'ಮಸೀದಿ ಮುಚ್ಚಲು ಫತ್ವಾ ಹೊರಡಿಸಿ': ಚಿತ್ರ ಸಾಹಿತಿ ಜಾವೇದ್ ಅಖ್ತರ್ ವಿರುದ್ಧ ನೆಟ್ಟಿಗರ ಕಿಡಿ
ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಮರ್ಕಾಜ್ ಸಭೆಯಲ್ಲಿ ಭಾಗವಹಿಸಿದ್ದ ಸಾವಿರಾರು ಮಂದಿ ಧಾರ್ಮಿಕ ಮುಖಂಡರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿರುವ ಭೀತಿ ಉಂಟಾಗಿದೆ. ದಕ್ಷಿಣ ದೆಹಲಿಯಲ್ಲಿ ತಬ್ಲಿಘಿ ಇ ಜಮಾತ್ ಆಯೋಜಿಸಿದ್ದ ಮರ್ಕಾಜ್ ಮಾರ್ಚ್ 1 ರಿಂದ 15ರವರೆಗೂ ನಡೆದಿತ್ತು, ಕನಿಷ್ಠ 2000 ಮಂದಿ ಇದರಲ್ಲಿ ಪಾಲ್ಗೊಂಡಿದ್ದರು.
ಇದರಲ್ಲಿ ದೇಶ ವಿದೇಶದ ಮಂದಿ ಪಾಲ್ಗೊಂಡಿದ್ದರು. ಇದರಲ್ಲಿ ಪಾಲ್ಗೊಂಡವರು ಬಳಿಕ ತಮ್ಮ ತಮ್ಮ ಊರುಗಳಿಗೆ ಹಿಂದಿರುಗಿ ಅಲ್ಲಿನ ಮಸೀದಿಗಳಲ್ಲಿ ಧಾರ್ಮಿಕ ಮತ್ತು ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಅವರಲ್ಲಿ ಒಬ್ಬರಾಗಿದ್ದ ತುಮಕೂರಿನ ಹಿರಿಯ ವ್ಯಕ್ತಿಯೊಬ್ಬರು ಕೊರೊನಾ ವೈರಸ್ಗೆ ಬಲಿಯಾಗಿದ್ದರು. ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ ಬಳಿಕವೂ ಜನರು ಮಸೀದಿಯಲ್ಲಿ ದೈನಂದಿನ ನಮಾಜ್ನಲ್ಲಿ ಪಾಲ್ಗೊಳ್ಳುವುದನ್ನು ಬಿಟ್ಟಿರಲಿಲ್ಲ. ಈಗಲೂ ಕೆಲವರು ಮಸೀದಗೆ ಕದ್ದುಮುಚ್ಚಿ ತೆರಳಲು ಪ್ರಯತ್ನಿಸುತ್ತಿದ್ದಾರೆ. ಇದರ ವಿರುದ್ಧ ಫತ್ವಾ ಹೊರಡಿಸುವಂತೆ ಸಿನಿಮಾ ಸಾಹಿತಿ ಜಾವೇದ್ ಅಖ್ತರ್ ಹೇಳಿದ್ದಾರೆ. ಮುಂದೆ ಓದಿ...

ಕಾಬಾ, ಮದೀನಾದಲ್ಲಿಯೇ ಮುಚ್ಚಿದ್ದಾರೆ
ಕಾಬಾ ಮತ್ತು ಮದೀನಾದಂತಹ ಮುಸ್ಲಿಮರ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿನ ಮಸೀದಿಗಳನ್ನೇ ಮುಚ್ಚಿರುವಾಗ ಭಾರತದಲ್ಲಿ ಮಸೀದಿಗಳನ್ನು ಏಕೆ ಮುಚ್ಚಲು ಸಾಧ್ಯವಿಲ್ಲ ಎಂದು ಚಿತ್ರ ಸಾಹಿತಿ ಜಾವೇದ್ ಅಖ್ತರ್ ಪ್ರಶ್ನಿಸಿದ್ದಾರೆ.
ಫತ್ವಾ ಬೇಡಿಕೆಗೆ ಬೆಂಬಲ
ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಹಾಗೂ ವಿದ್ವಾಂಸ ತಾಹಿರ್ ಮೆಹಮೂದ್ ಸಾಹೇಬ್ ಕೊರೊನಾ ಬಿಕ್ಕಟ್ಟು ಅಂತ್ಯಗೊಳ್ಳುವವರೆಗೂ ದೇಶದ ಎಲ್ಲ ಮಸೀದಿಗಳನ್ನೂ ಮುಚ್ಚುವಂತೆ ದಾರುಲ್ ಉಲುಮ್ ದಿಯೊಬಂದ್ ಫತ್ವಾ ಹೊರಡಿಸಬೇಕೆಂದು ಹೇಳಿದ್ದಾರೆ. ಅದನ್ನು ನಾನು ಬೆಂಬಲಿಸುತ್ತೇನೆ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ.

