RCB ಗೆದ್ರೆ ಕನ್ನಡದಲ್ಲಿ ವಿಡಿಯೋ ಮಾಡ್ತೀನಿ ಎಂದಿದ್ದ ಹಿಂದಿ ನಟ; ನುಡಿದಂತೆ ನಡೆದ ನಕುಲ್ ಮೆಹ್ತಾ.. ಹೇಳಿಕೊಟ್ಟವರು ಯಾರು?
ಆರ್ಸಿಬಿ ಅಭಿಮಾನಿಗಳು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ. ವಿಶ್ವದ ಮೂಲೆ ಮೂಲೆಯಲ್ಲೂ ಇದ್ದಾರೆ. 18 ವರ್ಷಗಳಿಂದ ಕಪ್ ಗೆಲ್ಲಬೇಕೆಂದು ಹಪಹಪಿಸುತ್ತಿದ್ದ ಅಭಿಮಾನಿಗಳು ಕೊನೆಗೂ ಸಮಾಧಾನಗೊಂಡಿದ್ದಾರೆ. ಅವರ ಸಂಭ್ರಮ ಮುಗಿಲು ಮುಟ್ಟಿದೆ. ನಿನ್ನೆ (ಜೂನ್ 3) ರಾತ್ರಿಯಿಂದಲೇ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಇನ್ನು ಆರ್ಸಿಬಿ ತಂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳ ಮುಂದೆ ಖುಷಿಯನ್ನು ಹಂಚಿಕೊಂಡಿದೆ.
ಆದರೆ, ಆರ್ಸಿಬಿ ಪಂದ್ಯ ಗೆಲ್ಲಲಿ ಎಂದು ಅಭಿಮಾನಿಗಳ ಜೊತೆ ಸಿನಿಮಾ ಹಾಗೂ ಕಿರುತೆರೆ ಸ್ಟಾರ್ಗಳು ಕೂಡ ಆಸೆ ಪಟ್ಟಿದ್ದರು. ವಿಭಿನ್ನವಾಗಿ ಆರ್ಸಿಬಿಗೆ ಬೆಂಬಲವನ್ನು ಸೂಚಿಸಿದ್ದರು. ಅಂತಹವರಲ್ಲಿ ಹಿಂದಿಯ ಕಿರುತೆರೆ ನಟ ನಕುಲ್ ಮೆಹ್ತಾ ಕೂಡ ಒಬ್ಬರು. ಆರ್ಸಿಬಿ ಹಾಗೂ ವಿರಾಟ್ ಕೊಹ್ಲಿಯ ಡೈ ಹಾರ್ಡ್ ಫ್ಯಾನ್ ಆಗಿರುವ ನಕುಲ್ ಮಹ್ತಾ ಈ ಸಲ ಕಪ್ ನಮ್ದು ಎಂದು ಹೇಳಿ ಸಂಭ್ರಮಿಸಿದ್ದಾರೆ. ಆದರೆ, ಇದಕ್ಕೂ ಮುನ್ನ ಆರ್ಸಿಬಿಗೆ ಸಪೋರ್ಟ್ ಮಾಡಿ ವಿಡಿಯೋ ಒಂದನ್ನು ಮಾಡಿದ್ದರು.

ನಕುಲ್ ಮೆಹ್ತಾ ಆರ್ಸಿಬಿ ಪಂದ್ಯಕ್ಕೆ ಒಂದು ದಿನವಿರುವಾಗ ಒಂದು ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಅದರಲ್ಲಿ ಆರ್ಸಿಬಿ ಹಾಗೂ ವಿರಾಟ್ ಕೊಹ್ಲಿಗೆ ಟ್ರೋಫಿ ಗೆಲ್ಲಲೇಬೇಕು ಎಂದು ಮನವಿ ಮಾಡಿಕೊಂಡಿದ್ದರು. ಅಲ್ಲದೆ, ಆರ್ಸಿಬಿ ಒಂದು ವೇಳೆ ಪಂದ್ಯ ಗೆದ್ದರೆ, ಕನ್ನಡದಲ್ಲಿ ವಿಡಿಯೋ ಮಾಡಿ ಹಾಕುತ್ತೇನೆ ಎಂದು ಹೇಳಿದ್ದರು. ಆರ್ಸಿಬಿ ಟ್ರೋಫಿ ಗೆಲ್ಲುತ್ತಿದ್ದಂತೆ ಕನ್ನಡದಲ್ಲಿ ವಿಡಿಯೋದಲ್ಲಿ ಮಾಡಿ ತಮ್ಮ ಇನ್ಸ್ಟಾಗ್ರಾಂ ವಿಡಿಯೋದಲ್ಲಿ ಪೋಸ್ಟ್ ಮಾಡಿದ್ದಾರೆ.
ನಕುಲ್ ಮೆಹ್ತಾ ಹಿಂದಿ ಕಿರುತೆರೆ ಲೋಕದಲ್ಲಿ ಜನಪ್ರಿಯ ಹೆಸರು. ಸಾಕಷ್ಟು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ ಮನಸ್ಸು ಗೆದ್ದಿದ್ದಾರೆ. 'ಇಶ್ಕ್ಬಾಜ್','ಬಡೆ ಅಚ್ಚೇ ಲಗ್ತೇ ಹೇ 2', 'ಪ್ಯಾರ್ ಕಾ ದರ್ದ್ ಹೇ ಮೀಠಾ ಮೀಠಾ ಪ್ಯಾರಾ ಪ್ಯಾರಾ', ಅಂತ ಜನಪ್ರಿಯ ಸೀರಿಯಲ್ಗಳಲ್ಲಿ ನಟಿಸಿದ್ದಾರೆ. ಹಾಗೇ ವೆಬ್ ಸೀರಿಸ್ನಲ್ಲೂ ಬಣ್ಣ ಹಚ್ಚಿರುವ ಜನಪ್ರಿಯ ನಟ. ಇವರು ಆರ್ಸಿಬಿ ಅಭಿಮಾನಿಯಾಗಿದ್ದು, ಫೈನಲ್ ಪಂದ್ಯಕ್ಕೂ ಮುನ್ನ ಮಾಡಿದ ವಿಡಿಯೋದಲ್ಲಿ ಹೀಗದೆ ಹೇಳಿದ್ದರು.
