ಸೂರ್ಯ ಕುಮಾರ್ ಯಾದವ್ ಮೆಸೇಜ್ ಮಾಡ್ತಿದ್ರು ಎಂದು ನಟಿ ಖುಷಿ ಮುಖರ್ಜಿ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆ
ಕ್ರಿಕೆಟರ್ಗಳಿಗೂ ಸಿನಿಮಾರಂಗಕ್ಕೂ ಮೊದಲಿನಿಂದಲೂ ಬಿಡಲಾರದ ನಂಟಿದೆ. ಸ್ಟಾರ್ ಕ್ರಿಕೆಟರ್ಗಳು ನಟಿಯರ ಪ್ರೀತಿಯಲ್ಲಿ ಬೀಳುವುದು ಹೊಸದೇನಲ್ಲ. ಹಾಗೇ ಕೆಲ ನಟಿಯರು ಕ್ರಿಕೆಟರ್ಗಳನ್ನು ಇಷ್ಟ ಪಟ್ಟು ಮದುವೆ ಆಗಿದ್ದೂ ಇದೆ. ಇದು ಇತ್ತೀಚೆಗಿನ ಬೆಳವಣಿಗೆಯಲ್ಲ. ಬಹಳ ವರ್ಷಗಳಿಂದ ಕ್ರಿಕೆಟರ್ ಹಾಗೂ ನಟಿಯರ ಪ್ರೇಮ ಪ್ರಕರಣ, ಡೇಟಿಂಗ್ ಇವೆಲ್ಲವೂ ನಡೆದುಕೊಂಡೇ ಬಂದಿದೆ.
ಹಾಗಂತ ಎಲ್ಲಾ ಪ್ರೇಮ ಪ್ರಕರಣಗಳೂ ಸುಖಾಂತ್ಯ ಕಂಡಿದೆ ಅಂತಲ್ಲ. ಕೆಲವೊಮ್ಮೆ ವಿವಾದಕ್ಕೆ ಸಿಕ್ಕಿಕೊಂಡಿದೂ ಇದೆ. ಇದು ವಿಶ್ವ ಮಟ್ಟದಲ್ಲಿ ಸುದ್ದಿಯಾಗಿದ್ದೂ ಇದೆ. ರಿಷಬ್ ಪಂತ್ ಹಾಗೂ ಊರ್ವಶಿ ರೌಟೇಲಾ ಮ್ಯಾಟರ್ ವಿವಾದಕ್ಕೆ ಸಿಲುಕಿತ್ತು. ಈಗ ಭಾರತದ ಕ್ರಿಕೆಟ್ ತಂಡದ ಟಿ 20 ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್ ಕೂಡ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ನಟಿ ಖುಷಿ ಮುಖರ್ಜಿ ಇವರ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದರು.

