ರಾಜು ಶ್ರೀವತ್ಸವ್ಗೆ ಪ್ರಜ್ಞೆ ಬಂದಿಲ್ಲ: ಸುಳ್ಳು ಸುದ್ದಿ ನಂಬಬೇಡಿ ಎಂದ ಪುತ್ರಿ!
ಭಾರತದ ಜನಪ್ರಿಯ ಹಾಸ್ಯ ಕಲಾವಿದ ಹಾಗೂ ಬಾಲಿವುಡ್ ನಟ ರಾಜು ಶ್ರೀವತ್ಸವ್ ಕಳೆದ ಎರಡು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ಆಗಸ್ಟ್ 10) ರಂದು ರಾಜು ಶ್ರೀವತ್ಸವ್ ಅವರಿಗೆ ಹೃದಯಾಘಾತವಾಗಿತ್ತು. ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದ ರಾಜು ಶ್ರೀವತ್ಸವ್ ಉಳಿದುಕೊಂಡಿದ್ದ ಹೋಟೆಲ್ನ ಜಿಮ್ನಲ್ಲಿ ಹೃದಯಾಘಾತದಿಂದ ಕುಸಿಬಿದ್ದಿದ್ದರು.
ರಾಜು ಶ್ರೀವತ್ಸವ್ ಅವರನ್ನು ದೆಹಲಿಯ ಏಮ್ಸ್ಗೆ ದಾಖಲು ಮಾಡಲಾಗಿತ್ತು. ಅಂದಿನಿಂದ ರಾಜು ಶ್ರೀವತ್ಸವ್ಗೆ ಪ್ರಜ್ಞೆನೇ ಬಂದಿಲ್ಲ ಸುಮಾರು ಎರಡು ವಾರಗಳಾದರೂ ಇನ್ನೂ ತೀವ್ರ ನಿಗಾ ಘಟಕದಲ್ಲಿಯೇ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಮಧ್ಯೆ ರಾಜುಗೆ ಪ್ರಜ್ಞೆ ಬಂದಿದೆ ಎನ್ನುವ ಸುದ್ದಿ ಹರಿದಾಡಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜು ಶ್ರೀವತ್ಸವ್ ಪುತ್ರಿ ಹಾಗೂ ಸಂಬಂಧಿ ಇಬ್ಬರೂ ಪ್ರತಿಕ್ರಿಯೆ ನೀಡಿದ್ದಾರೆ.
ರಾಜು ಶ್ರೀವತ್ಸವ್ಗೆ ಪ್ರಜ್ಞೆ ಬಂದಿದ್ದು ನಿಜವೇ?
ಹಾಸ್ಯ ನಟ ರಾಜು ಶ್ರೀವತ್ಸವ್ ಆಗಸ್ಟ್ 10 ರಿಂದ ದೆಹಲಿಯ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೃದಯಾಘಾತದಿಂದ ಕುಸಿದು ಬಿದ್ದಿದ್ದ ರಾಜು ಅವರ ಸ್ಥಿತಿ ಗಂಭೀರವೆಂದೇ ಹೇಳಲಾಗಿತ್ತು. ಆ ದಿನದಿಂದ ರಾಜು ಶ್ರೀವತ್ಸವ್ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದಾರೆ. ಈ ಮಧ್ಯೆ ರಾಜ ಶ್ರೀವತ್ಸವ್ ಎರಡು ವಾರಗಳ ಬಳಿಕ ಪ್ರಜ್ಞೆ ಬಂದಿದೆ ಎಂದು ಸುದ್ದಿ ಹಬ್ಬಿತ್ತು. ಈ ಬಗ್ಗೆ ರಾಜು ಅವರ ಸಂಬಂಧಿ ಕುಶಾಲ್ ಶ್ರೀವತ್ಸವ್ ಮಾಹಿತಿ ಹಂಚಿಕೊಂಡಿದ್ದಾರೆ.

