ಬಾಲಿವುಡ್ ನಟ ಗೋವಿಂದ ವಿಚ್ಛೇದನಕ್ಕೆ ಬ್ರೇಕ್ ಹಾಕಿದ ಗಣೇಶ; ಜಂಟಿಯಾಗಿ ಗಣಪತಿ ಬಪ್ಪ ಎಂದ ಜೋಡಿ
ಇಂದು (ಆಗಸ್ಟ್ 27) ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದೆ. ಮನೆ ಮನೆಯಲ್ಲೂ ಹಿಂದೂಗಳು ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಅದೇನೆ ಅಡೆತಡೆಗಳು ಇದ್ದರೂ ಗಣೇಶ ಬಂದು ವಿಘ್ನವನ್ನು ನಿವಾರಿಸುತ್ತಾನೆ ಅನ್ನೋ ನಂಬಿಕೆಯಿದೆ. ಹೀಗಾಗಿ ಹಿಂದೂಗಳು ಗಣೇಶ ಹಬ್ಬವನ್ನು ವಿಶೇಷವಾಗಿ ಸಂಭ್ರಮದಿಂದ ಆಚರಿಸುತ್ತಾರೆ. ಈ ಬಾರಿ ಗಣೇಶ ಬಹಳಷ್ಟು ಮಂದಿಯ ವಿಘ್ನಗಳನ್ನು ನಿವಾರಿಸಿದ್ದಾನೆ. ಅದರಲ್ಲಿ ಬಾಲಿವುಡ್ ನಟ ಗೋವಿಂದ ಅವರ ಸಂಕಷ್ಟಗಳನ್ನು ನಿವಾರಿಸಿದ್ದಾನೆ.
ಈ ಬಾರಿಯ ಗಣೇಶ ಹಬ್ಬ ಬಾಲಿವುಡ್ ನಟ ಗೋವಿಂದಾ ಮತ್ತು ಅವರ ಪತ್ನಿ ಸುನಿತಾ ಅಹುಜಾ ಅವರಿಗೆ ಸಕಾರಾತ್ಮಕ ಬದಲಾವಣೆ ತಂದಿದೆ. ಕೆಲವು ದಿನಗಳಿಂದ ಗೋವಿಂದ ಹಾಗೂ ಅವರ ಪತ್ನಿ ಸುನಿತಾ ಅಹುಜಾ ನಡುವೆ ವೈಮನಸ್ಸು ಶುರುವಾಗಿದ್ದು, ಇಬ್ಬರೂ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಗೋವಿಂದ ಪತ್ನಿ ಸುನಿತಾ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು ಎಂಬ ವದಂತಿಗಳು ಹರಡಿದ್ದವು. ಆದ್ರೀಗ ಗಣೇಶ ಹಬ್ಬದಂದು ಈ ದಂಪತಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಆ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಬಾಲಿವುಡ್ ನಟ ಗೋವಿಂದ ಹಾಗೂ ಸುನಿತಾ ಅಹುಜಾ ಸಂಸಾರದಲ್ಲಿ ಬಿರುಕು ಬಿಟ್ಟಿದೆ ಎಂಬ ವದಂತಿ ಹರಿದಾಡಿತ್ತು. ಕೌಟುಂಬಿಕ ನ್ಯಾಯಾಲಯಲ್ಲೂ ಗೋವಿಂದ ಪತ್ನಿ ಸುನಿತಾ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆಂದು ವರದಿಗಳಾಗಿದ್ದವು. ಇದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಗೋವಿಂದ ಆತ್ಮೀಯರು ಡಿವೋರ್ಸ್ ಸುದ್ದಿ ಕೇವಲ ವದಂತಿಗಳು ಎಂದು ಹೇಳಿದ್ದರು. ಅಲ್ಲಿಂದ ಗಣೇಶ ಹಬ್ಬಕ್ಕೆ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಗೋವಿಂದ ಹಾಗೂ ಸುನಿತಾ ಅಹುಜಾ ಇಬ್ಬರೂ ತಮ್ಮ ಮನೆಯಲ್ಲಿ ಗಣೇಶನಿಗೆ ಪೂಜೆ ನೆರವೇರಿಸಿದ್ದಾರೆ. ಆ ಬಳಿಕ ಇಬ್ಬರೂ ಜೋಡಿಯಾಗಿ ಮನೆಯಿಂದ ಹೊರ ಬಂದು ಪಾಪರಾಜಿಗಳಿಗೆ ಸಿಹಿ ಮತ್ತು ಪ್ರಸಾದವನ್ನು ಹಂಚಿದ್ದಾರೆ. ಇಬ್ಬರೂ ಒಂದೇ ಬಣ್ಣದ ಉಡುಪುಗಳನ್ನು ಧರಿಸಿ ಕ್ಯಾಮರಾಗಳಿಗೆ ಪೋಸ್ ಕೊಟ್ಟಿದ್ದಾರೆ. ಈ ಮೂಲಕ ಗೋವಿಂದ ಹಾಗೂ ಸುನಿತಾ ಇಬ್ಬರೂ ತಮ್ಮ ನಡುವಿನ ಭಿನ್ನಾಭಿಪ್ರಾಯಗಳು ಬಗೆಹರಿದಿರುವ ಬಗ್ಗೆ ಪರೋಕ್ಷವಾಗಿ ಸಂದೇಶವನ್ನು ಕೊಟ್ಟಿದ್ದಾರೆ.
