ಸ್ವಜನಪಕ್ಷಪಾತದ ಹೋರಾಟ: ಕಂಗನಾ ರಣಾವತ್ ಬೆಂಬಲಕ್ಕೆ ಬಂದ ಮಾಜಿ ಪ್ರಿಯಕರ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ನ ಸ್ವಜನಪಕ್ಷಪಾತದ ವಿರುದ್ಧ ಸಿಡಿದೆದ್ದಿರುವ ನಟಿ ಕಂಗನಾ ರಣಾವತ್, ದೊಡ್ಡ ದೊಡ್ಡ ಕುಟುಂಬಗಳನ್ನು ಎದುರುಹಾಕಿಕೊಳ್ಳುವ ಧೈರ್ಯ ಪ್ರದರ್ಶಿಸಿದ್ದಾರೆ. ಇಲ್ಲಿ ಕಂಗನಾ ಅವರದು ಹೆಚ್ಚೂ ಕಡಿಮೆ ಏಕಾಂಗಿ ಹೋರಾಟ.
Recommended Video
ಚಿತ್ರರಂಗದಿಂದ ದೂರವಾಗಿ ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು, ಸಿನಿಮಾ, ಧಾರಾವಾಹಿಗಳಲ್ಲಿ ಆಗಾಗ್ಗೆ ಅವಕಾಶ ಪಡೆಯುವವರು ಹೀಗೆ ಕೆಲವೊಂದಿಷ್ಟು ಮಂದಿ ಮಾತ್ರ ಕಂಗನಾ ಅವರ ಹೋರಾಟಕ್ಕೆ ದನಿಗೂಡಿಸಿದ್ದಾರೆ. ಆದರೆ ಚಿತ್ರರಂಗದಲ್ಲಿ ಸ್ವಜನಪಕ್ಷಪಾತದ ದಬ್ಬಾಳಿಕೆಯನ್ನು ಅನುಭವಿಸಿದ್ದರೂ ಅನೇಕ ಕಲಾವಿದರು ಈ ವಿಚಾರದಲ್ಲಿ ತುಟಿಪಿಟಿಕ್ಕೆನ್ನುತ್ತಿಲ್ಲ. ಏಕೆಂದರೆ, ಬಾಲಿವುಡ್ನ ಬಹುತೇಕ ವಿಭಾಗಗಳು ಒಂದಿಲ್ಲೊಂದು ಕುಟುಂಬಗಳ ನಿಯಂತ್ರಣದಲ್ಲಿದೆ. ಹೀಗಾಗಿ ನನಗೆ ಯಾವ ಕುಟುಂಬದ ಬೆಂಬಲವೂ ಬೇಡ ಎಂದು ತಮ್ಮದೇ ವಿಭಿನ್ನ ಸಿನಿಮಾಗಳನ್ನು ಮಾಡುತ್ತಿರುವ ಕಂಗನಾ ಈ ಹೋರಾಟದಲ್ಲಿ ಒಬ್ಬಂಟಿ. ಆದರೆ, ಈಗ ಅವರ ಹೋರಾಟಕ್ಕೆ ಮಾಜಿ ಪ್ರಿಯಕರ ಕೂಡ ದನಿಗೂಡಿಸಿದ್ದಾರೆ. ಮುಂದೆ ಓದಿ..

ಕಂಗನಾಳನ್ನು ಗೌರವಿಸುತ್ತೇನೆ
ಬಾಲಿವುಡ್ನ ದೊಡ್ಡ ದೊಡ್ಡ ಸ್ಟಾರ್ಗಳನ್ನು ಎದುರು ಹಾಕಿಕೊಂಡಿರುವ ಕಂಗನಾ ಬಹಳ ದಿಟ್ಟೆ ಎಂದು ಅವರ ಮಾಜಿ ಪ್ರಿಯಕರ ಅಧ್ಯಯನ್ ಸುಮನ್ ಹೇಳಿದ್ದಾರೆ. ತಮ್ಮ ಕಠಿಣ ಪರಿಶ್ರಮದ ಮೂಲಕ ಕಂಗನಾ ದೊಡ್ಡ ಹೆಸರು, ಸಾಧನೆ ಮಾಡಿದ್ದಾರೆ. ಸ್ವಜನಪಕ್ಷಪಾತದ ವಿರುದ್ಧದ ಹೋರಾಟಕ್ಕಾಗಿ ಆಕೆಯನ್ನು ಗೌರವಿಸುತ್ತೇನೆ ಎಂದಿದ್ದಾರೆ.

