ಅರ್ನಬ್ ಗೋಸ್ವಾಮಿ ಕುರಿತು 'ಅರ್ನಬ್- ದಿ ನ್ಯೂಸ್ ಪ್ರಾಸ್ಟಿಟ್ಯೂಟ್' ಸಿನಿಮಾ: ಆರ್ಜಿವಿ ಘೋಷಣೆ
ಪವನ್ ಕಲ್ಯಾಣ್ ಕುರಿತು ಸಿನಿಮಾ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ನಟ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಕುರಿತು ಸಿನಿಮಾ ಮಾಡುವುದಾಗಿ ತಿಳಿಸಿದ್ದರು. ವ್ಯಕ್ತಿ, ಕುಟುಂಬವೊಂದರ ಕುರಿತು ವಿವಾದಾತ್ಮಕ ಸಿನಿಮಾ ಮಾಡುವುದಾಗಿ ಘೋಷಿಸುವಾಗ ಆರ್ಜಿವಿ ಪರೋಕ್ಷವಾಗಿ ಅದರ ವಿವರಗಳನ್ನು ಹೇಳುತ್ತಾರೆ. ಆದರೆ ಮತ್ತೊಂದು ಸಿನಿಮಾದ ಘೋಷಣೆ ಮಾಡಿರುವ ಅವರು, ಅದರಲ್ಲಿ ನೇರವಾಗಿ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿದ್ದಾರೆ. ಅದು ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರದು.
Recommended Video
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಬಾಲಿವುಡ್ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿರುವ ಅರ್ನಬ್ ಗೋಸ್ವಾಮಿ ವಿರುದ್ಧ ರಾಮ್ ಗೋಪಾಲ್ ವರ್ಮಾ ಹರಿಹಾಯ್ದಿದ್ದಾರೆ. ಒಂದರ ಹಿಂದೊಂದರಂತೆ ಸರಣಿ ಟ್ವೀಟ್ಗಳನ್ನು ಮಾಡಿರುವ ಆರ್ಜಿವಿ, 'ಅರ್ನಬ್- ದಿ ನ್ಯೂಸ್ ಪ್ರಾಸ್ಟಿಟ್ಯೂಟ್' ಎಂಬ ಚಿತ್ರ ಮಾಡುವುದಾಗಿ ಹೇಳಿದ್ದಾರೆ. ಮುಂದೆ ಓದಿ.

ಕೆಟ್ಟದಾಗಿ ಮಾತನಾಡುತ್ತಿದ್ದಾರೆ
ಬಾಲಿವುಡ್ ಬಗ್ಗೆ ಇಷ್ಟು ಕೆಟ್ಟದಾಗಿ ಅರ್ನಬ್ ಗೋಸ್ವಾಮಿ ಮಾತನಾಡುತ್ತಿರುವುದನ್ನು ಕಂಡು ಆಘಾತವಾಯ್ತು. ಇದು ಅತ್ಯಂತ ಕೊಳಕು ಉದ್ಯಮ, ಇದಕ್ಕೆ ಅಪರಾಧಿಗಳು, ಅತ್ಯಾಚಾರಿಗಳು, ಗ್ಯಾಂಗ್ಸ್ಟರ್ಗಳು, ಲೈಂಗಿಕ ಶೋಷಕರ ನಂಟು ಇದೆ ಎಂದು ಆರೋಪಿಸಿದ್ದಾರೆ. ದಿವ್ಯ ಭಾರತಿ, ಜಿಯಾ ಖಾನ್, ಶ್ರೀದೇವಿ ಮತ್ತು ಸುಶಾಂತ್ ಅವರ ಸಾವುಗಳನ್ನು ಒಂದೆಡೆ ಸೇರಿಸಿ ಬಾಲಿವುಡ್ ಕೊಲೆಗಾರ ಎಂದು ಬಿಂಬಿಸುತ್ತಿರುವುದು ಎಷ್ಟು ದಡ್ಡತನದ ಕೆಲಸ. ವಾಸ್ತವವಾಗಿ ಈ ನಾಲ್ಕು ಸಾವುಗಳು 25 ವರ್ಷದ ಅಂತರದಲ್ಲಿ ಸಂಭವಿಸಿವೆ ಎಂದು ವರ್ಮಾ ಹೇಳಿದ್ದಾರೆ.

