ತೃತೀಯ ಲಿಂಗಿಗಳಿಗೆ ಮನೆ ಕಟ್ಟಲು 1.5 ಕೋಟಿ ರೂ. ಕೊಟ್ಟ ಅಕ್ಷಯ್ ಕುಮಾರ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ರಾಘವ್ ಲಾರೆನ್ಸ್ ಮಹತ್ವದ ಸಮಾಜಮುಖಿ ಕಾರ್ಯಕ್ಕಾಗಿ ಸುದ್ದಿಯಲ್ಲಿದ್ದಾರೆ. 'ಲಕ್ಷ್ಮೀ ಬಾಂಬ್' ಚಿತ್ರೀಕರಣದಲ್ಲಿ ಬಿಜಿಯಾಗಿರುವ ಈ ಜೋಡಿ, ಚೆನ್ನೈನಲ್ಲಿ ತೃತೀಯ ಲಿಂಗಿಗಳಿಗಾಗಿ ಮನೆ ನಿರ್ಮಿಸಲು ಮುಂದಾಗಿದೆ.
ಅವಗಣನೆಗೆ ಒಳಗಾಗಿರುವ ತೃತೀಯ ಲಿಂಗಿಗಳ ಸಮುದಾಯಕ್ಕೆ ನೆರವು ನೀಡಲು ಮುಂದಾಗಿರುವ ನಟ ಅಕ್ಷಯ್ ಕುಮಾರ್, ಅವರಿಗಾಗಿ ಮನೆ ನಿರ್ಮಾಣ ಕಾರ್ಯಕ್ಕಾಗಿ 1.5 ಕೋಟಿ ರೂ.ಗಳ ದೊಡ್ಡ ಮೊತ್ತವನ್ನು ಉದಾರವಾಗಿ ದೇಣಿಗೆಯಾಗಿ ನೀಡಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ 'ಲಕ್ಷ್ಮೀ ಬಾಂಬ್' ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ನಿರ್ದೇಶಕ ರಾಘವ ಲಾರೆನ್ಸ್ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಲಕ್ಷ್ಮೀ ಬಾಂಬ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಸ್ವತಃ ಮಂಗಳಮುಖಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ 2011ರಲ್ಲಿ ಬಿಡುಗಡೆಯಾದ ತಮಿಳಿನ ಹಾರರ್ ಸಿನಿಮಾ 'ಮುನಿ 2: ಕಾಂಚನಾ' ಸಿನಿಮಾದ ರೀಮೇಕ್ ಆಗಿದೆ. ಆ ಚಿತ್ರದಲ್ಲಿ ನಿರ್ದೇಶಕ ರಾಘವ ಲಾರೆನ್ಸ್ ಅವರೇ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

ಅಕ್ಷಯ್ ಕುಮಾರ್ ದೇಣಿಗೆ
'ಒಂದು ಒಳ್ಳೆಯ ಸುದ್ದಿಯನ್ನು ಹಂಚಿಕೊಳ್ಳಲು ಬಯಸಿದ್ದೇನೆ. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ತೃತೀಯ ಲಿಂಗಿಗಳಿಗಾಗಿ ನಿರ್ಮಿಸಲಾಗುತ್ತಿರುವ ಮನೆಗಾಗಿ ಅಕ್ಷಯ್ ಕುಮಾರ್ ಸರ್ 1.5 ಕೋಟಿ ರೂ. ನೀಡುತ್ತಿದ್ದಾರೆ' ರಾಘವ ಲಾರೆನ್ಸ್ ಮಾಹಿತಿ ನೀಡಿದ್ದಾರೆ.

