Manoj Kumar Passes Away: ಬಾಲಿವುಡ್ನ ಲೆಜೆಂಡರಿ ನಟ ಮನೋಜ್ ಕುಮಾರ್ ನಿಧನ
ಭಾರತೀಯ ಚಿತ್ರರಂಗದ ಜನಪ್ರಿಯ ನಟ ಮನೋಜ್ ಕುಮಾರ್ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ದೇಶಭಕ್ತಿಯ ಸಿನಿಮಾಗಳ ಮೂಲಕ ಜನರ ಮನಸ್ಸು ಗೆದ್ದಿದ್ದರು. ಮನೋಜ್ ಕುಮಾರ್ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಹೀಗಾಗಿ ಅವರನ್ನು ಮುಂಬೈನ ಕೋಕಿಲಾಬೇನ್ ಧೀರಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮನೋಜ್ ಕುಮಾರ್ ಇಂದು (ಏಪ್ರಿಲ್ 4) ಬೆಳಗ್ಗೆ 3.30ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಹೃದಯ ಸಂಬಂಧಿ ಕಾಯಿಲೆ ಜೊತೆಗೆ ಅವರಿಗೆ ಲಿವರ್ ಸಮಸ್ಯೆ ಕೂಡ ಇತ್ತು. ಲಿವರ್ ಸಿರಿಯೋಸಿಸ್ನಿಂದಲೂ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಬಾಲಿವುಡ್ನ ಲೆಜೆಂಡರಿ ನಟನ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮನೋಜ್ ಕುಮಾರ್ ಜೊತೆಗಿನ ಎರಡು ಫೋಟೊಗಳನ್ನು ತನ್ನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದು, ದಿಗ್ಗಜನ ಅಗಲಿಕೆ ಬಗ್ಗೆ ಭಾವುಕರಾಗಿದ್ದಾರೆ. "ಮನೋಜ್ ಕುಮಾರ್ ಭಾರತೀಯ ಸಿನಿಮಾದ ಐಕಾನ್. ಅವರಲ್ಲಿದ್ದ ದೇಶಭಕ್ತಿಯಿಂದ ವಿಶೇಷವಾಗಿ ಅವರನ್ನು ನೆನಪಿಸಿಕೊಳ್ಳಲಾಗುತ್ತೆ. ಅದು ಅವರ ಸಿನಿಮಾಗಳಲ್ಲಿಯೂ ಕೂಡ ಪ್ರತಿಬಿಂಬಿಸುತ್ತಿತ್ತು. ಮನೋಜ್ ಕುಮಾರ್ ಅವರ ವೃತ್ತಿ ಬದುಕು ರಾಷ್ಟ್ರಕ್ಕೆ ಹೆಮ್ಮೆ. ಹಾಗೇ ಅದು ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿ ಮುಂದುವರೆಯುತ್ತೆ. ಇಂತಹ ದು:ಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನಾನು ಸಂತಾಪವನ್ನು ಸೂಚಿಸುತ್ತೇನೆ. ಓಂ ಶಾಂತಿ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಾಲಿವುಡ್ ದಿಗ್ಗಜ ಮನೋಜ್ ಕುಮಾರ್ ದೀರ್ಘ ಕಾಲದಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೃದಯ ಹಾಗೂ ಲಿವರ್ ಸಮಸ್ಯೆ ಕೊನೆಯ ದಿನಗಳಲ್ಲಿ ಉಲ್ಭಣಿಸಿತ್ತು. ಈ ಕಾರಣವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮನೋಜ್ ಕುಮಾರ್ ನಿಧನರಾಗಿದ್ದಾರೆ. ಮನೋಜ್ ಕುಮಾರ್ ಪುತ್ರ ಕುನಾನ್ ಗೋಸ್ವಾಮಿ ತಂದೆಯ ನಿಧನದ ಬಗ್ಗೆ ಮಾಹಿತಿ ನೀಡಿದ್ದು, ನಾಳೆ (ಏಪ್ರಿಲ್ 5) ಅಂತ್ಯಕ್ರಿಯೆ ನಡೆಯಲಿದೆ ಎಂದಿದ್ದಾರೆ.