ಬಾಲಿವುಡ್ ಏನು ಪಿಶಾಚಿಯೇ?
ದಿವ್ಯಾ, ಜಿಯಾ, ಶ್ರೀದೇವಿ ಮತ್ತು ಸುಶಾಂತ್ ಅವರ ನಾಲ್ಕೂ ಪ್ರಕರಣಗಳಲ್ಲಿ ಸಂಪೂರ್ಣ ಬೇರೆ ಬೇರೆ ವ್ಯಕ್ತಿಗಳು ಮತ್ತು ಸಂದರ್ಭಗಳಿವೆ. ಆದರೆ ಅರ್ನಬ್ ತಲೆ ಪ್ರಕಾರ ಎಲ್ಲರೂ ಒಂದೇ ಮತ್ತು ಬಾಲಿವುಡ್ ಎಂಬ ಸಂಸ್ಥೆಯಿಂದಲೇ ಕೊಲೆಯಾಗಿದ್ದಾರೆ. ನಮ್ಮ ಬಹು ಚಾಣಾಕ್ಷ ಅರ್ನಬ್ ಗೋಸ್ವಾಮಿಗೆ ನನ್ನ ಪ್ರಶ್ನೆ, ಬಾಲಿವುಡ್ ಒಂದು ಸ್ಮಶಾನದಲ್ಲಿನ ಸಮಾಧಿಯಲ್ಲಿ ಮಲಗಿರುವ ಕೆಟ್ಟ ಕೊಂತಿಯಾಗಿ, ತನಗೆ ರಕ್ತದಾಹವಾದಾಗಲೆಲ್ಲಾ ಡ್ರ್ಯಾಕುಲಾದಂತೆ ಎದ್ದು ಬರುತ್ತಲೇ ಇರುತ್ತದೆಯೇ?

ಮೌನ ತಪ್ಪು ಭಾವನೆ ಮೂಡಿಸುತ್ತದೆ
ಮತ್ತೆ ನೀವೆಲ್ಲರೂ ಎಲ್ಲಿದ್ದೀರಿ? ಆದಿತ್ಯ ಚೋಪ್ರಾ, ಕರಣ್ ಜೋಹರ್, ಮಹೇಶ್ ಭಟ್, ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಉಳಿದವರು ಅರ್ನಬ್ ಗೋಸ್ವಾಮಿ ಬೊಗಳಿದ್ದಕ್ಕೆ ಹೆದರಿ ನಿಮ್ಮ ದುಬಾರಿ ಆಫೀಸ್ಗಳ ಟೇಬಲ್ ಅಡಿ ಅಡಗಿ ಕುಳಿತಿದ್ದೀರಾ? ಎಂದು ಆರ್ಜಿವಿ ಬಾಲಿವುಡ್ ಮಂದಿಯನ್ನು ರೊಚ್ಚಿಗೆಬ್ಬಿಸಲು ಮುಂದಾಗಿದ್ದಾರೆ. ನೀವುಗಳು ಆತನ ವಿರುದ್ಧ ಮಾತನಾಡಲು ಹೆದರಿದರೆ ಈಗಿನ ಸಾರ್ವಜನಿಕರ ಭಾವನೆಗಳು ನಿಮ್ಮ ವಿರುದ್ಧವೇ ಹೋಗುತ್ತದೆ. ಆ ಭಾವನೆಗಳನ್ನು ಎಬ್ಬಿಸಿರುವುದು ಅರ್ನಬ್. ನಿಮ್ಮೆಲ್ಲರ ಮೌನ ನೀವು ತಪ್ಪಿತಸ್ಥರು ಎಂಬ ಭಾವನೆ ಮೂಡಿಸುವುದು ಸತ್ಯ.

