ಬಾಲಿವುಡ್ನಲ್ಲಿ ತಮ್ಮ ವಿರುದ್ಧ ಒಂದು ಗ್ಯಾಂಗ್ ಇದೆ: ಎ.ಆರ್. ರೆಹಮಾನ್ ಹೇಳಿದ ಸ್ಫೋಟಕ ಸಂಗತಿ
ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಲಿವುಡ್ನಲ್ಲಿಯೂ ಭಾರತದ ಸಂಗೀತವನ್ನು ಜನಪ್ರಿಯಗೊಳಿಸಿದ ವ್ಯಕ್ತಿ. ತಮಿಳು, ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ಹೀಗೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ಸಂಗೀತ ನೀಡಿರುವ ಅವರು ಬಹುಬೇಡಿಕೆಯ ಕಂಪೋಸರ್. ಆದರೆ ದೇಶ ವಿದೇಶದೆಲ್ಲೆಡೆ ಪ್ರಭಾವ ಬೀರಿರುವ ಎ.ಆರ್. ರೆಹಮಾನ್ ಕೂಡ ಬಾಲಿವುಡ್ನಲ್ಲಿ ಕಿರುಕುಳ ಅನುಭವಿಸಿದ್ದಾರೆ.
ಈ ಆಘಾತಕಾರಿ ಸಂಗತಿಯನ್ನು ಸ್ವತಃ ರೆಹಮಾನ್ ಹೇಳಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಈಗ ನಡೆಯುತ್ತಿರುವ ಸ್ವಜನಪಕ್ಷಪಾತ, ಕೆಲವೇ ಮಂದಿ ಚಿತ್ರರಂಗವನ್ನು ಹಿಡಿತದಲ್ಲಿಟ್ಟುಕೊಂಡಿರುವ ಕುರಿತಾದ ಚರ್ಚೆಗಳಿಗೆ ಪೂರಕವಾಗಿ ರೆಹಮಾನ್ ಹೇಳಿಕೆ ಮತ್ತೊಂದು ಆಯಾಮ ಒದಗಿಸಿದೆ. ಮುಂದೆ ಓದಿ.

ಕಡಿಮೆಯಾಗಿರುವುದಕ್ಕೆ ಕಾರಣ
ಸುಶಾಂತ್ ಸಿಂಗ್ ರಜಪೂತ್ ನಟನೆಯ 'ದಿಲ್ ಬೇಚಾರಾ' ಹಾಡುಗಳು ಸೂಪರ್ ಹಿಟ್ ಆಗಿವೆ. ಎ.ಆರ್. ರೆಹಮಾನ್ ಸಂಗೀತವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಆದರೆ ಇಷ್ಟೆಲ್ಲ ಅದ್ಭುತ ಹಾಡುಗಳನ್ನು ನೀಡಿದ ಪ್ರಸಿದ್ಧ ಸಂಗೀತಗಾರ ಬಾಲಿವುಡ್ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಕಡಿಮೆಯಾಗಿದೆ. ಅದು ಏಕೆಂದು ಅವರು ಕಾರಣ ನೀಡಿದ್ದಾರೆ.

ನನ್ನ ಬಗ್ಗೆ ವದಂತಿ
'ಒಳ್ಳೆಯ ಸಿನಿಮಾಗಳು ಬಂದಾಗ ನಾನು ಇಲ್ಲ ಎಂದು ಹೇಳುವುದಿಲ್ಲ. ಆದರೆ ನನಗನ್ನಿಸುತ್ತದೆ ಅಲ್ಲಿ ಒಂದು ಗ್ಯಾಂಗ್ ಇದೆ. ಅದು ತಪ್ಪು ತಿಳಿವಳಿಕೆಯ ಮೂಲಕ ನನ್ನ ಕುರಿತು ಸುಳ್ಳು ವದಂತಿಗಳನ್ನು ಹರಡುತ್ತಿದೆ' ಎಂದು ಎ.ಆರ್. ರೆಹಮಾನ್, ತಮ್ಮ ವಿರುದ್ಧ ಬಾಲಿವುಡ್ನಲ್ಲಿ ಗುಂಪೊಂದು ಕೆಲಸ ಮಾಡುತ್ತಿದೆ ಎಂಬ ಮಾಹಿತಿ ಹೊರಹಾಕಿದ್ದಾರೆ.

