"ಆದಿಪುರುಷ್'ಗೆ ಪ್ರಭಾಸ್ ಮೊದಲ ಆಯ್ಕೆ ಅಲ್ಲ": ಸಂಚಲನ ಸೃಷ್ಟಿಸಿದ ವಿಮರ್ಶಕ..ಆ ನಟ ಯಾರು?
'ಆದಿಪುರುಷ್' ಸಿನಿಮಾ ಒಳ್ಳೆ ಕಾರಣಕ್ಕಂತೂ ಸದ್ದು ಮಾಡುತ್ತಿಲ್ಲ. ದೇಶಾದ್ಯಂತ ಈ ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್ಗಳೇ ಹೆಚ್ಚಾಗಿದೆ. ನಿರ್ದೇಶಕ ಓಂ ರಾವುತ್ ಇತಿಹಾಸವನ್ನು ತಿರುಚಿ ಸಿನಿಮಾ ಮಾಡಿರೋ ಆರೋಪವನ್ನು ಎದುರಿಸುತ್ತಿದ್ದಾರೆ.
ಇನ್ನೊಂದು ಕಡೆ ಟ್ರೇಡ್ ಎಕ್ಸ್ಪರ್ಟ್ಗಳು 'ಆದಿಪುರುಷ್' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ಕಣ್ಣಿಟ್ಟಿದ್ದಾರೆ. ಮೊದಲ ಮೂರು ದಿನ ಸದ್ದು ಮಾಡಿದರೂ, ನಾಲ್ಕನೇ ದಿನ ಪಾತಾಳಕ್ಕೆ ಕುಸಿದಿದೆ. ಇದು ಆತಂಕಕ್ಕೆ ಕಾರಣವಾಗಿದೆ.

500 ಕೋಟಿ ಬಜೆಟ್ ಸಿನಿಮಾ ಸೋಲಿನ ಹಾದಿ ಹಿಡಿಯುತ್ತಿರೋದು ಬಾಲಿವುಡ್ ಮಂದಿಯ ನಿದ್ದೆ ಕೆಡಿಸಿದೆ. ಆದರೆ, ಬಾಲಿವುಡ್ನ ವಿವಾದಾತ್ಮಕ ವಿಮರ್ಶಕ ಕೆಆರ್ಕೆ ಸಂಚಲನ ಸೃಷ್ಟಿಸುವಂತಹ ಹೇಳಿಕೆ ಕೊಟ್ಟಿದ್ದಾರೆ. 'ಆದಿಪುರುಷ್' ಸಿನಿಮಾಗೆ ಪ್ರಭಾಸ್ ಮೊದಲ ಆಯ್ಕೆ ಆಗಿರಲಿಲ್ಲ ಎಂದು ಹೇಳಿದ್ದಾರೆ. ಹಾಗಿದ್ದರೆ ಮೊದಲ ಆಯ್ಕೆ ಯಾರಾಗಿತ್ತು?
ಶ್ರೀರಾಮನ ಅವತಾರದಲ್ಲಿ ಪ್ರಭಾಸ್
'ಸಾಹೋ' ಸೋತಿತ್ತು.. 'ರಾಧೆ ಶ್ಯಾಮ್' ಸೋತಿತ್ತು.. 'ಆದಿಪುರುಷ್' ಮೇಲೆ ಡಾರ್ಲಿಂಗ್ ಅಭಿಮಾನಿಗಳು ಹೋಪ್ ಇಟ್ಟುಕೊಂಡಿದ್ದರು. ಪ್ರಭಾಸ್ ಸಾಕ್ಷಾತ್ ಶ್ರೀರಾಮನ ಅವತಾರದಲ್ಲಿ ನೋಡುವುದಕ್ಕೆ ಕಾತುರದಿಂದ ಕಾಯುತ್ತಿದ್ದರು. ಆದರೆ, ಟೀಸರ್ ಅವರ ನಿರೀಕ್ಷೆಗೆ ತಣ್ಣೀರು ಎರಚಿತ್ತು.
ಅದಾಗ್ಯೂ ಇಲ್ಲಿ ಪ್ರಭಾಸ್ ಪಾತ್ರದ ಬಗ್ಗೆ ನೆಗೆಟಿವ್ ಕಮೆಂಟ್ ಬಂದಿಲ್ಲ. ರಾವಣ ಹಾಗೂ ಹನುಮಂತನ ಪಾತ್ರಗಳು ಸಿನಿಪ್ರಿಯರ ನಿದ್ದೆ ಕೆಡಿಸಿವೆ. ಟ್ರೋಲ್ಗಳ ಮೇಲೆ ಟ್ರೋಲ್ ಆಗುತ್ತಿದೆ. ನೆಗೆಟಿವ್ ಕಮೆಂಟ್ಗಳು ಬಂದು ಬೀಳುತ್ತಿವೆ. ಈ ಮಧ್ಯೆ ಸೆಲ್ಫ್ ಮೇಡ್ ಕ್ರಿಟಿಕ್ ಕಮಾಲ್ ಆರ್ ಖಾನ್ 'ಆದಿಪುರುಷ್'ದ ಮೊದಲ ಆಯ್ಕೆ ಪ್ರಭಾಸ್ ಆಗಿರಲಿಲ್ಲ ಎನ್ನುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ಪ್ರಭಾಸ್ ಬದಲು ಯಾರಿಗಿತ್ತು ಅವಕಾಶ?
