'ಈ ಸಿನಿಮಾದಲ್ಲಿ ನನ್ನ ತಾಯಿ ವೇಶ್ಯೆಯಾಗಿ ಬದಲಾಗಿದ್ದಾಳೆ': ಆಲಿಯಾ ವಿರುದ್ಧ ಗಂಗೂಬಾಯಿ ಪುತ್ರ ಕಿಡಿ
'ಗಂಗೂಬಾಯಿ ಕಾಠಿಯಾವಾಡಿ' ಬಾಲಿವುಡ್ನ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ. ಸಂಜಯ್ ಲೀಲಾ ಬನ್ಸಾಲಿ ಹಾಗೂ ಆಲಿಯಾ ಭಟ್ ಕಾಂಬಿನೇಷನ್ನಲ್ಲಿ ಬರುತ್ತಿರುವ ಮೊದಲ ಸಿನಿಮಾ. ಈ ಸಿನಿಮಾ ಆರಂಭವಾದ ದಿನದಿಂದಲೂ ಗಂಗೂಬಾಯಿ ಸಿನಿಮಾ ವಿವಾದಕ್ಕೆ ಸಿಲುಕುತ್ತಲೇ ಇದೆ. ಇನ್ನೇನು ಬಿಡುಗಡೆಗೆ ಕೆಲವೇ ದಿನಗಳು ಇದೆ ಅನ್ನುವಾಗಲೇ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದ ವಿರುದ್ಧ ಮತ್ತೆ ಗಂಗೂಬಾಯಿ ಪುತ್ರ ಬಾಬು ರಾವ್ಜಿ ಶಾ ತಿರುಗಿಬಿದ್ದಿದ್ದಾನೆ.
ಈ ಸಿನಿಮಾದಲ್ಲಿ ಗಂಗೂಬಾಯಿಯನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಕುಟುಂಬ ಆಕ್ರೋಶ ಹೊರ ಹಾಕಿದೆ. ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಗೂ ಆಲಿಯಾ ಭಟ್ ವಿರುದ್ಧ ಗಂಗೂಬಾಯಿ ಕುಟುಂಬ ಕಿಡಿಕಾರುತ್ತಿದೆ. ಗಂಗೂಬಾಯಿ ಫ್ಯಾಮಿಲಿ ಲಾಯರ್ ಕೂಡ ಸಿನಿಮಾದ ಟ್ರೈಲರ್ ನೋಡಿ ದೊಡ್ಡ ಶಾಕ್ಗೆ ಒಳಗಾಗಿದ್ದು, ಸಿನಿಮಾ ಬಿಡುಗಡೆಯನ್ನು ವಿರೋಧಿಸುತ್ತಿದ್ದಾರೆ. ಹೀಗಾಗಿ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರಕ್ಕೆ ಬಿಡುಗಡೆ ವೇಳೆ ಆತಂಕ ಎದುರಾಗಿದೆ.

ಈ ಸಿನಿಮಾ ನನ್ನ ಅಮ್ಮ ಒಬ್ಬಳು ವೇಶ್ಯೆ
ಗಂಗೂಬಾಯಿ ಪುತ್ರ ಬಾಬು ರಾವ್ಜಿ ಶಾ ಮಾಧ್ಯಮಗಳ ಮುಂದೆ ಆಕ್ರೋಶ ಹೊರಹಾಕಿದ್ದಾರೆ. " ನನ್ನ ಅಮ್ಮ ಈ ಸಿನಿಮಾದಲ್ಲಿ ವೇಶ್ಯೆಯಾಗಿ ಬದಲಾಗಿದ್ದಾರೆ. ನನ್ನ ಅಮ್ಮನ ಬಗ್ಗೆ ಜನರು ಏನೇನೋ ಹೇಳುತ್ತಿದ್ದಾರೆ. " ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 2021ರಲ್ಲೇ ಗಂಗೂಬಾಯಿ ಪುತ್ರ ಬಾಬು ರಾಜ್ಜಿ ಮುಂಬೈ ಹೈ ಕೋರ್ಟ್ನಲ್ಲಿ ದೂರನ್ನು ದಾಖಲಿಸಿದ್ದರು. ನ್ಯಾಯಾಲಯ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಗೂ ಆಲಿಯಾ ಭಟ್ಗೆ ಸಮನ್ಸ್ ಕೂಡ ನೀಡಿತ್ತು. ಆದರೆ, ಗಂಗೂಬಾಯಿ ಕುಟುಂಬ ಸಿನಿಮಾ ಬಿಡುಗಡೆ ಮಾಡಬಾರದು ಎಂಬ ವಾದವನ್ನು ನ್ಯಾಯಾಲಯ ತಳ್ಳಿಹಾಕಿತ್ತು.

ಗಂಗೂಬಾಯಿ ಕುಟುಂಬದ ವಕೀಲರ ವಾದವೇನು?
ಗಂಗೂಬಾಯಿ ಕುಟುಂಬವನ್ನು ಪ್ರತಿನಿಧಿಸುವ ವಕೀಲ ನರೇಂದ್ರ ಕೂಡ ಸಿನಿಮಾದ ಟ್ರೈಲರ್ ನೋಡಿ ಶಾಕ್ ಆಗಿದ್ದಾರೆ. " ಗಂಗೂಬಾಯಿಯನ್ನು ಸಂಪೂರ್ಣವಾಗಿ ತಪ್ಪಾಗಿ ಹಾಗೂ ಕೆಟ್ಟದಾಗಿ ಚಿತ್ರಿಸಲಾಗಿದೆ. ನೀವು ಒಬ್ಬ ಸಮಾಜ ಸೇವಕಿಯನ್ನು ವೇಶ್ಯೆಯಾಗಿ ತೋರಿಸಿದ್ದೀರಿ. ಯಾವ ಕುಟುಂಬ ಇದನ್ನು ಇಷ್ಟ ಪಡುತ್ತದೆ.? ನೀವು ಆಕೆಯನ್ನು ರಾಕ್ಷಸಿ ಹಾಗೂ ಲೇಡಿ ಡಾನ್ರಂತೆ ತೋರಿಸಿದ್ದೀರ." ಎಂದು ಚಿತ್ರತಂಡದ ವಿರುದ್ಧ ಕಿಡಿಕಾರಿದ್ದಾರೆ. ಹೀಗಾಗಿ ಈ ಸಿನಿಮಾ ಮತ್ತೆ ವಿವಾದದಲ್ಲಿ ಸಿಲುಕುವ ಸಾಧ್ಯತೆಯಿದೆ.

ಗಂಗೂಬಾಯಿ ಕುಟುಂಬಕ್ಕೆ ಮುಜುಗರ
ಗಂಗೂಬಾಯಿ ಬಗ್ಗೆ ಸಿನಿಮಾ ಮಾಡಲಾಗುತ್ತಿದೆ ಅಂತ ಗೊತ್ತಾದ ದಿನದಿಂದ ಕುಟುಂಬ ಮಜುಗರಕ್ಕೆ ಒಳಗಾಗಿದೆ. ಈಗಿರುವ ಮನೆ ಬಿಟ್ಟು ಬೇರೆ ಕಡೆ ಹೋಗಿದ್ದಾರೆ. ಮುಂಬೈನ ಅಂಧೇರಿಯಿಂದ ಬೋರಿವಲಿ ಕಡೆ ಹೋಗಿದ್ದಾರೆ. ಇವರ ಸಂಬಂಧಿಗಳು ಗಂಗೂಬಾಯಿ ವೇಶ್ಯೆಯಾಗಿದ್ದಳಾ, ಸಮಾಜ ಸೇವಕಿನಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಕುಟುಂಬದ ಮಾನಸಿಕ ಸ್ಥಿತಿ ಈಗ ಸರಿಯಾಗಿಲ್ಲ. ಶಾಂತಿಯುತವಾಗಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ." ಎಂದು ಗಂಗೂಬಾಯಿ ಕುಟುಂಬದ ಪರ ವಕೀಲ ನರೇಂದ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಮ್ಮ ಕಾನೂನಿನಲ್ಲೇ ಸಮಸ್ಯೆಯಿದೆ
" ನಮ್ಮ ಕಾನೂನಿನಲ್ಲಿಯೇ ಸಮಸ್ಯೆಯಿದೆ. ತಪ್ಪಾಗಿ ಬಿಂಬಿಸಿದ್ದಕ್ಕೆ ಏನಾದರೂ ಮಾಡುವ ಬದಲು ಸಾಕ್ಷಿಗಳನ್ನು ಕೇಳುತ್ತಿದ್ದಾರೆ. ಈಗಾಗಲೇ ಗಂಗೂಬಾಯಿ ಪುತ್ರ ಬಾಬು ರಾವ್ಜಿ ನ್ಯಾಯಾಲಯಕ್ಕೆ ಏನು ಬೇಕೋ ಅದೆಲ್ಲವನ್ನೂ ಒದಗಿಸಿದ್ದಾರೆ. ಇದರ ಹೊರತಾಗಿಯೂ ಇನ್ನೂ ಯಾವುದೇ ಪ್ರಕ್ರಿಯೆ ನಡೆದಿಲ್ಲ." ಎಂದು ವಕೀಲ ನರೇಂದ್ರ ಬೇಸರ ವ್ಯಕ್ತಪಡಿಸುತ್ತಾರೆ. 2020ರಲ್ಲಿ ಸಿನಿಮಾ ಸೆಟ್ಟೇರಿದ ದಿನದಿಂದಲೇ ಸಿನಿಮಾ ವಿರುದ್ಧ ಗಂಗೂಬಾಯಿ ಕುಟುಂಬ ತಿರುಗಿಬಿದ್ದಿತ್ತು. ಅಲ್ಲಿಂದಲೂ ಈ ಸಿನಿಮಾವನ್ನು ನಿಲ್ಲಿಸಲು ಕುಟುಂಬ ಹೋರಾಟ ಮಾಡುತ್ತಲೇ ಇದೆ. 'ಗಂಗೂಬಾಯಿ ಕಾಠಿಯವಾಡಿ' ಇದೇ ಫೆಬ್ರವರಿ 25ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.


Click it and Unblock the Notifications











