'ಅಂತಿಮ್' ಸಿನಿಮಾ ಪ್ರಚಾರಕ್ಕಾಗಿಯೇ ಸಬರಮತಿ ಆಶ್ರಮಕ್ಕೆ ಹೋದ್ರಾ ಸಲ್ಮಾನ್ ಖಾನ್?: ಹೇಗಿದೆ ಕಲೆಕ್ಷನ್?
ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಬಾಮೈದ ಆಯುಷ್ ಶರ್ಮಾ ನಟಿಸಿದ 'ಅಂತಿಮ್' ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ಸಲ್ಮಾನ್ ಖಾನ್ ನಿನ್ನೆ (ನವೆಂಬರ್ 30) ಅಹಮದಾಬಾದ್ಗೆ ತೆರಳಿದ್ದರು. ಸಿನಿಮಾ ಪ್ರಚಾರಕ್ಕೂ ಮುನ್ನ ಸಲ್ಮಾನ್ ಖಾನ್ ಹಾಗೂ 'ಅಂತಿಮ್. ಚಿತ್ರತಂಡ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ವಿಷಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ನಟ ಸಲ್ಮಾನ್ ಖಾನ್ ತಮ್ಮ 'ಅಂತಿಮ್' ಚಿತ್ರದ ಪ್ರಚಾರಕ್ಕೆ ಹೋದವರು ಸಬರಮತಿ ಆಶ್ರಮದಲ್ಲಿ 25 ನಿಮಿಷ ಕಾಲ ಕಳೆದಿದ್ದರು. ಚರಕದಿಂದ ನೂಲು ನೇಯಲು ಪ್ರಯತ್ನಿಸಿದ್ದರು. ಈ ಫೋಟೊಗಳು ಹರಿದಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಇದು ಕೇವಲ ಸಿನಿಮಾ ಗಿಮಿಕ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಭೇಟಿ ನೀಡಿದ ಬಗ್ಗೆ ಆಶ್ರಮದ ಮುಖ್ಯಸ್ಥರು ಸ್ಪಷನೆ ನೀಡಿದ್ದಾರೆ.

ಸಬರಮತಿ ಆಶ್ರಮದ ಭೇಟಿ ಪ್ರಚಾರದ ಭಾಗವಾಗಿರಲಿಲ್ಲ
ಸಲ್ಮಾನ್ ಖಾನ್ ಸಬರಮತಿ ಆಶ್ರಮದಲ್ಲಿ ಚರಕದ ಮೇಲೆ ಕೂತು ನೂಲು ನೇಯಲು ಯತ್ನಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲು ಶುರುವಾಗಿತ್ತು. ಆಗ ನೆಟ್ಟಿಗರು ಭಾಮೈದನ 'ಅಂತಿಮ್' ಸಿನಿಮಾದ ಪ್ರಚಾರಕ್ಕಾಗಿಯೇ ಸಬರಮತಿ ಆಶ್ರಮಕ್ಕೆ ಹೋಗಿರಬೇಕೆಂದು ಕಮೆಂಟ್ ಮಾಡುತ್ತಿದ್ದಾರೆ. ಆದರೆ, ಆಶ್ರಮದ ಮುಖ್ಯಸ್ಥರು ಸಲ್ಮಾನ್ ಆಶ್ರಮಕ್ಕೆ ಭೇಟಿ ನೀಡಿದ್ದರ ಬಗ್ಗೆ ಮಾಹಿತಿ ನೀಡಿದ್ದಾರೆ. " ಸಲ್ಮಾನ್ ಖಾನ್ ಆಶ್ರಮ ಭೇಟಿ ಅವರ ಸಿನಿಮಾ ಪ್ರಚಾರದ ಭಾಗವಾಗಿರಲಿಲ್ಲ. ಸಲ್ಮಾನ್ ಖಾನ್ ಅವರದ್ದು ಸಂಪೂರ್ಣವಾದ ವೈಯಕ್ತಿಕ ಭೇಟಿಯಾಗಿತ್ತು. ಈ ವೇಳೆ ಆಶ್ರಮದ ಎಲ್ಲಾ ಶಿಷ್ಟಾಚಾರ ಹಾಗೂ ನಿಯಮಗಳನ್ನು ಪಾಲಿಸಿದ್ದಾರೆ. ಆಶ್ರಮದ ಮಹತ್ವವನ್ನು ಅವರಿಗೆ ವಿವರಿಸಲಾಗಿದೆ. ಆಶ್ರಮದ ಒಳಗಿರುವ ಮಹಾತ್ಮ ಗಾಂಧೀಜಿ ಹಾಗೂ ಅವರ ಕೊಠಡಿಗೆ ಸಲ್ಮಾನ್ ಖಾನ್ ಭೇಟಿ ನೀಡಿದ್ದಾರೆ" ಎಂದು ಸಬರಮತಿ ಆಶ್ರಮ ಸಂರಕ್ಷಣೆ ಮತ್ತು ಸ್ಮಾರಕ ಟ್ರಸ್ಟ್ ನ ಮುಖ್ಯಸ್ಥರಲ್ಲೊಬ್ಬರಾದ ವಿರಾಟ್ ಕೊಠಾರಿ ತಿಳಿಸಿದ್ದಾರೆ.

