"ಈ ರೀತಿ ಮುಗ್ಧ ಜನರನ್ನು ಹತ್ಯೆ ಮಾಡುವುದು ಘೋರ ಕೃತ್ಯ"; ಪಹಲ್ಗಾಮ್ ದಾಳಿ ಖಂಡಿಸಿದ ಅಕ್ಷಯ್ ಕುಮಾರ್
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಅಲ್ಲಿನ ಪಹಲ್ಗಾಮ್ ನಗರದಲ್ಲಿ ಪ್ರವಾಸಿಗರ ಮೇಲೆ ಏಕಾಏಕಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ದೇಶದ ಬೇರೆ ಭಾಗದಿಂದ ಬಂದಿದ್ದ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಭಯೋತ್ಪಾದಕರ ಈ ದುಷ್ಕೃತ್ಯವನ್ನು ಬಾಲಿವುಡ್ನ ಸೂಪರ್ಸ್ಟಾರ್ ಅಕ್ಷಯ್ ಕುಮಾರ್ ಖಂಡಿಸಿದ್ದಾರೆ.
ಪಹಲ್ಗಾಮ್ನಲ್ಲಿ ಪ್ರವಾಸಿಗರು ಅಲ್ಲಿನ ಸೌಂದರ್ಯವನ್ನು ಎಂಜಾಯ್ ಮಾಡುತ್ತಿದ್ದರು. ಈ ವೇಳೆ ಸಮವಸ್ತ್ರದಲ್ಲಿ ಬಂದ ಭಯೋತ್ಪಾದಕರ ಗುಂಪು ಪ್ರವಾಸಿಗರ ಮೇಲೆ ಮನಸೋ ಇಚ್ಛೆ ಗುಂಡಿನ ದಾಳಿಯನ್ನು ನಡೆಸಿದ್ದರು. ಇಂದು (ಏಪ್ರಿಲ್ 22) ಮಧ್ಯಾಹ್ನ ನಡೆದ ಈ ದಾಳಿಯಲ್ಲಿ 27 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 10ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ ಎಂದು ವರದಿಯಾಗಿವೆ.

ಭಯೋತ್ಪಾದಕದ ಈ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ, ಅಮಿತಾ ಶಾ, ರಾಜ್ನಾಥ್ ಸಿಂಗ್, ಕರ್ನಾಟಕದ ಸಿಎಂ ಸಿದ್ಧರಾಮಯ್ಯ ಸೇರಿದಂತೆ ಹಲವು ರಾಜಕೀಯ ಮುಖಂಡರು ಖಂಡಿಸಿದ್ದಾರೆ. ಹಾಗೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಟ್ವೀಟ್ ಮಾಡಿ ಈ ಕೃತ್ಯದ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಪಹಲ್ಗಾಮ್ ದಾಳಿಯನ್ನು ಖಂಡಿಸಿದ್ದಾರೆ. "ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯ ಬಗ್ಗೆ ತಿಳಿದು ಆತಂಕವಾಗಿದೆ. ಹೀಗೆ ಮುಗ್ಧರನ್ನು ಹತ್ಯೆ ಮಾಡುವುದು ಘೋರ ಕೃತ್ಯ. ಅವರ ಕುಟುಂಬಗಳಿಗಾಗಿ ಪ್ರಾರ್ಥನೆಯನ್ನು ಸಲ್ಲಿಸುತ್ತೇನೆ." ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ.
ಈ ಭಯೋತ್ಪಾದಕ ದಾಳಿಯಲ್ಲಿ ಶಿವಮೊಗ್ಗದ ನಿವಾಸಿ ಮಂಜುನಾಥ್ ಎಂಬುವವರು ಸಾವನ್ನಪ್ಪಿದ್ದಾರೆ. 47 ವರ್ಷದ ಮಂಜುನಾಥ್ ಪತ್ನಿ ಹಾಗೂ ಪುತ್ರನೊಂದಿಗೆ ಪಹಲ್ಗಾಮ್ಗೆ ಪ್ರವಾಸಕ್ಕೆಂದು ಹೋಗಿದ್ದರು. ಈ ವೇಳೆ ನಡೆದ ದಾಳಿಯಲ್ಲಿ ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ. ಪತ್ನಿ ಹಾಗೂ ಪುತ್ರ ಇಬ್ಬರೂ ಸುರಕ್ಷಿತವಾಗಿದ್ದಾರೆ. ಈ ಸುದ್ದಿ ತಿಳಿದು ಮಂಜುನಾಥ್ ಮನೆಯಲ್ಲಿ ಶೋಕ ಆವರಿಸಿದೆ.
ಈಗಾಗಲೇ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಭಯೋತ್ಪಾದಕರ ದಾಳಿಗೆ ಒಳಗಾದ ಪುರುಷರ ದೇಹಗಳಿವೆ. ಮೃತದೇಹದ ಮುಂದೆ ಮಹಿಳೆಯರು ಅಳುತ್ತಿರುವ ದೃಶ್ಯ ಹೃದಯ ವಿದ್ರಾವಕವಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಗನ್ ಹಿಡಿದು ಬಂದು, ಪ್ರವಾಸಿಗರ ಮೇಲೆ ಹತ್ತಿರದಿಂದ ಏಕಾ ಏಕಿ ಗುಂಡು ಹಾರಿಸುವುದಕ್ಕೆ ಶುರು ಮಾಡಿದ್ದ. ಇದರಿಂದ ಹಲವು ಸಾವನ್ನಪ್ಪಿದ್ದು, ಮತ್ತೆ ಕೆಲವರಿಗೆ ಗಾಯಗಳಾಗಿವೆ ಎಂದು ನ್ಯೂಸ್ ಎಜೆನ್ಸಿ ವರದಿ ಮಾಡಿದೆ.
ಭಯೋತ್ಪಾದಕನ ದಾಳಿಯಿಂದ ಸಾವನ್ನಪ್ಪಿದ ಮಂಜುನಾಥ್ ಕುಟುಂಬದ ನೆರವಿಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ಪೊಲೀಸ್ ಇಲಾಖೆಯ ಪೊಲೀಸರ ತಂಡ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ಗೆ ತೆರಳುವಂತೆ ಸಿ ಎಂ ಸಿದ್ಧರಾಮಯ್ಯ ಸೂಚನೆ ನೀಡಿದ್ದಾರೆ. ಹಾಗೇ ಭಯೋತ್ಪಾದಕರ ಈ ದಾಳಿಯನ್ನು ತೀವ್ರವಾಗಿ ಖಂಡಿಸುವುದಾಗಿ ಸಿ ಎಂ ಹೇಳಿದ್ದಾರೆ. ಇದು ಆಘಾತಕಾರಿ ಘಟನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.


Click it and Unblock the Notifications











