"ಧರಂ ಜೀ.. ಪ್ರೀತಿಯ ಪತಿ, ಪ್ರೀತಿಯ ತಂದೆ.. ನನ್ನ ವೈಯಕ್ತಿಕ ನಷ್ಟ ವರ್ಣನಾತೀತ"; ಹೇಮಾ ಮಾಲಿನಿ ಮೊದಲ ಪೋಸ್ಟ್
ಬಾಲಿವುಡ್ನ ಹೀ-ಮ್ಯಾನ್ ಧರ್ಮೇಂದ್ರ ಇತ್ತೀಚೆಗೆ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ನಿಧನರಾಗಿದ್ದಾರೆ. ಭಾರತೀಯ ದಿಗ್ಗಜನ ನಿಧನಕ್ಕೆ ಅಭಿಮಾನಿಗಳು, ಚಿತ್ರರಂಗ ಕಂಬನಿ ಮಿಡಿದಿದ್ದಾರೆ. ಧರ್ಮೇಂದ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ಅವರ ಕುಟುಂಬ ದು:ಖದಲ್ಲಿ ಮುಳುಗಿತ್ತು. ಅದರಲ್ಲೂ ಪತ್ನಿ ಹೇಮಾ ಮಾಲಿನಿ ಭಾರದ ಹೃದಯದಲ್ಲಿ ಬೀಳ್ಕೊಟ್ಟಿದ್ದರು.
ಧರ್ಮೇಂದ್ರ ಅವರ ಕೊನೆಯ ದಿನಗಳಲ್ಲಿ ಹೇಮಾ ಮಾಲಿನಿ ಅವರ ಜೊತೆಯಲ್ಲಿಯೇ ಇದ್ದರು. ನೋವಿನಲ್ಲಿ ಮುಳುಗಿ ಹೋಗಿದ್ದರೂ, ಅದನ್ನು ಹೊರಗಿನ ಪ್ರಪಂಚಕ್ಕೆ ತೋರಿಸಿಕೊಂಡಿರಲಿಲ್ಲ. ಮಾಧ್ಯಮಗಳು ಧರ್ಮೇಂದ್ರ ಅವರ ಸಾವಿನ ಸುದ್ದಿಯನ್ನು ಮೊದಲ ಬಾರಿಗೆ ಪ್ರಕಟಿಸಿದಾಗ ಕೆರಳಿ ಕೆಂಡವಾಗಿದ್ದರು. ಇದೀಗ ಅಗಲಿದ ತಮ್ಮ ಪತಿಯ ಬಗ್ಗೆ ಹೇಮಾ ಮಾಲಿನಿ ತಮ್ಮ ಎಕ್ಸ್ ಖಾತೆಯಲ್ಲಿ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.

ತಮ್ಮ ಎಮೋಷನಲ್ ಪೋಸ್ಟ್ನಲ್ಲಿ ಹೇಮಾ ಮಾಲಿನಿ ಪತಿಯನ್ನು ಸ್ನೇಹಿತ, ತತ್ವಜ್ಞಾನಿ, ಮಾರ್ಗದರ್ಶಕ, ಕವಿ ಎಂದು ಬಣ್ಣಿಸಿದ್ದಾರೆ. ಧರ್ಮೇಂದ್ರ ಅಗಲಿದ ಮೂರು ದಿನಗಳ ಬಳಿಕ ಹೇಮಾ ಮಾಲಿನಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. "ಧರಂ ಜೀ ಯಾವುದೇ ಕಷ್ಟದ ಸಮಯದಲ್ಲಿ ನೆರವಾಗುತ್ತಿದ್ದ ವ್ಯಕ್ತಿ" ಎಂದು ನೆನಪಿಸಿಕೊಂಡಿದ್ದಾರೆ. ಹೇಮಾ ಮಾಲಿನಿ ಎಕ್ಸ್ ಪೋಸ್ಟ್ನಲ್ಲಿ ಏನಿದೆ ಎಂದು ನೋಡುವುದಾರೇ..
