ಮಹಿಳೆಯ ಜೊತೆ ರಾತ್ರಿಯಿಡೀ ಕುಡಿದು ಬೆಳಗ್ಗೆ ಮಾರುಕಟ್ಟೆಗೆ ಕಾರು ನುಗ್ಗಿಸಿದ ನಿರ್ದೇಶಕ, ಓರ್ವ ವ್ಯಕ್ತಿ ಸಾವು.
ವಾಹನ ಚಾಲನೆ ಸೂಕ್ಷ್ಮ ಜವಾಬ್ದಾರಿ. ಈ ಸಮಯದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಚೂರು ಯಾಮಾರಿದರೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ. ನೀವು ಅಥವಾ ನಿಮ್ಮ ಎದುರು ಇರುವವರಲ್ಲಿ ಯಾರೇ ತಪ್ಪು ಮಾಡಿದರೂ ಕೂಡ ಸಂಕಷ್ಟ ತಪ್ಪಿದ್ದಲ್ಲ. ಆದರೂ ಕೂಡ ಕೆಲವರು ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾರೆ. ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದರ ಜೊತೆಯಲ್ಲಿ ಬೇರೆಯವರ ಸಾವು ನೋವಿಗೂ ಕೂಡ ಕಾರಣವಾಗುತ್ತಾರೆ.
ಇನ್ನೂ ಕೆಲವರು ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ ಅಮಾಯಕರ ಪ್ರಾಣವನ್ನು ಬಲಿ ಪಡೆಯುತ್ತಾರೆ. ಇದಕ್ಕೆ ಸಿದ್ದಾಂತ್ ದಾಸ್ ಸದ್ಯದ ಉದಾಹರಣೆ. ಹೌದು, ಕಿರುತೆರೆ ಮತ್ತು ಸಿನಿಮಾ ನಿರ್ದೇಶಕ ಸಿದ್ಧಾಂತ್ ದಾಸ್ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಜನಸಂದಣಿಯಿಂದ ತುಂಬಿರುವ ಠಾಕೂರ್ ಪುಕರ್ ಪ್ರದೇಶದಲ್ಲಿ ತಮ್ಮ ಕಾರನ್ನು ಚಲಾಯಿಸಿದ್ದಾರೆ. ದಿನಸಿ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದವರ ಮೇಲೆ ಅಲ್ಲಿನ ವ್ಯಾಪಾರಿಗಳು ಮತ್ತು ಪಾದಚಾರಿಗಳ ಮೇಲೆ ಕಾರು ಹತ್ತಿಸಿದ್ದಾರೆ.

ಈ ಅಪಘಾತದಲ್ಲಿ 63 ವರ್ಷದ ತರಕಾರಿ ಮಾರುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬ 68 ವರ್ಷದ ಜಯದೇಬ್ ಮಜುಂದಾರ್ ಎಂಬ ವ್ಯಕ್ತಿ ಜೀವನ್ಮರಣದ ಹೋರಾಟವನ್ನು ನಡೆಸುತ್ತಿದ್ದಾರೆ. ಇನ್ನು 07 ಜನರಿಗೆ ಈ ಅಪಘಾತದಲ್ಲಿ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಇನ್ನು ಇಂಡಿಯಾ ಟುಡೇ ವರದಿಯ ಪ್ರಕಾರ ಸಿದ್ಧಾಂತ್ ದಾಸ್ ತಮ್ಮ ಇತ್ತೀಚಿಗೆ ಪ್ರಸಾರವಾದ ಕಾರ್ಯಕ್ರಮಕ್ಕೆ ಅಪಾರವಾದ ಯಶಸ್ಸು ಸಿಕ್ಕ ಹಿನ್ನೆಲೆ ಕೋಲ್ಕತ್ತಾದ ಸೌತ್ ಸಿಟಿ ಮಾಲ್ನಲ್ಲಿನ ಪಬ್ನಲ್ಲಿ ಪಾರ್ಟಿಯೊಂದನ್ನು ಹಮ್ಮಿಕೊಂಡಿದ್ದರು. ಈ ಪಾರ್ಟಿಗೆ ಇವರ ಸ್ನೇಹಿತರು ಆಪ್ತರು ಬಂದಿದ್ದರು. ಭಾಗವಹಿಸಿದ್ದ ಎಲ್ಲರು ನಡುರಾತ್ರಿ 2 ಗಂಟೆಯವರೆಗೆ ಕುಡಿದು, ಕುಣಿದು ಕುಪ್ಪಳಿಸಿದ್ದರು. ಆ ನಂತರ ತಮ್ಮ ತಮ್ಮ ಮನೆಗೆ ಎಲ್ಲರು ತೆರಳಿದ್ದರು.