ಟಿ20 ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್ ಪದೇ ಪದೆ ನನಗೆ ಮೆಸೇಜ್ ಕಳುಹಿಸುತ್ತಿದ್ದರು ಎಂದು ನಟಿ ಖುಷಿ ಮುಖರ್ಜಿ ಆರೋಪ ಮಾಡಿದ್ದರು. ಅದರ ವಿರುದ್ಧ ಈಗ ₹100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಹಾಗಿದ್ದರೆ, ಖುಷಿ ಮುಖರ್ಜಿ ಮಾಡಿದ್ದ ಆರೋಪಗಳೇನು? ₹100 ಕೋಟಿ ಮಾನನಷ್ಟ ಮೊಕದ್ಧಮೆ ಹೂಡಿದ್ದು ಯಾರು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ನಟಿ ಖುಷಿ ಮುಖರ್ಜಿ ತನ್ನ ಗ್ಲಾಮರ್ ಲುಕ್ ಹಾಗೂ ನಿಷ್ಠುರ ಹೇಳಿಕೆಗಳಿಂದ ವಿವಾದಕ್ಕೆ ಸಿಲುಕಿವ ನಟಿ. ಇಂತಹದ್ದೇ ಒಂದು ಹೇಳಿಕೆ ಕೊಟ್ಟು ಈಗ ಮತ್ತೆ ವಿವಾದಕ್ಕೆ ಸಿಲುಕಿದ್ದಾಳೆ. ಭಾರತೀಯ ಕ್ರಿಕೆಟ್ ತಂಡದ ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕುರಿತು ಮಾಡಿದ ಗಂಭೀರ ಆರೋಪ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಇದರ ಬೆನ್ನಲ್ಲೇ ನಟಿಯ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಸೂರ್ಯ ಕುಮಾರ್ ವಿರುದ್ಧ ನೀಡಿದ ಹೇಳಿಕೆಗಳೇ ಈಗ ಅವರಿಗೇ ತಿರುಗುಬಾಣವಾಗಿದೆ.
ಹಾಗಂತ ನಟಿ ಖುಷಿ ಮುಖರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದು ಸೂರ್ಯಕುಮಾರ್ ಯಾದವ್ ಅಲ್ಲ. ಅವರು ಊರಿನ ವ್ಯಕ್ತಿಯೊಬ್ಬರು ರೊಚ್ಚಿಗೆದ್ದು ಕೇಸ್ ದಾಖಲು ಮಾಡಿದ್ದಾರೆ. ಸೂರ್ಯ ಕುಮಾರ್ ಯಾದವ್ ಅವರ ಹುಟ್ಟೂರು ಉತ್ತರ ಪ್ರದೇಶದ ಗಾಜಿಪುರದಲ್ಲಿ ಫೈಜಲ್ ಅನ್ಸಾರಿ ಎಂಬುವವರು ₹100 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆಯನ್ನು ದಾಖಲು ಮಾಡಿದ್ದಾರೆ.
ಸೂರ್ಯ ಕುಮಾರ್ ಯಾದವ್ ವಿರುದ್ಧ ಆರೋಪ ಮಾಡಿರುವ ಖುಷಿ ಮುಖರ್ಜಿ ವಿರುದ್ದ ಉತ್ತರ ಪ್ರದೇಶದ ಗಾಜಿಪುರದಲ್ಲಿ ಪ್ರಕರಣ ದಾಖಲಾಗಿದೆ. ಗಾಜಿಪುರದ ಪೊಲೀಸ್ ಅಧೀಕ್ಷಕ (SP) ಡಾ. ಇರಾಜ್ ರಾಜಾ ಅವರು ಖುಷಿ ಮುಖರ್ಜಿಯವರನ್ನು ತಕ್ಷಣವೇ ಬಂಧಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ನಟಿ ಖುಷಿ ಮುಖರ್ಜಿ ಹೇಳಿಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದು ಅಂದಾಜಿಸಲಾಗಿದೆ.

ನಟಿ ಖುಷಿ ಮುಖರ್ಜಿ ಈ ಹಿಂದೆ ಒಂದು ಕಾರ್ಯಕ್ರಮದಲ್ಲಿ "ಯಾವ ಕ್ರಿಕೆಟಿಗ ನಿಮಗೆ ಇಷ್ಟ? ಯಾರೊಂದಿಗೆ ಡೇಟ್ ಮಾಡಲು ಬಯಸುತ್ತೀರಿ?" ಎಂಬ ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ "ನಾನು ಯಾವುದೇ ಕ್ರಿಕೆಟಿಗನೊಂದಿಗೆ ಡೇಟ್ ಮಾಡಲು ಇಷ್ಟ ಪಡುವುದಿಲ್ಲ. ನನ್ನ ಹಿಂದೆ ಹಲವು ಕ್ರಿಕೆಟಿಗರು ಬಿದ್ದಿದ್ದರು. ಸೂರ್ಯಕುಮಾರ್ ಯಾದವ್ ನನಗೆ ತುಂಬಾ ಮೆಸೇಜ್ ಮಾಡುತ್ತಿದ್ದರು. ಆದರೆ ನಮ್ಮೊಂದಿಗೆ ಹೆಚ್ಚು ಮಾತುಕತೆ ಇರಲಿಲ್ಲ. ನನಗೆ ಯಾರೊಂದಿಗೂ ಸಂಬಂಧ ಬೆಳೆಸುವುದು ಇಷ್ಟವಿಲ್ಲ" ಎಂದು ಹೇಳಿದ್ದರು.
ನಟಿ ಖುಷಿ ಮುಖರ್ಜಿಗೆ ವಿವಾದಗಳು ಹೊಸದೇನಲ್ಲ. ತನ್ನ ಕಾಸ್ಟ್ಯೂಮ್ನಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಹಾಗೇ ಹಲವು ಬಾರಿ ವಿವಾದಾತ್ಮಕ ಹೇಳಿಕೆ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿ ಭಾರತೀಯ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬಗ್ಗೆ ಮಾಡಿದ ವೈಯಕ್ತಿಕ ಹಾಗೂ ವಿವಾದಾತ್ಮಕ ಹೇಳಿಕೆಗಳು ಕಾನೂನು ಸಂಕಷ್ಟಕ್ಕೆ ತಳ್ಳಿದ್ದು, ದೊಡ್ಡ ಮಟ್ಟದ ಇಕ್ಕಟ್ಟಿಗೆ ಸಿಲುಕಿಸಿವೆ.


Click it and Unblock the Notifications











