Karan Johar: "ಅತ್ಯುತ್ತಮ ನಟಿ ಆಲಿಯಾ ಅಂದಾಗ ಅಸೂಯೆ ಹುಟ್ಟುತ್ತಾ?" ಕೃತಿಗೆ ಕರಣ್ ಜೋಹರ್ ಪ್ರಶ್ನೆ.. ಟ್ರೋಲ್!
ನಿನ್ನೆ (ಆಗಸ್ಟ್ 24) ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿದೆ. ಬಾಲಿವುಡ್ನ ಇಬ್ಬರು ನಾಯಕಿಯರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿದೆ. ಆಲಿಯಾ ಭಟ್ ಹಾಗೂ ಕೃತಿ ಸೆನನ್ ಜಂಟಿಯಾಗಿ ರಾಷ್ಟ್ರ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ಶುಭಾಶಯಗಳ ಸುರಿ ಮಳೆಯೇ ಹರಿದು ಬರುತ್ತಿದೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ 'ಗಂಗೂಬಾಯಿ ಕಾಠಿಯಾವಾಡಿ' ಹಾಗೂ ಲಕ್ಷ್ಮಣ್ ಉಟೆಕರ್ ನಿರ್ದೇಶಿಸಿದ 'ಮಿಮಿ' ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಈ ಇಬ್ಬರು ನಟಿಯರ ವಿಚಾರವಾಗಿ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಟ್ರೋಲ್ ಆಗುತ್ತಿದ್ದಾರೆ.

ಆಲಿಯಾ ಭಟ್ ಹಾಗೂ ಕೃತಿ ಸೆನನ್ಗೆ ರಾಷ್ಟ್ರ ಪ್ರಶಸ್ತಿ ಅನೌನ್ಸ್ ಆಗುತ್ತಿದ್ದಂತೆ ಕರಣ್ ಜೋಹರ್ ವಿಡಿಯೋ ಕ್ಲಿಪ್ ಒಂದು ವೈರಲ್ ಆಗಿತ್ತು. ಕೃತಿ ಸೆನನ್ ಈ ಹಿಂದೆ ಕರಣ್ ಜೋಹರ್ ನಡೆಸಿಕೊಡುತ್ತಿದ್ದ 'ಕಾಫಿ ವಿತ್ ಕರಣ್' ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆ ವೇಳೆ ಆಲಿಯಾ ಭಟ್ ವಿಚಾರವಾಗಿ ಕೃತಿಗೆ ಕೇಳಿದ ಪ್ರಶ್ನೆಯನ್ನೇ ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ.
"ದೇಶದ ಅತ್ಯುತ್ತಮ ನಟಿ ಕಂಡು ಅಸೂಯೆ ಹುಟ್ಟುತ್ತಾ?"
ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಟೈಗರ್ ಶ್ರಾಫ್ ಜೊತೆ ಕೃತಿ ಸೆನನ್ ಭಾಗವಹಿಸಿದ್ದರು. ಈ ವೇಳೆ ಕೃತಿ ಸೆನನ್ಗೆ ಕರಣ್ ಜೋಹರ್ " ಯಾವಾಗಲಾದರೂ ತನ್ನ ಪ್ರತಿಸ್ಪರ್ಧಿ ಆಲಿಯಾ ಭಟ್ ಸಾಧನೆಯನ್ನು ಕಂಡು ಅಸೂಯೆ ಪಟ್ಟುಕೊಂಡಿದ್ದೀರಾ?" ಎಂದು ಪ್ರಶ್ನೆ ಮಾಡಿದ್ದರು. ರಾಷ್ಟ್ರ ಪ್ರಶಸ್ತಿ ಬಂದ ಈ ಸಂದರ್ಭದಲ್ಲಿ ಇದೇ ವಿಡಿಯೋ ತುಣುಕನ್ನು ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ.