ಸೀಳು ನಾಯಿ ಕಂಡ ಜಿಂಕೆ
ಸೀಳು ನಾಯಿಯನ್ನು ಕಂಡರೆ ಹೆದರಿ ಓಡುವ ಜಿಂಕೆಯಂತೆ ಇರುವ ಬದಲು ಕಡೇಪಕ್ಷ ಈಗಲಾದರೂ ಉದ್ಯಮದ ಜನರು ಮುಂದೆ ಬಂದು ಅರ್ನಬ್ ಗೋಸ್ವಾಮಿಯ ಸುಳ್ಳು ಪ್ರತಿಪಾದನೆಗಳ ಬಗ್ಗೆ ಮುಕ್ತವಾಗಿ ಮಾತನಾಡಬೇಕು. ನಮಗೆ ತಾಕತ್ತು ಇಲ್ಲ ಎಂಬ ವಾಸ್ತವ ಅರಿತುಕೊಂಡಿರುವ ಅರ್ನಬ್, ಯಾರೂ ಕೇಳಿರದ ದೃಷ್ಟಿಕೋನದಿಂದ ಚರ್ಚೆ ಮಾಡುತ್ತಲೇ ಹೋಗುತ್ತಾರೆ. ಅದು ಅವರ ರೀತಿ ಕೂಡ.

ದಿ ನ್ಯೂಸ್ ಪ್ರಾಸ್ಟಿಟ್ಯೂಟ್
ಇದರ ಬಗ್ಗೆ ನನಗೆ ಬಲವಾದ ಅಭಿಪ್ರಾಯ ಮೂಡಿದ್ದು, ಅರ್ನಬ್ ಗೋಸ್ವಾಮಿ ಕುರಿತು ಸಿನಿಮಾ ಮಾಡಲು ನಿರ್ಧರಿಸಿದ್ದೇನೆ. ಅವರ ಮುಖವಾಡದ ಬಟ್ಟೆಯನ್ನು ಕಳಚಿ ಅವರ ಸವಿಸ್ತಾರ ಭ್ರಷ್ಟ ಸಂಗತಿಗಳ ಆಳ ಅಗಲಗಳನ್ನು ಬೆತ್ತಲು ಮಾಡುತ್ತೇನೆ. ನನ್ನ ಚಿತ್ರಕ್ಕೆ 'ಅರ್ನಬ್- ದಿ ನ್ಯೂಸ್ ಪ್ರಾಸ್ಟಿಟ್ಯೂಟ್' ಎಂಬ ಶೀರ್ಷಿಕೆ ಇರಿಸಿದ್ದೇನೆ. ಆತನ ಬಗ್ಗೆ ಸತತ ಅಧ್ಯಯನ ಮಾಡಿದ ನಂತರ ಈ ಚಿತ್ರಕ್ಕೆ 'ನ್ಯೂಸ್ ಪಿಂಪ್' ಅಥವಾ 'ದಿ ನ್ಯೂಸ್ ಪ್ರಾಸ್ಟಿಟ್ಯೂಟ್' ಎಂಬ ಟ್ಯಾಗ್ ಲೈನ್ ಇಡಲು ಯೋಚಿಸಿದ್ದೆ. ಎರಡೂ ಸೂಕ್ತವೇ ಆದರೂ ಪ್ರಾಸ್ಟಿಟ್ಯೂಟ್ನ ಶಬ್ಧವೇ ಸೂಕ್ತ ಎನಿಸಿತು ಎಂದು ಆರ್ಜಿವಿ ಹೇಳಿದ್ದಾರೆ.

