ಥಳವಿರಲಿಲ್ಲ. ಊಟ ಮಾಡುವುದಕ್ಕೂ ಪರದಾಡಬೇಕಿದ್ದ ಸ್ಥಿತಿಯಿತ್ತು. ಇಂತಹ ಪರಿಸ್ಥಿತಿಯಲ್ಲಿದ್ದ ನಟ ₹450 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಸಂಪಾದಿಸಿದ್ದೇ ರೋಚಕ ಕತೆ.
ಹೊಟ್ಟು ತಿಂದು ಆಸ್ಪತ್ರೆ ಸೇರಿದ್ದ ಧರ್ಮೇಂದ್ರ
ಧರ್ಮೇಂದ್ರ ಬಾಲಿವುಡ್ ಕನಸು ಹೊತ್ತು ಮುಂಬೈಗೇನೋ ಬಂದಿದ್ದರು. ಆದರೆ, ಸ್ನೇಹಿತರೊಂದಿಗೆ ವಾಸವಿದ್ದರು. ಅಂದುಕೊಂಡಂತೆ ಅವಕಾಶಗಳು ಸಿಗದೇ ಇದ್ದಿದ್ದರಿಂದ ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿಯಿತ್ತು. ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ "ಹೊಟ್ಟೆ ಹಸಿವು ತಾಳಲಾರದೆ ಸೈಲಿಯಮ್ ಪೌಡರ್ ಅನ್ನು ಹೆಚ್ಚು ಪ್ರಮಾಣದಲ್ಲಿ ಸೇವಿದ್ದೆ. ಇದರಿಂದ ಆರೋಗ್ಯ ಹದಗೆಟ್ಟಿತ್ತು. ಕೊನೆಗೆ ಆಸ್ಪತ್ರೆ ಸೇರಿಕೊಳ್ಳಬೇಕಾಯ್ತು" ಎಂದು ಧರ್ಮೇಂದ್ರ ಹೇಳಿದ್ದರು.

ಇಂದು ₹450 ಕೋಟಿ ಒಡೆಯ
ಕಷ್ಟ ಪಟ್ಟಿದ್ದಕ್ಕೆ ಕೊನೆಗೂ ಒಂದೊಳ್ಳೆ ಅವಕಾಶ ಸಿಕ್ಕಿತ್ತು. ತಮ್ಮ ಮೊದಲ ಸಿನಿಮಾ 'ದಿಲ್ ಭಿ ತೇರಾ ಹಮ್ ಭಿ ತೇರೆ ಮಿಲಿ' ಅವಕಾಶ ಗಿಟ್ಟಿಸಿಕೊಂಡರು. ಇಲ್ಲಿಂದ ಧರ್ಮೇಂದ್ರ ಅವರ ವೃತ್ತಿ ಬದುಕು ಬದಲಾಗಿತ್ತು. ಶೋಲೆ, ಸೀತಾ ಔರ್ ಗೀತಾ, ಚುಪ್ಕೆ ಚುಪ್ಕೆ, ಶರಾಬಿ ಮತ್ತು ರಾಜಾ ಜಾನಿ ಅಂತಹ ಸಿನಿಮಾಗಳು ಅವರ ಇಮೇಜ್ ಅನ್ನೇ ಬದಲಿಸಿ ಬಿಟ್ಟವು. ಬಾಲಿವುಡ್ ಮಂದಿ ಧರ್ಮೇಂದ್ರಗೆ ಆಕ್ಷನ್ ಹೀರೋ, ಹಿ-ಮ್ಯಾನ್ ಅನ್ನೋ ಪಟ್ಟು ಕೊಟ್ಟು ಸಂಭ್ರಮಿಸಿದ್ರು. ಈ ನಟನ ಒಟ್ಟು ಆಸ್ತಿ ₹450 ಕೋಟಿ ಎಂದು ಮಾಧ್ಯಮಗಳು ವರದಿ ಮಾಡಿವೆ.
ಧರ್ಮೇಂದ್ರ ಬಳಿ ಇರುವ ಆಸ್ತಿ ಏನೇನು?
ಇನ್ನು ಧರ್ಮೇಂದ್ರ ಬಳಿ ಇರುವ ಆಸ್ತಿ ಬಗ್ಗೆ ನೋಡುವುದಾರೇ, ಲೋನಾವಾಲ ಬಳಿ ಧರ್ಮೇಂದ್ರ ಅವರಿಗೆ ಸೇರಿದ 100 ಎಕರೆ ಫಾರ್ಮ್ಹೌಸ್ ಇದೆ. ಮಹಾರಾಷ್ಟ್ರದಲ್ಲಿ ಸುಮಾರು ₹17 ಕೋಟಿ ಬೆಲೆಯ ಪ್ರಾಪರ್ಟಿ ಹೊಂದಿದ್ದಾರೆಂದು ವರದಿಯಾಗಿದೆ. ಹಾಗೇ ₹88 ಲಕ್ಷದ ಕೃಷಿ ಭೂಮಿ, ಹಾಗೂ ₹52 ಲಕ್ಷ ಮೌಲ್ಯದ ಕೃಷಿಯೇತರ ಭೂಮಿ ಮೇಲೆ ಹೂಡಿಕೆ ಮಾಡಿದ್ದಾರೆ ಎಂದು ಇಂಡಿಯಾ.ಕಾಮ್ ವರದಿ ಮಾಡಿದೆ. ಹಾಗೇ ಅವರ ಲೋನಾವಾಲ ಫಾರ್ಮ್ಹೌಸ್ ಬಳಿ 12 ಎಕರೆ ಜಮೀನು ಖರೀದಿ ಮಾಡಿ, ರೆಸ್ಟೋರೆಂಟ್ ಕಂಪನಿಯೊಂದರ ಒಡಂಬಡಿಕೆಯೊಂದಿಗೆ 30 ಕಾಟೇಜ್ಗಳನ್ನು ನಿರ್ಮಾಣ ಮಾಡಿದ್ದಾರೆಂದು ಎಕಾಮಿಕ್ ಟೈಮ್ಸ್ ವರದಿ ಮಾಡಿದೆ. ಇವುಗಳೊಂದಿಗೆ 'ಗರಂ ಧರಂ ಡಾಬಾ' ಪುಡ್ ಬ್ಯುಸಿನೆಸ್ ಇದೆ. ತನಗೆ ಸಿಕ್ಕಿರುವ ಬಿರುದು 'ಹಿ-ಮ್ಯಾನ್' ಹೆಸರಲ್ಲಿ ಹೋಟೆಲ್ ಆರಂಭಿಸಿ, ಮನೆಯಿಲ್ಲದವರ ಹಸಿವು ನೀಗಿಸುತ್ತಿದ್ದಾರೆ.


Click it and Unblock the Notifications











