"ಸಪ್ತ ಸಾಗರದಾಚೆ ಎಲ್ಲೋ ನೋಡಿದ್ಮೇಲೆ ನನ್ನ ಹೃದಯ ಭಾರ ಆಗಿತ್ತು": ಬಾಲಿವುಡ್ ನಿರ್ದೇಶಕ ಕರಣ್ ಜೋಹರ್!
ಕನ್ನಡ ಸಿನಿಮಾಗಳನ್ನು ಖರೀದಿ ಮಾಡುವುದಕ್ಕೆ ಒಂದ್ಕಡೆ ಓಟಿಟಿ ವೇದಿಕೆಗಳು ಹಿಂದೇಟು ಹಾಕುತ್ತಿವೆ. ಅದೇ ಇನ್ನೊಂದು ಕಡೆ ಸ್ಯಾಟಲೈಟ್ ಹಕ್ಕುಗಳೂ ಮಾರಾಟ ಆಗುತ್ತಿಲ್ಲ. ಹೀಗಿರುವಾಗ ಬೇರೆ ಬೇರೆ ಭಾಷೆಯ ಸಿನಿಮಾ ನಿರ್ದೇಶಕರು ಕನ್ನಡ ಸಿನಿಮಾವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಇಡೀ ತಂಡವನ್ನು ಹಾಡಿ ಹೊಗಳುತ್ತಿದ್ದಾರೆ.
ಈ ವರ್ಷ ಕನ್ನಡ ಸಿನಿಮಾ 'ಸಪ್ತ ಸಾಗರದಾಚೆ ಎಲ್ಲೋ' ದಕ್ಷಿಣ ಭಾರತದಾದ್ಯಂತ ಸದ್ದು ಮಾಡಿತ್ತು. ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಜೋಡಿಯ ಅಭಿನಯಕ್ಕೆ ಮನಸೋತಿದ್ದರು. ಹೇಮಂತ್ ಎಂ ರಾವ್ ನಿರ್ದೇಶನಕ್ಕೆ ಮರುಳಾಗಿದ್ದರು. ಇದೇ ಸಿನಿಮಾ ನೋಡಿ ಇಬ್ಬರು ನಿರ್ದೇಶಕರು ಇಂತಹ ಸಿನಿಮಾ ನಿರ್ದೇಶನ ಮಾಡಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇತ್ತೀಚೆಗೆ ಫಿಲ್ಮ್ ಕಂಪಾನಿಯನ್ ಡೈರೆಕ್ಟರ್ಸ್ ಅಡ್ಡ 2023ಯಲ್ಲಿ ಬಾಲಿವುಡ್ ನಟ ಕರಣ್ ಜೋಹರ್, ತಮಿಳು ನಿರ್ದೇಶಕ ಕಾರ್ತಿಕ್ ಸುಬ್ಬರಾಜು, ವೆಟ್ರಿಮಾರನ್, ಕೊಂಕಣ ಸೇನ್ ಶರ್ಮಾ, ಜೋ ಬೇಬಿ, ನೆಲ್ಸನ್, ಅವಿನಾಶ್ ಅರುಣ್ ಹಾಗೂ ನಮ್ಮ ಕನ್ನಡದ ನಿರ್ದೇಶಕ ಹೇಮಂತ್ ಎಂ ರಾವ್ ಭಾಗವಹಿಸಿದ್ದರು. ಈ ವೇಳೆ ಕರಣ್ ಜೋಹರ್ ಹಾಗೂ ಕಾರ್ತಿಕ್ ಸುಬ್ಬರಾಜು ಇಬ್ಬರೂ 'ಸಪ್ತ ಸಾಗರದಾಚೆ ಎಲ್ಲೋ'ದಂತಹ ಸಿನಿಮಾ ಮಾಡಬೇಕಿತ್ತು ಎಂದಿದ್ದಾರೆ.
ಸಪ್ತಸಾಗರ ಮೆಚ್ಚಿದ ನಿರ್ದೇಶಕರು
ಫಿಲ್ಮ್ ಕಂಪಾನಿಯನ್ ನಿರ್ದೇಶಕರ ರೌಂಡ್ ಟೇಬಲ್ನಲ್ಲಿ ಈ ವರ್ಷ ಉತ್ತಮ ಸಿನಿಮಾಗಳನ್ನು ನೀಡಿದ ಡೈರೆಕ್ಟರ್ಗಳನ್ನು ಕರೆಸಲಾಗಿತ್ತು. ಈ ವೇಳೆ ನಿರೂಪಕಿ ಈ ವರ್ಷ ತೆರೆಕಂಡ ಭಾರತದ ಯಾವ ಸಿನಿಮಾವನ್ನು ನಿಮಗೆ ನಿರ್ದೇಶನ ಮಾಡಬೇಕು ಅಂತ ಅನಿಸುತ್ತಿದೆ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ತಮಿಳು ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಹಾಗೂ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಅಂತ ಹೇಳಿದ್ದಾರೆ.

