"ನನ್ನ ಕಥೆ ಹೇಳಿದ್ದಕ್ಕೆ ಥ್ಯಾಂಕ್ಸ್"..ಶಾರುಖ್-ಅಟ್ಲೀಗೆ ಧನ್ಯವಾದ ಹೇಳಿದ ವೈದ್ಯ ಯಾರು? ಕರ್ನಾಟಕಕ್ಕೆ ಏನು ಲಿಂಕ್?
ಶಾರುಖ್ ಖಾನ್ ಅಭಿನಯದ ಬ್ಲಾಕ್ಬಸ್ಟರ್ ಸಿನಿಮಾ 'ಜವಾನ್' ತನ್ನ ಬಾಕ್ಸಾಫೀಸ್ ಓಟ ಮುಂದುವರೆಸಿದೆ. ಈ ಸಿನಿಮಾದ ಮೂಲಕ ಮೂರು ಪ್ರಮುಖ ಘಟನೆಗಳ ಬಗ್ಗೆ ನಿರ್ದೇಶಕ ಅಟ್ಲೀ ಬೆಳಕು ಚೆಲ್ಲಿದ್ದಾರೆ. ರೈತರ ಆತ್ಮಹತ್ಯೆ, ವೈದ್ಯಕೀಯ ಕ್ಷೇತ್ರದ ಅವ್ಯವಹಾರಗಳಿಂದ ಜನರ ಜೀವಕ್ಕೆ ಕುತ್ತು ಜೊತೆಗೆ ಬೇಜವಾಬ್ದಾರಿ ಕೈಗಾರಿಕೆಗಳಿಂದಾಗಿ ಸರಣಿ ಸಾವಿನಂಥಾ ಬಹಳ ಸೀರಿಯಸ್ ವಿಚಾರಗಳನ್ನು ಜನರಿಗೆ ಅರ್ಥ ಮಾಡಿಸಿದ್ದಾರೆ ಅಟ್ಲೀ.
ಈ ಮೂರು ಸನ್ನಿವೇಶಗಳೂ ನೈಜ ಘಟನೆಗಳನ್ನು ಆಧರಿಸಿದಂಥವು ಎನ್ನುವ ವಿಚಾರ ಸಾಕಷ್ಟು ಚರ್ಚೆಯಾಗ್ತಿದೆ. ಇದರಲ್ಲಿ ರೈತರ ಆತ್ಮಹತ್ಯೆ ಇಂದಿಗೂ ಅವ್ಯಾಹತವಾಗಿ ನಡೆಯುತ್ತಿರೋದು ದುರಂತವಾದರೂ ಸತ್ಯ. ಇನ್ನು ಕೈಗಾರಿಕೆಗಳ ದುರಂತವಂತೂ ಭೋಪಾಲ್ ಗ್ಯಾಸ್ ಟ್ರ್ಯಾಜಿಡಿಯನ್ನೇ ನೆನಪಿಸುತ್ತದೆ.

ಆದರೆ, ಬಾಲಿವುಡ್ ನಟಿ ಸಾನ್ಯಾ ಮಲ್ಹೋತ್ರಾ ಮಾಡಿದ್ದ ಡಾ. ಈರಂ ಪಾತ್ರ ನಿಜ ಜೀವನದಲ್ಲಿ ನಡೆದ ಘಟನೆಯೊಂದರಿಂದ ಪ್ರಭಾವಿತವಾದದ್ದು ಎನ್ನುವುದು ಈಗ ಭಾರೀ ಚರ್ಚೆಯಾಗ್ತಿದೆ. ಇದಕ್ಕೆ ಕಾರಣ ರಿಯಲ್ ಲೈಫ್ನಲ್ಲಿ ಡಾ. ಈರಂನಂತೆ ಇಂದಿಗೂ ನರಳಾಡುತ್ತಿರುವ ಡಾ. ಕಫೀಲ್ ಖಾನ್ ಕಥೆ ಮತ್ತು 'ಜವಾನ್' ಚಿತ್ರಕ್ಕೆ ಅವರು ಕೊಟ್ಟಿರುವ ಪ್ರತಿಕ್ರಿಯೆಯೇ ಕಾರಣ.
"ಅಟ್ಲೀ-ಶಾರುಖ್ಗೆ ಥ್ಯಾಂಕ್ಸ್"
"ನಾನು ಜವಾನ್ ಸಿನಿಮಾ ನೋಡಿಲ್ಲ. ಆದರೆ, ಅದ್ರಲ್ಲಿ ನನ್ನ ಕತೆಯಂತೆಯೇ ಒಂದು ಕತೆಯಿದೆ. ಅದನ್ನು ಸಾನ್ಯಾ ಮಲ್ಹೋತ್ರಾ ಮಾಡಿದ್ದಾರೆ. ನಿಮ್ಮ ಕಥೆ ತೆರೆಯ ಮೇಲಿದೆ ಎಂದು ಅನೇಕ ಪರಿಚಿತರು-ಸ್ನೇಹಿತರು ಮೆಸೇಜ್ ಮಾಡ್ತಿದ್ದಾರೆ. ನಾನು ನನ್ನ ಕಥೆಯನ್ನು ಸಿನಿಮಾ ಮಾಡಲು ಯಾರಿಗೂ ಅನುಮತಿ ನೀಡಿಲ್ಲ. ನಾನು ಜವಾನ್ ನೋಡಿಯೂ ಇಲ್ಲ. ಸಿನಿಮಾದಲ್ಲಿ ಆರೋಗ್ಯ ಸಚಿವನಿಗೆ ಸಜೆಯಾಗುತ್ತಂತೆ. ಆದರೆ, ನಿಜ ಜೀವನದಲ್ಲಿ ನಾನಿನ್ನೂ ಹೋರಾಡುತ್ತಲೇ ಇದ್ದೀನಿ. ಆದರೆ, ನನ್ನ ಕಥೆಯನ್ನು ಜನರೆದುರು ಬಿಚ್ಚಿಟ್ಟಿದ್ದಕ್ಕೆ ನಿರ್ದೇಶಕ ಅಟ್ಲೀ ಮತ್ತು ನಟ-ನಿರ್ಮಾಪಕ ಶಾರುಖ್ ಖಾನ್ಗೆ ಧನ್ಯವಾದಗಳು" ಎಂದಿದ್ದಾರೆ ಡಾ ಕಫೀಲ್ ಖಾನ್.