ಸಿನಿಮಾ ನೋಡಿ ಜನ ನಡುಗುತ್ತಾರೆ
ಅರ್ನಬ್ ಅವರನ್ನು ವರ್ಣಿಸಲು ಈ ಟ್ವೀಟ್ಗಳಲ್ಲಿ ಸ್ವಲ್ಪ ಕಠೋರ ಪದಗಳನ್ನು ಬಳಸಿದ್ದರೂ ಕೆಟ್ಟ ಬಾಯಿಯ ಅರ್ನಬ್ಗಿಂತ ಉತ್ತಮ ಎನಿಸಿದೆ. ಅರ್ನಬ್ ನೀವು ನನ್ನ ಸಿನಿಮಾ ಬಗ್ಗೆ ಪ್ರತಿಕ್ರಿಯಿಸುತ್ತೀರೋ ಅಥವಾ ಇಲ್ಲವೋ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ನನ್ನ ಗುರಿ ಇರುವ ಪ್ರೇಕ್ಷಕರು ನೀವಾಗಿರುವುದಿಲ್ಲ, ಆದರೆ ಅದು ನಿಮ್ಮ ವೀಕ್ಷಕರಾಗಿರುತ್ತಾರೆ. ನಿಮ್ಮನ್ನು ನನ್ನ ಚಿತ್ರದಲ್ಲಿ ಹೇಗೆ ತೆರೆದಿಡುತ್ತೇನೆಂದರೆ ಅದನ್ನು ನೋಡಿ ಜನರು ನಡುಗಬೇಕು.

ಅರ್ನಬ್ ಎಂಬ ವಿಲನ್
ಒಂದು ವೇಳೆ ಅರ್ನಬ್ ನನ್ನ ಚಿತ್ರಕ್ಕೆ ಪ್ರತಿಕ್ರಿಯಿಸಿದರೆ, ನನ್ನನ್ನು ನಿಂದಿಸಿದರೂ ಅದನ್ನು ಸ್ವಾಗತಿಸುತ್ತೇನೆ. ಏಕೆಂದರೆ ಅದನ್ನು ನನ್ನ ಚಿತ್ರದ ಪಬ್ಲಿಸಿಟಿಗೆ ಬಳಸಬಹುದು. ಕೊನೆಯದಾಗಿ ಆದಿತ್ಯ ಚೋಪ್ರಾ, ಕರಣ್ ಜೋಹರ್, ಮಹೇಶ್ ಭಟ್, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಹಾಗೂ ಇತರರಿಗೆ ನನ್ನ ಸಲಹೆ, ಚಿತ್ರಗಳಲ್ಲಿ ಹೀರೋ ಮತ್ತು ಹೀರೋಯಿನ್ಗಳನ್ನು ಸೃಷ್ಟಿಸಿದರೆ ಸಾಲದು. ಅರ್ನಬ್ ಗೋಸ್ವಾಮಿಯಂತಹ ವಿಲನ್ಗಳ ವಿರುದ್ಧ ನಿಲ್ಲುವುದು ಕೂಡ ಬಹಳ ಮುಖ್ಯ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

ವರ್ಮಾ ಪರ-ವಿರೋಧ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ಬಾಲಿವುಡ್, ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅರ್ನಬ್ ಗೋಸ್ವಾಮಿ ಸತತ ವಾಗ್ದಾಳಿ ನಡೆಸುತ್ತಿದ್ದಾರೆ. ಇದು ವ್ಯವಸ್ಥಿತ ಕೊಲೆ. ಬಾಲಿವುಡ್ನ ಕೆಲವು ಶಕ್ತಿಗಳು ಸೇರಿ ಇದನ್ನು ಮಾಡಿದ್ದಾರೆ. ಅದನ್ನು ಮುಚ್ಚಿಹಾಕಲು ಪೊಲೀಸ್ ಇಲಾಖೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ವರ್ಮಾ ಅವರಿಗೆ ಅನೇಕರು ಬೆಂಬಲ ವ್ಯಕ್ತಪಡಿಸಿದ್ದರೆ, ಸುಶಾಂತ್ ವಿಚಾರದಲ್ಲಿ ದನಿ ಎತ್ತದ ವರ್ಮಾ, ಈಗ ಬಾಲಿವುಡ್ನ ದೊಡ್ಡ ವ್ಯಕ್ತಿಗಳಿಗೆ ಬಕೆಟ್ ಹಿಡಿಯುತ್ತಿದ್ದಾರೆ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ.


Click it and Unblock the Notifications











