ಬಂಡೀಪುರದಲ್ಲಿ ಆನೆ ಮೇಲೆ ಗುಂಡು: ಕೆರಳಿದ ಪ್ರಾಣಿ ಪ್ರೇಮಿ ರಣದೀಪ್ ಹೂಡಾ
ಬಂಡೀಪುರದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೇ ಆನೆಯ ಮೇಲೆ ಗುಂಡು ಹಾರಿಸಿ ಅದನ್ನು ಬೆದರಿಸಿದ ಘಟನೆಯ ವಿಡಿಯೋ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಒಳಗಾಗಿದೆ. ವಿನಾಕಾರಣ ಆನೆಯ ಮೇಲೆ ಗುಂಡು ಹಾರಿಸಿದ ಕೃತ್ಯವನ್ನು ಅನೇಕರು ಖಂಡಿಸಿದ್ದಾರೆ. ವನ್ಯಪ್ರಾಣಿಗಳ ವಿಚಾರದಲ್ಲಿ ಸದಾ ಮಿಡಿಯುವ ಬಾಲಿವುಡ್ ನಟ ರಣದೀಪ್ ಹೂಡಾ, ಈ ಘಟನೆಗೆ ಕಳವಳ ವ್ಯಕ್ತಪಡಿಸಿದ್ದಾರೆ.
Recommended Video
ಗುಂಡ್ಲುಪೇಟೆಯ ಬಂಡೀಪುರ ಅರಣ್ಯ ಭಾಗದಲ್ಲಿ ಗಸ್ತು ತೆರಳಿದ್ದ ವೇಳೆ ಅರಣ್ಯ ಇಲಾಖೆಯ ಗುತ್ತಿಗೆ ನೌಕರ ರಹೀಂ ಎಂಬಾತ ರಸ್ತೆ ಬದಿ ನಿಂತಿದ್ದ ಆನೆಯ ಮೇಲೆ ಗುಂಡು ಹಾರಿಸಿದ್ದರು. ಇದನ್ನು ಮತ್ತೊಬ್ಬ ಸಿಬ್ಬಂದಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಮಾರ್ಚ್ 7ರಂದು ನಡೆದ ಘಟನೆ ನಾಲ್ಕು ದಿನಗಳ ಬಳಿಕ ವೈರಲ್ ಆಗಿತ್ತು. ಇದು ತೀವ್ರ ಆಕ್ರೋಶಕ್ಕೆ ಗುರಿಯಾದ ನಂತರ ಗುಂಡು ಹಾರಿಸಿದ ಸಿಬ್ಬಂದಿಯನ್ನು ವಜಾಗೊಳಿಸಲಾಗಿತ್ತು.
ಘಟನೆ ಬಗ್ಗೆ ಅಘಾತಗೊಂಡಿದ್ದ ಬಾಲಿವುಡ್ ನಟ ರಣದೀಪ್ ಹೂಡಾ ಸರಣಿ ಟ್ವೀಟ್ಗಳನ್ನು ಮಾಡಿ ತಮ್ಮ ಬೇಸರ ಹಂಚಿಕೊಂಡಿದ್ದರು.

ಹೀಗೆ ಮಾಡಲು ಹೇಗೆ ಸಾಧ್ಯ?
ಇಂತಹ ಘಟನೆ ನಡೆಯಲು ಹೇಗೆ ತಾನೆ ಸಾಧ್ಯ? ಇದನ್ನು ನಿಜಕ್ಕೂ ಯಾರೋ ತಮಾಷೆಗಾಗಿ ಮಾಡಿದ್ದಾರಾ? ಕರ್ನಾಟಕ ಅರಣ್ಯ ಇಲಾಖೆಯವರು ಇದರ ಬಗ್ಗೆ ದಯವಿಟ್ಟು ಕೂಡಲೇ ಗಮನ ಹರಿಸಿ. ತಪ್ಪಿತಸ್ಥರನ್ನು ಕೂಡಲೇ ಹಿಡಿದು ಶಿಕ್ಷಿಸಬೇಕು ಎಂದು ಘಟನೆಯ ವಿಡಿಯೋದೊಂದಿಗೆ ರಣದೀಪ್ ಹೇಳಿದ್ದರು.
ಸಿಬ್ಬಂದಿ ವಜಾ, ವಿಚಾರಣೆ
ಈ ಘಟನೆ 2020ರ ಮಾರ್ಚ್ 7ರಂದು ನಡೆದಿದೆ. ಆನೆಯ ಮೇಲೆ ಗುಂಡು ಹಾರಿಸಿದ್ದಕ್ಕಾಗಿ ತಾತ್ಕಾಲಿಕ ಸಿಬ್ಬಂದಿ ರಹೀಂನನ್ನು ವಜಾಗೊಳಿಸಲಾಗಿದೆ. ಕರ್ನಾಟಕ ಅರಣ್ಯ ಇಲಾಖೆಯ ಕಾಯಂ ಉದ್ಯೋಗಿ ಉಮೇಶ್ ಎಂಬಾತನನ್ನೂ ತನಿಖೆಗೆ ಒಳಪಡಿಸಲಾಗಿದೆ ಎಂದು ರಣದೀಪ್ ಮಾಹಿತಿ ನೀಡಿದ್ದಾರೆ.

ಮೋಜಿಗಾಗಿ ಮಾಡಿದ್ದು ಸ್ಪಷ್ಟ
ಈ ಕ್ರಮವು ಅಪ್ರಬುದ್ಧತೆಯನ್ನು ತೋರಿಸುತ್ತದೆ. ಅವರು ಆನೆಯ ಕಡೆಗೆ ಗುಂಡು ಹಾರಿಸುವ ಅಗತ್ಯವೇ ಇರಲಿಲ್ಲ. ಎರಡನೆಯದಾಗಿ, ಗುಂಡು ಹಾರಿಸಿದ ಬಳಿಕ ಅವರು ಉದ್ರೇಕದಿಂದ ಚೀರಿದ್ದು ಅವರ ಕೃತ್ಯದ ಬಗ್ಗೆ ಸ್ಪಷ್ಟ ಪುರಾವೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಅವರಿಗೂ ಇದೇ ಶಿಕ್ಷೆ ನೀಡಿ...
ರಣದೀಪ್ ಅವರ ಟ್ವೀಟ್ ಕಂಡು ಅವರ ಅಭಿಮಾನಿಗಳು ಕೂಡ ಈ ಘಟನೆ ಬಗ್ಗೆ ಖೇದ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ನೋಡಲೂ ನೋವಾಗುತ್ತದೆ. ಇದೇ ರೀತಿ ಅವರನ್ನೂ ಗುಂಡಿಕ್ಕಬೇಕು ಎಂದು ನಟಿ ಗೀತಾ ಬಸ್ರಾ ಕೋಪ ವ್ಯಕ್ತಪಡಿಸಿದ್ದಾರೆ. ಅವರನ್ನು ಬರಿಗೈಯಲ್ಲಿ ಅದೇ ಆನೆಯ ಮುಂದೆ ಎಸೆಯಬೇಕು. ಅವರನ್ನು ಕೆಲಸದಿಂದ ವಜಾಗೊಳಿಸುವುದು ತೀರಾ ಸಣ್ಣ ಶಿಕ್ಷೆಯಾಗುತ್ತದೆ. ದೇಶದ ಎಲ್ಲ ವನ್ಯಜೀವಿ ಸಂರಕ್ಷಣಾ ಅರಣ್ಯಗಳಲ್ಲಿನ ಸಿಬ್ಬಂದಿಗೆ ಕಠಿಣ ಸಂದೇಶ ರವಾನೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications











