ನಾನು ಭಾರತೀಯನಷ್ಟೇ, ನನಗೆ ಧರ್ಮಗಳಲ್ಲಿ ನಂಬಿಕೆಯಿಲ್ಲ: ಅಕ್ಷಯ್ ಕುಮಾರ್
ಇರುವುದು ಒಂದೇ ಧರ್ಮ, ಅದು ಭಾರತೀಯನಾಗಿರುವುದು ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ. ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಸೂರ್ಯವಂಶಿ' ಕೂಡ ಇದೇ ಭಾವವನ್ನು ಸ್ಫುರಿಸುತ್ತದೆಯಂತೆ.
ರೋಹಿತ್ ಶೆಟ್ಟಿ ನಿರ್ದೇಶನದ 'ಸೂರ್ಯವಂಶಿ' ಮಾರ್ಚ್ 27ರಂದು ಬಿಡುಗಡೆಗೆ ಸಿದ್ಧವಾಗುತ್ತಿದೆ. ಅಕ್ಷಯ್ ಕುಮಾರ್, ಕತ್ರೀನಾ ಕೈಫ್, ಅಜಯ್ ದೇವಗನ್, ರಣವೀರ್ ಸಿಂಗ್, ಗುಲ್ಶನ್ ಗ್ರೋವರ್, ಜಾಕಿ ಶ್ರಾಫ್ ಹೀಗೆ ಖ್ಯಾತನಾಮರ ಬಳಗವೇ ಈ ಚಿತ್ರದಲ್ಲಿದೆ.
2018ರ ಡಿಸೆಂಬರ್ನಲ್ಲಿ ಬಿಡುಗಡೆಯಾಗಿದ್ದ ರಣವೀರ್ ಸಿಂಗ್ ನಟನೆಯ 'ಸಿಂಬಾ' ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಅಕ್ಷಯ್ ಕುಮಾರ್ 'ಸೂರ್ಯವಂಶಿ'ಯಾಗಿ ಕಾಣಿಸಿಕೊಳ್ಳುವ ಪಾತ್ರವನ್ನು ತೋರಿಸಲಾಗಿತ್ತು.

ಧರ್ಮದಲ್ಲಿ ನಂಬಿಕೆಯಿಲ್ಲ
'ಸೂರ್ಯವಂಶಿ' ಚಿತ್ರದ ಪಾತ್ರವು ಧರ್ಮದ ಕಣ್ಣಿನಿಂದ ಜಗತ್ತನ್ನು ನೋಡುವುದಿಲ್ಲ. ನನಗೆ ಯಾವುದೇ ಧರ್ಮದ ಬಗ್ಗೆ ನಂಬಿಕೆ ಇಲ್ಲ. ನಾನು ಭಾರತೀಯನಾಗಿರುವುದನ್ನು ಮಾತ್ರವೇ ನಂಬುತ್ತೇನೆ. ಈ ಸಿನಿಮಾ ಕೂಡ ಅದನ್ನೇ ಪ್ರತಿಬಿಂಬಿಸುತ್ತದೆ. ಭಾರತೀಯನಾಗಿರುವುದು ಎಂಬ ಪರಿಕಲ್ಪನೆಯು ಪಾರ್ಸಿ ಅಥವಾ ಹಿಂದೂ ಅಥವಾ ಮುಸ್ಲಿಮನಾಗಿರುವುದು ಎಂದಲ್ಲ. ನಾವು ಅದನ್ನು ಧರ್ಮದ ಆಧಾರದಲ್ಲಿ ನೋಡುವುದಿಲ್ಲ' ಎಂದು ಅಕ್ಷಯ್ ಹೇಳಿದ್ದಾರೆ.

ಪ್ರಸ್ತುತಕ್ಕೆ ಹೋಲಿಕೆಯಾಗುತ್ತದೆ
ಈ ಚಿತ್ರವು ದೇಶದಲ್ಲಿನ ಪ್ರಸ್ತುತದ ಕೋಮು ಸಂಘರ್ಷದ ಸನ್ನಿವೇಶಕ್ಕೆ ಹೋಲಿಕೆಯಾಗುವಂತಿದೆ. ಇದು ಕಾಕತಾಳೀಯವಷ್ಟೇ ಎಂದು ಅಕ್ಷಯ್ ಹೇಳಿದ್ದಾರೆ. 'ನಾವು ಇದನ್ನು ಉದ್ದೇಶಪೂರ್ವಕವಾಗಿ ತೋರಿಸಿರಲಿಲ್ಲ. ಆದರೆ, ನಿಜ. ಇದು ಇಂದಿನ ಪ್ರಸಕ್ತ ಸನ್ನಿವೇಶಗಳಿಗೆ ಸೂಕ್ತವಾಗಿದೆ' ಎಂದಿದ್ದಾರೆ.

ಅಕ್ಷಯ್ ಎಟಿಎಸ್ ಅಧಿಕಾರಿ
ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳ) ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈ ಭಯೋತ್ಪಾದನಾ ದಾಳಿಯ ಘಟನೆಯ ಹಿನ್ನೆಲೆಯನ್ನು ಈ ಚಿತ್ರ ಹೊಂದಿದೆ. ನಟನಾಗಿ ಸಮಾಜದೆಡೆಗೆ ಹೊಣೆಗಾರಿಕೆ ಇರಬೇಕೆಂಬ ನಿರೀಕ್ಷೆಗಳಿರುತ್ತವೆ. ಆದರೆ ಒಳ್ಳೆಯದೋ ಅಥವಾ ಕೆಟ್ಟದ್ದೂ, ಪಾತ್ರವನ್ನು ಪ್ರಾಮಾಣಿಕವಾಗಿ ನಿಭಾಯಿಸುವುದು ತಮ್ಮ ಜವಾಬ್ದಾರಿ ಎಂದು ತಿಳಿಸಿದ್ದಾರೆ.

ಒಳಿತು-ಕೆಡಕುಗಳ ಆಯ್ಕೆ ಪ್ರೇಕ್ಷಕರಿಗೆ ಗೊತ್ತು
'ನಾವು ನೆಗೆಟಿವ್ ಮತ್ತು ಪಾಸಿಟಿವ್ ಪಾತ್ರಗಳೊಂದಿಗೆ ಸಿನಿಮಾ ಮಾಡುತ್ತೇವೆ. ನಾನು ಒಂದು ಪಾತ್ರವನ್ನಷ್ಟೇ ಮಾಡುತ್ತಿದ್ದೇನೆ. ಪ್ರತಿ ಸಿನಿಮಾದಲ್ಲಿಯೂ ಒಳ್ಳೆಯ ಹಾಗೂ ಕೆಟ್ಟ ಪಾತ್ರಗಳಿರುತ್ತವೆ. ಸಿನಿಮಾದಿಂದ ಏನನ್ನು ಪಡೆದುಕೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವಷ್ಟು ಪ್ರೇಕ್ಷಕರು ಪ್ರಬುದ್ಧರಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications











