ಅನ್ನದಾತ ರೈತರಿಗಾಗಿ ಮಿಡಿದ ನಟಿ ಜೂಹಿ ಚಾವ್ಲಾ ಮಾಡಿದ ಹೊಸ ಯೋಜನೆ
ಕೊರೊನಾ ವೈರಸ್ ಹಾವಳಿಯಿಂದ ರೈತರು ಬೆಳೆದ ಬೆಳೆಗಳಿಗೆ ಡಿಮ್ಯಾಂಡ್ ಕಡಿಮೆಯಾಗಿದೆ. ಗ್ರಾಹಕರು ಕೆಲವು ತರಕಾರಿಗಳಿಗೆ ಅಧಿಕ ಬೆಲೆ ತೆರುವಂತಾಗಿದ್ದರೂ ಅದರ ಲಾಭ ರೈತರಿಗೆ ಸಿಗುತ್ತಿಲ್ಲ. ಇನ್ನು ಅನೇಕ ರೈತರು ಬೆಳೆ ಬೆಳೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮ ನಡುವೆ ನೂರಾರು ಮಂದಿ ಭೂರಹಿತ ರೈತರಿದ್ದಾರೆ. ಅಂತಹವರ ನೆರವಿಗೆ ನಟಿ ಜೂಹಿ ಚಾವ್ಲಾ ಧಾವಿಸಿದ್ದಾರೆ.
ಮುಂಬೈನ ಹೊರವಲಯದಲ್ಲಿರುವ ತಮ್ಮ ವಾಡಾ ಫಾರ್ಮ್ಹೌಸ್ನಲ್ಲಿನ ಹೊಲದಲ್ಲಿ ಕೃಷಿ ಮಾಡುವಂತೆ ಜೂಹಿ ಚಾವ್ಲಾ ಭೂರಹಿತ ರೈತರಿಗೆ ಆಹ್ವಾನ ನೀಡಿದ್ದಾರೆ.
ಮುಂಬೈನ ಹೊರವಲಯದಲ್ಲಿ ಜೂಹಿ ಚಾವ್ಲಾ ಅವರ ಕುಟುಂಬದ ಕೃಷಿ ಭೂಮಿ ಇದೆ. ಅಲ್ಲಿ ಅವರು ಸಾವಯವ ಕೃಷಿ ಮಾಡಲು ಪರಿಣತರನ್ನು ನೇಮಿಸಿಕೊಂಡಿದ್ದಾರೆ. ಆದರೆ ಸಂಕಷ್ಟದಲ್ಲಿರುವ ರೈತರ ಪರದಾಟಗಳನ್ನು ಕಂಡು ಮರುಗಿರುವ ಜೂಹಿ, ಅದನ್ನು ರೈತರಿಗಾಗಿ ಮುಕ್ತಗೊಳಿಸಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಅಲ್ಲಿ ಭತ್ತ ಬೆಳೆಯುವಂತೆ ಅವರಿಗೆ ಆಹ್ವಾನ ಕೊಟ್ಟಿದ್ದಾರೆ.

ಒಂದು ಪಾಲು ರೈತರಿಗೆ
'ನಾವು ಲಾಕ್ ಡೌನ್ನಲ್ಲಿ ಇರುವುದರಿಂದ ಕೃಷಿ ಮಾಡಲು ಭೂರಹಿತ ರೈತರಿಗೆ ನಮ್ಮ ಭೂಮಿಯನ್ನು ಬಿಟ್ಟುಕೊಡಲು ನಿರ್ಧರಿಸಿದ್ದೇನೆ. ಈ ಅವಧಿಯಲ್ಲಿ ಅವರು ಭತ್ತ ಬೆಳೆದು, ಅದರ ಫಸಲಿನಲ್ಲಿನ ಒಂದು ಪಾಲನ್ನು ತಮಗಾಗಿ ಪಡೆದುಕೊಳ್ಳಬಹುದು' ಎಂದು ತಿಳಿಸಿದ್ದಾರೆ.

ರೈತರಿಗೆ ಹೆಚ್ಚು ತಿಳಿವಳಿಕೆ ಇದೆ
'ಇದು ಹೊಸ ಪ್ರಯತ್ನವೇನಲ್ಲ. ದಶಕಗಳಷ್ಟು ಹಿಂದೆ ನಡೆಯುತ್ತಿದ್ದ ಕೃಷಿ ಚಟುವಟಿಕೆಯ ಮಾದರಿಯನ್ನೇ ಅನುಸರಿಸಲಾಗುತ್ತದೆ. ಆದರೆ ಇದು ಹೆಚ್ಚು ಚಾಣಾಕ್ಷ ಮಾರ್ಗವಲ್ಲವೇ? ನಮ್ಮ ರೈತರಿಗೆ ಭೂಮಿ, ಮಣ್ಣು ಮತ್ತು ಗಾಳಿಯ ಬಗ್ಗೆ ಪಠ್ಯ ಪುಸ್ತಕದ ಜ್ಞಾನ ಸಂಪಾದಿಸಿಕೊಂಡಿರುವ ನಮ್ಮಂತಹ ನಗರದ ಜನರಿಗಿಂತಲೂ ಬಹಳ ಚೆನ್ನಾಗಿ ತಿಳಿದಿದೆ' ಎಂದು ಹೇಳಿದ್ದಾರೆ.

ಸಾವಯವ ಕೃಷಿಗೆ ಮಾತ್ರ ಅವಕಾಶ
ತಮ್ಮ ಜಮೀನಿನಲ್ಲಿ ಕೃಷಿ ಮಾಡಲು ಬರುವವರಿಗೆ ಅತ್ಯುತ್ತಮ ಗುಣಮಟ್ಟದ ಬಿತ್ತನೆ ಬೀಜ ನೀಡಬೇಕು ಮತ್ತು ಕೇವಲ ಸಾವಯವ ವಿಧಾನದ ಮಾದರಿಯನ್ನು ಮಾತ್ರವೇ ಅನುಸರಿಸಿ ಬೆಳೆ ತೆಗೆಯಬೇಕು. ಈ ಷರತ್ತನ್ನು ಪಾಲಿಸಬೇಕು ಎಂದು ಜೂಹಿ ತಮ್ಮ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಜಾಣ್ಮೆಯಿಂದ ಕೆಲಸ ಮಾಡಬೇಕು
ಇದು ಎಲ್ಲರಿಗೂ ಪರಸ್ಪರ ಗೆಲ್ಲಲೇಬೇಕಾದ ಸನ್ನಿವೇಶ. ನಮ್ಮ ರೈತರಿಗೆ ಮತ್ತು ನಮಗೆಲ್ಲರಿಗೂ. ನಾವು ಈ ರೀತಿ ಜಾಣ್ಮೆಯಿಂದ ಕೆಲಸ ಮಾಡಬೇಕು ಹೊರತು ಕಷ್ಟಪಟ್ಟು ಅಲ್ಲ. ಈ ಲಾಕ್ಡೌನ್ ನನ್ನ ತಲೆಯಲ್ಲಿ ಒಳ್ಳೆಯ ಆಲೋಚನೆಗಳನ್ನು ಮೂಡಿಸಿದೆ ಎಂದು ಜೂಹಿ ತಿಳಿಸಿದ್ದಾರೆ.


Click it and Unblock the Notifications










