"ಅತ್ಯಾಚಾರದ ಹೇಗೆ ನಡೆಯುತ್ತೆ ಅಂತ ಕಂಗನಾಗೆ ಕೇಳಿ"; ಪಂಜಾಬ್ ಮಾಜಿ ಸಂಸದನ ಹೇಳಿಕೆಗೆ ತಿರುಗೇಟು
ಬಾಲಿವುಡ್ ನಟಿ ಕಮ್ ಮಂಡಿಯ ಎಂಪಿ ಕಂಗನಾ ರನೌತ್ ಏನೇ ಹೇಳಿಕೆ ಕೊಟ್ಟರೂ ಅದು ವಿವಾದಕ್ಕೆ ತಿರುಗುತ್ತಿದೆ. ಇದು ಕೆಲವೊಮ್ಮೆ ಬಿಜೆಪಿ ಮಂದಿಗೆ ತಲೆ ನೋವಾಗಿ ಪರಿಣಮಿಸುತ್ತಿದೆ. ಇತ್ತೀಚೆಗೆ ರೈತರ ಹೋರಾಟದ ಬಗ್ಗೆ ಕಂಗನಾ ಕೊಟ್ಟಿದ್ದ ಹೇಳಿಕೆಗಳು ಸಂಚಲನ ಸೃಷ್ಟಿಸಿದ್ದವು. ರೈತರ ಪ್ರತಿಭಟನೆಯನ್ನು ಮುಂದಿಟ್ಟುಕೊಂಡು ಕೇಂದ್ರದಲ್ಲಿ ಪ್ರಧಾನಿ ಮೋದಿ ಇಲ್ಲದೆ ಇದ್ದಿದ್ದರೆ, ಬಾಂಗ್ಲಾದೇಶಕ್ಕೆ ಬಂದ ಪರಿಸ್ಥಿತಿ ಬರುತ್ತಿತ್ತು ಎಂದಿದ್ದರು.
ಇದೇ ವೇಳೆ ರೈತರ ಪ್ರತಿಭಟನೆ ವೇಳೆ ಅತ್ಯಾಚಾರ, ಹತ್ಯೆ ಅಂತಹ ಪ್ರಕರಣಗಳು ನಡೆದಿವೆ ಎಂದು ಕಂಗನಾ ಹೇಳಿದ್ದರು. ಕಂಗನಾ ರನೌತ್ ನೀಡಿದ ಹೇಳಿಕೆಗಳನ್ನು ರೈತ ಸಂಘಗಳು ತೀವ್ರವಾಗಿ ಖಂಡಿಸಿವೆ. ಇನ್ನೊಂದು ಕಡೆ ಕೊಲ್ಕತ್ತಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಬಗ್ಗೆ ಕಂಗನಾ ಪ್ರತಿಕ್ರಿಯೆ ನೀಡಿದ್ದರು.

ಕಂಗನಾ ನೀಡಿದ ಸಂದರ್ಶನದಲ್ಲಿ ಈ ಎಲ್ಲಾ ಗಂಭೀರ ವಿಷಯಗಳ ಬಗ್ಗೆ ಹೇಳಿಕೆ ಕೊಡುತ್ತಿದ್ದಂತೆ ಕೆಲ ರೈತ ಸಂಘಗಳು ಹಾಗೂ ರಾಜಕೀಯ ಮುಖಂಡರು ಖಂಡಿಸಿದ್ದರು. ಅದರಲ್ಲೂ ಪಂಜಾಬ್ನ ಮಾಜಿ ಸಂಸದ ಹಾಗೂ ಶಿರೋಮಣಿ ಅಕಾಲಿದಳದ ಸಿಮ್ರಂಜಿತ್ ಸಿಂಗ್ ಮಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆ ಹೇಳಿಕೆಗೂ ದೇಶದಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ.
