ಸುಶಾಂತ್ ಸಿಂಗ್ ಕುಟುಂಬದ 5 ಮಂದಿ ಅಪಘಾತದಲ್ಲಿ ಮೃತ
ಬಾಲಿವುಡ್ನ ದಿವಂಗತ ನಟ ಸುಶಾಂತ್ ಸಿಂಗ್ ಕುಟುಂಬದ ಆರು ಮಂದಿ ರಸ್ತೆ ಅಪಘಾತದಲ್ಲಿ ನಿನ್ನೆ ನಿಧನ ಹೊಂದಿದ್ದಾರೆ.
ಸುಶಾಂತ್ ಸಿಂಗ್ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದ ಕಾರು, ಲಾರಿಯೊಂದಕ್ಕೆ ಡಿಕ್ಕಿ ಸಂಭವಿಸಿದ ಕಾರಣ ಕಾರು ಡ್ರೈವರ್ ಸೇರಿ ಒಟ್ಟು ಐದು ಮಂದಿ ಮೃತರಾಗಿದ್ದಾರೆ. ನಾಲ್ಕು ಮಂದಿ ಗಾಯಾಳುಗಳಾಗಿದ್ದಾರೆ. ಘಟನೆಯು ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ಸುಶಾಂತ್ ಸಿಂಗ್ರ ಸಂಬಂಧಿ ಲಾಲ್ಜೀತ್ ಸಿಂಗ್ (75) ಅವರ ಇಬ್ಬರು ಮಕ್ಕಳು ಅಮಿತ್ ಶೇಖರ್ ಸಿಂಗ್, ನೊಮಾನಿ ಸಿಂಗ್, ರಾಮಚಂದ್ರ ಸಿಂಗ್, ಮಗಳು ಬೇಬಿ ದೇವಿ, ಡೈಸಿ ದೇವಿ ಮತ್ತು ಡ್ರೈವರ್ ಪ್ರೀತಂ ಕುಮಾರ್ ಸಿಂಗ್ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ನಾಲ್ಕು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರೆಲ್ಲರೂ ಹರಿಯಾಣಾ ಪೊಲೀಸ್ ಇಲಾಖೆಯ ಎಡಿಜಿ ಒಪಿ ಸಿಂಗ್ರ ಸಹೋದರಿ ಗೀತಾ ದೇವಿಯ ಅಂತಿಮ ಸಂಸ್ಕಾರ ಮುಗಿಸಿಕೊಂಡು ಪಾಟ್ನಾದಿಂದ ಜಮೋಯಿಗೆ ತಮ್ಮ ಎಸ್ಯುವಿ ವಾಹನದಲ್ಲಿ ವಾಪಸ್ಸಾಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 333ಎ ನಲ್ಲಿ ಲಖಿಸಹರಿ ಜಿಲ್ಲೆಯ ಪಿಪ್ರಾ ಗ್ರಾಮದ ಬಳಿ ಬರುವಾಗ ಎಸ್ಯುವಿ ಕಾರು ಖಾಲಿ ಸಿಲಿಂಡರ್ಗಳನ್ನು ಸಾಗಿಸುತ್ತಿದ್ದ ದೊಡ್ಡ ಲಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಲಾರಿ ಡ್ರೈವರ್ ಹಾಗೂ ಆತನ ಸಹಾಯಕ ಪಾರಾಗಿದ್ದಾರೆ.
ಅಪಘಾತದ ತೀವ್ರತೆಗೆ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು, ಎಸ್ಯುವಿ ಕಾರು ನಜ್ಜು-ಗುಜ್ಜಾಗಿತ್ತು. ಡ್ರೈವರ್ ಹಾಗೂ ಮುಂದಿನ ಸೀಟಿನಲ್ಲಿ ಕುಳಿತಿದ್ದ ಇನ್ನೊಬ್ಬ ವ್ಯಕ್ತಿಯ ದೇಹವನ್ನು ಮಾತ್ರವೇ ಸ್ಥಳೀಯರಿಗೆ ಹೊರಗೆ ತೆಗೆಯಲಾಗಿತ್ತು. ಇನ್ನುಳಿದ ಮೃತರ ದೇಹಗಳು ಕಾರಿನ ಜೊತೆಗೆ ಮುರುಟಿಕೊಂಡಿದ್ದವು. ಬಳಿಕ ಕೆಲವು ಕಟರ್ ಉಪಕರಣಗಳನ್ನು ತರಿಸಿ ಕಾರಿನ ಬಾಗಿಲುಗಳನ್ನು ಕತ್ತರಿಸಿ ದೇಹಗಳನ್ನು ಹೊರತೆಗೆಯಲಾಯಿತು ಎಂದು ಪೊಲೀಸರು ಮಾಧ್ಯಮಗಳಿಗೆ ಹೇಳಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಬಾಲಿವುಡ್ನ ಯುವ ನಾಯಕ ನಟರಾಗಿದ್ದರು. ಕಳೆದ ವರ್ಷ ಜುಲೈ 14 ರಂದು ನಿಧನರಾದರು. ಮುಂಬೈನ ಅವರ ಮನೆಯಲ್ಲಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯಿತು. ಅವರ ಸಾವಿನ ಬಗ್ಗೆ ಹಲವು ಊಹಾಪೋಹಗಳು ಎದ್ದಿದ್ದವು, ಮುಂಬೈ ಪೊಲೀಸರು ಇದೊಂದು ಆತ್ಮಹತ್ಯೆ ಎಂದರಾದರೂ ಸುಶಾಂತ್ರ ಪೋಷಕರು ಸುಶಾಂತ್ರ ಗರ್ಲ್ಫ್ರೆಂಡ್ ರಿಯಾ ಚಕ್ರವರ್ತಿ ವಿರುದ್ಧ ಆರೋಪ ಮಾಡಿದರು. ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ನ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂತು ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ಮಹೇಶ್ ಭಟ್, ಅರ್ಜುನ್ ರಾಮ್ಪಾಲ್, ಕರಣ್ ಜೋಹರ್ ಸೇರಿದಂತೆ ಹಲವು ಖ್ಯಾತನಾಮರು ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ಎದುರಿಸಬೇಕಾಯಿತು.


Click it and Unblock the Notifications