ತಾವಾಗಿಯೇ ಮುಂದೆ ಬಂದ ಅಕ್ಷಯ್
'ಲಕ್ಷ್ಮೀ ಬಾಂಬ್ ಚಿತ್ರೀಕರಣದ ವೇಳೆ ಟ್ರಸ್ಟ್ ಪ್ರಾಜೆಕ್ಟ್ ಹಾಗೂ ಮಂಗಳಮುಖಿಯರ ಮನೆ ನಿರ್ಮಾಣ ಕುರಿತು ಅಕ್ಷಯ್ ಕುಮಾರ್ ಅವರೊಂದಿಗೆ ನಾನು ಮಾತನಾಡುತ್ತಿದ್ದೆ. ಅದರ ಬಗ್ಗೆ ತಿಳಿದ ಕೂಡಲೇ ಅವರು ನನ್ನ ಬಳಿ ಏನನ್ನೂ ಕೇಳದೆ ತೃತೀಯ ಲಿಂಗಿಗಳ ಗೃಹ ನಿರ್ಮಾಣಕ್ಕಾಗಿ 1.5 ಕೋಟಿ ರೂ. ನೀಡುವುದಾಗಿ ಹೇಳಿದರು' ಎಂದು ಅವರು ತಿಳಿಸಿದ್ದಾರೆ.

ರಾಘವ ಲಾರೆನ್ಸ್ ಟ್ರಸ್ಟ್ಗೆ 15 ವರ್ಷ
ರಾಘವ ಲಾರೆನ್ಸ್ ಅವರು ತಮ್ಮದೇ ಹೆಸರಿನಲ್ಲಿ ಧಾರ್ಮಿಕ ದತ್ತಿ ಟ್ರಸ್ಟ್ ಒಂದನ್ನು ನಡೆಸುತ್ತಿದ್ದಾರೆ. ಅವರ ಪ್ರತಿಷ್ಠಾನಕ್ಕೆ 15 ವರ್ಷ ತುಂಬುತ್ತಿದ್ದು, ಅದರ ಸಂಭ್ರಮವನ್ನು ತೃತೀಯ ಲಿಂಗಿಗಳಿಗೆ ಮನೆ ನಿರ್ಮಿಸುವ ಮೂಲಕ ಅವರ ಬದುಕಿಗೆ ಆಸರೆಯಾಗುವ ಹೊಸ ಯೋಜನೆಯ ಮೂಲಕ ಆಚರಿಸಲು ನಿರ್ಧರಿಸಿದ್ದಾರೆ.

ಅಕ್ಷಯ್ ಕುಮಾರ್ ನಮಗೆ ದೇವರು
'ಯಾರು ಸಹಾಯ ಮಾಡುತ್ತಾರೋ ಅವರೆಲ್ಲರನ್ನೂ ದೇವರು ಎಂದೇ ನಾನು ಪರಿಗಣಿಸುತ್ತೇನೆ. ಹೀಗಾಗಿ ಈಗ ಅಕ್ಷಯ್ ಕುಮಾರ್ ಅವರು ನಮಗೆ ದೇವರು. ಈ ಯೋಜನೆಗೆ ತಮ್ಮ ಭಾರಿ ಬೆಂಬಲ ನೀಡುತ್ತಿರುವುದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಅಕ್ಷಯ್ ಕುಮಾರ್ ಅವರ ಬೆಂಬಲದೊಂದಿಗೆ ಇಡೀ ದೇಶದಾದ್ಯಂತ ತೃತೀಯ ಲಿಂಗಿಗಳ ಬದುಕು ಸುಧಾರಿಸುವುದು ಹಾಗೂ ಅವರಿಗೆ ಆಶ್ರಯ ಕಲ್ಪಿಸುವುದು ನಮ್ಮ ಟ್ರಸ್ಟ್ನ ಮುಂದಿನ ಗುರಿಯಾಗಿದೆ. ಭೂಮಿ ಪೂಜೆಯ ದಿನವನ್ನು ಶೀಘ್ರದಲ್ಲಿಯೇ ತಿಳಿಸುತ್ತೇವೆ. ನಿಮ್ಮೆಲ್ಲರ ಹಾರೈಕೆ ಇರಲಿ' ಎಂದು ರಾಘವ ಲಾರೆನ್ಸ್ ತಿಳಿಸಿದ್ದಾರೆ.


Click it and Unblock the Notifications