ಮನೋಜ್ ಕುಮಾರ್ ಮೂಲಕ ಹೆಸರು ಹರಿಕೃಷ್ಣನ್ ಗೋಸ್ವಾಮಿ. 1937, ಜುಲೈ 24ರಂದು ಅಬೋಟಾಬಾದ್ ಎಂಬ ಚಿಕ್ಕ ಟೌನ್ನಲ್ಲಿ ಜನಿಸಿದ್ದರು. ಇಂದು ಈ ಪಟ್ಟಣವನ್ನು ಖೈಬರ್ ಪಖ್ತುಂಖ್ವಾ ಎಂದು ಗುರುತಿಸಲಾಗಿದ್ದು, ಇದು ಪಾಕಿಸ್ತಾನದಲ್ಲಿದೆ. ಇನ್ನು ಸಿನಿಮಾಗಾಗಿ ಇವರ ಹೆಸರು ಬದಲಾಯಿಸಲಾಗಿತ್ತು. ಮನೋಜ್ ಕುಮಾರ್ 1957ರಲ್ಲಿ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ಸಿನಿಮಾ ಮೇಲಿನ ಅಪಾರ ಆಸಕ್ತಿ ಅವರನ್ನು ಸಿನಿಮಾಗೆ ಬರುವಂತೆ ಮಾಡಿತ್ತು. 1961ರಲ್ಲಿ ತೆರೆಕಂಡಿದ್ದ 'ಕಂಚ್ ಕಿ ಗುಡಿಯಾ' ಸಿನಿಮಾ ಇವರಿಗೆ ಮೇಜರ್ ಹಿಟ್ ಕೊಟ್ಟಿತ್ತು.
1965ರಲ್ಲಿ ತೆರಕಂಡಿದ್ದ 'ಗುಮ್ನಾಮ್' ಮನೋಜ್ ಕುಮಾರ್ ವೃತ್ತಿ ಬದುಕಿನಲ್ಲಿ ಅತೀ ದೊಡ್ಡ ಹಿಟ್ ಕೊಟ್ಟ ಸಿನಿಮಾ ಆಯ್ತು. ಆ ಈ ಸಿನಿಮಾ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಸಾಲಿಗೆ ಸೇರಿತ್ತು. ಇಲ್ಲಿ ಮನೋಜ್ ಕುಮಾರ್ ವೃತ್ತಿ ಬದುಕು ಯಶಸ್ಸಿನ ಹಾದಿಯನ್ನೇ ಹಿಡಿಯುತ್ತಾ ಮುಂದೆ ಸಾಗಿತ್ತು. ಮನೋಜ್ ಕುಮಾರ್ ತನ್ನ ವೃತ್ತ ಜೀವನದಲ್ಲಿ ಅತೀ ಹೆಚ್ಚು ದೇಶ ಭಕ್ತಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು.
1965ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತ ಸಿನಿಮಾ 'ಶಹೀದ್'ನಲ್ಲಿ ನಟಿಸಿದ್ದರು. ಆ ಬಳಿಕ ಮನೋಜ್ ಕುಮಾರ್ ಸಾಕಷ್ಟು ದೇಶ ಪ್ರೇಮ ಸಾರುವ ಸಿನಿಮಾಗಳಲ್ಲಿ ನಟಿಸಿದ್ದರು. ಅವುಗಳಲ್ಲಿ 1967ರಲ್ಲಿ ಬಂದ 'ಉಪ್ಕಾರ್', 'ಪೂರಬ್ ಔಟ್ ಪಶ್ಚಿಮ್', 'ಕ್ರಾಂತಿ' ಸಿನಿಮಾಗಳಲ್ಲಿ ನಟಿಸಿದ್ದರು. 'ಕ್ರಾಂತಿ' ಸಿನಿಮಾ ಮನೋಜ್ ಕುಮಾರ್ ವೃತ್ತಿ ಬದುಕಿಗೆ ಹೊಸ ಇಮೇಜ್ ಕೊಟ್ಟಿತ್ತು. ಅವರ ಅಭಿಮಾನಿಗಳು ಇವರನ್ನು ಭರತ್ ಕುಮಾರ್ ಅಂತಲೇ ಕರೆಯುವುದಕ್ಕೆ ಶುರು ಮಾಡಿದ್ದರು.
ಮನೋಜ್ ಕುಮಾರ್ ಕೇವಲ ನಟನಾಗಿ ಅಷ್ಟೇ ಗುರುತಿಸಿಕೊಂಡಿರಲಿಲ್ಲ. 1972ರಲ್ಲಿ ತೆರೆಕಂಡ 'ಶೋರ್' ಸಿನಿಮಾವನ್ನು ಕೂಡ ನಿರ್ದೇಶನ ಮಾಡಿದ್ದರು. 1975ರಲ್ಲಿ 'ರೋಟಿ, ಕಪಡಾ ಔರ್ ಮಕಾನ್' ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾ ಫಿಲ್ಮ್ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಸಿಕ್ಕಿತ್ತು. ಮನೋಜ್ ಕುಮಾರ್ ಕಲಾ ಸೇವೆಯನ್ನು ಪರಿಗಣಿಸಿ, ಅವರಿಗೆ 1992ರಲ್ಲಿ ಪದ್ಮಶ್ರೀ ಪ್ರಶಸ್ತಿ, ಫಿಲ್ಮ್ ಫೇರ್ ಜೀವಮಾನ ಸಾಧನೆ ಪ್ರಶಸ್ತಿ, 2015ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಕೂಡ ಲಭಿಸಿತ್ತು. 2004ರಲ್ಲಿ ಮನೋಜ್ ಕುಮಾರ್ ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿಗೆ ಸೇರಿಕೊಂಡಿದ್ದರು.


Click it and Unblock the Notifications