"ಸೈಕಲ್ ಸವಾರರಿಗೆ ಸೈಕಲ್ ಸವಾರಿ ಮಾಡುವುದು ಗೊತ್ತಿರುತ್ತೆ. ಹಾಗೇ ನೀವು ಆಕೆಗೆ (ಕಂಗನಾ ರನೌತ್) ಅತ್ಯಾಚಾರ ಹೇಗೆ ಆಗುತ್ತೆ ಅಂತ ಕೇಳಿ. ಆಕೆ ಅತ್ಯಾಚಾರ ಹೇಗೆ ಆಗುತ್ತೆ ಅನ್ನೋದನ್ನು ವಿವರಿಸುತ್ತಾರೆ. ಅತ್ಯಾಚಾರದ ಬಗ್ಗೆ ಅವರಿಗೆ ಸಾಕಷ್ಟು ಅನುಭವವಿದೆ" ಎಂದು ಶಿರೋಮಣಿ ಅಕಾಲಿದಳದ ಹಿರಿಯ ನಾಯಕ ಸಿಮ್ರಂಜಿತ್ ಸಿಂಗ್ ಮಾನ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು.
ಈ ಹೇಳಿಕೆಗೆ ಕಂಗನಾ ರನೌತ್ ತಿರುಗೇಟು ಕೊಟ್ಟಿದ್ದಾರೆ. " ಈ ದೇಶ ಅತ್ಯಾಚಾರವನ್ನು ಅಪಹಾಸ್ಯ ಮಾಡುವುದನ್ನು ನಿಲ್ಲಿಸುವುದಿಲ್ಲವೆಂದು ಕಾಣುತ್ತದೆ. ಇಂದು ಈ ಹಿರಿಯ ರಾಜಕೀಯ ವ್ಯಕ್ತಿ ಅತ್ಯಾಚಾರವನ್ನು ಸೈಕಲ್ ಸವಾರಿ ಮಾಡುವುದಕ್ಕೆ ಹೋಲಿದ್ದಾರೆ. ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಹಿಂಸೆ ಇಲ್ಲಿ ತಮಾಷೆಯಾಗಿದೆ. ಅಲ್ಲದೆ ಈ ಪುರುಷ ಪ್ರಧಾನ ಸಮಾಜದಲ್ಲಿ ಆಳವಾಗಿ ಬೇರೂರಿದೆ ಎಂದು ಅಚ್ಚರಿ ಪಡೆಬೇಕಿಲ್ಲ. ಮಹಿಳೆ ಹೈ ಪ್ರೊಫೈಲ್ ಫಿಲ್ಮ್ ಮೇಕರ್ ಅಥವಾ ರಾಜಕಾರಣಿಯಾಗಿದ್ದರೂ ಸಹ ಅಪಹಾಸ್ಯ ಮಾಡುವುದು ನಿಲ್ಲುವುದಿಲ್ಲ" ಎಂದು ಕಂಗನಾ ಸೋಶಿಯಲ್ ಮೀಡಿಯಾ ಮೂಲಕ ತಿರುಗೇಟು ನೀಡಿದ್ದರು.
ಶಿರೋಮಣಿ ಅಕಾಲಿದಳದ ಹಿರಿಯ ನಾಯಕ ಸಿಮ್ರಂಜಿತ್ ಸಿಂಗ್ ಮಾನ್ ವಿವಾದಾತ್ಮಕ ಹೇಳಿಕೆಗೆ ಖಂಡನೆ ವ್ಯಕ್ತವಾಗುತ್ತಿದೆ. ಅಲ್ಲದೆ ಪಂಜಾಬ್ ಮಹಿಳಾ ಅಯೋಗ ಕೂಡ ಈ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಎಂದು ವರದಿಯಾಗಿದೆ. ಒಟ್ನಲ್ಲಿ ಕಂಗನಾ ಏನೇ ಹೇಳಿಕೆಗಳನ್ನು ಕೊಟ್ಟರೂ ಅದು ವಿವಾದಕ್ಕೆ ಎಡೆ ಮಾಡಿಕೊಡುತ್ತಿರುವುದಂತೂ ಸತ್ಯ.


Click it and Unblock the Notifications