"ಈ ಸಲ ಕಪ್ ನಮ್ದೇ.. ಕೊನೆಗೂ 18 ವರ್ಷಗಳ ನಂತರ ಮಿಸ್ಟರ್ 18 ವಾದವನ್ನೇ ಮಾಡದೆ ನೀನು ಐಪಿಎಲ್ನ ಅತ್ಯದ್ಭುತ ಆಟಗಾರ. ಈ ಬಾರಿ ಕಪ್ ಅನ್ನು ಲಿಫ್ಟ್ ಮಾಡುತ್ತಾರೆ. ಆರ್ಸಿಬಿ ನೀವು ತಾಳ್ಮೆ ಏನು ಎಂಬುವುದನ್ನು ಕಳಿಸಿಕೊಟ್ಟಿದ್ದೀರಿ. ಈ ಬಾರಿ ಗೆದ್ದು ಬಿಡಿ. ಎಲ್ಲೂ ಎಡವಟ್ಟು ಮಾಡಿಕೊಳ್ಳಬೇಡಿ. ಈ ಬಾರಿ ನೀವು ಗೆದ್ದರೆ, ಕನ್ನಡ ಕಲಿತು, ಈ ವಿಡಿಯೋವನ್ನು ಮತ್ತೆ ಶೂಟ್ ಮಾಡುತ್ತೇನೆಂದು ಪ್ರಾಮಿಸ್ ಮಾಡುತ್ತೇನೆ." ಎಂದು ಹೇಳಿದ್ದರು.
ನುಡಿದಂತೆ ಆರ್ಸಿಬಿ ಪಂದ್ಯ ಗೆದ್ದ ಮರುದಿನ ಅಂದರೆ, ಇಂದು (ಜೂನ್ 4) ಕನ್ನಡದಲ್ಲಿ ವಿಡಿಯೋ ಮಾಡಿ ಹಾಕಿದ್ದಾರೆ. ಈ ವಿಡಿಯೋದಲ್ಲಿ ನಕುಲ್ ಮೆಹ್ತಾ ಒಂದರಿಂದ 18 ಅಂಕಿಗಳನ್ನು ಕನ್ನಡದಲ್ಲಿ ಹೇಳಿದ್ದಾರೆ. ಹಾಗೇ "ಸತತವಾಗಿ 18 ವರ್ಷಗಳ ಕಠಿಣ ಪರಿಶ್ರಮದ ನಂತರ, ನಮ್ಮ ಹುಡುಗರಿಗೆ ಗೆಲುವು ಸಿಕ್ಕಿದೆ. ಆರ್ಸಿಬಿ ನಿಮ್ಮ ಈ ಸಾಧನೆಗೆ ದೊಡ್ಡ ಸಲಾಂ" ಎಂದಿದ್ದಾರೆ. ಅಷ್ಟೇ ಅಲ್ಲದೆ "ಒಂದು ರಾತ್ರಿಯಲ್ಲಿ ಇಷ್ಟು ಕನ್ನಡವನ್ನು ಕಲಿಯುವುದಕ್ಕೆ ಆಯ್ತು ಅಷ್ಟೇ." ಎಂದೂ ಹೇಳಿದ್ದಾರೆ.
ನಕುಲ್ ಮೆಹ್ತಾಗೆ ಒಂದೇ ರಾತ್ರಿಯಲ್ಲಿ ಕನ್ನಡ ಕಲಿಯಲು ಸಹಾಯ ಮಾಡಿದ್ದು, ಬಾದಲ್ ನಂಜುಂಡಸ್ವಾಮಿ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಈಗಾಗಲೇ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ನೆಟ್ಟಿಗರು ಕಮೆಂಟ್ಗಳನ್ನು ಮಾಡಿದ್ದಾರೆ. "ವಾವ್ಹ್ ಒಂದು ರಾತ್ರಿಯಲ್ಲಿ ಕನ್ನಡ ಕಲಿತರೇ ಅದ್ಭುತ. ಅಭಿನಂದನೆಗಳು ಎಂದು ಹೇಳಿದ್ದಾರೆ. " ಕೇವಲ ಒಂದು ರಾತ್ರಿಯಲ್ಲಿ ಎಷ್ಟು ಅದ್ಭುತ ಕನ್ನಡ ಮಾತಾಡುತ್ತಿದ್ದೀರಿ. ಈ ಭಾಷೆಯ ಬಗ್ಗೆ ನಿಮ್ಮ ಹಾರ್ಡ್ ವರ್ಕ್ ಇಷ್ಟು ಆಯ್ತು. ನೀವು ಕನ್ನಡ ಮಾತಾಡುತ್ತಿರುವುದಕ್ಕೆ ತುಂಬಾನೇ ಖುಷಿ ಆಯ್ತು" ಎಂದು ಹೇಳಿದ್ದಾರೆ. ಮತ್ತೊಬ್ಬರು "ನಮ್ಮ ಟೀಮ್ನಿಂದ ನಮ್ಮ ಭಾಷೆ - ಇದು ನಿಜವಾದ ಆರ್ಸಿಬಿ ರಕ್ತ" ಎಂದು ಹೇಳಿದ್ದಾರೆ.


Click it and Unblock the Notifications