ಎ.ಆರ್. ರೆಹಮಾನ್ ಬಗ್ಗೆ ಕಥೆಗಳು...
'ಮುಕೇಶ್ ಛಾಬ್ರಾ (ದಿಲ್ ಬೇಚಾರಾ ನಿರ್ದೇಶಕ) ನನ್ನ ಬಳಿ ಬಂದಾಗ ಅವರಿಗೆ ಎರಡು ದಿನದಲ್ಲಿ ನಾಲ್ಕು ಹಾಡುಗಳನ್ನು ನೀಡಿದ್ದೆ. ಆಗ ಅವರು, ಸರ್ ಎ.ಆರ್. ರೆಹಮಾನ್ ಬಳಿ ಹೋಗಬೇಡ ಎಂದು ಎಷ್ಟೊಂದು ಜನರು ಎಚ್ಚರಿಕೆ ನೀಡಿದ್ದರು. ನಿಮ್ಮ ಕುರಿತು ಕಥೆಗಳ ಮೇಲೆ ಕಥೆಗಳನ್ನು ಹೇಳಿದ್ದರು ಎಂಬುದನ್ನು ತಿಳಿಸಿದ್ದರು' ಎಂದು ರೆಹಮಾನ್ ಬಹಿರಂಗಪಡಿಸಿದ್ದಾರೆ.

ಒಳ್ಳೆ ಸಿನಿಮಾಗಳು ಏಕೆ ಬರುತ್ತಿಲ್ಲ?
ಅದನ್ನು ಕೇಳಿದ ಬಳಿಕ ನನಗೆ ಅರ್ಥವಾಯ್ತು. ನನಗೆ ಹಿಂದಿ ಸಿನಿಮಾಗಳಲ್ಲಿ ಸಿಗುತ್ತಿರುವ ಅವಕಾಶಗಳು ಏಕೆ ಕಡಿಮೆಯಾಗುತ್ತಿದೆ ಎನ್ನುವುದು ತಿಳಿಯಿತು. ಒಳ್ಳೆಯ ಸಿನಿಮಾಗಳು ಏಕೆ ನನ್ನ ಬಳಿ ಬರುತ್ತಿಲ್ಲ ಎನ್ನುವುದು ಗೊತ್ತಾಯಿತು. ನಾನು ಬಹಳ ಕಡಿಮೆ ಸಿನಿಮಾಗಳಲ್ಲಿ ಮಾಡುತ್ತಿದ್ದೇನೆ, ಏಕೆಂದರೆ ಅಲ್ಲಿ ಒಂದು ಇಡೀ ಗ್ಯಾಂಗ್ ನನ್ನ ವಿರುದ್ಧ ಪಿತೂರಿ ಮಾಡುತ್ತಿದೆ. ಅವರು ಯಾರೆಂದು ತಿಳಿದಿಲ್ಲ. ಆದರೆ ಹಾನಿ ಮಾಡುತ್ತಿದ್ದಾರೆ ಎಂದು ರೆಹಮಾನ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನನ್ನ ಪಾಡಿಗೆ ಕೆಲಸ ಮಾಡಿಕೊಂಡಿದ್ದೇನೆ
ಜನರು ನನ್ನಿಂದ ಒಳ್ಳೆಯ ಹಾಡುಗಳನ್ನು ಬಯಸುತ್ತಿದ್ದಾರೆ. ಆದರೆ ಇನ್ನೊಂದೆಡೆ ಜನರ ಮತ್ತೊಂದು ಗ್ಯಾಂಗ್ ಅದಕ್ಕೆ ಅಡ್ಡಿಪಡಿಸುತ್ತಿದೆ. ಪರವಾಗಿಲ್ಲ. ಏಕೆಂದರೆ ನಾನು ವಿಧಿಯಲ್ಲಿ ನಂಬಿಕೆ ಇರಿಸಿದ್ದೇನೆ. ಪ್ರತಿಯೊಂದು ದೇವರಿಂದಲೇ ಬರುವುದು ಎಂಬು ನಂಬಿದ್ದೇನೆ. ಹೀಗಾಗಿ ನನಗೆ ಬಂದ ಸಿನಿಮಾಗಳಲ್ಲಿ ಮತ್ತು ನನ್ನ ಇತರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ನನ್ನನ್ನು ಭೇಟಿ ಮಾಡಲು ಬರುವವರೆಲ್ಲರಿಗೂ ಸ್ವಾಗತ. ಸುಂದರವಾದ ಸಿನಿಮಾ ಮಾಡೋಣ. ನಿಮಗೆ ನನ್ನ ಬಳಿ ಸ್ವಾಗತ ಎಂದು ರೆಹಮಾನ್ ಹೇಳಿದ್ದಾರೆ.


Click it and Unblock the Notifications










