ರಿಯಾ ಚಕ್ರವರ್ತಿಗೆ ಅಂಡರ್ವರ್ಲ್ಡ್ ಸಂಪರ್ಕವಿದೆ ಎಂದ ಬಿಹಾರದ ಮಾಜಿ ಮುಖ್ಯಮಂತ್ರಿ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಕುತೂಹಲ ಕೆರಳಿಸಿದೆ. ಸಿಬಿಐ ತನಿಖೆ ಆರಂಭವಾದ ಬಳಿಕ ಯಾವ ಯಾವ ಸಂಗತಿಗಳು ಹೊರಬರಬಹುದು ಎಂದು ಸುಶಾಂತ್ ಅಭಿಮಾನಿಗಳು ಕಾದಿದ್ದಾರೆ. ಈ ನಡುವೆ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸುಶಾಂತ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಶಿಫಾರಸು ಮಾಡಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಶ್ಲಾಘಿಸಿರುವ ಅವರು, ಮುಖ್ಯಮಂತ್ರಿ ನಿತೀಶ್ ಕುಮಾರ್, ಜನರ ಭಾವನೆಗಳನ್ನು ಅರಿತುಕೊಂಡಿದ್ದಾರೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದು ಕೊಲೆ ಎಂದು ಬಿಹಾರ ವಿಧಾನಸಭೆಯಲ್ಲಿ ಅವಿರೋಧವಾಗಿ ಸಿಬಿಐ ತನಿಖೆಗೆ ಆಗ್ರಹಿಸಲಾಗಿತ್ತು ಎಂದು ಮಾಂಝಿ ಹೇಳಿದ್ದಾರೆ. ಮುಂದೆ ಓದಿ..

ಭೂಗತ ಜಗತ್ತಿನ ನಂಟು
ಸುಶಾಂತ್ ಪ್ರೇಯಸಿ ಎಂದು ಹೇಳಿಕೊಂಡಿರುವ ರಿಯಾ ಚಕ್ರವರ್ತಿಗೆ ಭೂಗತ ಲೋಕದ ಪರಿಚಯ ಅಥವಾ ಸಂಪರ್ಕವಿರಬಹುದು ಎಂದು ಮಾಂಝಿ ಸಂದರ್ಶನವೊಂದರಲ್ಲಿ ಆರೋಪ ಮಾಡಿದ್ದಾರೆ. ರಿಯಾ ಚಕ್ರವರ್ತಿ ವಿರುದ್ಧ ಬಿಹಾರದಲ್ಲಿ ಎಫ್ಐಆರ್ ದಾಖಲಾಗಿದೆ. ಸುಶಾಂತ್ ಸಾವಿಗೆ ರಿಯಾ ಚಕ್ರವರ್ತಿಯೇ ಕಾರಣ ಎಂದು ಆರೋಪಿಸಲಾಗಿದೆ.

ಮುಂಬೈ ಪೊಲೀಸರ ವಿರುದ್ಧ ಆರೋಪ
ಮುಂಬೈ ಪೊಲೀಸರ ವಿರುದ್ಧವೂ ಮಾಂಝಿ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರ ಪೊಲೀಸರಲ್ಲಿ ತಪ್ಪಿತಸ್ಥ ಭಾವನೆ ಕಾಡುತ್ತಿದೆ. ಹೀಗಾಗಿ ಅವರು ಈ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡುತ್ತಿಲ್ಲ. ಅವರು ತನಿಖೆಗೆ ಅಡ್ಡಿಪಡಿಸುತ್ತಿದ್ದರು. ಹೀಗಾಗಿಯೇ ಬಿಹಾರ ಪೊಲೀಸರು ಪ್ರಕರಣದ ತನಿಖೆಗಾಗಿ ತೆರಳಿದರು. ಅವರು ನ್ಯಾಯ ಒದಗಿಸಲು ಸೂಕ್ತ ಹಾದಿಯನ್ನು ಅನುಸರಿದ್ದಾರೆ ಎಂದು ಪ್ರಶಂಸಿಸಿದ್ದಾರೆ.

ಇ.ಡಿ.ಯಿಂದ ರಿಯಾಗೆ ಸಮನ್
ಈ ನಡುವೆ ಸುಶಾಂತ್ ಖಾತೆಯಿಂದ ಹಣ ದುರ್ಬಳಕೆ ಮಾಡಿದ ಆರೋಪದಲ್ಲಿ ರಿಯಾ ಚಕ್ರವರ್ತಿಗೆ ಸಮನ್ ನೀಡಿರುವ ಜಾರಿ ನಿರ್ದೇಶನಾಲಯ (ಇ.ಡಿ) ಆಗಸ್ಟ್ 7ರವರೆಗೆ ತನ್ನ ಮುಂದೆ ಹಾಜರಾಗುವಂತೆ ಅವರಿಗೆ ಸೂಚಿಸಿದೆ. ರಿಯಾ ಸಮೀಪವರ್ತಿ ಸಾಮ್ಯುಯೆಲ್ ಮಿರಾಂಡಾ ಅವರನ್ನು ಇ.ಡಿ ಬುಧವಾರ ವಿಚಾರಣೆಗೆ ಒಳಪಡಿಸಿದೆ ಎನ್ನಲಾಗಿದೆ.

ಸುಶಾಂತ್ ಕಂಪೆನಿಗಳ ತನಿಖೆ
ಸುಶಾಂತ್ ಆರಂಭಿಸಿದ್ದ, ರಿಯಾ ಮತ್ತು ಆಕೆಯ ಸಹೋದರ ಶೌವಿಕ್ ನಿರ್ದೇಶಕರಾಗಿರುವ ಎರಡು ಕಂಪೆನಿಗಳ ವ್ಯವಹಾರಗಳ ಕುರಿತು ಸಹ ಇ.ಡಿ ತನಿಖೆ ಆರಂಭಿಸಿದೆ. ಈ ಕಂಪೆನಿಗಳಲ್ಲಿ ಯಾವುದೇ ಉದ್ಯೋಗಿಗಳು ಇರಲಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಈ ಕಂಪೆನಿಗಳನ್ನು ವೈಯಕ್ತಿಕ ಕಾರ್ಯಗಳಿಗಾಗಿ ಆರಂಭಿಸಲಾಗಿತ್ತೇ ಅಥವಾ ಹಣ ದುರುಪಯೋಗದ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತೇ ಎಂಬ ನಿಟ್ಟಿನಲ್ಲಿಯೂ ಇ.ಡಿ. ತನಿಖೆ ನಡೆಸುತ್ತಿದೆ.


Click it and Unblock the Notifications











