ಕೊರನಾ ವೈರಸ್ ವಿರುದ್ಧದ ಹೋರಾಟ: ದೇಣಿಗೆ ನೀಡಿದ ನಟ ಅಮೀರ್ ಖಾನ್
ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಉದಾರ ದೇಣಿಗೆಗಳನ್ನು ನೀಡುತ್ತಿದ್ದಾರೆ. ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪ್ರಧಾನ ಮಂತ್ರಿಗಳ ಪರಿಹಾರ ನಿಧಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.
Recommended Video
ಕೊರೊನಾ ವೈರಸ್ ಹಾವಳಿಯಿಂದ ತತ್ತರಿಸಿರುವ ದೇಶದ ಜನರಿಗೆ ಸಹಾಯ ಮಾಡಲು ಬಾಲಿವುಡ್ನ ಅನೇಕ ಕಲಾವಿದರು ನೆರವು ಘೋಷಿಸಿದ್ದಾರೆ. ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಯಾವುದೇ ನೆರವು ನೀಡಿಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಶಾರುಖ್, ತಮ್ಮ ವಿವಿಧ ಸಂಸ್ಥೆ, ಫೌಂಡೇಷನ್ಗಳ ಮೂಲಕ ಸಾಲು ಸಾಲು ಸಹಾಯಗಳನ್ನು ಮಾಡುತ್ತಿರುವ ವಿವರ ನೀಡಿದ್ದರು. ಈಗ ಅಮೀರ್ ಖಾನ್ ಕೂಡ ಸಹಾಯ ಹಸ್ತ ಚಾಚಿದ್ದಾರೆ.

ಸಿನಿಮಾ ಕಾರ್ಮಿಕರಿಗೂ ನೆರವು
ಅಮೀರ್ ಖಾನ್ ತಮ್ಮ ಮುಂದಿನ ಸಿನಿಮಾ 'ಲಾಲ್ ಸಿಂಗ್ ಛಡ್ಡಾ'ದಲ್ಲಿ ಕೆಲಸ ಮಾಡಲು ನಿಯೋಜನೆಗೊಂಡಿರುವ ಎಲ್ಲ ದಿನಗೂಲಿ ಕಾರ್ಮಿಕರಿಗೂ ನೆರವು ನೀಡಲು ಮುಂದಾಗಿದ್ದಾರೆ. ಆದರೆ ಅವರು ಎಷ್ಟು ಮೊತ್ತದ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ ಎಂಬುದು ಬಹಿರಂಗವಾಗಿಲ್ಲ.
ಅಮೀರ್ ಸಹಾಯ- ತರಣ್ ಟ್ವೀಟ್
ಅಮೀರ್ ಖಾನ್ ಪಿಎಂ ಕೇರ್, ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಜತೆಗೆ ತಮ್ಮ ಮುಂದಿನ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ದಿನಗೂಲಿ ಸಿನಿಮಾ ಕಾರ್ಮಿಕರಿಗೆ ಹೆಚ್ಚುವರಿ ಸಹಾಯ ಮಾಡಲಿದ್ದಾರೆ ಎಂದು ಚಿತ್ರ ವಿಮರ್ಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

ಹಣ ವರ್ಗಾವಣೆ ಆರಂಭಿಸಿದ ಸಲ್ಲು
ಸಿನಿಮಾ ಚಿತ್ರೀಕರಣಗಳು ನಿಂತು ಹೋಗಿರುವುದರಿಂದ ಸಂಕಷ್ಟದಲ್ಲಿ ಸಿಲುಕಿರುವ ಹಿಂದಿ ಚಿತ್ರರಂಗದ 25,000 ದಿನಗೂಲಿ ಕಾರ್ಮಿಕರಿಗೆ ಸಹಾಯ ಮಾಡುವುದಾಗಿ ಘೋಷಿಸಿದ್ದ ನಟ ಸಲ್ಮಾನ್ ಖಾನ್, ಅವರ ಖಾತೆಗಳಿಗೆ ಆರ್ಥಿಕ ನೆರವನ್ನು ವರ್ಗಾಯಿಸುವ ಕಾರ್ಯ ಆರಂಭಿಸಿದ್ದಾರೆ.

16,000 ಕೆಲಸಗಾರರ ವಿವರ ರವಾನೆ
'ಸಲ್ಮಾನ್ ಖಾನ್ ಅವರು 25,000 ಕಾರ್ಮಿಕರ ಬ್ಯಾಂಕ್ ಖಾತೆ ವಿವರಗಳನ್ನು ನೀಡುವಂತೆ ಕೇಳಿದ್ದರು. ನಮಗೆ ಸುಮಾರು 19,000 ಕಾರ್ಮಿಕರ ವಿವರ ಲಭ್ಯವಾಗಿವೆ. ಅವರಲ್ಲಿ ಈಗಾಗಲೇ 3,000 ಕಾರ್ಮಿಕರಿಗೆ ಬೇರೊಂದು ಫಿಲಂ ಸ್ಟುಡಿಯೋದಿಂದ ತಲಾ 5,000 ರೂ ಸಿಕ್ಕಿದೆ. ಹೀಗಾಗಿ ಉಳಿದ 16,000 ಕೆಲಸಗಾರರ ವಿವರಗಳನ್ನು ಸಲ್ಮಾನ್ ಖಾನ್ ಅವರಿಗೆ ಕಳುಹಿಸಿದ್ದೇವೆ. ಅವರು ಹಣ ವರ್ಗಾವಣೆ ಆರಂಭಿಸಿದ್ದಾರೆ. ಶೀಘ್ರದಲ್ಲಿಯೇ ಪ್ರತಿಯೊಬ್ಬರಿಗೂ ಹಣ ಸಿಗಲಿದೆ' ಎಂದು ಸಿನಿ ಕಾರ್ಮಿಕರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಶೋಕ್ ದುಬೆ ತಿಳಿಸಿದ್ದಾರೆ.


Click it and Unblock the Notifications