ಆಶ್ರಮದಲ್ಲಿ ನೂಲು ತೆಗೆಯಲು ಪರದಾಡಿದ ಸಲ್ಮಾನ್
ಬಾಲಿವುಡ್ ನಟ ಸಲ್ಮಾನ್ ಖಾನ್ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದು ಇದೇ ಮೊದಲು ಎನ್ನಲಾಗಿದೆ. ಈ ವೇಳೆ ಸಲ್ಮಾನ್ ಖಾನ್ ಜೊತೆ 'ಅಂತಿಮ್' ಸಿನಿಮಾದ ನಿರ್ದೇಶಕ ಮಹೇಶ್ ಮಂಜ್ರೇಕರ್, ಸಲ್ಮಾನ್ ಬಾಡಿಗಾರ್ಡ್ ಸೇರಿದಂತೆ ಆಪ್ತರು ಜೊತೆಯಲ್ಲಿದ್ದರು. ಆಶ್ರಮದಲ್ಲಿ ಚರಕದಿಂದ ನೂಲು ತೆಗೆಯಲು ಸಲ್ಮಾನ್ ಖಾನ್ ಹೇಳಿಕೊಡಲಾಗಿತ್ತು. ಆದರೆ, ಸರಿಯಾಗಿ ನೂಲು ತೆಗೆಯಲು ಸಲ್ಮಾನ್ ಖಾನ್ ಪರದಾಡಿದ್ದರು. ಹೀಗಾಗಿ ಮತ್ತೆ ಬರುವುದಾಗಿ ಅಲ್ಲಿನ ಮಾರ್ಗದರ್ಶಕರಿಗೆ ಸಲ್ಮಾನ್ ಖಾನ್ ಹೇಳಿ ಹೊರಟಿದ್ದಾರೆ.

ಸಂದರ್ಶಕರ ಪುಸ್ತಕದಲ್ಲಿ ಸಲ್ಮಾನ್ ಬರೆದಿದ್ದೇನು?
ಸಲ್ಮಾನ್ ಖಾನ್ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಬಳಿಕ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಆಶ್ರಮದ ಬಗ್ಗೆ ತಮ್ಮ ಅನಿಸಿಕೆಯನ್ನು ಬರೆಯುವುದು ವಾಡಿಕೆ. ಹೀಗಾಗಿ ಸಲ್ಮಾನ್ ಈ ಪುಸ್ತಕದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆಂದು ವರದಿಯಾಗಿದೆ. "ಈ ಪವಿತ್ರ ಸ್ಥಳಕ್ಕೆ ಭೇಟಿ ಕೊಟ್ಟಿದ್ದು ನನ್ನ ಸೌಭಾಗ್ಯವಾಗಿದೆ. ಭವಿಷ್ಯದಲ್ಲಿ ಮತ್ತಷ್ಟು ಕಲಿಯಲು ಮತ್ತೊಮ್ಮೆ ಆಶ್ರಮಕ್ಕೆ ಭೇಟಿ ನೀಡುತ್ತೇನೆ ಎಂಬ ವಿಶ್ವಾಸದಲ್ಲಿದ್ದೇನೆ." ಎಂದು ಸಂದರ್ಶಕರ ಪುಸ್ತಕದಲ್ಲಿ ಸಲ್ಮಾನ್ ಖಾನ್ ಬರೆದಿದ್ದಾರೆ.

ಬಾಕ್ಸಾಫೀಸ್ನಲ್ಲಿ ಜಾದು ಮಾಡುತ್ತಿಲ್ಲ 'ಅಂತಿಮ್'
ಗ್ಯಾಂಗ್ಸ್ಟರ್ ಬೇಸ್ಟ್ ಸಿನಿಮಾ 'ಅಂತಿಮ್' ವಿಶ್ವದಾದ್ಯಂತ ರಿಲೀಸ್ ಆಗಿದೆ. 2018ರಲ್ಲಿ ಬಿಡುಗಡೆಯಾಗಿದ್ದ ಮರಾಠಿಯ 'ಮುಲ್ಶಿ ಪ್ಯಾಟರ್ನ್' ಸಿನಿಮಾದ ರೀಮೇಕ್ ಇದು. ಹಿಂದಿಯ ಅವತರಣಿಕೆಯನ್ನು ಮಹೇಶ್ ಮಂಜ್ರೇಕರ್ ನಿರ್ದೇಶಿಸಿದ್ದಾರೆ. ಸಲ್ಮಾನ್ ಖಾನ್ ಈ ಸಿನಿಮಾವನ್ನು ಭಾಮೈದ ಆಯುಷ್ ಶರ್ಮಾಗಾಗಿ ನಿರ್ಮಿಸಿದ್ದು, ಕನ್ನಡದ ರವಿ ಬಸ್ರೂರ್ ಸಂಗೀತ ನಿರ್ದೇಶನವಿದೆ. ಆದರೆ, ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಹೇಳಿಕೊಳ್ಳುವಂತಹ ಸದ್ದು ಮಾಡುತ್ತಿಲ್ಲ. ಮೂರು ದಿನಕ್ಕೆ 18 ಕೋಟಿ ಗಳಿಕೆ ಕಂಡು ನೀರಸ ಪ್ರದರ್ಶನ ಕಂಡಿದೆ. ಆದರೆ, ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಾಗುತ್ತಿದ್ದು, ಉತ್ತಮಗಳಿಕೆ ಕಾಣಬಹುದು ಎನ್ನುತ್ತಿದೆ ಬಾಲಿವುಡ್.


Click it and Unblock the Notifications











