ಆ ನಿರ್ದೇಶಕನ ವರ್ತನೆಗೆ ಬೇಸತ್ತಿದ್ದ ಇಲಿಯಾನಾ; ಸ್ಟಾರ್ ನಟಿಯ ಪತಿ ಸೆಟ್ಟಿಗೆ ಬಂದ್ಮೇಲೆ ಏನಾಯ್ತು?
ಇಲಿಯಾನಾ ಒಂದು ಕಾಲದಲ್ಲಿ ಹುಡುಗರ ನಿದ್ದೆ ಕದ್ದ ನಟಿ. ಗೋವಾದ ಈ ಬ್ಯೂಟಿಯ ಸೌಂದರ್ಯ, ನಡಿಗೆಗೆ ಫ್ಯಾನ್ಸ್ ಫಿದಾ ಆಗಿದ್ದರು. ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಅದರಲ್ಲೂ ತೆಲುಗು ಚಿತ್ರರಂಗದಲ್ಲಿ ಇಲಿಯಾನಾಗೆ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿತ್ತು. ಬಳಿಕ ತಮಿಳು, ಹಿಂದಿ ಅಂತ ಹೊರಟು ಹೋದರು. ತಮ್ಮ ವೃತ್ತಿ ಬದುಕಿನ ಕೊನೆಯ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳ ಕಡೆಗೆ ಗಮನ ಹರಿಸಿದ್ದೇ ಹೆಚ್ಚು.
ಇಲಿಯಾನಾ ಬೋಲ್ಡ್ ನಟಿ. ಚಿತ್ರರಂಗದಲ್ಲಿ ಏನೇ ಸಮಸ್ಯೆ ಆದರೂ ನೇರವಾಗಿ ಪ್ರತಿಕ್ರಿಯೆ ನೀಡುವಷ್ಟು ಪ್ರಬುದ್ಧ ನಟಿ. ಇಂತಹ ನಟಿಗೆ ಬಾಲಿವುಡ್ನಲ್ಲಿ ಕಹಿ ಅನುಭವ ಆಗಿತ್ತು. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತನಗಾದ ಅನುಭವವನ್ನು ಇಲಿಯಾನಾ ಹಂಚಿಕೊಂಡಿದ್ದಾರೆ. ಅದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಚಿತ್ರರಂಗ ನಟರಿಗಿಂತ ಹೆಚ್ಚಾಗಿ ನಟಿಯರಿಗೆ ಚಾಲೆಂಜಿಂಗ್ ಆಗಿರುತ್ತೆ. ಸಿನಿಮಾ ಸೆಟ್ಟಿನಲ್ಲಿ ಪ್ರತಿದಿನ ನೂರೆಂಟು ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತಾರೆ. ಕೆಲವು ಘಟನೆಗಳು ಅವರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ. ಇಂತಹದ್ದೇ ಒಂದು ಸನ್ನಿವೇಶ ಇಲಿಯಾನಾ ಬಾಳಿನಲ್ಲೂ ಆಗಿತ್ತು. ಅದೂ ರಣ್ಬೀರ್ ಕಪೂರ್ ಜೊತೆ ನಟಿಸುತ್ತಿದ್ದ 'ಬರ್ಫಿ' ಸಿನಿಮಾದ ವೇಳೆ. ಆಕೆಯನ್ನು ಡಿಸ್ಟರ್ಬ್ ಮಾಡಿದ ಆ ಘಟನೆ ಏನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಇತ್ತೀಚೆಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಇಲಿಯಾನಾ ಡಿಕ್ರೂಸ್ ಸಂದರ್ಶನ ನೀಡಿದ್ದರು. ಈ ವೇಳೆ 'ಬರ್ಫಿ' ಸಿನಿಮಾ ನಿರ್ದೇಶಕ ಅನುರಾಗ್ ಬಸು ವರ್ತನೆ ಅವರನ್ನು ಸಿನಿಮಾ ಸೆಟ್ಟಿನಲ್ಲಿ ಹೇಗೆ ವಿಚಲಿತಗೊಳಿಸಿತ್ತು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಇಲಿಯಾನಾ ಬಾಲಿವುಡ್ಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಅವರು ದಕ್ಷಿಣ ಭಾರತದಲ್ಲಿ ಜನಪ್ರಿಯ ನಟಿಯಾಗಿದ್ದರು. ಸೂಪರ್ಸ್ಟಾರ್ಗಳೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದರು. ಹೀಗಿದ್ದರೂ ನಿರ್ದೇಶಕರೊಬ್ಬರ ವರ್ತನೆ ಅವರಿಗೆ ಶಾಕಿಂಗ್ ಅಂತ ಅನಿಸಿತ್ತು. ಕೊನೆಗೆ ವಿದ್ಯಾಬಾಲನ್ ಅವರ ಪತಿ ಮಧ್ಯೆ ಪ್ರವೇಶ ಮಾಡಿ ಇಬ್ಬರ ಸಮಸ್ಯೆಯನ್ನು ಬಗೆಹರಿಸಿದ್ದರು.
'ಬರ್ಫಿ' ಸಿನಿಮಾ ಶೂಟಿಂಗ್ ಭರದಿಂದ ನಡೆಯುತ್ತಿತ್ತು. ಸೆಟ್ಟಿನಲ್ಲಿ ಇದ್ದವರೆಲ್ಲರೂ ಒಳ್ಳೆಯ ಮೂಡ್ಲ್ಲಿ ಇದ್ದರು. ಅಂದು ಇಲಿಯಾನಾ ಕೂಡ ಖುಷಿ ಖುಷಿಯಾಗಿಯೇ ಶೂಟಿಂಗ್ ಸೆಟ್ನಲ್ಲಿದ್ದರು. ಆ ವೇಳೆ ನಿರ್ದೇಶಕ ಅನುರಾಗ್ ಬಸು ಅವರ ಬಳಿ ಇಲಿಯಾನಾ ಸಹಜವಾಗಿಯೇ ಹೇಗಿದ್ದೀರಿ? ಶೂಟಿಂಗ್ ಹೇಗೆ ನಡೆಯುತ್ತಿದೆ? ಎಂದು ಕೇಳಿದ್ದರು. ಅಷ್ಟಕ್ಕೆ ಅನುರಾಗ್ ಬಸು ಸಿಡಿಮಿಡಿಗೊಳ್ಳುವುದಕ್ಕೆ ಶುರು ಮಾಡಿದ್ದರು.
