ಜತೆಯಾಗಿ ಯುದ್ಧದಲ್ಲಿ ಗೆಲ್ಲೋಣ: ರಿಷಿ ಕಪೂರ್ ಕೊನೆಯದಾಗಿ ಮಾಡಿದ್ದ ಟ್ವೀಟ್ ಇದು
ಒಂದೇ ದಿನದ ಅಂತರದಲ್ಲಿ ಭಾರತೀಯ ಚಿತ್ರರಂಗ ಇಬ್ಬರು ದಿಗ್ಗಜರನ್ನು ಕಳೆದುಕೊಂಡು ಅಕ್ಷರಶಃ ಕಂಗಾಲಾಗಿದೆ. ಸತತ ಎರಡು ದಿನ ಬೆಳಿಗ್ಗೆಯೇ ಇಬ್ಬರು ಮಹಾನ್ ನಟರ ಮರಣದ ವಾರ್ತೆಗಳನ್ನು ಕೇಳಿ ಆಘಾತಕ್ಕೆ ಒಳಗಾಗಿದೆ.
Recommended Video
ಕ್ಯಾನ್ಸರ್ನಿಂದ ಬಳಲುತ್ತಿದ್ದ ರಿಷಿ ಕಪೂರ್, ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ ಬಳಿಕವೂ ಹಲವು ಬಾರಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದರೆ ತಮ್ಮ ಅಭಿಪ್ರಾಯಗಳನ್ನು ಟ್ವಿಟ್ಟರ್ ಮೂಲಕ ಹಂಚಿಕೊಳ್ಳುತ್ತಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರು. ಟ್ವಿಟ್ಟರ್ ಮೂಲಕ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದರು.
ಏಪ್ರಿಲ್ 2ರಂದು ಅವರ ಟ್ವಿಟ್ಟರ್ ಖಾತೆಯಲ್ಲಿ ಕೊನೆಯ ಬಾರಿ ಟ್ವೀಟ್ಗಳು ಕಾಣಿಸಿಕೊಂಡಿದ್ದವು. ಅಂದು ನಾಲ್ಕು ಟ್ವೀಟ್ಗಳನ್ನು ಅವರು ಮಾಡಿದ್ದರು. ಅದರ ನಂತರ ಅವರು ಟ್ವಿಟ್ಟರ್ನಲ್ಲಿ ಯಾವುದೇ ಪೋಸ್ಟ್ ಹಾಕಿರಲಿಲ್ಲ. ಮುಂದೆ ಓದಿ...

ರಿಷಿ ಮಾಡಿದ್ದ ಕೊನೆಯ ಟ್ವೀಟ್
ರಿಷಿ ಕಪೂರ್ ಕೊನೆಯದಾಗಿ ಮಾಡಿದ್ದ ಟ್ವೀಟ್ ಕೊರೊನಾ ವೈರಸ್ ವಾರಿಯರ್ಸ್ ಕುರಿತಾಗಿತ್ತು. 'ಎಲ್ಲ ಸಾಮಾಜಿಕ ಅಂತಸ್ತು ಮತ್ತು ನಂಬಿಕೆಗಳುಳ್ಳ ಸಹೋದರ ಮತ್ತು ಸಹೋದರಿಯರಿಗೆ ಮನವಿ. ದಯವಿಟ್ಟು ಹಿಂಸಾಚಾರ, ಕಲ್ಲು ತೂರಾಟ ಅಥವಾ ಗುಂಪು ಹತ್ಯೆಯಂತಹ ಕೃತ್ಯಗಳಿಂದ ದೂರವಿರಿ. ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಮುಂತಾದವರು ನಿಮ್ಮನ್ನು ಉಳಿಸಲು ತಮ್ಮ ಪ್ರಾಣವನ್ನು ಪಣವಾಗಿಟ್ಟುಕೊಂಡಿದ್ದಾರೆ. ನಾವು ಜತೆಯಾಗಿ ಈ ಕೊರೊನಾ ವೈರಸ್ ಯುದ್ಧದಲ್ಲಿ ಗೆಲ್ಲಬೇಕಿದೆ. ದಯವಿಟ್ಟು. ಜೈ ಹಿಂದ್' ಎಂದು ಜನರಲ್ಲಿ ಮನವಿ ಮಾಡಿದ್ದೇ ಅವರ ಅಂತಿಮ ಟ್ವೀಟ್.

ರಾಮನವಮಿ ಹಾಡಿನ ನೆನಪು
ಅದೇ ದಿನ ಕುನಾಲ್ ಕೊಹ್ಲಿ ಅವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದ ರಿಷಿ, ರಾಮ ನವಮಿಯ ಕುರಿತು ಎರಡು ಟ್ವೀಟ್ಗಳನ್ನು ಮಾಡಿದ್ದರು. ತಮ್ಮ 'ಸರ್ಗಮ್' ಚಿತ್ರಕ್ಕೆ 1979ರಲ್ಲಿ ಮಹಾರಾಷ್ಟ್ರದ ವಾಯ್ ಎಂಬಲ್ಲಿ ನಡೆದ ರಾಮನ ಕುರಿತಾದ ಹಾಡಿನ ಚಿತ್ರೀಕರಣದ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.

ವಿವಾದ ಸೃಷ್ಟಿಸಿದ್ದ ಟ್ವೀಟ್
ಇದಕ್ಕೂ ಮುನ್ನ ಅವರು ಮದ್ಯದಂಗಡಿ ಕುರಿತು ಮಾಡಿದ್ದ ಟ್ವೀಟ್ ವಿವಾದ ಸೃಷ್ಟಿಸಿತ್ತು. ಯೋಚನೆ ಮಾಡಿ. ಪರವಾನಗಿಯುಳ್ಳ ಎಲ್ಲ ಲಿಕ್ಕರ್ ಅಂಗಡಿಗಳನ್ನೂ ಸಂಜೆ ವೇಳೆ ಸ್ವಲ್ಪ ಸಮಯ ತೆರೆಯಲು ಸರ್ಕಾರ ಅವಕಾಶ ನೀಡಬೇಕು ಎಂದು ರಿಷಿ ಕಪೂರ್ ಹೇಳಿದ್ದಾರೆ.'ನನ್ನ ಮಾತನ್ನು ತಪ್ಪಾಗಿ ತಿಳಿಯಬೇಡಿ. ಜನರು ಈ ಎಲ್ಲಾ ಒತ್ತಡ, ಸುತ್ತಲಿನ ಅನಿರ್ದಿಷ್ಟ ಸಂಗತಿಗಳ ನಡುವೆ ಮನೆಯಲ್ಲಿಯೇ ಇರುತ್ತಾರೆ. ಹಾಗೆಯೇ ಪೊಲೀಸರು, ವೈದ್ಯರು, ನಾಗರಿಕರು ಎಲ್ಲರಿಗೂ ಸ್ವಲ್ಪ ಬಿಡುವು ಬೇಕು. ಅದೇನೇ ಮಾಡಿದ್ದರೂ ಬ್ಲಾಕ್ನಲ್ಲಿ ಮದ್ಯ ಸಿಗುತ್ತಿದೆಯಲ್ಲವೇ?' ಎಂದಿದ್ದರು.

ಕಾನೂನುಬದ್ಧಗೊಳಿಸಿ
ರಾಜ್ಯ ಸರ್ಕಾರವು ಅಬಕಾರಿಯಿಂದ ಹಣ ಸಂಗ್ರಹಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿವೆ. ಖಿನ್ನತೆಗೆ ಎಂದಿಗೂ ಹತಾಶೆಯೂ ಸೇರಿಕೊಳ್ಳುವಂತಾಗಬಾರದು. ಹೇಗೂ ಕುಡಿಯುತ್ತಾ ಇದ್ದೇವೆ, ಅದನ್ನು ಕಾನೂನುಬದ್ಧಗೊಳಿಸಿ. ಇದರಲ್ಲಿ ಬೂಟಾಟಿಕೆ ಬೇಡ. ಇದು ನನ್ನ ಯೋಚನೆಯಷ್ಟೇ' ಎಂದು ರಿಷಿ ಕಪೂರ್ ಹೇಳಿದ್ದರು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ತುರ್ತು ಪರಿಸ್ಥಿತಿ ಬೇಕು
ಅದಕ್ಕೂ ಮುನ್ನ ಅವರು, ಆತ್ಮೀಯ ಭಾರತೀಯರೇ ನಾವು ತುರ್ತುಪರಿಸ್ಥಿತಿಯನ್ನು ಘೋಷಿಸಲೇಬೇಕು. ದೇಶದೆಲ್ಲೆಡೆ ಏನಾಗುತ್ತಿದೆ ಎಂಬುದನ್ನು ನೋಡಿ. ಈ ಪರಿಸ್ಥಿತಿಯನ್ನು ನಿಭಾಯಿಸಲು ಬೇರೆ ಯಾವುದೇ ದಾರಿ ಇಲ್ಲ. ಇದು ನಮ್ಮ ಒಳ್ಳೆಯದಕ್ಕಾಗಿಯೇ ಎಂದು ಹೇಳಿದ್ದರು.


Click it and Unblock the Notifications