ಕೆಆರ್ಕೆ ಮಾಡಿರೋ ಟ್ವೀಟ್ ಸಿನಿಪ್ರಿಯರಲ್ಲಿ ಸಂಚಲನ ಸೃಷ್ಟಿಸಿದೆ. ಈ ಸಿನಿಮಾದ ರಾಮನ ಪಾತ್ರಕ್ಕೆ ನಿರ್ದೇಶಕ ಓಂ ರಾವುತ್ ಬಾಲಿವುಡ್ನನ್ನು ಆಯ್ಕೆ ಮಾಡಿದ್ದರು. ಅವರು ಮತ್ಯಾರೂ ಅಲ್ಲ ಕಾರ್ತಿಕ್ ಆರ್ಯನ್. ಕಾರ್ತಿಕ್ ಆರ್ಯನ್ ಈ ಸಿನಿಮಾವನ್ನು ತಿರಸ್ಕರಿಸಿದ್ದರು. ಹೀಗಾಗಿ ಅದು ಪ್ರಭಾಸ್ ಪಾಲಾಯ್ತು ಎಂದು ಕೆಆರ್ಕೆ ಟ್ವೀಟ್ ಮಾಡಿದ್ದಾರೆ.
"ರಾಂ ರಾವುತ್ಗೆ ಸಿನಿಮಾ ನಿರ್ದೇಶನ ಮಾಡುವುದಕ್ಕೆ ಬರುವುದಿಲ್ಲ ಎಂದು ನನ್ನ ವಿಮರ್ಶೆಯಲ್ಲಿ ನಾನು ಹೇಳಿದ್ದೆ. ಅದು 'ಆದಿಪುರುಷ್' ಸಿನಿಮಾದ ಮೂಲಕ 100% ಸತ್ಯ ಅಂತ ಸಾಬೀತಾಗಿದೆ. ನಾನು ಯಾವುದೇ ನಿರ್ದೇಶಕ, ನಟ ಹಾಗೂ ಸಿನಿಮಾ ಬಗ್ಗೆ ಸುಳ್ಳು ಹೇಳುವುದಿಲ್ಲ. ಕಾರ್ತಿಕ್ ಆರ್ಯನ್ ತುಂಬಾನೇ ಅದೃಷ್ಟವಂತ 'ಆದಿಪುರುಷ್' ಸಿನಿಮಾ ಮಾಡಿಲ್ಲ" ಎಂದು ಕೆಆರ್ಕೆ ಟ್ವೀಟ್ ಮಾಡಿದ್ದಾರೆ.
ಪ್ರಭಾಸ್ ಅಭಿಮಾನಿಗಳ ಬೇಸರ
ಪ್ರಭಾಸ್ ಅಭಿಮಾನಿಗಳು ನಿರ್ದೇಶಕ ಓಂ ರಾವುತ್ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪ್ರಭಾಸ್ಗೆ ಇಂತಹ ಸಿನಿಮಾ ಬೇಕಿರಲಿಲ್ಲ ಎಂದು ಹೇಳುತ್ತಿದ್ದಾರೆ. ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ' ಬಳಿಕ ಪ್ರಭಾಸ್ ಒಂದೇ ಒಂದು ಹಿಟ್ ಸಿನಿಮಾ ನೀಡಿಲ್ಲ.
ಪ್ರಭಾಸ್ ಅಭಿಮಾನಿಗಳು ಈಗ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಹಾಗೂ ನಾಗ ಅಶ್ವಿನ್ ನಿರ್ದೇಶಿಸುತ್ತಿರುವ 'ಪ್ರಾಜೆಕ್ಟ್ ಕೆ' ಸಿನಿಮಾ ಮೇಲೆ ಹೋಪ್ ಇಟ್ಟುಕೊಂಡಿದ್ದಾರೆ. ಈ ಎರಡು ಸಿನಿಮಾಗಳು ಈಗ ಗೆಲ್ಲಲೇ ಬೇಕಿದೆ. ಸದ್ಯ 'ಆದಿಪುರುಷ್' ಸಿನಿಮಾ ಪ್ರಭಾಸ್ ಕರಿಯರ್ಗೆ ದೊಡ್ಡ ಪೆಟ್ಟು ಕೊಟ್ಟಿದೆ.


Click it and Unblock the Notifications











