'ಮಹಾಭಾರತ'ದ 'ಇಂದ್ರ'ನಿಗೆ ಔಷಧ, ಅಗತ್ಯ ವಸ್ತುವಿಗೆ ಹಣವಿಲ್ಲದೆ ಪರದಾಟ
ಜನಪ್ರಿಯ 'ಮಹಾಭಾರತ' ಧಾರಾವಾಹಿಯ ಮೂಲಕ ಹೆಸರು ಪಡೆದಿದ್ದ ನಟ ಸತೀಶ್ ಕೌಲ್ ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಹಣಕಾಸಿನ ಕೊರತೆಯಿಂದ ಮತ್ತಷ್ಟು ಪರದಾಡುವಂತಾಗಿದೆ.
ಪಂಜಾಬ್ ಮೂಲದವರಾದ ಸತೀಶ್, ಕೆಲವು ಹಿಂದಿ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ತಾವೀಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ದೇಶವ್ಯಾಪಿ ಲಾಕ್ಡೌನ್ ಕಾರಣದಿಂದ ತಮ್ಮ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದು ತಿಳಿಸಿದ್ದಾರೆ.
ಮಹಾಭಾರತ ಧಾರಾವಾಹಿಯಲ್ಲಿ ಇಂದ್ರನ ಪಾತ್ರ ನಿರ್ವಹಿಸಿದ್ದ ಅವರು, 300ಕ್ಕೂ ಹೆಚ್ಚು ಪಂಜಾಬಿ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು. ಅವರು ವೃದ್ಧಾಶ್ರಮದಲ್ಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಈಗ ವೃದ್ಧಾಶ್ರಮದಲ್ಲಿ ಇಲ್ಲ ಎಂದು ಅವರು ತಿಳಿಸಿದ್ದಾರೆ. ಮುಂದೆ ಓದಿ...

ಲಾಕ್ಡೌನ್ನಿಂದ ಸಂಕಷ್ಟ
'ನಾನು ಲೂಧಿಯಾನಾದ ಸಣ್ಣ ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ನಾನು ಈ ಮೊದಲು ವೃದ್ಧಾಶ್ರಮವೊಂದರಲ್ಲಿ ನೆಲೆಸಿದ್ದೆ. ಈಗ ದಯಾಳು ಸತ್ಯ ದೇವಿ ಎಂಬುವವರಿಂದಾಗಿ ಜಾಗ ಪಡೆದುಕೊಂಡಿದ್ದೇನೆ. ನನ್ನ ಆರೋಗ್ಯ ಪರವಾಗಿಲ್ಲ. ಆದರೆ ಲಾಕ್ ಡೌನ್ ನನ್ನ ಪರಿಸ್ಥಿತಿಯನ್ನು ಹದಗೆಡಿಸಿದೆ' ಎಂದು ಅವರು ತಿಳಿಸಿದ್ದಾರೆ.

ನಟನಾಗಿ ಪ್ರೀತಿಸಿದರು, ಆದರೆ...
'ಔಷಧ, ದಿನಸಿ ಸಾಮಗ್ರಿ ಮತ್ತು ಅಗತ್ಯ ವಸ್ತುಗಳಿಗಾಗಿ ನಾನು ಪರದಾಡುತ್ತಿದ್ದೇನೆ. ಚಿತ್ರೋದ್ಯಮದ ಜನರು ನನಗೆ ಸಹಾಯ ಮಾಡುವಂತೆ ಕೋರುತ್ತೇನೆ. ನಟನಾಗಿ ನನಗೆ ಬಹಳ ಪ್ರೀತಿ ಸಿಕ್ಕಿತ್ತು. ಹಾಗೆಯೇ ಒಬ್ಬ ಮನುಷ್ಯನಾಗಿ ನನ್ನ ಕಡೆಗೆ ಗಮನ ಹರಿಸುವ ಅಗತ್ಯಬಿದ್ದಿದೆ' ಎಂದಿದ್ದಾರೆ.

ಮುಂಬೈನಲ್ಲಿ ನಟನಾ ಶಾಲೆ
73 ವರ್ಷದ ನಟ ಸತೀಶ್ ಅವರು 'ಪ್ಯಾರ್ ತೋ ಹೋನಾ ಹೆ ಥಾ', 'ಆಂಟಿ ನಂ 1' ಮುಂತಾದ ಚಿತ್ರಗಳು, 'ವಿಕ್ರಂ ಔರ್ ಬೇತಾಳ್' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪಂಜಾಬ್ನಲ್ಲಿದ್ದ ಅವರು 2011ರಲ್ಲಿ ಮುಂಬೈಗೆ ವಾಸಸ್ಥಾನ ಬದಲಿಸಿಕೊಂಡು ಅಲ್ಲಿ ನಟನಾ ಶಾಲೆ ತೆರೆದಿದ್ದರು. ಆದರೆ ಅದು ಯಶಸ್ಸು ಕಾಣಲಿಲ್ಲ.

ಎರಡೂವರೆ ವರ್ಷ ಆಸ್ಪತ್ರೆಯಲ್ಲಿದ್ದೆ
'ನಾನು ಮಾಡುತ್ತಿದ್ದ ಕೆಲಸ ಅರ್ಧಕ್ಕೇ ನಿಂತು ಹೋಯಿತು. 2015ರಲ್ಲಿ ನನ್ನ ಪೃಷ್ಠದ ಮೂಳೆ ಮುರಿಯಿತು. ಎರಡೂವರೆ ವರ್ಷ ನಾನು ಆಸ್ಪತ್ರೆಯಲ್ಲಿ ಹಾಸಿಗೆಯ ಮೇಲೆಯೇ ಮಲಗುವಂತಾಗಿತ್ತು. ಅಲ್ಲಿಂದ ವೃದ್ಧಾಶ್ರಮಕ್ಕೆ ತೆರಳಿ ಎರಡು ವರ್ಷ ಅಲ್ಲಿ ಇದ್ದೆ' ಎಂದು ತಿಳಿಸಿದ್ದಾರೆ.


Click it and Unblock the Notifications