ಕಂಗನಾ ಮಾಟ ಮಾಡಿಸಿದ್ದಾರೆ ಎಂದಿದ್ದರು
ಅಧ್ಯಯನ್ ಮತ್ತು ಕಂಗನಾ ಒಂದು ಕಾಲದಲ್ಲಿ ಬಾಲಿವುಡ್ನ ವಿವಾದದ ಕೇಂದ್ರಬಿಂದುವಾಗಿದ್ದರು. ಹೃತಿಕ್ ರೋಷನ್ ಮತ್ತು ಕಂಗನಾ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ಸಂದರ್ಶನಗಳಲ್ಲಿ ಅಧ್ಯಯನ್, ತಾವಿಬ್ಬರೂ ಡೇಟಿಂಗ್ ನಡೆಸುವಾಗ ಕಂಗನಾ ತಮ್ಮನ್ನು ಮಾನಸಿಕವಾಗಿ ಶೋಷಿಸಿದ್ದರು. ಕೆಟ್ಟಪದಗಳಿಂದ ನಿಂದಿಸುತ್ತಿದ್ದರು ಮತ್ತು ತಮ್ಮ ವಿರುದ್ಧ ಮಾಟ ಮಂತ್ರ ಕೂಡ ಮಾಡಿಸಿದ್ದರು ಎಂದು ಆರೋಪಿಸಿದ್ದರು.

ಬಹಳ ಕಷ್ಟಪಟ್ಟಿದ್ದಾಳೆ
'ನನ್ನ ಮಾಜಿ ಪ್ರೇಯಸಿಯ ಬಗ್ಗೆ ನಾನು ಕೆಟ್ಟ ಮಾತುಗಳನ್ನು ಆಡುತ್ತಿದ್ದೇನೆ ಎಂದು ಜನರು ಹೇಳುತ್ತಾರೆ. ಆದರೆ ಕಂಗನಾಳನ್ನು ಬಹಳ ಗೌರವಿಸುತ್ತೇನೆ ಎಂದು ನಾನು ಆಗಲೇ ಸ್ಪಷ್ಟಪಡಿಸಿದ್ದೇನೆ. ಇಂದು ಕಂಗನಾ ಆನಂದಿಸುತ್ತಿರುವ ಮಟ್ಟಕ್ಕೆ ಬರಲು ಬಹಳ ಕಷ್ಟಪಟ್ಟಿದ್ದಾಳೆ ಮತ್ತು ಸವಾಲುಗಳನ್ನು ಎದುರಿಸಿದ್ದಾಳೆ. ಚಿತ್ರರಂಗದ ದೊಡ್ಡ ಜನರ ವಿರುದ್ಧ ಹೋರಾಟ ನಡೆಸಿಯೂ ಒಳ್ಳೆಯ ಹೆಸರು ಮಾಡಿರುವಾಕೆ. ಆಕೆಗೆ ಹ್ಯಾಟ್ಸಾಫ್' ಎಂದು ಅಧ್ಯಯನ್ ಹೇಳಿದ್ದಾರೆ.

ಡೇಟಿಂಗ್ ನಡೆಸುತ್ತಿದ್ದರು
ಅಧ್ಯಯನ್ ಮತ್ತು ಕಂಗನಾ ಇಬ್ಬರೂ ಮುಕೇಶ್ ಭಟ್ ನಿರ್ಮಾಣದ 'ರಾಝ್ 2' ಚಿತ್ರದಲ್ಲಿ ಜತೆಯಾಗಿ ಕೆಲಸ ಮಾಡಿದ್ದರು. 2009ರಲ್ಲಿ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದರು. 2016ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಧ್ಯಯನ್, ಕಂಗನಾ ತಮಗೆ ಹೊಡೆಯುತ್ತಾಳೆ ಮತ್ತು ಕೆಟ್ಟ ಪದಗಳಿಂದ ನಿಂದಿಸುತ್ತಾಳೆ ಎಂದು ಆರೋಪಿಸಿದ್ದರು.