ರಾಜು ಶ್ರೀವತ್ಸವ್ಗೆ ಪ್ರಜ್ಞೆ ಬಂದಿದೆ ಅನ್ನೋದನ್ನು ಕುಶಾಲ್ ಶ್ರೀವತ್ಸವ್ ತಳ್ಳಿಹಾಕಿದ್ದಾರೆ. "ರಾಜುಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಸುಳ್ಳು ಸುದ್ದಿಗಳನ್ನು ನಂಬಬೇಡಿ" ಅಂತ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸುಳ್ಳು ಸುದ್ದಿ ನಂಬಬೇಡಿ ಎಂದ ಪುತ್ರಿ
ರಾಜು ಶ್ರೀವತ್ಸವ್ ಪುತ್ರಿ ಅಂತರಾ ಶ್ರೀವತ್ಸವ್ ಕೂಡ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. " ಪ್ರೀತಿಯ ಹಿತೈಷಿಗಳೇ, ನನ್ನ ತಂದೆ ಮಿಸ್ಟರ್ ರಾಜು ಶ್ರೀವತ್ಸವ್ ಅವರು ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ನಿಧಾನವಾಗಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ಅವರು ವೆಂಟಿಲೇಟರ್ನಲ್ಲೇ ಇದ್ದಾರೆ. ದೆಹಲಿಯ ಏಮ್ಸ್ ಹಾಗೂ ರಾಜು ಅವರ ಅಧಿಕೃತ ಸೋಶಿಯಲ್ ಮೀಡಿಯಾ ಅಕೌಂಡ್ನಿಂದ ಬರುವ ಹೇಳಿಕೆಗಳೇ ಅಧಿಕೃತ ಹಾಗೂ ನಂಬಿಕೆ ಅರ್ಹವಾಗಿರುತ್ತೆ. ಇದನ್ನು ಬಿಟ್ಟು ಬೇರೆ ಏನೇ ಸುದ್ದಿ ಹಾಗೂ ಹೇಳಿಕೆಗಳು ಬಂದರೂ ಅದು ಅಪ್ರಸ್ತುತವಾಗಿರುತ್ತೆ. ಏಮ್ಸ್ ವೈದ್ಯರ ತಂಡ ತುಂಬಾನೇ ಶ್ರಮವಹಿಸುತ್ತಿದ್ದಾರೆ. ಅವರ ಹಿತೈಷಿಗಳಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಬೇಗ ಗುಣ ಮುಖರಾಗುವಂತೆ ಇದೇ ರೀತಿ ನಿಮ್ಮ ಪ್ರೀತಿ ಹಾಗೂ ಹಾರೈಕೆ ಇರಲಿ." ಎಂದು ರಾಜು ಶ್ರೀವತ್ಸವ್ ಪುತ್ರಿ ತಿಳಿಸಿದ್ದಾರೆ.
ರಾಜು ಶ್ರೀವತ್ಸವ್ ಅವರ ಸೆಕ್ರೆಟರಿ ಗರ್ವಿತ್ ನಾರಂಗ್ ಗುರುವಾರ ಬೆಳಗ್ಗೆ ಪ್ರಜ್ಞೆ ಬಂದಿರೋದಾಗಿ ಹೇಳಿಕೆ ನೀಡಿದ್ದರು. ಅಲ್ಲದೆ ಏಮ್ಸ್ ವೈದ್ಯರು ಅವರ ಆರೋಗ್ಯದ ಕಡೆ ನಿಗಾವಹಿಸಿದ್ದಾರೆ ಎಂದಿದ್ದರು. ಅದರ ಹಿಂದೆನೇ ಸಂಬಂಧಿಗಳು ವ್ಯತಿರಿಕ್ತವಾದ ಹೇಳಿಕೆ ನೀಡಿದ್ದಾರೆ.
ಆರೋಗ್ಯ ಸುಧಾರಿಸಲು ಸಮಯ ಬೇಕು
ರಾಜು ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಆದರೆ ಪ್ರಜ್ಞೆ ಬಂದಿದೆ ಅನ್ನೋದು ಸತ್ಯಕ್ಕೆ ದೂರವಾಗಿದೆ. ಅವರು ಕೆಲವು ಬಾರಿ ಕಣ್ಣುಗಳನ್ನು ತೆರೆದಿದ್ದಾರೆ. ಕೈಗಳನ್ನು ಅಲುಗಾಡಿಸಿದ್ದಾರೆ. ಆದರೆ ಇದು ಸಾಕಾಗುವುದಿಲ್ಲ. ನಮಗೆ ಅವರು ಸಂಪೂರ್ಣವಾಗಿ ಚೇತರಿಕೆ ಕಾಣಬೇಕು. ಅವರ ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ವೈದ್ಯರು ಕೂಡ ಚೇತರಿಕೆ ಕಾಣುವುದಕ್ಕೆ ಸಮಯ ಹಿಡಿಯುತ್ತೆ ಎಂದಿದ್ದಾರೆ." ಎಂದು ಕುಶಾಲ್ ಶ್ರೀವತ್ಸವ್ ಈ ಟೈಮ್ಸ್ಗೆ ಮಾಹಿತಿ ನೀಡಿದ್ದಾರೆ.
ರಾಜು ಶ್ರೀವತ್ಸವ್ ಇನ್ನೂ ವೆಂಟಿಲೇಟರ್ನಲ್ಲಿಯೇ ಇದ್ದಾರೆ. ಸದ್ಯಕ್ಕೆ ವೈದ್ಯರು ವೆಂಟಿಲೇಟರ್ ತೆಗೆಯುವ ನಿರ್ಧಾರಕ್ಕೆ ಬಂದಿಲ್ಲ. ಅವರ ಆರೋಗ್ಯ ಇನ್ನೂ ಸುಧಾರಣೆ ಆಗಬೇಕಿದೆ. ಆ ಬಳಿಕ ಲೈಫ್ ಸಪೋರ್ಟ್ ತೆಗೆಯಲಿದ್ದಾರೆ. ಅಲ್ಲದೆ ಅಂಗಾಂಗಗಳು ಚಿಕಿತ್ಸೆಗೆ ಸ್ಪಂದಿಸುತ್ತಿವೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.


Click it and Unblock the Notifications