ಹಾರ್ಟ್ ಬ್ರೇಕಿಂಗ್ ಲವ್ ಸ್ಟೋರಿ-ಕರಣ್
ಕರಣ್ ಜೋಹರ್ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಎ ಹಾಗೂ ಸೈಡ್ ಬಿ ಎರಡನ್ನೂ ಮೆಚ್ಚಿಕೊಂಡಿದ್ದಾರೆ. "ನನಗೆ ಸೈಡ್ ಎ ಮತ್ತು ಸೈಡ್ ಬಿ ತುಂಬಾನೇ ಇಷ್ಟ. ಸೈಡ್ ಎ ಅನ್ನು ನಾನು ಅಮೆಜಾನ್ನಲ್ಲಿ ನೋಡಿದಾಗ, ಸಿನಿಮಾ ಹೆಸರು ಹೇಳುವುದಕ್ಕೆ ಪ್ರಯತ್ನ ಪಟ್ಟೆ. ಈ ಸಿನಿಮಾವನ್ನು ನೋಡಿದಾಗ ನನಗೆ ಇದು ಹಾರ್ಟ್ ಬ್ರೇಕಿಂಗ್ ಲವ್ ಸ್ಟೋರಿ ಅನಿಸಿತು. ತುಂಬಾನೇ ಎಮೋಷನಲ್ ಆಗಿದೆ ಅಂತ ಅನಿಸಿತು. ನನಗೆ ಲವ್ ಸ್ಟೋರಿಯಿಂದ ಸಿನಿಮಾ ಆರಂಭ ಆಗೋದು ಇಷ್ಟ ಆಗುತ್ತೆ." ಎಂದು ಕರಣ್ ಜೋಹರ್ ಹೇಳಿದ್ದಾರೆ.
"ಹೃದಯ ಭಾರ ಆಗಿತ್ತು"-ಕರಣ್
"ಅವರು ಮನೆಯ ಹುಡುಕಾಟಕ್ಕೆ ಹೊರಡುವುದು ಇಷ್ಟ ಆಯ್ತು. ಆದರೆ, ಸಿನಿಮಾದ ಕೊನೆಯಲ್ಲಿ ನನ್ನ ಹೃದಯ ಭಾರ ಆಗಿತ್ತು. ಸೈಡ್ ಬಿ ಗಾಗಿ ನಾನು ತುಂಬಾನೇ ಕಾದಿದ್ದೆ. ಮೊನ್ನೆಯಷ್ಟೇ ಹೇಮಂತ್ ಲಿಂಕ್ ಕಳಿಸಿದ್ದರು. ಅದನ್ನು ನೋಡಿದ ಮೇಲೆ ನನಗೆ ಕಂಪ್ಲೀಟ್ ಅಂತ ಅನಿಸಿದೆ. ಇಲ್ಲಿ ಇರೋರೆಲ್ಲರೂ ಅದ್ಭುತ ಸಿನಿಮಾ ಮಾಡಿದ್ದಾರೆ. ಆದರೆ, ಈ ಎರಡು ಸಿನಿಮಾಗಳು ಪ್ರತ್ಯೇಕವಾಗಿ ನನ್ನನ್ನು ಕಾಡಿವೆ." ಎಂದು ಕರಣ್ ಜೋಹರ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಕಾರ್ತಿಕ್ ಸುಬ್ಬರಾಜು ಹೇಳಿದ್ದೇನು?
"ಸಪ್ತ ಸಾಗರದಾಚೆ ಸೈಡ್ ಎ. ಈ ಸಿನಿಮಾವನ್ನು ನಾನು ನೋಡಿದ್ದೇನೆ. ಇದು ನನ್ನನ್ನು ಜಾಗೃತಗೊಳಿಸಿತ್ತು. ಇನ್ನೂ ಸೈಡ್ ಬಿಯನ್ನು ನಾನು ನೋಡಬೇಕು. ನಾನು ಈಗಾಗಲೇ ಅವರಿಗೆ ಈ ವಿಷಯವನ್ನು ಹೇಳಿದ್ದೇನೆ. ನನಗೆ 'ಸೈಡ್ ಎ'ನೇ ಸಾಕು. 'ಸೈಡ್ ಬಿ'ಯಲ್ಲಿ ಏನಾಯ್ತು ಅಂತ ನೋಡಬೇಕು. ಆದರೆ, ನನಗೆ ಇನ್ನೂ ಸೈಡ್ ಎ ನಿಂದಲೇ ಹೊರಗೆ ಬರೋಕೆ ಆಗುತ್ತಿಲ್ಲ." ಎಂದು ಕಾರ್ತಿಕ್ ಸುಬ್ಬರಾಜು ಹೇಳಿದ್ದಾರೆ.


Click it and Unblock the Notifications











