Nitin Desai Death: ₹252 ಕೋಟಿ ಸಾಲ ತೀರಿಸಲಾಗದೇ ದುಡುಕಿದ್ರಾ ಕಲಾನಿರ್ದೇಶಕ? ಏನಂತಿದೆ ಪೊಲೀಸ್ ವರದಿ?
ಬಾಲಿವುಡ್ನ ಕಲಾ ನಿರ್ದೇಶಕ ನಿತಿನ್ ದೇಸಾಯಿ ಇಂದು (ಆಗಸ್ಟ್ 2) ಕರ್ಜತ್ನ ತನ್ನ ಎನ್ಡಿ ಸ್ಟುಡಿಯೋದಲ್ಲಿ ನೇಣುಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಬೇರೆ ಆಯಾಮಗಳಲ್ಲಿ ಆತ್ಮಹತ್ಯೆಗೆ ಕಾರಣಗಳನ್ನು ಕಲೆ ಹಾಕುತ್ತಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ನಿತಿನ್ ದೇಸಾಯಿ ಸಾವು ಆತ್ಮಹತ್ಯೆಯಿಂದಲೇ ನಡೆದಿದೆ ಎಂದು ತಿಳಿದು ಬಂದಿದೆ. ಇಂದು (ಆಗಸ್ಟ್ 2) ಬೆಳಗ್ಗೆ 4 ಗಂಟೆಗೆ ನಿತಿನ್ ದೇಸಾಯಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಇದೂವರೆಗೂ ಸ್ಯೂಸೈಡ್ ನೋಟ್ ಪೊಲೀಸರ ಕೈಗೆ ಸಿಕ್ಕಿಲ್ಲ.

" ಇಂದು ಬೆಳಗ್ಗೆ ನಿತಿನ್ ದೇಸಾಯಿ ಅವರ ದೇಹ ಎನ್ಡಿ ಸ್ಟುಡಿಯೋದಲ್ಲಿ ನೇಣು ಹಾಕಿಕೊಂಡು ಸ್ಥಿತಿಯಲ್ಲಿ ಕಂಡಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡುತ್ತಿದ್ದೇವೆ" ಎಂದು ರಾಯ್ಘಡ್ದ ಎಸ್ಪಿ ಸೋಮನಾಥ್ ಘರ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆರ್ಟ್ ಡೈರೆಕ್ಟರ್ ನಿತಿನ್ ದೇಸಾಯಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಪೊಲೀಸರು ಈ ಬಗ್ಗೆ ಮಾಹಿತಿ ನೀಡಿಲ್ಲ.
₹252 ಕೋಟಿ ಸಾಲ ಪಡೆದು ದೀವಾಳಿಯಾಗಿದ್ರು?
ಬಾಲಿವುಡ್ ಆರ್ಟ್ ಡೈರೆಕ್ಟರ್ ನಿತಿನ್ ದೇಸಾಯಿ ಇತ್ತೀಚೆಗೆ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. 252 ಕೋಟಿ ರೂ. ಸಾಲವನ್ನು ಹಿಂತಿರುಗಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದರು. ನಿತಿನ್ ದೇಸಾಯಿ ಕಂಪನಿ ಎನ್ಡಿ ಆರ್ಟ್ ವರ್ಲ್ಡ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಆರ್ಥಿಕ ದಿವಾಳಿತನ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿತ್ತು. 2020ರಿಂದ ನಿತಿನ್ ದೇಸಾಯಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಎನ್ಡಿ ಟಿವಿ ವರದಿ ಮಾಡಿದೆ.

ಏನಿದು ಲೋನ್ ಕಥೆ?
ನಿತಿನ್ ದೇಸಾಯಿ 2016 ಹಾಗೂ 2018ರಲ್ಲಿ ಇಎಲ್ಸಿ ಫೈನಾನ್ಸ್ನಿಂದ ಸುಮಾರು 185 ಕೋಟಿ ರೂ. ಲೋನ್ ಅನ್ನು ಪಡೆದಿದ್ದರು. ಈ ಸಾಲವನ್ನು ಹಿಂತಿರುಗಿಸಲಾಗದೆ ನಿತಿನ್ ದೇಸಾಯಿ ಪರದಾಡುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ನಿತಿನ್ ದೇಸಾಯಿ ಕಂಪನಿ ನಷ್ಟದಲ್ಲಿತ್ತು. ಅಲ್ಲದೆ, ಇವರ ಸ್ಟುಡಿಯೋದಲ್ಲಿ ಏನೂ ಕೆಲಸ ನಡೆಯುತ್ತಿರಲಿಲ್ಲ. ಹೀಗಾಗಿ ಕಂಪನಿ ಅಕೌಂಟ್ನಲ್ಲೂ ಲಾಭ ಕಂಡು ಬಂದಿರಲಿಲ್ಲ. ಹೀಗಾಗಿ ನಿತಿನ್ ದೇಸಾಯಿ ಸಾಲ ಜೂನ್ 30, 2022ರಲ್ಲಿ ಒಟ್ಟು 252.48 ಕೋಟಿ ರೂ.ಗೆ ಏರಿಕೆಯಾಗಿತ್ತು. ಇಷ್ಟು ದೊಡ್ಡ ಮೊತ್ತದ ಸಾಲದಿಂದ ಕಲಾ ನಿರ್ದೇಶಕ ಕಂಗಾಲಾಗಿ ಹೋಗಿದ್ದರು.
ಸ್ಟುಡಿಯೋಗೆ ಬೆಂಕಿ
ಕಲಾ ನಿರ್ದೇಶಕ ನಿತಿನ್ ದೇಸಾಯಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವಾಗಲೇ ಮತ್ತೊಂದು ಅವಘಡ ನಡೆದಿತ್ತು. ಮೇ 7, 2021ರಲ್ಲಿ ಎನ್ಡಿ ಸ್ಟುಡಿಯೋಗೆ ಬೆಂಕಿ ಬಿದ್ದಿತ್ತು. ಇದರಿಂದ ಅಪಾರ ಪ್ರಮಾಣದ ಆಸ್ತಿ ನಾಶವಾಗಿತ್ತು. ಇದು ಕೂಡ ನಿತಿನ್ ದೇಸಾಯಿ ಅವರ ಸಂಕಷ್ಟವನ್ನು ದುಪ್ಪಟ್ಟು ಮಾಡಿತ್ತು.
ದುಬಾರಿ ಸಿನಿಮಾಗಳ ಕಲಾನಿರ್ದೇಕ
ನಿತಿನ್ ದೇಸಾಯಿ ಬಾಲಿವುಡ್ ಕಂಡ ಶ್ರೇಷ್ಠ ಕಲಾ ನಿರ್ದೇಶಕರಲ್ಲಿ ಒಬ್ಬರು. ಇವರ ವೃತ್ತಿ ಬದುಕಿನಲ್ಲಿ 4 ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. 1999ರಲ್ಲಿ ತೆರೆಕಂಡಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ 'ಹಮ್ ದಿಲ್ ದೇ ಚುಕೆ ಸನಮ್'(2000) ಆಮಿರ್ ಖಾನ್ ಸಿನಿಮಾ 'ಲಗಾನ್' (2002) ಹಾಗೂ ದೇವ್ದಾಸ್(2003) ಸಿನಿಮಾಗಳಿಗೆ ಪ್ರಶಸ್ತಿ ಲಭಿಸಿತ್ತು.


Click it and Unblock the Notifications