ಸರ್ಕಾರದ ಆದೇಶಕ್ಕೆ ಬೆಲೆ ಇಲ್ಲವೇ?
ಕೊರೊನಾ ವೈರಸ್ ಸೋಂಕು ಮಸೀದಿಗಳಲ್ಲಿ ಸೇರುವ ಜನರ ಮೂಲಕ ಹರಡುವ ಅಪಾಯ ಹೆಚ್ಚು. ಹೀಗಾಗಿ ಮಸೀದಿಗಳನ್ನು ಮುಚ್ಚುವುದಕ್ಕೆ ಫತ್ವಾ ಹೊರಡಿಸಬೇಕು ಎಂದು ಅಖ್ತರ್ ಆಗ್ರಹಿಸಿದ್ದಾರೆ. ಆದರೆ ಅವರ ಹೇಳಿಕೆ ವಿರೋಧಾಭಾಸದಿಂದ ಕೂಡಿದೆ. ಮಸೀದಿ ಮುಚ್ಚಲು ಫತ್ವಾವನ್ನೇ ಏಕೆ ಹೊರಡಿಸಬೇಕು? ಹಾಗಾದರೆ ಸರ್ಕಾರದ ಸೂಚನೆಗೆ ಕಿಮ್ಮತ್ತಿಲ್ಲವೇ ಎಂದು ಅನೇಕರು ಪ್ರಶ್ನಿಸಿದ್ದಾರೆ.

ಧರ್ಮಕ್ಕೆ ತಕ್ಕಂತೆ ಕಾನೂನು ಬದಲಾಗುತ್ತದೆಯೇ?
ಫತ್ವಾ ಹೊರಡಿಸಬೇಕೆಂಬ ಅಖ್ತರ್ ಅವರ ಬೇಡಿಕೆಗೆ ವಿರೋಧವೇನೂ ಇಲ್ಲ. ಆದರೆ ಈ ಹಿಂದಿನಿಂದಲೂ ಸರ್ಕಾರ ಜನರು ಒಂದೆಡೆ ಸೇರಬೇಡಿ ಎನ್ನುತ್ತಲೇ ಬಂದಿದೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿರಲಿಲ್ಲ. ಎಷ್ಟೋ ಪಾರಂಪರಿಕ ಉತ್ಸವಗಳನ್ನು ನಿಲ್ಲಿಸಲಾಗಿತ್ತು. ಸಂವಿಧಾನದ ಅಡಿಯಲ್ಲಿ ಎಲ್ಲರೂ ಒಂದೇ. ಕಾನೂನು ಧರ್ಮಕ್ಕೆ ಅನುಗುಣವಾಗಿ ಬದಲಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ನಿಮಗೆ ಏನೂ ಅಲ್ಲವೇ?
ಇಷ್ಟೆಲ್ಲ ಆಗಿದ್ದರೂ ಸಾವಿರಾರು ಮಂದಿ ಒಂದೆಡೆ ಹೇಗೆ ಸೇರಿದ್ದರು? ಲಾಕ್ಡೌನ್ ಆದೇಶ ನೀಡಿದ ಬಳಿಕವೂ ಏಕೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದದ್ದು? ನಮಗೆ ಸರ್ಕಾರವೇ ಅಂತಿಮ. ಆದರೆ ನೀವು ಸರ್ಕಾರದ ಆದೇಶವನ್ನು ಪಾಲಿಸುವುದಿಲ್ಲ. ಹಾಗಾದರೆ ಸರ್ಕಾರ ನಿಮಗೆ ಏನೂ ಅಲ್ಲವೇ? ಫತ್ವಾವನ್ನೇ ಹೊರಡಿಸಬೇಕೇ? ಅವರು ಅದನ್ನು ಮಾತ್ರ ಪಾಲಿಸುವುದೇ? ಎಂದು ಅನೇಕರು ಕಿಡಿಕಾರಿದ್ದಾರೆ.

ಫತ್ವಾ ವಿರೋಧಿಸಿದ್ದಕ್ಕೆ ಬೆದರಿಕೆ ಬಂದಿತ್ತು
ಪುರುಷರು ಕೆಲಸ ಮಾಡುವ ಜಾಗಗಳಲ್ಲಿ ಮುಸ್ಲಿಂ ಮಹಿಳೆಯರು ಕೆಲಸ ಮಾಡಬಾರದು ಎಂದು 2010ರಲ್ಲಿ ಲಕ್ನೋದ ಇಸ್ಲಾಮಿಕ್ ಸೆಮಿನರಿ ದಾರುಲ್ ಉಲುಮ್ ದಿಯೋಬಂದ್ ಫತ್ವಾಹೊರಡಿಸಿತ್ತು. ಅದನ್ನು ಜಾವೇದ್ ಅಖ್ತರ್ ಖಂಡಿಸಿದ್ದರು. ಆಗ ಜಾವೇದ್ ಅಖ್ತರ್ ಅವರಿಗೆ ಬೆದರಿಕೆಯ ಪತ್ರಗಳು ಬಂದಿದ್ದವು. ಬಳಿಕ ಅವರು ಪೊಲೀಸ್ ರಕ್ಷಣೆ ಪಡೆದುಕೊಂಡಿದ್ದರು.


Click it and Unblock the Notifications










