ಸುಪ್ರೀಂ ಕೋರ್ಟ್ನಲ್ಲಿ 'ಲಾಪತಾ ಲೇಡೀಸ್': ಭಾರತದ ಮುಖ್ಯ ನ್ಯಾಯಮೂರ್ತಿ ಆಮಿರ್ ಖಾನ್ಗೆ ಹೇಳಿದ್ದೇನು?
ಈ ವರ್ಷ ತೆರೆಕಂಡಿರುವ ಬಾಲಿವುಡ್ ಸಿನಿಮಾಗಳಲ್ಲಿ ಹೆಚ್ಚು ಚರ್ಚೆಗೆ ಒಳಪಟ್ಟಿದ್ದು 'ಲಾಪತಾ ಲೇಡೀಸ್'. ಬಹಳ ದಿನಗಳ ಬಳಿಕ ಆಮಿರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನ ಮಾಡಿದ ಸಿನಿಮಾವಿದು. ಸ್ವತ: ಆಮಿರ್ ಖಾನ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಸ್ಮಾಲ್ ಬಜೆಟ್ ಸಿನಿಮಾಗೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಹಾಗೇ ಬಾಕ್ಸಾಫೀಸ್ನಲ್ಲೂ ಉತ್ತಮ ಗಳಿಕೆಯನ್ನೇ ಕಂಡಿತ್ತು.
ಪ್ರಮುಖ ಪಾತ್ರದಲ್ಲಿ ಬಹುತೇಖ ಹೊಸ ಮುಖಗಳನ್ನು ಇಟ್ಟುಕೊಂಡು ತೆಗೆದ ಈ ಸಿನಿಮಾಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಅದೇ ಸಿನಿಮಾವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರದರ್ಶನ ಮಾಡಲಾಗಿದೆ. ಸುಪ್ರೀಂ ಕೋರ್ಟ್ನ ನ್ಯಾಯಾಧೀಶರು ಹಾಗೂ ಅವರ ಕುಟುಂಬ, ರಿಜಿಸ್ಟರಿ ಅಧಿಕಾರಿಗಳಿಗಾಗಿ ಈ ವಿಶೇಷ ಪ್ರದರ್ಶನವನ್ನು ಮಾಡಲಾಗಿತ್ತು. ಅದರಂತೆ ಆಮಿರ್ ಖಾನ್ ಹಾಗೂ ಕಿರಣ್ ರಾವ್ ಕೂಡ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.

'ಲಾಪತಾ ಲೇಡೀಸ್' ಒಂದು ಸಾಮಾಜಿಕ ಕಳಕಳಿಯುಳ್ಳ ಸಿನಿಮಾ. ಇದರಲ್ಲಿ ನಿರ್ದೇಶಕಿ ಕಿರಣ್ ರಾವ್ ಲಿಂಗ ಸಮಾನತೆಯ ಬಗ್ಗೆ ಸಂದೇಶವನ್ನು ವಿಡಂಬನಾತ್ಮಕವಾಗಿ ನೀಡಿದ್ದಾರೆ. ಭಾರತದ ಹಲವು ಭಾಗಗಳಲ್ಲಿ ಇನ್ನೂ ಲಿಂಗ ಅಸಮಾನತೆಯಿದೆ. ಅದನ್ನು ಪ್ರೇಕ್ಷಕರಿಗೆ ತಟ್ಟುವಂತೆ ಈ ಸಿನಿಮಾವನ್ನು ಮಾಡಲಾಗಿದೆ. ಈ ಕಾರಣಕ್ಕೆ ದೇಶಾದ್ಯಂತ ಚರ್ಚೆಯಾಗಿತ್ತು. ಪ್ರಮುಖ ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.