ಕೆನ್ನೆಗೆ ಬಾರಿಸಿದ್ದ ಕಂಗನಾ
'ಒಂದು ಕ್ಷಣ ನನ್ನನ್ನು ಪ್ರೀತಿಸುವಂತೆ ಅನುಭವ ನೀಡುತ್ತಾಳೆ. ಆದರೆ ಮರುಕ್ಷಣವೇ ಆಕೆಯ ಜೀವನದಲ್ಲಿ ತಾನು ಏನೂ ಅಲ್ಲ ಎಂಬಂತೆ ವರ್ತಿಸುತ್ತಾಳೆ. ಪಾರ್ಟಿಯೊಂದರಲ್ಲಿ ಒಮ್ಮೆ ಬಾರ್ನಲ್ಲಿ ನಾನು ಒಬ್ಬನೇ ನಿಂತಿದ್ದಾಗ ಆಕೆ ನನ್ನ ಬಳಿ ಬಂದು ಯಾರೋ ನಟನೊಬ್ಬ ತನ್ನ ಹಿಂಬಾಗ ಸ್ಪರ್ಶಿಸುತ್ತಿದ್ದಾನೆ ಎಂದಿದ್ದರು. ಆಗ ನಾನು ಇಲ್ಲಿಂದ ಹೊರಡೋಣ ಎಂದಿದ್ದೆ. ಆದರೆ ಆಕೆ ಅಲ್ಲಿಗೆ ವಾಪಸ್ ಹೋದಳು. ಕೆಲವು ಸಮಯದ ನಂತರ ಬಂದು ಈಗಲೇ ಹೋಗೋಣ ಎಂದಳು. ಆಕೆಯೊಂದಿಗೆ ಮೆಟ್ಟಿಲು ಇಳಿದು ಹೋಗುವಾಗ ನನ್ನನ್ನು ತಿರುಗಿಸಿ ಕೆನ್ನೆಗೆ ಬಾರಿಸಿದ್ದಳು' ಎಂದು ಅಧ್ಯಯನ್ ಹೇಳಿದ್ದರು.

ಶೇಖರ್ ಸುಮನ್ ಮಗ
ಈಗ ಇದ್ದಕ್ಕಿದ್ದಂತೆ ಅಧ್ಯಯನ್, ಮಾಜಿ ಪ್ರೇಯಸಿ ಕಂಗನಾರ ಬೆಂಬಲಕ್ಕೆ ಬಂದಿರುವುದು ಅಚ್ಚರಿ ಮೂಡಿಸಿದೆ. ಅಧ್ಯಯನ್ ಸುಮನ್ ಬೇರೆ ಯಾರೂ ಅಲ್ಲ, ಖ್ಯಾತ ನಿರೂಪಕ, ಮತ್ತು ನಟ ಶೇಖರ್ ಸುಮನ್ ಅವರ ಮಗ. ಸುಶಾಂತ್ ಸಿಂಗ್ ಸಾವಿನ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ ಹಾಗೂ ಬಾಲಿವುಡ್ನಲ್ಲಿ ಸ್ವಜನಪಕ್ಷಪಾತ ತೀವ್ರವಾಗಿದೆ ಎಂದು ಆರೋಪಿಸಿದವರಲ್ಲಿ ಶೇಖರ್ ಸುಮನ್ ಕೂಡ ಸೇರಿದ್ದಾರೆ.

ಖಿನ್ನತೆಗೆ ಒಳಗಾಗಿದ್ದ ಅಧ್ಯಯನ್
ಅಧ್ಯಯನ್ ಸುಮನ್ ನಟನೆಯಿಂದ ಮೆಚ್ಚುಗೆ ಗಳಿಸಿದ್ದರೂ ಅವರಿಗೆ ಹೆಚ್ಚು ಅವಕಾಶಗಳು ಸಿಕ್ಕಿರಲಿಲ್ಲ. 2008ರಲ್ಲಿ ಅನಿಲ್ ದೇವಗನ್ ನಿರ್ದೇಶನದ 'ಹಾಲ್ ಇ ದಿಲ್' ಚಿತ್ರದ ಮೂಲಕ ಪದಾರ್ಪಣೆ ಮಾಡಿದ್ದರು. ರಾಝ್-2, ಜಶ್ನ್, ಹಿಮ್ಮತ್ವಾಲಾ, ಹಾರ್ಟ್ಲೆಸ್ ಸೇರಿದಂತೆ ಅವರು ಎಂಟು ಸಿನಿಮಾಗಳಲ್ಲಿ ಮಾತ್ರವೇ ನಟಿಸಿದ್ದಾರೆ. ಪ್ರತಿಭಾವಂತರಾಗಿದ್ದರೂ ಸುಶಾಂತ್ ಅವರಂತೆ ಅಧ್ಯಯನ್ ಕೂಡ ಅನೇಕ ಸಿನಿಮಾಗಳಿಂದ ವಂಚಿತರಾಗಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೂ ಯೋಚಿಸಿದ್ದರು ಎಂದು ಶೇಖರ್ ಸುಮನ್ ಹೇಳಿದ್ದರು. ಬಾಲಿವುಡ್ನಲ್ಲಿ ಮೂವಿ ಮಾಫಿಯಾ ಇದೆ ಎಂದು ಅಧ್ಯಯನ್ ಕೂಡ ಈ ಹಿಂದೆ ಆರೋಪಿಸಿದ್ದರು.


Click it and Unblock the Notifications