ಆದರೆ ಸಿದ್ಧಾಂತ್ ದಾಸ್ ಮತ್ತು ಬಂಗಾಳಿ ಚಾನೆಲ್ ಒಂದರ ಕಾರ್ಯ ನಿರ್ವಾಹಕ ನಿರ್ಮಾಪಕಿ ಶ್ರಿಯಾ ಬಸು ತಮ್ಮ ಮೋಜು ಮಸ್ತಿಯನ್ನು ಮುಂದುವರೆಸಿದ್ದರು. ಕಾರಿನಲ್ಲಿಯೇ ಎಣ್ಣೆ ಹೊಡೆಯುತ್ತಾ ಕೋಲ್ಕತ್ತಾವನ್ನು ಸುತ್ತಾಡಲು ಶುರು ಮಾಡಿದ್ದರು. ಬೆಳಗ್ಗೆಯಾದರೂ ಕೂಡ ಇಬ್ಬರ ಈ ಪಾರ್ಟಿ ಮುಗಿದಿರಲಿಲ್ಲ.
ಹೀಗೆ ಮದ್ಯದ ಅಮಲಿನಲ್ಲಿ ಸುತ್ತಾಡುತ್ತಿದ್ದ ಸಿದ್ಧಾಂತ್ ದಾಸ್ ಭಾನುವಾರ ಬೆಳ್ಳಗ್ಗೆ ಠಾಕೂರ್ ಪುಕುರ್ ಬಾಜರ್ ಬಳಿಯ ಡೈಮಂಡ್ ಹಾರ್ಬರ್ ರಸ್ತೆಗೆ ಬಂದಿದ್ದಾರೆ. ಅಲ್ಲಿದ್ದ ವಾಹನಗಳಿಗೆ ಡಿಕ್ಕಿಯನ್ನು ಹೊಡೆದು ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದಾರೆ. ಇನ್ನು ಅಪಘಾತ ನಡೆದ ನಂತರ ಅಲ್ಲಿದ್ದ ಸ್ಥಳೀಯರು ಸಿದ್ಧಾಂತ್ ದಾಸ್ ಅವರನ್ನು ಥಳಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಬಂದ ಪೊಲೀಸರು ಸಿದ್ಧಾಂತ್ ದಾಸ್ ಜೊತೆ ಶ್ರಿಯಾ ಬಸು ಅವರನ್ನು ರಕ್ಷಿಸಿ ಅವರ ಮನೆಗೆ ಕಳುಹಿಸಿದ್ದಾರೆ.
ಇನ್ನು ಅಪಘಾತ ನಡೆದಾಗ ಹಿಂಬದಿ ಸೀಟಿನಲ್ಲಿ ಇನ್ನೊಬ್ಬ ಯುವತಿ ಇದ್ದಳು. ಅಪಘಾತ ನಡೆದ ನಂತರ ಆ ಯುವತಿ ಅಲ್ಲಿಂದ ಜೀವ ಉಳಿಸಿಕೊಳ್ಳಲು ಹೇಗೋ ತಪ್ಪಿಸಿಕೊಂಡು ಹೋಗಿದ್ಧಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಸದ್ಯ ಗಾಯಾಳುಗಳನ್ನು ಕಸ್ತೂರಿ ನರ್ಸಿಂಗ್ ಹೋಂ ಮತ್ತು ಸಿಎಂಆರ್ಐ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗಿದೆ. ಅಪಘಾತ ನಡೆದ ಸಮಯದಲ್ಲಿ ಸಿದ್ಧಾಂತ್ ದಾಸ್ ಮದ್ಯದ ಅಮಲಿನಲ್ಲಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ಹೇಳಿದ್ದು ಕಾರಿನಲ್ಲಿ ನಾಲ್ಕು ಎಣ್ಣೆಯ ಬಾಟಲಿಗಳು ಪತ್ತೆಯಾಗಿವೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಕಾರು ಮತ್ತು ಸಿದ್ಧಾಂತ್ ದಾಸ್ ಅವರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.


Click it and Unblock the Notifications