ಭಾರತದ ಸುಪ್ರೀಂ ಕೋರ್ಟ್ಗೆ 75ನೇ ವಾರ್ಷಿಕೋತ್ಸವ. ಈ ಸಂಭ್ರಮದ ಅಂಗವಾಗಿ ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದರ ಒಂದು ಭಾಗವಾಗಿ 'ಲಾಪತಾ ಲೇಡೀಸ್' ಸಿನಿಮಾದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಸಿನಿಮಾ ನಿರ್ಮಾಪಕ ಆಮಿರ್ ಖಾನ್, ನಿರ್ದೇಶಕಿ ಕಿರಣ್ ರಾವ್ ಅವರಿಗೂ ಆಹ್ವಾನ ನೀಡಲಾಗಿತ್ತು. ಈ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನಟ, ನಿರ್ಮಾಪಕರನ್ನು ವಿಶೇಷವಾಗಿ ಆಹ್ವಾನ ಮಾಡಿಕೊಂಡಿದ್ದಾರೆ.
ಸುಪ್ರಿಂ ಕೋರ್ಟ್ಗೆ ಆಮಿರ್ ಖಾನ್ ಬರುತ್ತಿದ್ದಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ವಿಶೇಷ ಸ್ವಾಗತ ಕೋರಿದ್ದರು. "ಕೋರ್ಟ್ನಲ್ಲಿ ನನಗೆ ನೂಕುನುಗ್ಗುಲು ಆಗುವುದು ಇಷ್ಟವಿಲ್ಲ. ಆದರೆ, ಇವತ್ತು ಇಲ್ಲಿ ಆಮಿರ್ ಖಾನ್ ಇದ್ದಾರೆ" ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದರು. ಕೋರ್ಟ್ ಒಳಗೆ ಆಮಿರ್ ಖಾನ್ ಸುಮಾರು 30 ನಿಮಿಷಗಳ ಕಾಲ ಇದ್ದು, ಕಾರ್ಯ ಕಲಾಪವನ್ನು ವೀಕ್ಷಿಸಿದರು. ಜೊತೆ ಕೋರ್ಟ್ ಒಳಗಿರುವ ಫೋಟೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇದೇ ಸಂದರ್ಭದಲ್ಲಿ ನಿರ್ದೇಶಕಿ ಕಿರಣ್ ರಾವ್ ಕೂಡ ಅತಿಥಿಯಾಗಿ ಭಾಗವಹಿಸಿ, ಈ ವಿಶೇಷ ಪ್ರದರ್ಶನಕ್ಕೆ ತಮ್ಮ ಸಿನಿಮಾ ಆಯ್ಕೆಯಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. "ಸುಪ್ರೀಂ ಕೋರ್ಟ್ನಲ್ಲಿ ನಮ್ಮ ಸಿನಿಮಾ ಲಾಪತಾ ಲೇಡೀಸ್ ವಿಶೇಷ ಪ್ರದರ್ಶನಕ್ಕೆ ಆಯ್ಕೆಯಾಗಿರುವುದು ಹೆಮ್ಮೆ ಎನಿಸುತ್ತಿದೆ. ಭಾರತದ ಮುಖ್ಯ ನ್ಯಾಯಾಧೀಶರಾದ ಡಿ.ವೈ. ಚಂದ್ರಚೂಡ್ ಅವರಿಗೆ ಆಬಾರಿಯಾಗಿದ್ದೇನೆ" ಎಂದು ನಿರ್ದೇಶಕಿ ಕಿರಣ್ ರಾವ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ನ ಸಿ ಬ್ಲಾಕ್ ಆವರಣದಲ್ಲಿ ಇಂದು (ಆಗಸ್ಟ್ 9) ಸಂಜೆ 4.15 ರಿಂದ 6.20ರವರೆಗೆ ಸಿನಿಮಾ ಪ್ರದರ್ಶನ ಮಾಡಲಾಗಿದೆ. ಈ ಸಿನಿಮಾದಲ್ಲಿ ರವಿ ಕಿಶನ್, ನಿತಾಂಷಿ ಘೋಯಲ್, ಸ್ಪರ್ಶ್ ಶ್ರೀವಾಸ್ತವ್, ಪ್ರತಿಭಾ ರಂಟಾ, ಛಾಯಾ ಕದಂ ಮುಂತಾದವರು ನಟಿಸಿದ್ದಾರೆ.


Click it and Unblock the Notifications