ಮುಂಬೈನಲ್ಲಿರುವ ತಮ್ಮ ನಿವಾಸಕ್ಕೆ ಗಣೇಶನನ್ನು ಬರ ಮಾಡಿಕೊಳ್ಳಲು ಮುಂಭಾಗಕ್ಕೆ ಜೋಡಿಯಾಗಿ ಬಂದಿದ್ದರು. ಈ ವೇಳೆ ನಟ ಗೋವಿಂದ ಮರೂನ್ ಕುರ್ತಾ ಧರಿಸಿದ್ದರೆ, ಸುನಿತಾ ಅದೇ ಬಣ್ಣದ ಸೀರೆಯಲ್ಲಿ ಮಹಾರಾಷ್ಟ್ರದ ಮಹಿಳೆಯಂತೆ ಕಂಗೊಳಿಸುತ್ತಿದ್ದರು. ಈ ವೇಳೆ ಮನೆಯ ಮುಂದೆ ನೆರೆದಿದ್ದ ಕ್ಯಾಮರಾಮ್ಯಾನ್ಗಳಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಸುನಿತಾ ಅಹುಜಾ ಇತ್ತೀಚೆಗೆ ದೇವಾಲಯಕ್ಕೆ ಭೇಟಿ ನೀಡಿದಾಗ, ಅವರು ಪುರೋಹಿತರೊಂದಿಗೆ ಮಾತನಾಡುತ್ತಾ, ಚಿಕ್ಕಂದಿನಿಂದಲೂ ಮಹಾಲಕ್ಷ್ಮಿ ಮಂದಿರಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದರು. ಬಳಿಕ ತಮ್ಮ ಕಷ್ಟಗಳನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದರು."ನಾನು ಗೋವಿಂದ ಅವರನ್ನು ಭೇಟಿಯಾದಾಗ ಅವರನ್ನು ಮದುವೆಯಾಗಿ ಉತ್ತಮ ಜೀವನ ನಡೆಸಬೇಕೆಂದು ದೇವಿಗೆ ಪ್ರಾರ್ಥಿಸಿದೆ. ದೇವಿಯು ನನ್ನ ಎಲ್ಲಾ ಆಸೆಗಳನ್ನು ಈಡೇರಿಸಿದಳು. ನನಗೆ ಇಬ್ಬರು ಮಕ್ಕಳನ್ನೂ ನೀಡಿದ್ದಾಳೆ. ಆದರೆ ಜೀವನದಲ್ಲಿ ಎಲ್ಲವೂ ಸುಲಭವಲ್ಲ. ಯಾವಾಗಲೂ ಏರಿಳಿತಗಳಿರುತ್ತವೆ. ಹೀಗಿದ್ದರೂ ನಾನು ದೇವಿಯ ಮೇಲೆ ಅಷ್ಟೊಂದು ನಂಬಿಕೆ ಇಟ್ಟಿದ್ದೇನೆ. ನನ್ನ ಮನೆ ಒಡೆಯಲು ಪ್ರಯತ್ನಿಸುವವರು ಯಾರೇ ಇದ್ದರೂ ಮಾ ಕಾಳಿ ಇದ್ದಾಳೆ ಎಂದು ನನಗೆ ಗೊತ್ತು" ಎಂದು ಸುನಿತಾ ಹೇಳಿಕೊಂಡು ಭಾವುಕರಾಗಿದ್ದರು.
ಗೋವಿಂದ ಹಾಗೂ ಸುನಿತಾ 1987ರ, ಮಾರ್ಚ್ 11 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಟೀನಾ ಅಹುಜಾ ಹಾಗೂ ಮಗ ಯಶ್ವರ್ಧನ್. ಅನ್ಯೋನ್ಯವಾಗಿದ್ದ ಸಂಸಾರದಲ್ಲಿ ಬಿರುಕು ಬಿಟ್ಟಿತ್ತು. ಇದಕ್ಕೆ 30 ವರ್ಷದ ಮರಾಠಿ ನಟಿಯೇ ಕಾರಣ ಎಂಬ ಸುದ್ದಿಗಳು ಕೂಡ ಹಬ್ಬಿದ್ದವು. ಈ ನಟಿಯ ಸಂಬಂಧ 37 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸುವುದಕ್ಕೆ ಗೋವಿಂದ ಮುಂದಾಗಿದ್ದರು ಎನ್ನಲಾಗಿತ್ತು.


Click it and Unblock the Notifications