"ಹೀಗೆ ಕೇಳುತ್ತಿದ್ದಂತೆ ನನ್ನ ಮೇಲೆ ಜೋರಾಗಿ ಕೂಗಾಡುವುದಕ್ಕೆ ಶುರು ಮಾಡಿದ್ದರು. ಎಲ್ಲರೂ ನನ್ನನ್ನೇ ನೋಡುವುದಕ್ಕೆ ಶುರು ಮಾಡಿದಾಗ ನನಗೆ ಬಹಳ ದುಃಖವಾಯಿತು. ಅನುರಾಗ್ ಬಸು ಮೂಡ್ ಸರಿಯಿಲ್ಲ ಅಂದುಕೊಂಡು ಸಮಾಧಾನ ಮಾಡುವುದಕ್ಕೆ ಯತ್ನಿಸಿದೆ. ಆಗಲೂ ಅವರು ನೀಡಿದ ಪ್ರತಿಕ್ರಿಯೆ ಸರಿಯಾಗಿರಲಿಲ್ಲ" ಎಂದು ಇಲಿಯಾನಾ ಹೇಳಿದ್ದಾರೆ.
ಅನುರಾಗ್ ಬಸು ಅವರ ಈ ವರ್ತನೆಯನ್ನು ನೋಡಿ "ನಾನು ಈ ಪಾತ್ರಕ್ಕೆ ಸೂಕ್ತ ಅಲ್ಲ ಅಂತ ಅನಿಸಿದರೆ, ದಯವಿಟ್ಟು ನನಗೆ ತಿಳಿಸಿ. ಈ ಸಿನಿಮಾದಿಂದ ಬೇಕಿದ್ದರೆ ನನ್ನನ್ನು ತೆಗೆದು ಹಾಕಿ. ನೀವು ಅಂದುಕೊಂಡಂತೆ ನನಗೆ ನಟಿಸುವುದಕ್ಕೆ ಸಾಧ್ಯವಾಗದೇ ಇದ್ದಲ್ಲಿ ನಾನೇ ಈ ಸಿನಿಮಾದಿಂದ ಹೊರಗೆ ಹೋಗುತ್ತೇನೆ. ನಿಮಗೆ ಕೆಟ್ಟ ಹೆಸರು ತರುವುದಿಲ್ಲ" ಎಂದೂ ಹೇಳಿದ್ದರಂತೆ.
'ಬರ್ಫಿ' ಸಿನಿಮಾದ ಕತೆಯನ್ನು ಇಷ್ಟಪಟ್ಟು ಇಲಿಯಾನಾ ಸಿನಿಮಾವನ್ನು ಒಪ್ಪಿಕೊಂಡಿದ್ದರು. ಆದರೆ, ನಿರ್ದೇಶಕ ಅನುರಾಗ್ ಬಸು ನಡೆದುಕೊಂಡ ರೀತಿ ಅವರಿಗೆ ತುಂಬಾನೇ ಬೇಸರ ತರಿಸಿತ್ತು. ಇಲಿಯಾನಾ ಏನೇ ಹೇಳಿದರೂ ನಿರ್ದೇಶಕರು ಪ್ರತಿಕ್ರಿಯೆ ನೀಡದೇ ಹೊರಟು ಹೋಗಿದ್ದರು. ಆಗ ಇಲಿಯಾನಾ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಅವರಿಗೆ ಫೋನ್ ಮಾಡಿ 'ಬರ್ಫಿ' ಸಿನಿಮಾದಿಂದ ಹೊರಬರುತ್ತಿರುವುದಾಗಿ ಹೇಳಿದ್ದರು. ಸಿದ್ಧಾರ್ಥ್ ರಾಯ್ ಕಪೂರ್ ಬಾಲಿವುಡ್ ನಟಿ ವಿದ್ಯಾಬಾಲನ್ ಅವರ ಪತಿ. ಅವರು ಕೂಡಲೇ ಪ್ರತಿಕ್ರಿಯಿಸಿ "ನಾನು ಬರುವವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ" ಎಂದು ಹೇಳಿ ಸೆಟ್ಟಿಗೆ ಬಂದಿದ್ದರು.
ಸೆಟ್ಟಿಗೆ ಬಂದವರೇ ನಿಮಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ನೀವು ಶೂಟಿಂಗ್ ಮುಂದುವರೆಸಿ ಎಂದು ಭರವಸೆ ನೀಡಿದರು. ಆಗ ಇಲಿಯಾನಾ ಮನಸ್ಸು ಬದಲಿಸಿ, 'ಬರ್ಫಿ' ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. ಇದೇನು ನಡೆಯದೇ ಇದ್ದಿದ್ದರೇ, 'ಬರ್ಫಿ' ಸಿನಿಮಾದಿಂದ ಹೊರಬರುತ್ತಿರುವುದಾಗಿ ಸಂದರ್ಶನದಲ್ಲಿ ಇಲಿಯಾನಾ ಹೇಳಿಕೊಂಡಿದ್ದಾರೆ.


Click it and Unblock the Notifications