"ಧರಂ ಜೀ ಪ್ರೀತಿಯ ಪತಿ-ತಂದೆ"
ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ ಲವ್ ಸ್ಟೋರಿ 80ರ ದಶಕದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿತ್ತು. ಇಬ್ಬರ ಪ್ರೀತಿ ಕೊನೆವರೆಗೂ ವಿವಾದಕ್ಕೆ ಎಡೆ ಮಾಡಿಕೊಡದೆ ಉಳಿಸಿಕೊಂಡು ಬಂದಿದ್ದರು. ಹೀಗಾಗಿ ಧರ್ಮೇಂದ್ರ ಅವರನ್ನು ಪ್ರೀತಿಯ ಪತಿ, ತಂದೆ, ಕವಿ ಅಂತೆಲ್ಲ ಹೇಮಾ ಮಾಲಿನಿ ಬಣ್ಣಿಸಿದ್ದಾರೆ. "ಧರಂ ಜೀ ನನಗೆ ಎಲ್ಲವೂ ಆಗಿದ್ದರು. ಪ್ರೀತಿಯ ಪತಿ, ನಮ್ಮ ಇಬ್ಬರು ಹೆಣ್ಣು ಮಕ್ಕಳು ಇಶಾ ಹಾಗೂ ಅಹಾನಾಗೆ ಪ್ರೀತಿಯ ತಂದೆ, ಒಳ್ಳೆಯ ಸ್ನೇಹಿತ, ಒಳ್ಳೆಯ ತತ್ವಜ್ಞಾನಿ, ಅತ್ಯುತ್ತಮ ಮಾರ್ಗದರ್ಶಕ, ಕವಿ, ನನಗೆ ಯಾವುದೇ ಸಮಯದಲ್ಲಿ ಏನೇ ಅಗತ್ಯವಿದ್ದರೂ ಅವಲಂಬಿಸುವ ವ್ಯಕ್ತಿ, ಧರ್ಮೆಂದ್ರ ಅವರು ನನಗೆ ಎಲ್ಲವೂ ಆಗಿದ್ದರು." ಎಂದು ಹೇಮಾ ಮಾಲಿನಿ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
"ಸದಾ ನನ್ನೊಂದಿಗೆ ಇದ್ದರು"
ಇದೇ ಪೋಸ್ಟ್ನಲ್ಲಿ ಧರ್ಮೇಂದ್ರ ಯಾವಾಗಲೂ ತನ್ನೊಂದಿಗೆ ಇದ್ದರೆಂದು ಹೇಳಿಕೊಂಡಿದ್ದಾರೆ. " ಧರ್ಮೆಂದ್ರ ಅವರು ನನ್ನ ಒಳ್ಳೆಯ ಹಾಗೂ ಕೆಟ್ಟ ಸಮಯಗಳಲ್ಲಿ ಸದಾ ನನ್ನೊಂದಿಗಿದ್ದರು. ಅವರ ಸರಳ, ಸ್ನೇಹಮಯಿಯಾಗಿದ್ದರು. ಹೀಗಾಗಿ ನನ್ನ ಕುಟುಂಬದ ಎಲ್ಲಾ ಸದಸ್ಯರ ಮನಗೆದ್ದಿದ್ದರು. ಪಬ್ಲಿಕ್ ಪರ್ಸನಾಲಿಟಿಯಾಗಿದ್ದು, ಅವರ ಪ್ರತಿಭೆ, ಅಪಾರ ಜನಪ್ರಿಯತೆ ಹೊರತಾಗಿಯೂ ಅವರ ವಿನಯ, ಆಕರ್ಷಣೆ ಎಲ್ಲಾ ದಂತಕಥೆಗಳಲ್ಲಿ ಒಂದು ಅನನ್ಯ ಐಕಾನ್ ಆಗಿ ಗುರುತಿಸಿತ್ತು." ಎಂದು ಹೇಮಾ ಮಾಲಿನಿ ಹೇಳಿದ್ದಾರೆ.
"ನನ್ನ ವೈಯಕ್ತಿಕ ನಷ್ಟ ವರ್ಣನಾತೀತ"
ತನ್ನ ಪತಿಯ ಸಾಧನೆ, ಕೀರ್ತಿ ಬಗ್ಗೆ ಹೆಮ್ಮೆ ವ್ಯಕ್ತಿಪಡಿಸಿರುವ ಹೇಮಾ ಮಾಲಿನಿ ತನಗಾದ ನಷ್ಟದ ಬಗ್ಗೆ ವರ್ಣಿಸುವುದಕ್ಕೆ ಅಸಾಧ್ಯವೆಂದು ಹೇಳಿದ್ದಾರೆ. "ಚಿತ್ರರಂಗದಲ್ಲಿ ಅವರ ಕೀರ್ತಿ ಮತ್ತು ಸಾಧನೆ ಶಾಶ್ವತವಾಗಿ ಉಳಿಯಲಿವೆ. ನನ್ನ ವೈಯಕ್ತಿಕ ನಷ್ಟ ವರ್ಣನಾತೀತ. ಈಗ ಸೃಷ್ಟಿಯಾಗಿರುವ ಈ ಶೂನ್ಯತೆ ನನ್ನ ಜೀವನದುದ್ದಕ್ಕೂ ಹಾಗೇ ಉಳಿಯಲಿದೆ. ಹಲವು ವರ್ಷಗಳ ಒಡನಾಟದ ನಂತರ, ಅವರೊಂದಿಗಿನ ಹಲವು ಕ್ಷಣಗಳನ್ನು ಮೆಲುಕು ಹಾಕಲು ಆ ಅಸಂಖ್ಯಾತ ನೆನಪುಗಳೊಂದಿಗೆ ಬದುಕುತ್ತೇನೆ" ಎಂದು ಹೇಮಾ ಮಾಲಿನಿ ಹೇಳಿದ್ದಾರೆ.
ಬಾಲಿವುಡ್ ಸಂತಾಪ
ಧರ್ಮೇಂದ್ರ ಅಗಲಿಕೆ ಬಾಲಿವುಡ್ ಮಂದಿಯನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. 89ನೇ ವರ್ಷಕ್ಕೆ ಇಹಲೋಕ ತ್ಯಜಿಸಿದ ಧರ್ಮೇಂದ ಅವರಿಗೆ ಅಮಿತಾಬ್ ಬಚ್ಚನ್, ಸಾಯಿರಾ ಭಾನು, ಶಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್, ಸಲೀಮ್ ಖಾನ್, ಸಂಜಯ್ ದತ್, ಜಾಯೆದ್ ಖಾನ್, ರಾಜ್ಕುಮಾರ್ ಸಂತೋಷಿ, ಅನಿಲ್ ಶರ್ಮಾ, ಸಿದ್ಧಾರ್ಥ್ ರಾಯ್ ಕಪೂರ್ , ಗೋವಿಂದ, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಸಂತಾಪ ಸೂಚಿಸಿದ್ದರು.


Click it and Unblock the Notifications