ಯಾರು ಈ ಡಾ ಕಫೀಲ್ ಖಾನ್?
ಉತ್ತರ ಪ್ರದೇಶದ ಗೋರಖ್ಪುರದ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯ ಮತ್ತು ಪ್ರಾಧ್ಯಾಪಕರಾಗಿದ್ರು ಡಾ ಕಫೀಲ್ ಖಾನ್. 2017ನೇ ಇಸವಿಯಲ್ಲಿ ಹಣ ಪಾವತಿ ಮಾಡಿಲ್ಲ ಎನ್ನುವ ಕಾರಣಕ್ಕೆ ಆಸ್ಪತ್ರೆಯ ಆಕ್ಸಿಜನ್ ಸರಬರಾಜನ್ನು ನಿಲ್ಲಿಸಲಾಗಿತ್ತು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗ್ಲಿಲ್ಲ. ಅವರು ಯಾರೂ ಸರಿಯಾಗಿ ಪ್ರತಿಕ್ರಿಯಿಸದೇ ಇದ್ದಾಗ ಬೇರೆ ದಾರಿ ಕಾಣದೇ ಡಾ ಕಫೀಲ್ ಖಾನ್ ತಮ್ಮ ಸ್ವಂತ ಖರ್ಚಿನಲ್ಲಿ ತಾವೇ ಆಕ್ಸಿಜನ್ ಹೊಂದಿಸುತ್ತಾರೆ. ಆದರೆ, ಅಷ್ಟರಲ್ಲಾಗಲೇ 63 ಮಕ್ಕಳು ಅಕ್ಯೂಟ್ ಎನ್ಸಫ್ಯಾಲಿಟಿಸ್ ಸಿಂಡ್ರೋಮ್ನಿಂದ ಸಾವನ್ನಪ್ಪುತ್ತಾರೆ. ಇಷ್ಟೆಲ್ಲಾ ಇದ್ರೂ ಉತ್ತರ ಪ್ರದೇಶ ಸರ್ಕಾರ ಆಕ್ಸಿಜನ್ ಕೊರತೆಯಿಂದ ಸಾವು ಉಂಟಾಯ್ತು ಅನ್ನೋದನ್ನು ನಿರಾಕರಿಸಿತು. ಬದಲಿಗೆ ಕರ್ತವ್ಯಲೋಪದ ಆಪಾಧನೆ ಮೇಲೆ ಡಾ. ಕಫೀಲ್ ಖಾನ್ರನ್ನೇ ಜೈಲಿಗೆ ಕಳಿಸಿತು.
ಡಾ.ಕಫೀಲ್ ಖಾನ್ ಕರ್ನಾಟಕದ ನಂಟು!
ಉತ್ತರ ಪ್ರದೇಶದ ಗೋರಖಪುರದವ್ರಾದ ಡಾ ಕಫೀಲ್ ಖಾನ್ ಎಂಬಿಬಿಎಸ್ ಮತ್ತು ಎಂಡಿ ಮಾಡಲು ಕರ್ನಾಟಕದ ಮಣಿಪಾಲ್ಗೆ ಬರುತ್ತಾರೆ. ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಮಕ್ಕಳ ಆರೋಗ್ಯ (ಪೀಡಿಯಾಟ್ರಿಕ್ಸ್)ನಲ್ಲಿ ಸ್ನಾತ್ತಕೋತ್ತರ ಪದವಿ ಪಡೆದ ಇವರು ನಂತರ ಹುಟ್ಟೂರಿಗೆ ತೆರಳಿ ಅಲ್ಲಿನ ಬಾಬಾ ರಾಘವ ದಾಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿ ವೃತ್ತಿ ಆರಂಭಿಸುತ್ತಾರೆ.
ನಿಜ ಜೀವನದಲ್ಲಿ ನ್ಯಾಯ ಸಿಕ್ಕಿಲ್ಲ
ಸಿನಿಮಾ ಮತ್ತು ನೈಜ ಬದುಕಿಗೆ ಬಹಳ ವ್ಯತ್ಯಾಸವಿದೆ ಎಂದ ಡಾ. ಖಾನ್, 'ಜವಾನ್' ಚಿತ್ರದಲ್ಲಿ ತಪ್ಪಿತಸ್ಥ ಆರೋಗ್ಯ ಸಚಿವರಿಗೆ ಶಿಕ್ಷೆ ದೊರೆತಿದೆಯಂತೆ. ಆದರೆ, ನಾನು ಮತ್ತು ನನ್ನೊಂದಿಗೆ ಅಂದು ನೋವು ಅನುಭವಿಸಿದ 81 ಕುಟುಂಬಗಳು ಇನ್ನೂ ನ್ಯಾಯಕ್ಕಾಗಿ ಹೋರಾಟ ಮಾಡುತ್ತಲೇ ಇದ್ದೇವೆ ಎಂದು ಎಕ್ಸ್ (ಮಾಜಿ ಟ್ವಿಟರ್)ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.


Click it and Unblock the Notifications