ಕರಣ್ ಜೋಹರ್ ಕೇಳಿದ ಪ್ರಶ್ನೆ ಏನು?
"ನಿಮಗೆ ಗೊತ್ತಿರುವಂತೆಯೇ ನಿಮ್ಮ ಪ್ರತಿಸ್ಪರ್ಧಿಗಳೊಂದಿಗೆ ಇರುವ ಅಸೂಯೆ ಅಥವಾ ಸ್ಪರ್ಧೆ ಬಗ್ಗೆ ಏನಂತಿರ.. ನಾನೂ ಆ ಸಾಧನೆಯನ್ನು ಮಾಡುಬೇಕು. ನನ್ನ ಸಾಮರ್ಥ್ಯದಿಂದ ಆಚೆ ನೋಡಬೇಕು ಅನಿಸುತ್ತಾ? ಇಲ್ಲ ಅವಳಿಗಿಂತ (ಆಲಿಯಾ) ಉತ್ತಮವಾಗಿ ಸಾಧನೆ ಮಾಡಬೇಕು ಎಂಬ ಭಾವನೆ ಇದೆಯಾ? ಎಲ್ಲರಿಗಿಂತ ಉತ್ತಮವಾಗಿ ನಟಿಸಬೇಕು ಅಂತಿದೆಯಾ? ಆಲಿಯಾ ಭಟ್ ಅತ್ಯುತ್ತಮ ನಟಿ ಅಂತ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇದನ್ನು ಒಪ್ಪಿಕೊಳ್ಳುತ್ತೀರಾ ಅಥವಾ ನೀವೂ ಆ ಮಟ್ಟಕ್ಕೆ ಹೋಗಲು ಯತ್ನಿಸುತ್ತೀರಾ?" ಎಂದು ಪ್ರಶ್ನಿಸಿದ್ದರು.
ಕರಣ್ ಜೋಹರ್ ಪ್ರಶ್ನೆಗೆ ನೆಟ್ಟಿಗರು ಕಿಡಿ
ಕರಣ್ ಜೋಹರ್ ಈ ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. "ಈ ಸಂದರ್ಶನ ತಲೆಕೆಡಿಸುತ್ತೆ. 'ಗಂಗೂಬಾಯಿ' ಹಾಗೆ ತುಂಬಾನೇ ಕೆಟ್ಟದಾಗಿದೆ. ಬಾಯಿ ಮುಚ್ಚಿ ಆಕೆಗೆ ಮಾತಾಡಲು ಅವಕಾಶ ಕೊಡು" ಎಂದು ಒಬ್ಬರು ಕಮೆಂಟ್ ಮಾಡುತ್ತಿದ್ದಾರೆ. " ಈಗ ಈ ಸಂಭಾಷಣೆಯನ್ನು ನೋಡಿದರೆ ನನಗೆ ಫನ್ನಿ ಅಂತ ಅನಿಸುತ್ತದೆ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ರಾಷ್ಟ್ರ ಪ್ರಶಸ್ತಿ ಹಂಚಿಕೊಂಡ ನಟಿಯರು
ವಿಪರ್ಯಾಸ ಅಂದರೆ, ಇದೇ ಇಬ್ಬರು ನಟಿಯರು ರಾಷ್ಟ್ರ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಆಲಿಯಾ ಭಟ್ ಹಾಗೂ ಕೃತಿ ಸೆನನ್ ಅದ್ಭುತ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇಬ್ಬರಿಗೂ ನೆಟ್ಟಿಗರು ಶುಭಾಶಯಗಳನ್ನು ಹೇಳುತ್ತಿದ್ದಾರೆ. ಇದೇ ವೇಳೆ ಅಂದು ಕರಣ್ ಜೋಹರ್ ಕೇಳಿದ ಪ್ರಶ್ನೆಯನ್ನೂ ವಿರೋಧಿಸುತ್ತಿದ್ದಾರೆ.


Click it and Unblock the Notifications











